“keshava naama”

Keshava naama

ಕೇಶವಾಯ ನಮ:ದಿಂದ ಆರಂಭವಾಗುವ ಚತುರ್ವಿಂಶತಿ ನಾಮಗಳನ್ನು ಉಪಯೋಗಿಸಿಕೊಂಡು ಕನಕದಾಸರು ಸರ್ವರಿಗೂ ಉಪಯೋಗವಾಗುವಂತೆ ಹೆಣ್ಣುಮಕ್ಕಳಿಗೂ ಸುಲಭವಾದ ಮಂತ್ರವನ್ನು ತಮ್ಮ ಕೃತಿಯ ಮೂಲಕ ಉಪದೇಶಿಸಿದ್ದಾರೆ.

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು.
ದೋಶರಾಶಿ ನಾಶಮಾಡು ಶ್ರೀಶ ಕೇಶವ || 1 ||
ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 2 ||
ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ||
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || 3 ||
ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 4 ||
ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 5 ||
ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 6 ||
ಕವಿದುಕೊಂಡು ಇರುವ ಪಾಪ |ಸವೆದು ಪೋಗುವಂತೆ ಮಾಡಿ ||
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || 7 ||
ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 8 ||
ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 9 ||
ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 10 ||
ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||
ಶ್ರೀಮಹಾನುಭಾವನಾದ ದಾಮೋದರ || 11 ||
ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 12 ||
ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 13 ||
ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಇನ್ನು ವಾಸುದೇವನೇ || 14 ||
ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 15 ||
ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 16 ||
ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 17 ||
ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 18 ||
ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕಿರುವೆ ನಿನಗೆ ನಾರಸಿಂಹನೇ || 19 ||
ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ||
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 20 ||
ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 21 ||
ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 22 ||
ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ||
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 23 ||
ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 24 ||
ಸತ್ಯವಾದ ನಾಮಗಳನು | ನಿತ್ಯದಲ್ಲಿ ಪಠಿಸುವರಿಗೆ ||
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 25 ||
ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 26 ||

Sumadhwa Seva © 2022