ದ್ರೌಪದಾದೇವಿ

 

“ದ್ರೌಪದಿಯ ಪಂಚಪತಿತ್ವ”

 

ಭಗವಾನ್ ವೇದವ್ಯಾಸ ವಿರಚಿತ  ” ಮಹಾಭಾರತ”ದ ಬಹಳಷ್ಟು ಪಾತ್ರಗಳು ರೋಚಕವಾಗಿದೆ.

 

ಮಹಾರಾಜ ಶಂತನು ಗಂಗೆಯನ್ನು ಕಳೆದುಕೊಂಡು ಸತ್ಯವತಿಯ ಬಯಸಿ, ಅವಳಿಗಾಗಿ ತನ್ನ ಮಗನೇ ಆಜನ್ಮ ಬ್ರಹ್ಮಚಾರಿ ಆಗುತ್ತಾನೆ.  ಕುರುಡ ಪತಿಗಾಗಿ ಪತ್ನಿ ಗಾಂಧಾರಿ ಜೀವಮಾನವಿಡೀ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ.    ಸತ್ಯವತಿ ಪರಾಶರರ ಮಗನಾದ ವ್ಯಾಸರು ಮಹಾಭಾರತ ಬರೆದರೆ, ದ್ರೋಣಾಚಾರ್ಯರು ದೊನ್ನೆಯಲ್ಲಿ ರಕ್ಷಿಸಲ್ಪಟ್ಟು ಜನಿಸುತ್ತಾರೆ.  ವಿರಾಟರಾಜ ಮೀನಿನ ಉದರದಲ್ಲಿ ಜನಿಸಿದರೆ, ದುರ್ಯೋಧನಾದಿಗಳು ಮಡಿಕೆಯಲ್ಲಿ ಸಂರಕ್ಷಿಸಲ್ಪಟ್ಟು ಜನಿಸುತ್ತಾರೆ.   ಪಿತಾಮಹ ಎನಿಸಿ ಏಳು ತಲೆಮಾರುಗಳ ಕಂಡರೂ, ಸಿಂಹಾಸನಕ್ಕೆ ಅಧಿಕಾರವಿದ್ದರೂ, ಸೇವಕನಾಗಿ ದುಡಿಯುತ್ತಾನೆ ಭೀಷ್ಮ.  ದ್ರೌಪದಿ ಧೃಷ್ಟದ್ಯುಮ್ನರು ಅಗ್ನಿಯಿಂದ ಜನಿಸುತ್ತಾರೆ.    ಪಾಂಡವರು ದೇವತಾ ಅನುಗ್ರಹ ಬಲದಿಂದ ಕುಂತಿಯಲ್ಲಿ ಜನಿಸುತ್ತಾರೆ.  ವಿವಾಹ ಪೂರ್ವ ಸೂರ್ಯಾನುಗ್ರಹದಿಂದ ಜನಿಸಿದ ಕರ್ಣ “ರಾಧೇಯ” ಆಗುತ್ತಾನೆ  .    ಪಾಂಡವರ ಧರ್ಮನೀತಿ, ಕೌರವರ ಅಧರ್ಮ, ಧೃತರಾಷ್ಟ್ರನ ಪುತ್ರ ವ್ಯಾಮೋಹ, ಕಪಟಿ ಶಕುನಿಯ ದಾಳಕ್ಕೆ ಬಿದ್ದ ಪಾಂಡವರು, ಹೆಜ್ಜೆ ಹೆಜ್ಜೆಗೂ ಅವರ ಸಂರಕ್ಷಿಸಿದ ಕೃಷ್ಣ ಪರಮಾತ್ಮ, ಗೀತೋಪದೇಶದಿಂದ ಇಡೀ ಆರ್ಯಾವರ್ತದಲ್ಲೇ ಧರ್ಮಜಾಗೃತಿ ಮಾಡಿದ.  ಮಹಾಭಾರತ ಯುದ್ಧ ನೋಡುವುದಕ್ಕೆ ಪಾಂಡವ ಕೌರವರ ಯುದ್ಧದಂತೆ ಕಂಡರೂ, ನಿಜವಾಗಿ ಸಂಪೂರ್ಣ ಯುದ್ಧ ಶಸ್ತ್ರ ಎತ್ತದೇ ಮಾಡಿಸಿದವನು ಕೃಷ್ಣನೇ.  ಧರ್ಮವಿದ್ದರೆ ಅವರ ಹಿಂದೆ ನಿಂತು,  ಅಧರ್ಮ ಮಾಡಿದವರಿಗೆ ತಕ್ಕ ರೀತಿಯಲ್ಲಿ ಸೋಲಿಸಿದವನು ಕೃಷ್ಣನೇ.

ಅದೇ ರೀತಿ ಮಹಾಭಾರತದ ಅತ್ಯದ್ಭುತ ಪಾತ್ರ ದ್ರೌಪದಾ ದೇವಿಯರದ್ದು. ಕೆಲವು ಕುಹಕಿ ಕವಿಗಳು ಪಂಚವಲ್ಲಭೆ ಪಾಂಚಾಲಿ ಎಂದೂ,  ಮತ್ತೆ ಕೆಲವರು ಪಾಂಚಾಲಿ ಅರ್ಜುನನ ಹೆಂಡತಿಯೆಂದೂ, ಅವರವರ ಭಾವಕ್ಕೆ ತಕ್ಕಂತೆ ಚಿತ್ರಿಸಿದರೂ ಕೂಡ ಅವಳು ಮಹಾ ಪತಿವ್ರತೆಯೆಂದು “ಪಂಚಪತಿವ್ರತೆ”ಯರಲ್ಲಿ ಸೇರಿಸಿದ್ದಾರೆ.

ದ್ರೌಪದಾದೇವಿಯು ಸಾಕ್ಷಾತ್ ವಾಯುದೇವರ ನಿಜಪತ್ನಿ ಭಾರತೀ ದೇವಿಯ ಅವತಾರ.   ಈ ಅವತಾರದ ಬಗ್ಗೆ ಕೆಲವು ತಪ್ಪು ಕಲ್ಪನೆಗಳನ್ನು ಮಾಡಿ ಅವರ ಪಾತ್ರವನ್ನು ಕೀಳು ರೀತಿ ಕೇಲವರು ಚಿತ್ರಿಸಿದ್ದಾರೆ.  ಆದರೆ “ಮಹಾಭಾರತ” ಮತ್ತು ಆಚಾರ್ಯ ಮಧ್ವರ “ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥಗಳು”  ಆಕೆಯ ಪಾತ್ರವನ್ನು ಸೊಗಸಾಗಿ ಚಿತ್ರಿಸಿದ್ದಾರೆ.

ದ್ರೌಪದಿಯ ಜನನ -.

ಗುರು ದ್ರೋಣರ ಅಪೇಕ್ಷೆಯಂತೆ, ದ್ರುಪದನ ಹಿಡಿದು ದ್ರೋಣರಿಗೆಪ್ಪಿ ಒಪ್ಸಿಸಿದ ಭೀಮಾರ್ಜುನರ ಕೌಶಲ್ಯದಿಂದ ಚಕಿತನಾದ.  ಭೀಮಸೇನನೇ ದ್ರುಪದನನ್ನು ಹಿಡಿಯುವ ಅವಕಾಶ ಸಿಕ್ಕಿದ್ದರೂ, ಅರ್ಜುನನ ಶಪಥ – “ದ್ರುಪದನನ್ನು ಹಿಡಿದು ತರುತ್ತೇನೆಂಬ ಶಪಥ” ವಿದ್ದುದರಿಂದ ತಾನು ಅವನನ್ನು ಹಿಡಿಯದೆ ಆ ಕೀರ್ತಿ ಅರ್ಜುನನಿಗೆ ದೊರಕಲೆಂದು ಹಿಡಿಯಲಿಲ್ಲ.    ಅರ್ಜುನ ದ್ರುಪದನ ಸೆರೆ ಹಿಡಿದ ಮೇಲೂ ದ್ರುಪದನ ಸೈನಿಕರನ್ನು ಚೆಂಡಾಡುತ್ತಿದ್ದ ಭೀಮನ ಕುರಿತು ಅರ್ಜುನ “ಭೀಮ, ಇಡೀ ಸೈನ್ಯವನ್ನು ನಾಶ ಮಾಡುವುದು ಬೇಡ.  ಇವನು ನಮ್ಮ ತಂದೆಯ ಸ್ನೇಹಿತ, ಧರ್ಮಿಷ್ಠ.  ನಮ್ಮೊಂದಿಗೆ ಸಂಬಂಧಿಯಾಗಲು ಯೋಗ್ಯ”.

ದ್ರೋಣಾಚಾರ್ಯರಿಂದ ಅವಮಾನಿತನಾದೆನೆಂದು ಭಾವಿಸಿದ ದ್ರುಪದರಾಜ, ದ್ರುಪದನ ಮನಸ್ಸಿನಲ್ಲಿ ಅರ್ಜುನ ಹೇಳಿದ್ದ “ಸಂಬಂಧಿ” ಎಂಬ ಮಾತು ಸತ್ಯ ಮಾಡಬೇಕೆಂಬ ಬಯಕೆಯಾಯಿತು ದ್ರುಪದನಿಗೆ. ಅವನಿಗಾಗಿ ಒಬ್ಬ ಮಗಳನ್ನು ಪಡೆಯಲು ಬಯಸಿದ.    ಹಾಗೇ ದ್ರೋಣನನ್ನು ಕೊಲ್ಲುವ ಮಗನನ್ನು ಪಡೆಯಬಯಸಿದನು. ಅದಕ್ಕಾಗಿ    ಯಾಜೋಪಯಾಜರು ಎಂಬ ವಿಪ್ರ ಶ್ರೇಷ್ಟರ ಮೂಲಕ ಗಂಗಾತೀರದಲ್ಲಿ ವಿಶೇಷ ಯಜ್ಞ ಮಾಡಲು, ಆ ಯಜ್ಞದ ಹವಿಸ್ಸು ಸಂತಾನ ಪ್ರಾಪ್ತಿಗಾಗಿ  ಸ್ವೀಕರಿಸಲು ದ್ರುಪದನ ಪತ್ನಿಯನ್ನು ಆಹ್ವಾನಿಸಿದರು.  ಆಗ ಅಲಂಕಾರ ಮಾಡಿಕೊಳ್ಳುತ್ತಿದ್ದ ಅವಳು ಆಗಮಿಸಲು ತಡಮಾಡಲು,  ಅವಳ ಅಹಂಕಾರದಿಂದ ಕುಪಿತರಾದ ಆ ವಿಪ್ರೋತ್ತಮರು ಹವಿಸ್ಸನ್ನು ಅಗ್ನಿಯಲ್ಲಿ ಹೋಮಿಸಿಬಿಟ್ಟರು.    ಎರಡು ವೈಷ್ಣವ ಮಂತ್ರಗಳಿಂದ ಹೋಮಿಸುತ್ತಿದ್ದಂತೆ ಮೊದಲು ಅಗ್ನಿಯಿಂದ ಹೊರಬಂದವನೇ ಅಗ್ನಿಯ ಅವತಾರಿಯಾದ ಧೃಷ್ಟದ್ಯುಮ್ನ.  ಅವನು ಅವತರಿಸುತ್ತಲೇ ಕಿರೀಟ ಧಾರಿಯಾಗಿ, ಕುಂಡಲ ಹಾರಗಳನ್ನು ಧರಿಸಿ, ಶ್ರೇಷ್ಠ ಖಡ್ಗ ಹಿಡಿದು, ರಥಾರೂಢನಾಗಿ ಬಂದನು.

ನಂತರ ಬಂದವಳೇ ಸಾಕ್ಷಾತ್ ಭಾರತೀದೇವಿ.   ಯಜ್ಞದ ಅಗ್ನಿಯಲ್ಲಿ ಅವತರಿಸಿ ಗರ್ಭವಾಸಾದಿ ರಹಿತಳಾಗಿ ಅತ್ಯಂತ ಪವಿತ್ರವಾಗಿ ಅಪ್ರತಿಮ ಸುಂದರಿಯಾಗಿ ಪ್ರಾದುರ್ಭವಿಸಿದಳು. ಅವಳು ಜನಿಸುತ್ತಲೇ ಸರ್ವಜ್ಞಳೂ, ಸರ್ವಾಭರಣಭೂಷಿತೆಯೂ, ತ್ರಿಲೋಕಸುಂದರಿಯೂ, ಯೌವನಸ್ಥೆಯೂ,  ಸರ್ವಲಕ್ಷಣಸಂಪನ್ನೆಯೂ ಆಗಿ ಜನಿಸಿದಳು. ಅವಳಲ್ಲಿ ವಿಶೇಷವಾಗಿ ಉಮೆಯ ಆವೇಶವಿದ್ದಿತು.  ಆಗಲೇ ಜನಿಸಿದರೂ,  ಅರ್ಜುನನ ವಯಸ್ಸಿಗೆ ತಕ್ಕಂತಹ ಯೌವ್ವನ ಅವಳಲ್ಲಿದ್ದಿತು.  ಅವಳಲ್ಲಿ ಪಾರ್ವತಿಯ ಜೊತೆಗೆ ಶಚಿ, ಶ್ಯಾಮಲಾ, ಉಷಾದೇವಿಯರ ಆವೇಶವಿತ್ತು.

 

ದ್ರೌಪದಿ :    ಯಜ್ಞದಲ್ಲಿ ಜನಿಸಿದ್ದರಿಂದ ಯಾಜ್ಞಸೇನಿ, ದ್ರುಪದ ರಾಜನ ಮಗಳಾದ್ದರಿಂದ “ದ್ರೌಪದಿ”, ಪಾಂಚಾಲಿ ರಾಜಕುವರಿಯಾದ್ದರಿಂದ “ಪಾಂಚಾಲಿ”,   ತಾತ ಪೃಷತನಾದ್ದರಿಂದ ಪಾರ್ವತೀ.  ಇವಳ ಜನ್ಮ ನಾಮ “ಕೃಷ್ಣಾ”,  ಎಂದರೆ ಕೃಷ್ಣವರ್ಣದವಳಾಗಿದ್ದರಿಂದ, ಉತ್ಕೃಷ್ಟ ಳಾದ್ದರಿಂದ,  ಸ್ತ್ರೀ ಜೀವರಲ್ಲಿ ಸರ್ವೋತ್ಕೃಷ್ಟ ಮಾಡಿದ್ದರಿಂದ ಅವಳಿಗೆ “ಕೃಷ್ಣಾ” ನಾಮಧೇಯ ಯುಕ್ತವಾಯಿತು.

 

*ದ್ರೌಪದಿಯ ಸ್ವಯಂವರ* :
ಪಾಂಚಾಲ ದೇಶದ ಚಕ್ರವರ್ತಿ ದ್ರುಪದ. ತನ್ನ ಪುತ್ರಿ ದ್ರೌಪದಿಯ ಸ್ವಯಂವರ ನಿಶ್ಚಯಿಸುತ್ತಾನೆ . ಅವನು ಅವಳು ಜನಿಸಿದಾಗಲೇ ಅವಳನ್ನು ಅರ್ಜುನನಿಗೇ ಕೊಟ್ಟು ವಿವಾಹ ಮಾಡಬೇಕೆಂದು ನಿರ್ಣಯಿಸಿರುತ್ತಾನೆ. ಆದರೆ ಪಾಂಡವರೆಲ್ಲ ಅರಗಿನ ಮನೆಯಲ್ಲಿ ದಹಿಸಿ ಹೋಗಿರುತ್ತಾರೆಂದು ನಂಬಲರ್ಹ ಮೂಲಗಳಿಂದ ಸುದ್ದಿ ಬಂದರೂ ಅವನು ಆ ಸುದ್ದಿಯನ್ನು ಪೂರ್ಣವಾಗಿ ನಂಬಿರಲಿಲ್ಲ. ಪಾಂಡವರೆಲ್ಲೋ ಗೌಪ್ಯವಾಗಿ ನೆಲೆಸಿರುವರು ಎಂದು ನಂಬಿ ಶಿವನ ಅನುಗ್ರಹದಿಂದ ಧನಸ್ಸೊಂದನ್ನು ಪಡೆದು ಮತ್ಸ್ಯ ಯಂತ್ರ ಭೇಧಿಸಬೇಕೆಂಬ ಶರತ್ತೊಂದಿಗೆ ಸ್ವಯಂವರ ಏರ್ಪಡಿಸಿದ. ಮತ್ತು ಆ ಧನಸ್ಸು ಅರ್ಜುನನಿಂದ ಮಾತ್ರ ಎತ್ತಲ್ಪಡಲಿ ಎಂದು ಇಚ್ಚಿಸಿದ.

ಸ್ವಯಂವರದಲ್ಲಿ ಭಾಗವಹಿಸಲು ನೂರಾರು ರಾಜರು, ಯುವರಾಜರೂ ಆಗಮಿಸಿರುತ್ತಾರೆ. ದುರ್ಯೋಧನ, ಕರ್ಣ, ಶಿಶುಪಾಲ, ಶಲ್ಯ, ಜರಾಸಂಧ, ಮುಂತಾದ ಅತಿರಥ ಮಹಾರಥರ ದಂಡೇ ಅಲ್ಲಿ ನೆರೆದಿತ್ತು. ಹಲವಾರು ಬ್ರಾಹ್ಮಣರೂ ಸ್ವಯಂವರ ವೀಕ್ಷಿಸಲು ಬಂದಿದ್ದರು. ಇಡೀ ಸ್ವಯಂವರ ಮಂಟಪ ತಳಿರು ತೋರಣಗಳಿಂದ, ಪುಷ್ಪಾಲಂಕಾರ ದಿಂದ, ಚಂದನ ಗಂಧ ಸುವಾಸಿತವೂ ಆಗಿತ್ತು.

 

ಏಕಚಕ್ರನಗರದಲ್ಲಿ ಬಕಾಸುರನ ಸಂಹರಿಸಿದ ಪಾಂಡವರೂ ಧೌಮ್ಯಾಚಾರ್ಯರೊಂದಿಗೆ ಬ್ರಾಹ್ಮಣ ವೇಷದಲ್ಲಿ ಅಲ್ಲಿಗೆ ಆಗಮಿಸಿ ಬ್ರಾಹ್ಮಣರ ಸಾಲಿನಲ್ಲಿ ಕುಳಿತಿದ್ದರು. ಅವರು ಅಲ್ಲಿಗೆ ಆಗಮಿಸುವ ಮುನ್ನ ವೇದವ್ಯಾಸರು ಅವರನ್ನು ಹರಿಸಿ “ಕಲ್ಯಾಣಮಸ್ತು” ಎಂದಿದ್ದರು.

ವೇದಘೋಷ, ನಾದನಿನಾದಗಳೊಂದಿಗೆ ದ್ರೌಪದಿ ಸುವಿಭೂಷಿತಳಾಗಿ, ಪೀತವಸನ ಧರಿಸಿ ಕೈಯಲ್ಲಿ ಕಾಂಚನ ಕುಸುಮಮಾಲೆಯನ್ನು ಹಿಡಿದು ಮಂದಹಾಸದೊಂದಿಗೆ ಆಗಮಿಸಿದರು. ಸಹೋದರ ಧೃಷ್ಟದ್ಯುಮ್ನ ದ್ರೌಪದಿಗೆ ನೆರೆದಿದ್ದ ಎಲ್ಲಾ ಸ್ವಯಂವರಾಕಾಂಕ್ಷಿಗಳನ್ನೂ ಪರಿಚಯಿಸುತ್ತಾನೆ.     . “ಇವನು ಗಾಂಧಾರ ರಾಜ. ಅವನು ಕೌರವೇಶ ದೂರ್ಯೋಧನ. ಅವನ ಬಳಿ ಇರುವವನೇ ಅಂಗರಾಜ ಕರ್ಣ. ಮದ್ರರಾಜ ಶಲ್ಯ, ಪೌಂಡ್ರಿಕ, ಜರಾಸಂಧ, ಯದುವಂಶಜ ಬಲರಾಮ ಕೃಷ್ಣರು. ಇವರಲ್ಲಿ ಮತ್ಸ್ಯಭೇದ ಮಾಡುವವನು ನಿನ್ನ ಕೈಪಿಡಿಯುವನು” ಎಂದು ನಕ್ಕು ಕುಳಿತನು.      ಆ ಸ್ವಯಂವರದಲ್ಲಿ ಬಲರಾಮ, ಪ್ರದ್ಯುಮ್ನ, ಮೊದಲಾದ ಯಾದವವೀರರು ಕೃಷ್ಣನ ಆಜ್ಞೆಯಂತೆ ಸ್ವಯಂವರ ನೋಡಲು ಬಂದಿದ್ದರು ಪಾಲ್ಗೊಳ್ಳಲು ಅಲ್ಲ.

 

ದೇವತೆಗಳು, ಗಂಧರ್ವರು, ಯಕ್ಷ, ಕಿನ್ನರರೆಲ್ಲ ಆಗ‌ಸದಲ್ಲಿ ನಿಂತು ಈ ಮಹಾನ್ ಉತ್ಸವ ನೋಡಲು ಕಾತರರಾಗಿಹರು. ಕೃಷ್ಣನೂ, ಬಲರಾಮನೂ, ಯಾದವರೂ ಉತ್ಕೃಷ್ಟ ಆಸನದಿ ಕುಳಿತಿರಲು, ಬಲರಾಮನಿಗೆ ಕೃಷ್ಣನು ಬ್ರಾಹ್ಮಣ ವೇಷದ ಪಾಂಡವರನ್ನು ದೂರದಿಂದಲೇ ತೋರಿಸಿ ಪರಿಚಯಿಸುತ್ತಾನೆ. ಧರ್ಮಜಾದಿಗಳು ಕೃಷ್ಣನಿಗೆ ಮನಸಾ ವಂದಿಸುತ್ತಾರೆ.  ಹೀಗಿರುವಾಗ ಧೃಷ್ಟದ್ಯುಮ್ನ ಸ್ವಯಂವರ ಘೋಷಿಸುತ್ತಾನೆ.

 

ಭಾರತೀದೇವಿಯ ಅವತಾರಳಾದ ದ್ರೌಪದಿಯ ಸುಂದರ ವದನೇಂದು ದರ್ಶನದಿಂದ ಪುಳಕಿತರಾದವರು ಯೋಗ್ಯ ಜೀವಿಗಳಾದರೆ ಅವಳನ್ನು ವಿವಾಹವಾಗಬಯಸಿದವರು ಹಲವರು. ಕೆಲವರು ಕಾಮದಿಂದಲೂ, ಕೆಲವರು ಬಲಪ್ರದರ್ಶನ ಮೋಹದಿಂದಲೂ, ಕೆಲವರು ಮದ ದಿಂದಲೂ, ಕೆಲವರು ವ್ಯಾಮೋಹದಿಂದಲೂ ಸ್ವಯಂವರಕ್ಕೆ ಆಗಮಿಸಿದ್ದರು.

ಪಾಂಚಾಲ ನರೇಶನ ಅಣತಿಯಂತೆ ಪುರೋಹಿತರು ಯಜ್ಞ ಕುಂಡದಲ್ಲಿ ಆಹುತಿಯನಿತ್ತು ಸ್ವಸ್ತಿವಾಚನ ನೆರವೇರಿಸಿದರು. ಧೃಷ್ಟದ್ಯುಮ್ನ ವಿವರಿಸುತ್ತಾನೆ. “ರಾಜಕುಮಾರರೇ, ವಿಪ್ರಶ್ರೇಷ್ಟರೇ ಈ ಧನುಸ್ಸು ನೋಡಿರಿ. ಇದು ಮತ್ಸ್ಯಯಂತ್ರ. ಯಂತ್ರದ ಛಿದ್ರದಿಂದ ಗುರಿಯಿಟ್ಟು ಐದು ಶರಗಳಿಂದ ಗಿರಗಿರ ತಿರುಗುವ ಮತ್ಸ್ಯವು ಕೆಳಗೆ ಬೀಳದಂತೆ ಹೊಡೆಯುವ ವೀರನು ನನ್ನ ಸಹೋದರಿಯಾದ ಕೃಷ್ಣೆಯನ್ನು ವರಿಸಲು ಅರ್ಹ.

ಮತ್ಸ್ಯಭೇದ :. ಧನಸ್ಸು ದ್ರುಪದ ರಾಜನಿಗೆ ಶಿವ ನೀಡಿದ್ದು. ಧನುರ್ಧಾರಿಯ ಲಕ್ಷ್ಯ ಮತ್ಸ್ಯಯಂತ್ರ. ಇದು ಮೇಲಿದ್ದರೆ ಅದನ್ನು ನೋಡಬೇಕಾದ್ದು ಪಾತ್ರೆಯಲ್ಲಿನ ನೀರಿನಲ್ಲಿ. ಕೆಳಗೆ ಪ್ರತಿಬಿಂಬ ಮತ್ಸ್ಯವನ್ನು ನೋಡಿ ಮೇಲಿರುವ ಬಿಂಬ ಮತ್ಸ್ಯಕ್ಕೆ ಗುರಿಯಿಟ್ಟು ಹೊಡೆಯಬೇಕಾದ್ದು ಪಂಚಬಾಣಗಳಿಂದ. ಒಟ್ಟಿಗೆ ಐದೂ ಬಾಣಗಳಿಂದ ಹೊಡೆದು ಮತ್ಸ್ಯಯಂತ್ರ ಭೇಧಿಸಿದಾಗ ದ್ರೌಪದಿ ಸ್ವಯಂವರ.

 

ಮತ್ಸ್ಯಭೇದ ಮಾಡುವ ಸಮಯ ಆರಂಭವಾಯಿತು. ಕೆಲ ರಾಜರು ಆ ಧನಸ್ಸಿನ ಬಳಿ ಬಂದು ದರ್ಶಿಸಿ ಹಿಂತಿರುಗಿದರೆ, ಕೆಲವರು ಧನಸ್ಸು ಎತ್ತಲು ಪ್ರಯತ್ನಿಸಿ ಎತ್ತಲಾಗಿದೆ ಹಿಂತಿರುಗಿದರೆ , ಕೆಲವರು ಎತ್ತಿದರೂ ಹೆದೆಯನ್ನೇರಿಸಲಾಗದೆ ಹಿಂತಿರುಗಿದರು. ಶಿಶುಪಾಲನು ಧನಸ್ಸು ಬಗ್ಗಿಸಿ ಜ್ಯಾಬಂಧನವನ್ನು ಮಾಡಲೆತ್ನಿಸಲು ಹೆದೆಗೂ ಬಿಲ್ಲಿನ ತುದಿಗೂ ಮಾಷಾಂತರವಿದ್ದಾಗ (ಉದ್ದಿನ ಕಾಳಿನ ಅಂತರ) ಆಗದೆ ಬಿದ್ದನು. ಶಲ್ಯ ಧನಸ್ಸು ಎತ್ತಿ ಮುದ್ಗ (ಹೆಸರುಕಾಳಿನ) ಮಾತ್ರಾಂತರದಲ್ಲಿ ಬಿಲ್ಲು ಬಡಿದು ಬಿದ್ದ. ಜರಾಸಂಧ ಬಿಲ್ಲನ್ನು ಎಳೆದು ಎಳೆದೂ ಅವನ ಅಂಗಾಲುಗಳೇ ಅದುರಿ ಸಾಸಿವೆಕಾಳಿನಷ್ಟು ಅಂತರವಿದ್ದಾಗ ಬಿಲ್ಲು ಅವನನ್ನು ಜೋರಾಗಿ ಅಪ್ಪಳಿಸಿ, ಕಾಲು ಜಾರಿ ಬಿದ್ದು ಅವಮಾನಿತನಾಗಿ ತನ್ನ ದೇಶಕ್ಕೆ ಹಿಂತಿರುಗಿದನು.

ಆಗ ದುರ್ಯೋಧನನ ಪರವಾಗಿ ಕರ್ಣ ಧನಸ್ಸು ಎತ್ತಿದ. ಆದರೆ ಇವನಿಗೆ ದ್ರೌಪದಿಯ ಕಾಮನೆಯಿರಲಿಲ್ಲ. ಬದಲಾಗಿ ದುರ್ಯೋಧನನ ಮಿತ್ರತ್ವ ಸಲುವಾಗಿ ಎತ್ತಿದ. ಇತರೇ ಎಲ್ಲರಿಗಿಂತ ಕರ್ಣ ಜಾಸ್ತಿ ಯಶಸ್ವಿಯಾದ. ಆದರೆ ಕೂದಲೆಳೆಯಷ್ಟು ಅಂತರದಿಂದ ಧನಸ್ಸು ಹೆದೆ ಏರಿಸಲಾಗಲಿಲ್ಲ. ( ಆದರೆ ಕೆಲವು ಮಹಾಭಾರತ ಪಾಠಗಳಲ್ಲಿ ಕರ್ಣ ಹೆದೆಯೇರಿಸಿದ. ದ್ರೌಪದಿ ಸೂತಪುತ್ರನ ವರಿಸಲಾರೆ ಎಂದಾಗ ಮತ್ಸ್ಯಭೇದ ಮಾಡದೇ ಹಿಂತಿರುಗಿದ ಎಂದಿವೆ. ). ಆಚಾರ್ಯ ಮಧ್ವರ ನಿರ್ಣಯವೇ ಸಮರ್ಪಕ.

ಆಗ ಕೃಷ್ಣನ ಸೂಚನೆಯಂತೆ ಭೀಮಾರ್ಜುನರೂ ಎದ್ದರು. ಅದನ್ನು ನೋಡಿ ಕೆಲವು ವಿಪ್ರರು ಕರ್ಣ ಶಲ್ಯರಿಂದಾಗದ್ದು ಈ ಬ್ರಾಹ್ಮಣರಿಗೆ ಆಗುತ್ತದೆಯೇ?, ಎಂದು ಹಾಸ್ಯ ಮಾಡಿದರು. ಕೆಲವರು ಪರಶುರಾಮ, ದ್ರೋಣಾದಿಗಳು ಶಕ್ತರಲ್ಲವೇ,. ಅವರಂತೇ ಇವರೂ ಪ್ರಯತ್ನಿಸಲಿ ಎಂದು ಆಶೀರ್ವದಿಸಿ ಹುರಿದುಂಬಿಸಿದರು. ಮಹಾಭಾರತ ಹೇಳುವಂತೆ ಸ್ವಯಂವರಕ್ಕೆ ಅಸ್ತ್ರವಿದ್ಯಾ ಕೌಶಲ್ಯವೇ ಪ್ರಧಾನ ಹೊರತು ಜಾತಿಯಲ್ಲ. ಭೀಮಾರ್ಜುನರು ಬಿಲ್ಲಿನ ಸಮೀಪ ಧಾವಿಸಿದರು. ಅರ್ಜುನ ಭೀಮನ ಅನುಮತಿ ಪಡೆದುಕೊಂಡು ಕೃಷ್ಣನಿಗೆ ಮನಸಾರೆ ವಂದಿಸಿ ನಿರಾಯಾಸವಾಗಿ ಬಿಲ್ಲಿಗೆ ಹೆದೆಯೇರಿಸಿದ. ಯಂತ್ರದ ಮಧ್ಯದ ಛಿದ್ರದ ಮೂಲಕ ಬಾಣಗಳಿಂದ ಲಕ್ಷ್ಯವನ್ನು ಹೊಡೆದ.  ಅರ್ಜುನ ದ್ರೌಪದಿಯ ಸ್ವಯಂವರಕ್ಕೆ ಅರ್ಹನಾದ.

 

ದ್ರೌಪದಿ ಅರ್ಜುನನ ಕೊರಳಿಗೆ ಕಮಲಮಾಲೆಯನ್ನು ಹಾಕಲು ಅದನ್ನು ಸಹಿಸದ ದುರ್ಯೋಧನ ತನ್ನ ಸೈನ್ಯವನ್ನು ಯುದ್ಧಕ್ಕೆ ಕಳಿಸುತ್ತಾನೆ. ಆಗ ಭೀಮನು ಭಾರೀ ಮರವೊಂದನ್ನು ತಕ್ಷಣ ಕಿತ್ತು ಎದುರು ಬಂದಾಗ ಶತ್ರು ಸೈನ್ಯವೇ. ಓಡಿಹೋಯಿತು. ಕರ್ಣ ಅರ್ಜುನನ ವಿರುದ್ಧ ಮತ್ತು ಶಲ್ಯ ಭೀಮನ ವಿರುದ್ಧ ಯುದ್ಧಕ್ಕೆ ಬಂದರು. ಬ್ರಾಹ್ಮಣರೆಲ್ಲ ಬ್ರಾಹ್ಮಣ ವೇಷದ ಪಾಂಡವರನ್ನು ಹೊಗಳಿದರು. ಅರ್ಜುನ ಕರ್ಣನೊಂದಿಗೆ ಯುದ್ಧ ಮಾಡಿ ಪರಾಭವಗೊಳಿಸಿದ. ಪಾಂಡವರು ದ್ರೌಪದಿಯನ್ನು ಕರೆದುಕೊಂಡು ಕುಂತಿಯ ಬಳಿ ಬಂದಾಗ, ಎಂದಿನಂತೆ ದರ್ಮಜನು, “ಅಮ್ಮಾ, ಭಿಕ್ಷೆಯನ್ನು ತಂದಿರುವೆ” ಎಂದನು. ಕುಂತಿಯು ಒಳಗಿನಿಂದಲೇ ಐವರೂ ಹಂಚಿಕೊಂಡು ತಿನ್ನಿರಿ” ಎಂದಳು. ಆಹಾರ ತಂದಿರುವರೆಂದು ಭಾವಿಸಿದ ಕುಂತಿ ಹಂಚಿಕೊಳ್ಳಿ ಎಂದಿದ್ದಳು. ಬಂದಿದ್ದು ಹೆಣ್ಣೆಂದು ತಿಳಿದಾಗ ದಿಗ್ಭ್ರಾಂತಳಾದಳು. ಸಹೋದರರಿಗೆ ಆಶ್ಚರ್ಯ ವಾಯಿತು. ಆಗ ಕುಂತಿ ಧರ್ಮಜನಲ್ಲಿಗೆ ಬಂದು “ನಾನು ಭಿಕ್ಷೆ ತಂದ ವಸ್ತು ಯಾವುದೆಂದು ನೋಡದೆ ಐವರೂ ಹಂಚಿಕೊಳ್ಳಿ ಎಂದೆ. ನನ್ನ ಮಾತು ಅಸತ್ಯವೂ ಅಧರ್ಮವೂ ಆಗಬಾರದು” ಎಂದಳು. ಯುಧಿಷ್ಠಿರನು ಅರ್ಜುನನಿಗೆ ನಿನ್ನ ಸಾಹಸದಿಂದ ಗೆದ್ದಿರುವುದರಿಂದ ನೀನೇ ವಿವಾಹವಾಗೆನಲು, ಅರ್ಜುನನು “ಮಾತೆಯ ಮಾತು ಮೀರಲಾಗದು. ನೀನು ಜ್ಯೇಷ್ಠ. ನೀನು ಮೊದಲು ವಿವಾಹವಾಗು. ನಂತರ ಭೀಮನೂ ನಂತರ ನಾನೂ ವಿವಾಹವಾಗುವೆವು, ನಂತರ ನಕುಲ ಸಹದೇವರೂ ಇವಳನ್ನು ವಿವಾಹವಾಗುವುದು” ಎಂದಾಗ ಧರ್ಮಜನು ಸಮ್ಮತಿಸಲು ಉಳಿದ ಸಹೋದರರೂ ಒಪ್ಪುತ್ತಾರೆ. ದ್ರೌಪದಿ ಕೂಡ ಸಮ್ಮತಿಸುತ್ತಾಳೆ.

ಆಗ ಬಲರಾಮ ಕೃಷ್ಣರು ಅಲ್ಲಿಗೆ ಬಂದರು. ಅವರು ದ್ವಾರಕೆಗೆ ಹಿಂತಿರುಗಲು ಕುಂತಿಗೆ ಹೇಳಿ ಹೋಗಲು ಬಂದರು. ಕೃಷ್ಣ ಧರ್ಮಜನಿಗೆ ಹೇಳುತ್ತಾನೆ ” ಕೆಂಡವು ಬೂದಿಯಿಂದ ಆವೃತವಾಗಿದ್ದರೂ ಅದರ ಕಾವು ಮುಚ್ಚಿಡಲಾಗುವುದೇ? ನೀವು ಪಾಂಡವರೆಂದು ಮೊದಲೇ ಗೊತ್ತಿತ್ತು”. ” ಅಗ್ನಿಯಿಂದ ಪಾರಾಗಿ ಬಂದಿರಿ. ದುರ್ಯೋಧನನ ಕುತಂತ್ರ ವಿಫಲವಾಗಿದೆ. ನೀವು ಇನ್ನೂ ಸ್ವಲ್ಪ ಕಾಲ ಅಡಗಿಕೊಂಡೇ ಇರಿ” ಎಂದನು.  ದ್ರೌಪದಿಯ ವಿಷಯದಲ್ಲಿ ಇರುವ ದ್ವಂದ್ವವನ್ನು ಪಾಂಡವರೂ ಹೇಳಲಿಲ್ಲ, ಕೃಷ್ಣನೂ ಕೇಳಲಿಲ್ಲ.

 

ದ್ರುಪದ ರಾಜನಿಗೆ ಅರ್ಜುನನಿಗೆ ತನ್ನ ಮಗಳನ್ನು ಕೊಡಬೇಕೆಂದು ಬಯಕೆ. ಆದರೆ ಸ್ವಯಂವರದಲ್ಲಿ ಬ್ರಾಹ್ಮಣ ಗೆದ್ದಿದ್ದ. ಅವನಿಗೆ ಆ ಬ್ರಾಹ್ಮಣ ಅರ್ಜುನನಾಗಿರಲಿ ಎಂಬ ಮನದಾಸೆ. ಧೃಷ್ಟದ್ಯುಮ್ನ ಮರೆಯಾಗಿ ನಿಂತು ಅವರನ್ನು ಬ್ರಾಹ್ಮಣರಲ್ಲ ಅವರು ಕ್ಷತ್ರಿಯರೆಂದು ತಿಳಿದ.

 

ದ್ರೌಪದಿಯ ವಿವಾಹ ಜಿಜ್ಞಾಸೆ –

ದ್ರುಪದ ರಾಜನಿಗೆ ಧನಸ್ಸು ಎತ್ತಿದವನು ಅರ್ಜುನನೇ ಎಂಬ ನಂಬಿಕೆ. ಏಕೆಂದರೆ ಅವನಿಗೆ ಶಿವನ ವರದಂತೆ ಅರ್ಜುನನೇ ಎತ್ತಬೇಕಿತ್ತು. ಆದರೆ ಅವನು ಬ್ರಾಹ್ಮಣ ವೇಷದಲ್ಲಿದ್ದನು. ಆದರೂ ಅವನ ನಡೆ ಧನಸ್ಸು ಎತ್ತಿದ ರೀತಿ ಕ್ಷತ್ರಿಯನಂತೇ ಇದ್ದಿತು. ದ್ರುಪದರಾಜನು ತನ್ನ ಪುರೋಹಿತರನ್ನು ಪಾಂಡವರು ವಾಸವಿದ್ದ ಕುಂಭಾರನ ಮನೆಗೆ ಕಳಿಸಿ ಆಮಂತ್ರಿಸಿದನು. ದ್ರೌಪದಿ ಮತ್ತು ಕುಂತಿ ಒಂದು ರಥದಲ್ಲೂ ಮತ್ತೊಂದು ರಥದಲ್ಲಿ ಪಾಂಡವರೂ ಹೊರಟು, ಪಾಂಚಾಲದೇಶ ತಲುಪಿ ರಾಜಮಹಾರಾಜರಿಗಾಗುವ ಭೋಜನದಿಂದ ಆದರಿಸಿದನು ದ್ರುಪದ. ಮತ್ತು ಕೇಳಿದ “ಬ್ರಾಹ್ಮಣರೇ, ನೀವು ಬ್ರಾಹ್ಮಣರೇ, ಕ್ಷತ್ರಿಯರೇ, ವೈಶ್ಯರೇ ಅಥವಾ ಬ್ರಾಹ್ಮಣ ವೇಷದಿ ದೇವಲೋಕದಿಂದ ಬಂದ ದೇವತೆಗಳೇ ತಿಳಿಸಿ, ನಿಮ್ಮ ವರ್ಣಾಶ್ರಮಕ್ಕೆ ಉಚಿತವಾದ ಏರ್ಪಾಡು ಮಾಡುತ್ತೇನೆ” ಎಂದನು. ಆಗ ಯುಧಿಷ್ಠಿರನು “ನಾವು ಬ್ರಾಹ್ಮಣರಲ್ಲ, ಕ್ಷತ್ರಿಯರು. ಪಾಂಡುರಾಜನ ಮಕ್ಕಳು” ಎಂದು ಎಲ್ಲರನ್ನೂ ಪರಿಚಯಿಸಿದ. ದ್ರುಪದನ ಆನಂದಕ್ಕೆ ಪಾರವೇ ಇಲ್ಲವಾಯಿತು.

ನಾಲ್ಕೈದು ದಿನವಾದ ಮೇಲೆ ಒಂದು ದಿನ ದ್ರುಪದನು ಧರ್ಮಜನ ಬಳಿ ಅರ್ಜುನನೊಂದಿಗೆ ದ್ರೌಪದಿಯ ವಿವಾಹ ಪ್ರಸ್ತಾಪಿಸಿದನು. ಆಗ ಧರ್ಮಜನು “ನಮ್ಮ ತಾಯಿಯ ಆಜ್ಞೆಯಂತೆ ದ್ರೌಪದಿಯನ್ನು ನಾವೈವರೂ ವಿವಾಹವಾಗುತ್ತೇವೆ” ಎಂದಾಗ ಈ ಬಹುಪತಿತ್ವ ವಿಷಯ ಅವನಿಗೆ ಸಮ್ಮತವಾಗಲಿಲ್ಲ.  ಮಗಳ ವಿವಾಹದ ಚಿಂತೆಯಲ್ಲೇ ಮುಳುಗಿದ್ದ ಸಮಯದಲ್ಲಿ ಶ್ರೀ ವೇದವ್ಯಾಸರು ಆಗಮಿಸಲು, ತನ್ನ ಮನದ ದುಗುಡವನ್ನು ಅವರು ಮುಂದೆ ತೋಡಿಕೊಂಡ.

 

ಆಗ ಧರ್ಮಜನು “ಬಹು ಪತಿತ್ವದ ಉದಾಹರಣೆಗಳು ಪುರಾಣಗಳಲ್ಲಿದೆ. ಹಿಂದೆ ಜಟಿಲೆಯು ಸಪ್ತ ಋಷಿಗಳನ್ನು ಮದುವೆಯಾಗಿದ್ದಳು. ಕಂಡು ಮುನಿಯ ಪುತ್ರಿ ವಾರ್ಕ್ಷಿಯು ಹತ್ತು ಪ್ರಾಚೇತಸರೆಂಬ ಋಷಿಕುಮಾರರನ್ನು ವಿವಾಹವಾಗಿದ್ದಳು. ನಮ್ಮ ಮಾತೆಯ ಆಜ್ಞೆ ನಾವು ಪಾಲಿಸಲೇಬೇಕು” ಎಂದನು.

ಆಗ ವೇದವ್ಯಾಸರು ಹೇಳುತ್ತಾರೆ. ದ್ರೌಪದಿ ಈ ಐವರ ವಿವಾಹವಾಗಲು ಹಲವಾರು ಕಾರಣಗಳಿವೆ. ಈ ದ್ರೌಪದಿ ಸಾಮಾನ್ಯಳಲ್ಲ ಇವಳಿಗೆ ಶಂಕರನ ವರಪ್ರಸಾದದಿಂದ ಐವರು ಪತಿಗಳ ಪಡೆಯೋ ವರವೂ, ಶಾಪವೂ ಇದೆ. ಇವಳಿಗೆ ಈ ಐವರು ಪಾಂಡವರಿಗೆ ಕೊಟ್ಟು ವಿವಾಹ ಮಾಡಲು ಏನೂ ಅಡ್ಡಿ ಆತಂಕಗಳಿಲ್ಲ ಎಂದರು.

ತನ್ನ ಅನುಮಾನವನ್ನೆಲ್ಲ ಪರಿಹರಿಸಿಕೊಂಡ ದ್ರುಪದನು ಬಲು ಸಂತಸದಿಂದ ದ್ರೌಪದಿಯ ವಿವಾಹಕ್ಕೆ ಅಣಿಮಾಡಿದ. ಮೊದಲು ಧರ್ಮಜನೂ, ಮುಂದಿನ ದಿನ ಭೀಮನೂ, ಹೀಗೆ ಪ್ರತಿದಿನ ಒಬ್ಬೊಬ್ಬರಿಗೆ ವಿವಾಹ ಮಾಡಿಕೊಟ್ಟ ದ್ರುಪದ. ಒಬ್ಬೊಬ್ಬರಿಗೂ ನೂರಾರು ರಥಗಳು, ಆನೆಗಳೂ, ಅಶ್ವಗಳೂ, ದಾಸಿಯರನ್ನೂ ಕೊಟ್ಟನು. ಸ್ವಲ್ಪ ಕಾಲ ಪಾಂಚಾಲದೇಶದಲ್ಲೇ ಪಾಂಡವರು ಉಳಿದರು. ಕೃಷ್ಣನೂ ವಿವಾಹ ನಂತರ ಹಲವಾರು ಆಭರಣಗಳೂ, ರಥತುರಗಗಳೂ, ಮುಂತಾದವನ್ನು ಹೇರಳವಾಗಿ ಕಳಿಸಿದನು.

 

ದ್ರೌಪದಿಯ ಪಂಚಪತಿತ್ವ
ದ್ರೌಪದಿಯಲ್ಲಿ ಯಮಧರ್ಮನ ಪತ್ನಿ ಶ್ಯಾಮಲ, ಇಂದ್ರದೇವರ ಪತ್ನಿ ಶಚೀದೇವಿ, ಅಶ್ವಿನಿ ದೇವತೆಗಳ ಪತ್ನಿ ಉಷಾ ದೇವಿ ಇವರ ಜೊತೆಗೆ ಶಿವನ ಪತ್ನಿ ಉಮೆಯೂ ಉಪಸ್ಥಿತಳಿದ್ದಳು. ಈ ವಿಷಯವನ್ನು ನಿರೂಪಿಸಲು ವೇದ ವ್ಯಾಸರು ದ್ರುಪದನಿಗೆ ದಿವ್ಯ ದೃಷ್ಟಿ ನೀಡಿ ಪಾಂಡವರೆಲ್ಲ ದೇವಲೋಕದ ದೇವತೆಗಳು ಅವರೊಂದಿಗೆ ನಿನ್ನ ಮಗಳು ದ್ರೌಪದಿ ಪ್ರತ್ಯೇಕ ಪ್ರತ್ಯೇಕವಾಗಿ ಜೊತೆಗಿರುವುದನ್ನು ತೋರಿಸಿ, ಇನ್ನು ನಿನಗೆ ಇಷ್ಟ ಬಂದಂತೆ ಮಾಡು ಎಂದರು. ದ್ರುಪದನಿಗೆ ತನ್ನಲ್ಲಿದ್ದ ದುಗುಡವೆಲ್ಲ ಪರಿಹಾರವಾಯಿತು. ಸಂತೋಷದಿಂದ ವಿವಾಹಕ್ಕೆ ಒಪ್ಪಿದ.

ಪಾಂಡವರಲ್ಲಿ ದಿನಕ್ಕೊಬ್ಬರಂತೆ ದ್ರೌಪದಿಯ ಜೊತೆ ವಿವಾಹ ನೆರವೇರಿತು. ಮೊದಲ ದಿನ ಧರ್ಮಜನು ದ್ರೌಪದಿ ಶರೀರದಲ್ಲಿದ್ದ ಶ್ಯಾಮಲಾದೇವಿಯೊಂದಿಗೂ, ಎರಡನೇ ದಿನ ಭೀಮಸೇನನು ದ್ರೌಪದಿಯಲ್ಲಿ ಪ್ರಧಾನವಾಗಿ ಇದ್ದ ಸಾಕ್ಷಾತ್ ಭಾರತೀ ದೇವಿಯನ್ನೂ, ನಂತರ ಅರ್ಜುನನು ದ್ರೌಪದಿಯಲ್ಲಿದ್ದ ಶಚೀದೇವಿಯೊಂದಿಗೂ, ನಂತರ ನಕುಲ ಸಹದೇವರೂ ದ್ರೌಪದಿಯಲ್ಲಿದ್ದ ಉಷಾದೇವಿಯೊಂದಿಗೂ ವಿವಾಹ ಮಾಡಿಕೊಂಡರು. ಧೌಮ್ಯಾಚಾರ್ಯರ ಪೌರೋಹಿತ್ಯದಲ್ಲಿ ವಿವಾಹ ನಡೆಯಿತು.ಆದ್ದರಿಂದ ಇದು ಬಹುಪತ್ನಿತ್ವ ವಿವಾಹ ಅಲ್ಲ ಎಂದು ತಿಳಿಯುತ್ತದೆ.

 

ದ್ರೌಪದಿಯಲ್ಲಿ ಬೇರೆ ದೇವತೆಗಳು ಬಂದು ಸೇರಿದ ರೀತಿ:

ಚತುರ್ಮುಖನಿಂದ ಎರಡು ಬಾರಿ ಶಾಪ ;.
ಒಮ್ಮೆ ದೇವತೆಗಳೆಲ್ಲ ಒಂದೆಡೆ ಸೇರಿದ್ದಾಗ, ಉಮೆ, ಶಚಿ, ಶ್ಯಾಮಲಾ ಮತ್ತು ಉಷೆಯರು ಜೊತೆ ಸೇರಿ ಒಂದೇ ದೇಹದೊಳಗೆ ಸೇರಿ ಬ್ರಹ್ಮನ ಎದುರಿಗೆ ಒಬ್ಬರಾಗಿ ಓಡಾಡತೊಡಗಿದರು. ಹೀಗೇ ಕೀಟಲೆ ಮಾಡಲೋಸುಗ ತಮ್ಮನ್ನು ಬ್ರಹ್ಮನು ಗುರುತಿಸುವನೋ ಇಲ್ಲವೋ ಎಂದು ಮೂರು ಬಾರಿ ಓಡಾಡಿದರು. ಸರ್ವಜ್ಞರಾದ ಬ್ರಹ್ಮ ದೇವರಿಗೆ ತಿಳಿಯುವುದಿಲ್ಲವೇ. ಬ್ರಹ್ಮದೇವರು ಶಪಿಸಿದರು “ನೀವೆಲ್ಲ ಮೂರು ಬಾರಿ ಒಂದೇ ದೇಹದಲ್ಲಿ ಮನುಷ್ಯರಾಗಿ ಹುಟ್ಟಿಸಿ”. ಈ ಶಾಪ ನಿಮಿತ್ತ ಉಮೆ, ಶಚಿ, ಶ್ಯಾಮಲಾ, ಮತ್ತು ಉಷೆಯರಿಗೆ ಮೂರು ಬಾರಿ ಭೂಲೋಕದಲ್ಲಿ ಜನಿಸುವಂತೆ ಆಯಿತು.

ಮತ್ತೊಮ್ಮೆ ಇನ್ನೊಂದು ಸಭೆಯಲ್ಲಿ ಈ ನಾಲ್ವರೂ ತಮ್ಮ ಪತಿಯರೊಂದಿಗೆ ಬಂದು ಗಂಡಂದಿರೊಂದಿಗೆ ಏಕಾಂತದಲ್ಲಿರುವ ರೀತಿಯಲ್ಲಿ ಬ್ರಹ್ಮನ ಮುಂದೆ ತೋರಿದರು. ಈ ವರ್ತನೆಯಿಂದ ಸಿಟ್ಟಾದ ಬ್ರಹ್ಮ ಮತ್ತೊಂದು ಶಾಪ ನೀಡಿದ. “ನೀವು ಮನುಜರಾಗಿ ಹುಟ್ಟಿ ಪರಪುರುಷರನ್ನು ಹೊಂದಿ” ಎಂದು ಶಪಿಸಿದ.

ಈ ರೀತಿಯಲ್ಲಿ ಆ ನಾಲ್ವರೂ ಅಂದರೆ ಉಮೆ, ಶಚಿ, ಶ್ಯಾಮಲಾ ಮತ್ತು ಉಷೆ ಮೂರು ಬಾರಿ ಭೂಲೋಕದಲ್ಲಿ ಒಂದೇ ದೇಹದಲ್ಲಿ ಜನನ ಮತ್ತು ಅದರಲ್ಲೊಂದು ಬಾರಿ ಪರಪುರುಷನ ಸಂಪರ್ಕ ಹೊಂದಬೇಕಾಯಿತು.

ದೇವತೆಗಳಿಗೂ ಅಸುರಾವೇಷ ಬರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಈ ರೀತಿಯಲ್ಲಿ ಪರಪುರುಷನೊಂದಿಗೆ ಸಂಪರ್ಕ ಹೊಂದಬೇಕಾದ ಸ್ಥಿತಿಯಲ್ಲಿ ಈ ನಾಲ್ವರೂ ಭಾರತೀದೇವಿಯ ಮೊರೆ ಹೊಕ್ಕರು. ಭಾರತೀದೇವಿ ತಮ್ಮೊಳಗಿದ್ದರೆ ವಾಯುವಿನ ಹೊರತು ಬೇರಾರೂ ತಮ್ಮನ್ನು ಮುಟ್ಟಲಾರರು. ವಾಯುದೇವರು ಪರಿಶುದ್ಧರು. ಆದ್ದರಿಂದ ಅವರ ಸ್ಪರ್ಶವಾದರೆ ದೋಷ ಬರದು. ಏಕೆಂದರೆ ವಾಯುದೇವರ ಸ್ಪರ್ಶ ಮಗಳಿಗೆ ತಂದೆಯ ಸ್ಪರ್ಶದಂತೆ. ಸಕಲ ಜೀವೋತ್ತಮನಾದ ವಾಯುವಿನ ಸಂಪರ್ಕ ತಮ್ಮ ಪಾತಿವ್ರತ್ಯಕ್ಖೆ ಭಂಗ ತಾರದು ಎಂದು ಯೋಚಿಸಿ ಸಾವಿರ ವರ್ಷಗಳ ಕಾಲ ಭಾರತೀದೇವಿಯರ ತಪಗೈದು ಓಲೈಸಿ, “ಒಂದೇ ದೇಹದಲ್ಲಿ ನಾವು ನಾಲ್ವರು ಹುಟ್ಟುವ ಪ್ರತಿಬಾರಿಯೂ ನೀನು ನಮ್ಮ ಜೊತೆಗಿರು” ಎಂದು ಕೇಳಿಕೊಂಡರು. ಅವರಿಗೆ ಒಂದು ಜನ್ಮದಲ್ಲಿ ಮಾತ್ರ ಬ್ರಹ್ಮ ಶಾಪದಂತೆ ಪರಪುರುಷ ಸಂಪರ್ಕದ ಶಾಪವಿದ್ದರೂ, ಇತರ ಮೂರು ಜನ್ಮಗಳಲ್ಲಿ ವರೋನ್ಮತ್ತರಾದ ಅಸುರಾದಿಗಳ ಸ್ಪರ್ಶ ಭಯ ನಿವಾರಣೆಗಾಗಿ ನಾಲ್ಕೂ ಜನ್ಮಗಳಲ್ಲೂ ಭಾರತೀದೇವಿಯೊಂದಿಗೆ ಕೂಡಿ ಜನನ ಅಪೇಕ್ಷಿಸಿದರು. ಇದಕ್ಕೆ ಭಾರತಿಯೂ ಒಪ್ಪಿದಳು.

ಹೀಗಾಗಿ ಭಾರತೀದೇವಿಯೂ ಭೂಲೋಕದಲ್ಲಿ ಅವತರಿಸುವ ಪ್ರಸಂಗವಾಯಿತು.

ಭಾರತೀದೇವಿಯು ಆ ನಾಲ್ಕು ದೇವತೆಗಳಿಗೋಸ್ಕರ ತಾನೂ ನಾಲ್ಕು ಜನ್ಮ ಪಡೆದು ಪಾರ್ವತ್ಯಾದಿ ಸ್ತ್ರೀಯರೊಂದಿಗೆ ಕೂಡಿಕೊಂಡು ಮೊದಲು ತ್ರೇತಾಯುಗದಲ್ಲಿ ಶಿವನೆಂಬ ಒಬ್ಬ ಮುನಿಯ ಕನ್ಯೆಯಾಗಿ ವಿಪ್ರಕನ್ಯೆಯಾಗಿ ಅವತರಿಸಿದಳು. ಆ ವಿಪ್ರಕನ್ಯೆಯಾದರೋ ರುದ್ರದೇವರ ಕುರಿತು ತಪಸ್ಸು ಮಾಡಿದರು. ಇಲ್ಲಿ ಪಾರ್ವತ್ಯಾದಿಗಳು ತಪಸ್ಸು ಮಾಡಿದ್ದು ಶಿವನ ಕುರಿತು ಸ್ವಭರ್ತೃ ಪ್ರಾಪ್ತಿಗಾಗಿ. ಆದರೆ ದ್ರೌಪದಿಯು ರುದ್ರಾಂತರ್ಯಾಮಿಯಾದ ಶ್ರೀಹರಿಯ ಕುರಿತು ತಪಸ್ಸು ಮಾಡಿದಳು. ಅವಳ ಉದ್ದೇಶ ಕರ್ಮೈಕ್ಯ. ಅರ್ಥಾತ್ ಒಂದು ಶರೀರದಲ್ಲಿ ಅನೇಕ ಜೀವರಿದ್ದರೆ ಅವರೆಲ್ಲ ಸೇರಿ ಒಂದೇ ಕರ್ಮ ಮಾಡಬೇಕಾಗುತ್ತದೆ. ಆದ್ದರಿಂದ ನಾಲ್ವರು ತಪಸ್ಸು ಮಾಡುತ್ತಿರುವುದರಿಂದ ಅವರ ಜೊತೆಗೆ ದ್ರೌಪದಿಯೂ ಕರ್ಮೈಕ್ಯಕ್ಕಾಗಿ ತಪಸ್ಸು ಮಾಡಿದಳು. ಭಾರತೀದೇವಿಗೆ ಶಿವಾಂತರ್ಯಾಮಿ ಶ್ರೀಹರಿ ಎಲ್ಲಾ ಜನ್ಮಗಳಲ್ಲೂ ನಿನ್ನ ಪತಿಯೊಂದಿಗೆ ತೃಪ್ತಿಯಿಂದಿರು ಎಂದರೆ, ಶಿವನು ಉಳಿದ ನಾಲ್ವರಿಗೆ ಅವರವರ ಪತಿಗಳೊಂದಿಗೆ ಸಮಾಗಮದ ವರವಿತ್ತ.

ಮುಂದಿನ ಜನ್ಮದಲ್ಲಿ ಇಂದ್ರಸೇನಾ ಎಂಬ ಹೆಸರಿಂದ ನಳ ದಮಯಂತಿಯರ ಪುತ್ರಿಯಾಗಿ ಒಂದೇ ದೇಹದಲ್ಲಿ ಕೂಡಿ ಐವರೂ ಜನಿಸಿದರು. ಒಮ್ಮೆ ಮುದ್ಗಲನೆಂಬ ಮುನಿ ತಪಸ್ಸು ಮಾಡುತ್ತಿದ್ದ. ಅವನು ಪುರಾಣದ ವಾಕ್ತರೀತ್ಯ ಬ್ರಹ್ಮನು ತನ್ನ ಮಗಳನ್ನೇ ವಿವಾಹವಾದ ಎಂಬ ಒಂದು ಕಥೆಯನ್ನು ಕೇಳಿ ಬ್ರಹ್ಮನನ್ನು ಅಪಹಾಸ್ಯಗೈದ. ಅಸುರಾವೇಷ ಮುನಿಯನ್ನೂ ಬಿಟ್ಟಿಲ್ಲ. ಆಗ ಬ್ರಹ್ಮನು ಅವನಿಗೆ ಶಾಪವಿತ್ತ “ನೀನು ಅಹಂಕಾರಿ. ನೀನು ಭಾರತೀ ಮೊದಲಾದ ಐದು ದೇವಿಯರ ಸಿಂಗ್ ಮಾಡು. ಅದು ನರಕಾದಿ ಅನರ್ಥಕ್ಕೆ ಸಾಧನವಾಗಲಿ” ಎಂದು. ಹೀಗೆ ಶಪಿತ ಮುದ್ಗಲ ಮತ್ತೆ ತಪದಿಂದ ಬ್ರಹ್ಮನನ್ನು ಒಲಿಸಿಕೊಂಡ. ಒಲಿದ ಬ್ರಹ್ಮ ವರವಿತ್ತ “ನೀನು ದೇವಿಯರ ಸಂಗ ಮಾಡುವುದಿಲ್ಲ. ವಾಯುವೇ ಇಂದ್ರಸೇನೆಯ ಸಂಗ ಮಾಡುತ್ತಾನೆ. ನೀನು ಮೂರ್ಚಿತನಾಗಿರುತ್ತಿ. ಆದ್ದರಿಂದ ನಿನಗೆ ಶಾಪ ತಟ್ಟುವುದಿಲ್ಲ” ಎಂದು . ಆಗ ಮುದ್ಗಲನಿಗೆ ಅನುಗ್ರಹಿಸಿದಾಗ ವಾಯು ಮುದ್ಗಲನನ್ನು ಸೇರಿದ. ಬಳಿಕ ಮುದ್ಗಲ ಮುನಿಯೊಂದಿಗೆ ಇಂದ್ರಸೇನೆಯ ವಿವಾಹವಾಯಿತು. ಮುದ್ಗಲನಿಗೆ ಪ್ರಾರಬ್ಧವಶಾತ್ ಕುಷ್ಠರೋಗ ಕಾಡಿದರೂ, ಇಂದ್ರಸೇನೆ ಅಸಹ್ಯಪಡದೆ ಸೇವಿಸಿದಳು. ಆ ಸಮಯದಲ್ಲಿ ವಾಯುದೇವರು ಇಂದ್ರಸೇನೆಯೊಂದಿಗೆ ವಿಹರಿಸಿದರು. ಮುದ್ಗಲನ ರೋಗ ಮರೆಯಾಯಿತು. ವಾಯು ಭಾರತೀರಮಣನಾದರೆ ದ್ರೌಪದಿಯಲ್ಲಿದ್ದ ಇತರ ದೇವತಾಸ್ತ್ರೀಯರಿಗೆ ವಾತ್ಸಲ್ಯದ ಸ್ಪರ್ಶವಾಯಿತು.  ಉಳಿದವರಿಗೆ ನಿಜ ಭರ್ತೃವಿನ ಸಂಗವಾಗಲಿಲ್ಲ.

ಅನಂತರ ಮುದ್ಗಲ ತಪಸ್ಸನ್ನು ಆಚರಿಸಲು ದೇಶಾಂತರ ತೆರಳಿದ. ಪತಿ ತಪಸ್ಸಿಗೆ ತೆರಳಿದ ಮೇಲೆ ಇಂದ್ರಸೇನೆಯೂ ತಪಸ್ಸನ್ನ ಆಚರಿಸಿದಳು. ಇಂದ್ರಸೇನೆಯ ದೇಹದಲ್ಲಿದ್ದ ಭಾರತಿಯು ಶಿವಾಂತರ್ಯಾಮಿ ಶ್ರೀಹರಿಯನ್ನು , ಮತ್ತು ಅದೇ ದೇಹದಲ್ಲಿದ್ದ ಪಾರ್ವತಿ ಮೊದಲಾದವರು ಶಿವನನ್ನು ಕುರಿತು ತಪಸ್ಸು ಮಾಡಿದರು. ಶಿವ ಪ್ರತ್ಯಕ್ಷನಾಗಲು, ಒಂದೇ ದೇಹದಲ್ಲಿದ್ದ ಆ ಐವರೂ ಪ್ರತ್ಯೇಕ ಪ್ರತ್ಯೇಕವಾಗಿ ತಮ್ಮ ಪತಿಗಳನ್ನು ಹೊಂದಲು ” ಪತಿಂ ದೇಹಿ” ವರ ಬೇಡಿದರು. ಅವರ ಕೋರಿಕೆ ಐದು ಬಾರಿ ಅವರ ಬಾಯಿಂದ ಹೊರಬಿತ್ತು. ಇಲ್ಲಿ ಗಮನಿಸಬೇಕಾದ ವಿಷಯ. ಭಾರತೀದೇವಿಗೆ ಇಂದ್ರಸೇನಳಾಗಿದ್ದಾಗ ವಾಯುದೇವರೇ (ಮುದ್ಗಲನ ದೇಹ ಮೂಲಕ) ಬಂದಿದ್ದರೂ ಉಳಿದವರಿಗೆ ಪತಿ ಈ ಜನ್ಮದಲ್ಲಿ ಬಂದಿರಲಿಲ್ಲ. ಅದಕ್ಕೇ ಅವರು ತಪಸ್ಸು ಮಾಡಿದರು. ಅವರೊಟ್ಟಿಗೆ ಇದ್ದಿದ್ದರಿಂದ ಭಾರತಿಯೂ ಕರ್ಮೈಕ್ಯಕ್ಕಾಗಿ ತಪಸ್ಸು ಮಾಡಿದಳು, ವರ ಬೇಡಿದಳು.

ಶಿವಾಂತರ್ಯಾಮಿಯು ದ್ರೌಪದಿಗೆ ಪತಿ ಪ್ರಾಪ್ತಿ ವರ ನೀಡಿದ. ಇತರರಿಗೆ ಶಿವನೇ ನಾಲ್ವರು ಪತಿಯರನ್ನು ವರವನ್ನಾಗಿ ನೀಡಿದ. ಹರಿ ದ್ರೌಪದಿಗೆ ವರವಿತ್ತರೂ, ಆದು ಬಂದದ್ದು ಶಿವನ ಬಾಯಿಯಿಂದಲೇ. ಶಿವ ಹಾಗೆ ವರ ನೀಡಲು ಒಬ್ಬ ಸ್ತ್ರೀಯೇ ಐವರು ಗಂಡಂದಿರನ್ನು ಪಡೆವ ವರವನ್ನು ಕೇಳಿರುವಳೆಂಬ ತಪ್ಪು ತಿಳಿದದ್ದೇ ಕಾರಣ. ಮತ್ತು ಶಿವನು ವರವಿತ್ತಾಗ ಆ ದೇವಿಯರು ತಾವು ಬೇರೆ ಬೇರೆ ಐದು ಮಂದಿ ದೇವಿಯರು ಎಂಬುದನ್ನು ಮರೆತಿದ್ದರು. ಏಕೆಂದರೆ ಒಂದೇ ದೇಹದಲ್ಲಿ ಒಂದಾಗಿ ಬೆರೆತಿದ್ದರು. ” ದೇವಿ ನೀನು ನಿನ್ನ ಪತಿಯ ಪಡೆಯುವಿ” ಎಂದು ಶಿವಾಂತರ್ಯಾಮಿ ವಿಷ್ಣು ಹೇಳಿದ್ದನ್ನೂ, ನಾಲ್ಕು ಬಾರಿ ವಟು ರೂಪದಿ ಶಿವ ಹೇಳಿದ್ದನ್ನೂ , ಐದು ಪತಿಗಳನ್ನು ಪಡೆಯಿರೆಂದು ವರ ನೀಡಿದರೆಂದು ತಪ್ಪು ತಿಳಿದರು.

ಒಂದೇ ದೇಹದಲ್ಲಿ ಇರುವ ಆ ದೇವಿಯರು ಅಳುತ್ತಿರುವುದನ್ನು ನೋಡಿ ದೇವೇಂದ್ರ ಅಲ್ಲಿಗೆ ಬಂದ. ಆಗ ಆ ಸ್ತ್ರೀ ಹೇಳುತ್ತಾಳೆ “ಪತಿ ಪ್ರಾಪ್ತಿಗಾಗಿ ವರ ಬೇಡಿದಾಗ ನನಗೆ ಐದು ಮಂದಿ ಪತಿಗಳಾಗುವರು ಎಂದು ವರ ನೀಡಿದ ಎಂದು ವಟು ರೂಪಿ ಶಿವನನ್ನು ತೋರಿಸಿ ಹೇಳಿದಳು. ಆಗ ಕ್ರುದ್ಧನಾದ ಇಂದ್ರ “ನಾನೂ ಮೂರ್ಲೋಕದೊಡೆಯ. ನೀನು ಈ ಹೆಣ್ಣನ್ನು ಕಾರಣವಿಲ್ಲದೆ ಶಪಿಸಿರುವೆಯಾ ? ನೀನು ದುರ್ಬುದ್ದಿ ಯವನು, ” ಎಂದು ನಿಂದಿಸುತ್ತಾನೆ . ಆಗ ವಟುರೂಪಿ ಶಿವ ಇಂದ್ರನ ಅಹಂಕಾರ ವರ್ತನೆಗೆ ಇಂದ್ರನಿಗೆ ನುಡಿದ ” ನೀನು ಮನುಷ್ಯನಾಗಿ ಜನಿಸಿ ಇವಳನ್ನೇ ವರಿಸು”. ಆದ್ದರಿಂದಲೇ ಇಂದ್ರನು ಅರ್ಜುನನಾಗಿ ಜನಿಸಿದನು. ಮತ್ತೂ ಆ ಪಂಚಕನ್ಯೆಯರಲ್ಲಿ ಒಬ್ಬಳಾದ ಶಚಿಯನ್ನು (ದ್ರೌಪದಿ ದೇಹದಲ್ಲಿರುವವಳು) ವಿವಾಹವಾದ. ಮತ್ತು ಇಂದ್ರನಿಗೆ ಶಿವ ಹೇಳುತ್ತಾನೆ “ನನ್ನನ್ನು ಅವಮಾನಿಸಿದ್ದರಿಂದ ಪತಿತರಾಗಿರುವ ನಿನ್ನಂತಹ ದೇವತೆಗಳನ್ನು ಇದೇ ಪರ್ವತದ ಕೆಳಗೆ ನೋಡು” ಎಂದ.

ಶಿವ ಹೇಳಿದ್ದು ಸುಳ್ಳು. ಆ ದೇವತೆಗಳು ಪತಿತರಾಗಿರಲಿಲ್ಲ. ನಿಜವಾದ ವಿಷಯವೆಂದರೆ – ಬೆಟ್ಟದ ಕೆಳಗೆ ಹಿಂದಿನ ಮನ್ವಂತರಗಳಲ್ಲಿ ಇಂದ್ರರಾಗಿದ್ದ ನಾಲ್ವರು ದೇವತೆಗಳು – ಸ್ವಾರೋಚಿಷ ಮನ್ವಂತರದಲ್ಲಿ ರೋಚನ ನಾಮಕ ವಾಯುದೇವರು, ಉತ್ತಮ ಮನ್ವಂತರದಲ್ಲಿ ಇಂದ್ರಜಿತ್ ನಾಮಕ ಯಮ, ರೈವತ ಮತ್ತು ತಾಪಸ ಮನ್ವಂತರದಲ್ಲಿ ತ್ರಿಶಿಖ ಮತ್ತು ವಿಭು ನಾಮಕ ಅಶ್ವಿನೀ ದೇವತೆಗಳು – ಇವರೆಲ್ಲಾ ಬೆಟ್ಟದ ಬುಡದಲ್ಲಿ ಕುಳಿತು ರಹಸ್ಯವಾಗಿ ಭೂಮಿಯಲ್ಲಿ ಅವತರಿಸುವ ಮಂತ್ರಾಲೋಚನೆ ಮಾಡುತ್ತಿದ್ದರು. ಆದರೆ ಶಿವ ನುಡಿದಿದ್ದು ಅವನಿಗಿಂತ ಶ್ರೇಷ್ಠ ವಾಯುದೇವರ ಅವಮಾನದಂತಾಯಿತು.

ಶಿವ ಸುಳ್ಳು ಹೇಳಿದ್ದರಿಂದ ಬ್ರಹ್ಮ ದೇವರು ಅವನಿಗೆ ಶಪಿಸಿದರು – “ನೀನು ಮನುಜನಾಗಿ ಜನಿಸಿ ಮನುಜನಾಗಿ ಹುಟ್ಟುವ ಇಂದ್ರನಿಂದ ಪರಾಭವ ಹೊಂದುವಿ. ನನ್ನಿಂದ ಶಾಪಕ್ಕೊಳಗಾದ ದೇವಿಯರಿಗೆ ಪತಿ ಪ್ರಾಪ್ತಿ ವರ ನೀಡಿರುವೆ. ಆದ್ದರಿಂದ ನೀನು ಮನುಷ್ಯ ಜನ್ಮದಲ್ಲಿದ್ದಾಗ ವಿವಾಹವಿಲ್ಲದೆ ಬ್ರಹ್ಮಚಾರಿಯಾಗೇ ಇರುತ್ತೀ. ದೀರ್ಘಕಾಲ ಬಾಳುತ್ತೀ. ಮತ್ತು ಭಾರತೀದೇವೀಯ ಅವತಾರ ಸಮಾಪ್ತಿ ನಂತರ ದೇಹದಿಂದ ಹೊರಬರುವ ನಿನ್ನ ಪತ್ನಿಯನ್ನು ನಿನ್ನ ಲೋಕದಲ್ಲಿ ಹೊಂದುವೆ”. ಅದರಂತೆ ಶಿವನು ಅಶ್ವತ್ಥಾಮನಾಗಿ ಜನಿಸಿದನು. ಶಿವನನ್ನು ಪ್ರಶ್ನಿಸಿದ ಇಂದ್ರನಿಗೆ ಶಿವನಿಂದ ಶಾಪ,. ವಾಯುದೇವರಂತಹ ಬಗ್ಗೆ ಮಿಥ್ಯಾಪವಾದ ಮಾಡಿದ್ದರಿಂದ ಬ್ರಹ್ಮನಿಂದ ಶಿವನಿಗೆ ಶಾಪ ಒದಗಿತು.

ಹೀಗೆ ಒಂದೇ ದೇಹವಾದರೂ ಅದರಲ್ಲಿ ಐವರು ದೇವಿಯರು ರ ಇರುವುದರಿಂದ ಪಂಚಪತಿಗಳಿದ್ದರೂ ಪಂಚದೇವತೆಗಳಿಗೆ ಪ್ರತ್ಯೇಕ ಪತಿಗಳಾದ್ದರಿಂದ ಪಂಚ ಪತಿತ್ವ ದೋಷವಾಗುವುದಿಲ್ಲ.

 

*ಪಾಂಡವ ದ್ರೌಪದಿಯರ ದಾಂಪತ್ಯ* ; –

ಪಾಂಡವರು ಪಾಂಡುರಾಜನ ಮನೆಯಲ್ಲಿ ಐದು ಸಂವತ್ಸರ ಕಾಲ ಅತ್ಯಂತ ಸುಖಿ ಜೀವನ ನಡೆಸಿದರು. ದ್ರೌಪದಿಯು ಐದು ಪತಿಯರೊಂದಿಗೆ ಏಕ ದೇಹದಿಂದ ದೇಹಾಭಿಮಾನಿ ಭೇದದಿಂದ ದಾಂಪತ್ಯ ನಡೆಸಿದಳು. ಅರ್ಥಾತ್ ಒಂದೇ ದೇಹದಿಂದ ಶ್ಯಾಮಲಾ, ಶಚಿ, ಉಷಾ ಸನ್ನಿಧಾನದ ಜೊತೆಗೆ ಸ್ವಯಂ ಭಾರತೀ ದೇವಿಯಾಗಿ ಅವರವರ ನಿಜಪತಿಯೊಡನೆ ರಮಿಸಿದರು. ಆದರೆ ಆ ಭಾರತೀದೇವಿಯ ದೇಹದೊಳಗಿದ್ದ ಆ ಪತಿಗಳೊಡನೆ ಆವರವರ ನಿಜಪತ್ನಿಯರು ವಿಹರಿಸುವಾಗ ಪಾರ್ವತೀ ದೇವಿಯ ಅಭಿವ್ಯಕ್ತಿ ಮಾತ್ರ.

ಅಗ್ನಿಯಲ್ಲಿ ಜನಿಸಿದ ದ್ರೌಪದಿ ಪ್ರತಿನಿತ್ಯ ಕನ್ಯೆಯೇ ಆಗುತ್ತಿದ್ದಳು. ದ್ರೌಪದಿಯು ಧರ್ಮಜ ಭೀಮ ಅರ್ಜುನ ನಕುಲ ಸಹದೇವರೊಡನೆ ದಿನಕ್ಕೊಬ್ಬರಂತೆ ವಿಹರಿಸುತ್ತಿದ್ದಳು. ಯುಧಿಷ್ಠಿರನು ದ್ರೌಪದಿಯೊಂದಿಗೆ ಇದ್ದಾಗ ಯಮ ಪತ್ನಿ ಶ್ಯಾಮಲೆಯ ಅಭಿವ್ಯಕ್ತಿ, ಅಂದರೆ ಯಮಧರ್ಮ- ಶ್ಯಾಮಲೆಯ ಸಮಾಗಮವಾಗುತ್ತಿತ್ತು. ಅರ್ಜುನನೊಂದಿಗೆ ಇದ್ದಾಗ ಶಚಿಯ ಅಭಿವ್ಯಕ್ತಿ, ಇಂದ್ರ ಶಚಿಯರ ಸಮಾಗಮ. ನಕುಲ ಸಹದೇವರೊಂದಿಗೆ ಇದ್ದಾಗ ಉಷೆಯ ಅಭಿವ್ಯಕ್ತಿ, ಮತ್ತು ಭೀಮಸೇನನೊಂದಿಗೆ ಇದ್ದಾಗ ಸಾಕ್ಷಾತ್ ಭಾರತೀ ದೇವಿಯೇ ಅಭಿವ್ಯಕ್ತಳಾಗಿದ್ದಳು. ದ್ರೌಪದಿಯ ಈ ಪ್ರಸಂಗದ ಹಿಂದೆ ಅವಳ ಸಾವಿರಾರು ವರ್ಷಗಳ ತಪಸ್ಸಿನ ಫಲವಿದೆ.

ಯುಧಿಷ್ಟಿರಾಧಿಗಳಲ್ಲಿ ದ್ರೌಪದಿ ರಮಣ ಸಂದರ್ಭದಲ್ಲಿ ವಾಯುದೇವರ ವಿಶೇಷ ಸನ್ನಿಧಿ ಅವರಲ್ಲಿರುತ್ತಿತ್ತು ದ್ರೌಪದಿಯ ಅಭಿಮಾನ ತ್ಯಾಗವಿರುತ್ತಿತ್ತು. ಆದ್ದರಿಂದ ಅವಳು ನಿತ್ಯ ಕನ್ಯೆಯೇ ಆಗುತ್ತಿದ್ದಳು.

 

ಪಾಂಡವರು ವಿವಾಹವಾಗಿ ಸಂತಸದಿಂದಿರುವ ವಿಷಯ ಅಂಧ ಧೃತರಾಷ್ಟ್ರನಿಗೆ ವಿದುರ ತಿಳಿಸಿದನು. ಅಲ್ಲಿಯವರೆಗೂ ಪಾಂಡವರೆಲ್ಲ ಅರಗಿನ ಮನೆಯಲ್ಲಿ ಭಸ್ಮವಾಗಿದ್ದರು ಎಂದು ತಿಳಿದಿದ್ದ ಧೃತರಾಷ್ಟ್ರನಿಗೆ ಒಂದೆಡೆ ಸಂತಸ ವ್ಯಕ್ತಪಡಿಸಿದರೂ ಅವನಲ್ಲಿದ್ದ ಪುತ್ರ ವ್ಯಾಮೋಹ ದು:ಖದಿಂದ ಪರಿತಪಿಸಿದ. ತನಗೆ ಇಷ್ಟವಿಲ್ಲದಿದ್ದರೂ ವಿದುರ ಭೀಷ್ಮರ ಸಲಹೆಯಂತೆ ಪಾಂಡವರನ್ನು ಹಸ್ತಿನಾಪುರಕ್ಕೆ ಕರೆಯಿಸಿ ಪಾಂಡುರಾಜನ ಮನೆಯಲ್ಲಿರುವ ವ್ಯವಸ್ಥೆ ಮಾಡಿದ. ಸಮಸ್ತ ನಗರದ ಜನತೆ ಹರ್ಷದಿಂದ ದ್ರೌಪದೀ ಸಹಿತ ಪಾಂಡವರನ್ನು ಸ್ವಾಗತಿಸಿತು.

ತನ್ನ ಬಳಿಗೆ ಬಂದು ಆಶೀರ್ವಾದ ಪಡೆದ ದ್ರೌಪದಿಯ ನೋಡಿದಾಗಲೇ ಗಾಂಧಾರಿಗೆ ಇವಳೇ ನನ್ನ ಮಕ್ಕಳ ಮೃತ್ಯು ಎಂದೆನಿಸಿತು.

ಪಾಂಡವರಿಗೆ ಅರ್ಧ ರಾಜ್ಯವನ್ನು ಕೊಡಲು ವಿದುರಾಧಿಗಳ ಸಲಹೆಯನ್ನು ಪುರಸ್ಕರಿಸುವ ಅವರಿಗೆ ಇಂದ್ರಪ್ರಸ್ಥ ಎಂಬ ಸ್ಥಳ ನೀಡಿದ. ಒಂದು ಕಾಲದಲ್ಲಿ ಇಂದ್ರ ಆಳಿದ್ದ ರಾಜ್ಯವಾದರೂ ಈಗ ಅದು ಕಾಡುಮೇಡು ತುಂಬಿ ಬಂಜರು ಭೂಮಿಯಾಗಿತ್ತು . ಶ್ರೀ ಕೃಷ್ಣನ ಆಜ್ಞೆಯಂತೆ ವಿಶ್ವಕರ್ಮನು ಆ ನಗರವನ್ನು ಪುನರ್ನಿರ್ಮಾಣ ಮಾಡಿ ಅತ್ತ್ಯುತ್ಕ್ರೃಷ್ಟ ನಗರವನ್ನಾಗಿಸಿದ.

ಧರ್ಮರಾಜ ಮಹಾರಾಜನೂ ಭೀಮ ಯುವರಾಜನೂ ದ್ರೌಪದಿ ಮಹಾರಾಣಿಯೂ ಆಗಿ ಕಾರ್ಯ ನಿರ್ವಹಿಸಿದರು.

ದ್ರೌಪದಿಯು, ಭೃತ್ಯ ರಕ್ಷಣೆ, ಸ್ತ್ರೀಯರಿಗೆ ಸೂಕ್ತ ಧರ್ಮಬೋಧನೆ,
ಲಕ್ಷಗಟ್ಟಲೆ ಜನರ ಊಟೋಪಚಾರ, ಕೋಶಾಗಾರ, ಅಂತ:ಪುರದ ಮೇಲ್ವಿಚಾರಣೆ ಎಲ್ಲವನ್ನೂ ಸುಸಜ್ಜಿತವಾದ ರೀತಿ ನೋಡಿಕೊಂಡಳು.

……

ಮುಂದುವರಿಯುವುದು

……..

ಭೀಮಸೇನನಂತೆ ಭಾರತೀದೇವಿಯೂ ಕೂಡ ಭಾಗವತಧರ್ಮದಲ್ಲಿ ಸದಾ ನಿರತಳಾಗಿದ್ದಳು.
ದ್ರೌಪದಿಯು ಧರ್ಮರಾಜ ಜೂಜಿನಲ್ಲಿ ಸೋಲುಂಡ ಸಂದರ್ಭದಲ್ಲಿ ಧೃತರಾಷ್ಟ್ರನಿಂದ ವರ ಪಡೆದು ಪಾಂಡವರನ್ನು ವಿಮುಕ್ತಿಗೊಳಿಸಿದಳಲ್ಲ ಇದೂ ಕೂಡ ಭಾಗವತ ಧರ್ಮವೇ.  ಏಕೆಂದರೆ ಜೂಜಾಟವೇ ಅಧರ್ಮ.  ಆ ಜೂಜೂ ಕೂಡ ಕಪಟದಲ್ಲಿ ಸೋಲಿಸಿದ್ದು.  ವರವನ್ನು ಅವಳು ಕೇಳಲಿಲ್ಲ.  ಧೃತರಾಷ್ಟ್ರನೇ ಕೇಳೆಂದು ಹೇಳಿದ್ದು.  ಆದ್ದರಿಂದ ವರ ಕೇಳಿದ್ದು ಭಾಗವತ ಧರ್ಮಕ್ಕೆ ಚ್ಯುತಿ ಬರಲಿಲ್ಲ.
……. ಮುಂದುವರಿಯುವುದು……..

ಕಷ್ಟಗಳ, ಅವಮಾನಗಳ ಸರಮಾಲೆಯನ್ನು ಎದುರಿಸಿದ, ಪಾಂಡವರ ವನವಾಸಕಾಲದಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ಭೋಜನ ನೀಡಿದವಳೂ, ಧರ್ಮನ ನೀತಿ,. ಭೀಮನ ಆಡಳಿತ, ಎಲ್ಲದರಲ್ಲೂ ಭಾಗಿಯಾಗಿ ಐದೂ ಜನ ಪತಿಯರಿಗೆ ಮಾರ್ಗದರ್ಶನ ನೀಡಿದ ಮಹಾ ಮಾತೆ ದ್ರೌಪದಿ.

……. ಮುಂದುವರಿಯುವುದು……..

Leave a Reply

Your email address will not be published.

Sumadhwa Seva © 2022