ನಂಬಿ ನೆಚ್ಚದಿರು ನರಲೋಕ

ಶ್ರೀ ವಿಜಯದಾಸರ ಕೃತಿ

 

ನರಲೋಕ ವೈರಾಗ್ಯ ಪದ –
ನಂಬಿ ನೆಚ್ಚದಿರು ನರಲೋಕ

ನಂಬಿ ನೆಚ್ಚದಿರು ನರಲೋಕ ಸ್ಥಿರವೆಂಬ, ಅಂಬಲಿ ಪರಮಾನ್ನ
ಹಂಬಲಿಸುತಲಿರು ಹರಿಲೋಕಾನಂದವೆಂಬ ಪೀಯೂಷಪಾನ ! ಪಲ್ಲವಿ !

ದುರುಳಜನರ ಸಂಗವೆಂಬುದು ಎಂದಿಗೂ
ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮುಕುಟ
ಮರೆ ಮೋಸಗೊಳಿಸುವ ಸತಿಸುತರೆಂಬೋದೆ
ಕೇವಲ ಯಮಕಾಟ
ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ ||1||

ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ,
ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು
ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು ||2||

ಅಲ್ಪಾ ಆಯುಷ್ಯದ ಈ ಶರೀರವು ಗಾಳಿಗೊಡ್ಡಿದ ದೀಪ
ಅಲ್ಪ ಸಂತೋಷನಾಗು ಅದು ನಿನಗೆ
ನೋಡು ಹಾಲುಸಕ್ಕರೆ ತುಪ್ಪ
ಬಲು ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ
ಸ್ವಲ್ಪಕಾಲಾದರೂ ಮಧ್ವಮತವ ಪೊಂದು ಭವವೇ ನಿರ್ಲೇಪ||3||

ಹರಿಗರ್ಪಿಸದ ಕರ್ಮ ಆವುದಾದರು ಸೂಳೆಗಿಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ
ನಿರುತಗ್ರಾಸಕೆ ಚಿಂತೆ ಮಾಡಲು ಒದಗದು ಪುಣ್ಯವು ನಿನಗೆತ್ತ
ಅರೆಮರೆ ಇಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ತಾ ||4||

ಭಾವವಿರಕ್ತಿಯ ವಹಿಸದಿದ್ದರೆ ಮನಕಾಗುವುದು ಖೇದ
ಸಾವಿರಕ್ಕೊಂದೆ ಮಾತು ಹರಿದಾಸನೆನಿಸೋದು
ಪರಿಪರಿಯಾಸ್ವಾದ
ದೇವಕಿಸುತ ನಮ್ಮ ವಿಜಯವಿಠ್ಠಲನ ತೀರಥ ಪ್ರಸಾದ
ಸೇವಿಸದ ನರ ನಿತ್ಯ ನರಕವಾಸ ಎನ್ನತಲಿದೆ ವೇದಾ ||5||

Sumadhwa Seva © 2022