Moola Vrundavana

 

          ! ಶ್ರೀ ಜಯತೀರ್ಥ ಗುರುಭ್ಯೋ ನಮ:!

jayatirtharu

ಚಿತ್ರೈ: ಪದೈಚ್ಚ ಗಂಭೀರೈ: ವಾಕ್ಕೀರ್ಮಾನೈ:ರಖಂಡಿತೈ: |

ಗುರು ಭಾವಂ ವ್ಯಂಜಯಂತೀ ಭಾತಿ ಶ್ರೀಜಯತೀರ್ಥವಾಕ್ |

ಪ್ರಸ್ಥಾವನ –    

ಪ್ರಾತ: ಸ್ಮರಣೀಯ ಶ್ರೀ ಟೀಕಾಕೃತ್ಪಾದರೆಂದೇ ಪ್ರಖ್ಯಾತರಾದ ಶ್ರೀ ಜಯತೀರ್ಥ ಶ್ರೀಪಾದಂಗಳವರು ಮಾಡಿರುವ ಉಪಕಾರ ಸ್ಮರಣೆ ಸಾಮಾನ್ಯವಾಗಿ ಪ್ರತಿನಿತ್ಯ ಪ್ರತಿ ಮಾಧ್ವನ ಮನೆಯಲ್ಲೂ ಆಗುತ್ತದೆ. ಶ್ರೀ ವ್ಯಾಸರಾಜರು, ಶ್ರೀ ಶ್ರೀಪಾದರಾಜರು, ಶ್ರೀ ವಾದಿರಾಜರೇ ಮೊದಲಾದ ಮಾಧ್ವ ತಪಸ್ವಿಗಳಿಂದ ಹಿಡಿದು ಇಂದಿನ ಪೀಳಿಗೆಯ ಯತಿಗಳೂ, ಪಂಡಿತರೂ, ವಿದ್ಯಾರ್ಥಿಗಳು ಯಾರೇ ಆಗಲಿ ಅವರನ್ನು ಸ್ಮರಿಸದೆ ಯಾವುದೇ ಅಧ್ಯಯನ ಸಾಧ್ಯವೇ ಇಲ್ಲ.  ಅಂತಹ ಭದ್ರವಾದ ಬುನಾದಿಯುಳ್ಳ ಆಚಾರ್ಯ ಮಧ್ವರು ಹಾಕಿಕೊಟ್ಟ ಮಾರ್ಗವನ್ನು ಸುಲಲಿತವಾಗಿ ಅರ್ಥವಾಗುವಂತೆ ಮಾಡಿಕೊಟ್ಟ ಮಹಾನುಭಾವರು ಶ್ರೀ ಟೀಕಾಕೃತ್ಪಾದರೆಂದೇ ಪ್ರಖ್ಯಾತರಾದ ಶ್ರೀ ಜಯತೀರ್ಥರು.
    
ಶ್ರೀ ಜಯತೀರ್ಥರ ಮೂಲ ವೃಂದಾವನವಿರುವುದು ಮಲಖೇಡದಲ್ಲಿ ಎಂದು ಹಲವಾರು ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇತ್ತೀಚೆಗೆ ಕೆಲವರು ಶ್ರೀ ಜಯತೀರ್ಥರ ವೃಂದಾವನವಿರುವುದು ಮಲಖೇಡದಲ್ಲಲ್ಲ, ಆನೆಗೊಂದಿಯಲ್ಲಿ ಇದೆಯೆಂದು ಹೇಳುತ್ತಿದ್ದಾರೆ. ಮತ್ತು ಅದನ್ನು ಸಮರ್ಥಿಸಲು “ಶ್ರೀ ಜಯತೀರ್ಥರ ಮೂಲವೃಂದಾವನ ಸ್ಥಳ – ಗಜಗಹ್ವರ” ಎಂಬ ಬೃಹತ್ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಕೆಲವರಿಗೆ ಜಯತೀರ್ಥರ ಮೂಲ ವೃಂದಾವನವಿರುವುದು  ಮಲಖೇಡದಲ್ಲೋ ಆನೆಗೊಂದಿಯಲ್ಲೋ ಎಂಬ ಸಂದೇಹ ಬಂದಿದ್ದರೆ, ಇನ್ನೂ ಕೆಲವರು ಎರಡೂ ಕಡೆ ಅವರ ಸನ್ನಿಧಾನವಿರುವುದಾಗಿ ನಂಬಿ ತಟಸ್ಥರಾಗಿದ್ದಾರೆ.  ಆದರೆ ವಿಪರ್ಯಾಸವೆಂದರೆ ಈ ಮಠ ಮಠಗಳ ಒಳಜಗಳದಲ್ಲಿ ಜಯತೀರ್ಥರನ್ನು ಗುರಿಯಾಗಿಸಿರುವುದು ಅತ್ಯಂತ ಸೋಜಿಗದ ವಿಷಾದನೀಯ ಸಂಗತಿಯಾಗಿದೆ.   ಪರಮತ ಖಂಡನ ಪೂರ್ವಕ ಸ್ವಮತ: ಸ್ಥಾಪನ ಸಿದ್ಧಾಂತ ಹೋಗಿ ಪರಮಠ ಖಂಡನವೇ ಕೆಲವರಿಗೆ ಜೀವನದ ಉದ್ದೇಶವಾಗಿದೆ.

 

ಈ ನಂಬಿಕೆಗೆ ಪ್ರಚಲಿತವಾಗಿರುವ ಆಧಾರಗಳು, ಜನರ ನಂಬಿಕೆಗಳು, ಅಷ್ಟೇ ಅಲ್ಲದೆ ಆಗಿನ ಕಾಲದ ಪರಿಸ್ಥಿತಿ,  ಸಂಭಾವ್ಯತೆ, ತರ್ಕ, ಸಂಶೋಧನೆ, ಪ್ರಾಮಾಣಿಕತೆ, ಸಾಂದರ್ಭಿಕ ಸಂಗತಿಗಳು, ದಾಸವಾಣಿಗಳು, ಎಲ್ಲವನ್ನೂ ಮೆಲಕು ಹಾಕುವ ಪ್ರಯತ್ನವೇ ಈ ಲೇಖನದ ಉದ್ದೇಶ.   ಹಲವಾರು ಪ್ರಶ್ನೆಗಳನ್ನು ಪರಿಷ್ಕರಿಸಿ ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನವೇ ಈ ಲೇಖನದ ಉದ್ದೇಶ.  ಅದಲ್ಲದೆ ಮುಂದಿನ ತಲೆಮಾರಿಗೆ ತಪ್ಪು ಮಾಹಿತಿಯಿಂದ ನಮ್ಮ ಮಾಧ್ವ ಪರಂಪರೆಯ ಚರಿತ್ರೆಗೇ ಧಕ್ಕೆ ಬರುವ ಸಂಭವವಿದೆ.  ಇಂದಿನ ಜನರಲ್ಲಿ ತಪ್ಪು ತಿಳುವಳಿಕೆಯಾದರೆ ಮುಂದೊಂದು ದಿನ ಮೂಲ ವೃಂದಾವನವಾವುದು ಮೃತ್ತಿಕಾವೃಂದಾವನವಾವುದು ಎಂಬ ಸಂದೇಹ ಬಂದು ಇತ್ತೀಚಿನ ಹೇಳಿಕೆಗಳನ್ನೇ ನಂಬಿ ಮುಂದಿನ ಪೀಳಿಗೆಯ ಜನ ತಪ್ಪು ದಾರಿಗೆ ಹೋಗುವ ಸಂಭವವಿದೆ.   ಇಲ್ಲಿ ಕ್ಲೆಳಗೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇವೆ.  
  1. ಶ್ರೀ ಟೀಕಾರಾಯರ ಮೂಲವೃಂದಾವನ ಸ್ಥಳ ಯಾವುದು? ಮಳಖೇಡದಲ್ಲಿರುವುದು ಮೂಲವೇ? ಆನೆಗೊಂದಿಯಲ್ಲಿರುವುದು ಮೂಲವೇ?  ಮಳಖೇಡದಲ್ಲಿರುವ  ಜಯತೀರ್ಥರ ವೃಂದಾವನ ನೇರವಾಗಿ  ಸಂಪೂರ್ಣವಾಗಿ ನೋಡಲಾಗುವುದಿಲ್ಲ, ಇದು ಯಾಸೂಚನಯನ್ನು  ನೀಡುತ್ತದೆ? ಅಕಸ್ಮಾತ್ ಆನೆಗೊಂದಿಯೇ ಮೂಲವೆಂದಾದರೆ, ಮಲಖೇಡದಲ್ಲಿ ಹಲವಾರು ಶತಮಾನಗಳಿಂದ ಪೂಜೆ ಪುರಸ್ಕಾರಗಳು ನಡೆದಿರುವುದು. ಆ ವೃಂದಾವನ ಯಾವುದು? ಕೆಲವರು ಮಳಖೇಡಕ್ಕೆ ಯಾವುದೇ ಕ್ಷೇತ್ರದ ಸನ್ನಿಧಾನವಿಲ್ಲ, ಆದ್ದರಿಂದ  ಜಯತೀರ್ಥರು ಅಲ್ಲಿ ವೃಂದಾವನವಾಗುವದು ಸಾಧ್ಯವಿಲ್ಲವೆಂದಿದ್ದಾರೆ .ಹಾಗಾದರೆ ಅಕ್ಷೋಭ್ಯತೀರ್ಥರ ವೃಂದಾವನ ಮಳಖೇಡದಲ್ಲಿದೆ. ಅವರು ಹೇಗೆ  ವೃಂದಾವನಸ್ಥರಾದರು ಅಲ್ಲಿ? ಅಕ್ಷೋಭ್ಯತೀರ್ಥರ ವೃಂದಾವನಕ್ಕೆ ಸನ್ನಿಧಾನವಿದೆ ಎಂದಾದರೆ  ಶ್ರೀ ಜಯತೀರ್ಥರ ಕ್ಷೇತ್ರದಲ್ಲಿ ಸನ್ನಿಧಾನವಿಲ್ಲವೇ?  ಎಂತಹ ಕುತರ್ಕ ! ಮಲಖೇಡದಲ್ಲಿ ಇದೆಯೆಂದು ನಂಬಿ ಪೂಜಿಸಲ್ಪಡುತ್ತಿರುವ ವೃಂದಾವನ ಮೂಲ, ಅಲ್ಲವೆನ್ನುವುದಾದರೆ ಅದು ಯಾವುದು? ಆ ವೃಂದಾವನವನ್ನು ಮೃತ್ತಿಕಾ ಎಂದು ಕೆಲವರ ಅನುಮಾನ?  ಹಾಗಾದರೆ ಆ ಮೃತ್ತಿಕಾ ವೃಂದಾವನ ಎಂದು ಹೇಳಿಕೊಳ್ಳುವವರು ಏನಾದರೂ ಆಧಾರ ನೀಡಿದ್ದಾರಾ ? ಯಾರು ಪ್ರತಿಷ್ಟೆ ಮಾಡಿದರು? ಯಾವ ಕಾಲದಲ್ಲಿ ಆಯಿತು? ಇದಕ್ಕೆ ಅವರಿಂದ ಸ್ಪಷ್ಟ ಉತ್ತರ ಇಲ್ಲ. 
  2. ಹಲವಾರು ದಾಸ ಶ್ರೇಷ್ಟರು ಕೇವಲ  ಜಯತೀರ್ಥರ ಮೃತ್ತಿಕಾ ವೃಂದಾವನವನ್ನೇ ಕೊಂಡಾಡಿದ್ದಾರೋ?  ಜಯತೀರ್ಥರ ಮತ್ತು ಕಾಗಿಣಿ ನದಿಯ ಬಗ್ಯೆ ಇರುವ ದೇವರನಾಮಗಳು ಏನನ್ನು ಹೇಳುತ್ತವೆ? ಬೇರೆ ಯತಿಗಳ ಮೃತ್ತಿಕಾ ವೃಂದಾವನವನ್ನೂ ಸ್ತುತಿಸಿ ದೇವರನಾಮ ಮಾಡಿದ ಪ್ರಸಂಗವಿದೆಯಾ? ಕೆಲವು ದಾಸರು ಯಾರೋ ಒಬ್ಬ ದಾಸರು ಹೇಳಿದ ಮಾತನ್ನೇ ಇವರೂ ತಮ್ಮ ಬುದ್ದಿಯನ್ನು ಉಪಯೋಗಿಸದೆ ಒಪ್ಪಿಕೊಂಡರೋ? ಕಾಗಿಣೀ ನದಿಯ ಬಗ್ಯೆ ವರ್ಣಿಸಿರುವ ದಾಸರುಗಳು ಆನೆಗೊಂದಿಯ ಬಗ್ಯೆ ಹೇಳಿದ್ದಾರಾ?   ಕೆಲವರು ವಿಜಯದಾಸರ ಪದವನ್ನು ತಿರುಚಿದ್ದಾರೆ ಎಂದಿದ್ದಾರೆ.  ಹಾಗಾದರೆ ಎಲ್ಲ ದಾಸರುಗಳ ಪದಗಳನ್ನು ತಿರುಚಲಾಗಿದೆಯಾ? ಜಯತೀರ್ಥರನ್ನು ಮಲಖೇಡದಲ್ಲಿ ಮತ್ತು ಕಾಗಿನಿ ನದಿಯನ್ನು ಸ್ಮರಿಸುವ ಶ್ಲೋಕ/ದೇವರನಾಮಗಳಾವುವು?
  3. ವಾದಿರಾಜರು ಜಯತೀರ್ಥರ ಬಗ್ಯೆ ಏನನ್ನು ಯಾವ ಗ್ರಂಥದಲ್ಲಿ ಹೇಳಿದ್ದಾರೆ? ತೀರ್ಥಪ್ರಬಂಧದಲ್ಲಿ ಆನೆಗೊಂದಿಯ ಹೆಸರಿದೆ ಮತ್ತು ಮಳಖೇಡದ ಹೆಸರಿಲ್ಲದಿರುವುದು ಆನೆಗೊಂದಿ ಬಣಕ್ಕೆ ಮಾತ್ರ ಸೂಚಕವೇ?  ಅದಕ್ಕೆ ವ್ಯಾಖ್ಯಾನ ಏನನ್ನು ಹೇಳುತ್ತದೆ? ಆ ವ್ಯಾಖ್ಯಾನವೆಲ್ಲವೂ ಉಪಲಬ್ಧವಿದೆಯಾ? ಇದ್ದರೆ ಎಲ್ಲಿದೆ? ಕೆಲವರ ಶಂಕೆಯಂತೆ ಮಲಖೇಡಕ್ಕೆ ಯಾವ ಯತಿಪುಂಗವರೂ ಹೋಗಲೇ ಇಲ್ಲವೇ?  ಅಲ್ಲಿಗೆ ಹೋಗಿದ್ದವರೆಲ್ಲರ ಚರಿತ್ರೆ ಉಪಲಬ್ಧವಿದೆಯಾ?  ಅದೇ ರೀತಿ ಎಲ್ಲ ಯತಿಗಳೂ ಎಲ್ಲ ಕ್ಷೇತ್ರಕ್ಕೂ ಹೋದ ಸಂಗತಿ ದಾಖಲೆಯಾಗಿದೆಯಾ?
  4. ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಆನೆಗೊಂದಿಯನ್ನು ಹೆಸರಿಸಿದ್ದಾರೆ, ಮಳಖೇಡವನ್ನು ಹೆಸರಿಸಿಲ್ಲ.  ಅವರು ಮಳಖೇಡಕ್ಕೆ ಹೋಗಲೇ ಇಲ್ಲವೇ? ಹೋಗಿದ್ದ ಎಲ್ಲ ಸ್ಥಳಗಳನ್ನೂ ಬಿಡದೆ ವರ್ಣಿಸಿದ್ದಾರೆಯೇ? ಅಥವಾ ಜಯತೀರ್ಥರನ್ನು ವರ್ಣಿಸುವಾಗ ಅವರ ವೃಂದಾವನವನ್ನು ಕಂಡು ವರ್ಣಿಸಿದರೋ? ಅಥವಾ ಜಯತೀರ್ಥರ ಗ್ರಂಥಗಳನ್ನು ಸ್ಮರಿಸಿದರೋ? ಅಥವಾ ಜಯತೀರ್ಥರ ಸನ್ನಿಧಾನವನ್ನು ನೆನೆದು ವರ್ಣಿಸಿದರೋ? ಅಥವಾ ಜಯತೀರ್ಥರ ವೃಂದಾವನ ಇಂತಹುದೇ ಎಂದು ತಿಳಿದು ವರ್ಣಿಸಿದರೋ? ಅಥವಾ ತಮ್ಮ ಶಿಷ್ಯರಿಗೆ ಯಾರಾರಿಗಾದರೂ ತಾವು ಆನೆಗೊಂದಿಯಲ್ಲಿ ಜಯತೀರ್ಥರ ವೃಂದಾವನವನ್ನು ನೋಡಿದ್ದಾಗಿ ಹೇಳಿದ್ದಾರಾ? ಅಥವಾ ಅವರ ಶಿಷ್ಯರು ಗುರುಗಳ ಅಂತರ್ಯವನ್ನು ಅರಿತು ಹೇಳಿದರೋ?
  5. ಜಯತೀರ್ಥರ ಗುರುಗಳ ವೃಂದಾವನವಿರುವುದು ಮಲಖೇಡದಲ್ಲಿ ಅದೇ ರೀತಿ ಅವರ ಶಿಷ್ಯರಾದ ಶ್ರೀ ವ್ಯಾಸತೀರ್ಥರ ವೃಂದಾವನವಿರುವುದು ಕೂಡ ಮಲಖೇಡದಲ್ಲೇ. ಹಾಗಾದರೆ ಮಧ್ಯದಲ್ಲಿ ಇವರೊಬ್ಬರೇ ಬೇರೆಲ್ಲೋ ಹೋಗುವ ಅನಿವಾರ್ಯತೆ ಏನಿತ್ತು?
  6. “ಮಾಧ್ವಗ್ರಂಥಾನ್ ಸ್ವಬಂಧೂನಿವ” ಎಂಬ ತೀರ್ಥಪ್ರಬಂಧದ ಶ್ಲೋಕ ಎಲ್ಲಿ ರಚನೆಯಾಯಿತು? ಬೇರೆಲ್ಲೋ ರಚಿಸಿರಬಹುದಾ? ಅದನ್ನು ಅಲ್ಲಿ ವಾದಿರಾಜರು ಹೇಳುವ ಅವಶ್ಯಕತೆಯೇನಿತ್ತು?  “ಮಾಧ್ವಗ್ರಂಥಾನ್” ಶ್ಲೋಕದ ಅನುಸಂಧಾನ ಶ್ಲೋಕದ ವ್ಯಾಖ್ಯಾನವನ್ನು ಹೇಗೆ ಹೇಗೆ ಅರ್ಥೈಸಬಹುದು?
  7. ವಾದಿರಾಜರ ತೀರ್ಥಯಾತ್ರಾ ಕಾಲ ಯಾವುದು? ಆ ಕಾಲದಲ್ಲಿ ಆನೆಗೊಂದಿಯಲ್ಲಿ ಎಷ್ಟು ವೃಂದಾವನಗಳಿದ್ದವು? ಏಳೋ,  ಎಂಟೋ,  ಒಂಭತ್ತೋ…? ಸ್ಪಷ್ಟವಾಗಿ ವಾದಿರಾಜರು ಜಯತೀರ್ಥರನ್ನು ಆನೆಗೊಂದಿಯಲ್ಲಿ ಹೇಳಿದ್ದಾರಾ ಅಥವಾ ಅವರು ಹೇಳಿರಬಹುದೆಂದು ಊಹೆಯಾ? ವ್ಯಾಖ್ಯಾನಕಾರರಾದ ನಾರಾಯಣತೀರ್ಥರ ಕೈಬರಹಗಳಲ್ಲಿರುವುದು ಅವರದ್ದೋ ಅಥವಾ ಬೇರಾರೋ ಅವರ ಹೆಸರಿನಲ್ಲಿ ಬರಿದಿದ್ದಾರಾ?
  8. ಜಯತೀರ್ಥರು ಯಾವ ಗುಹೆಯಲ್ಲಿ ಗ್ರಂಥ ರಚನೆ ಮಾಡಿದರು – ಯರಗೋಳದಲ್ಲೋ ಅಥವಾ ಆನೆಗೊಂದಿಯಲ್ಲೋ ? ಕೆಲವರು ಹೀಗೆ ಹೇಳಿದ್ದಾರೆ – “ಮಲಖೇಡಾದಲ್ಲಿ ಜಯತೀರ್ಥರು ಗುಹಾ ಪ್ರವೇಶ ಮಾಡಿದರು”.  ಇದಕ್ಕೆ ಸಶರೀರವೆಂದು ಏಕೆ ಕಲ್ಪನೆ ಮಾಡಬೇಕು.  ಗುಹೆಯಲ್ಲಿ ವೃಂದಾವನ ಪ್ರವೇಶ ಮಾಡಿದರೆಂದು ಕಲ್ಪನೆ ಮಾಡಬಹುದಲ್ಲವೇ?
  9. ಒಬ್ಬ ಲೇಖಕರು (BNK Sharma) ಜಯತೀರ್ಥರು ತಮ್ಮ ಕಡೆಯ ಕಾಲದಲ್ಲಿ ಆನೆಗೊಂದಿಗೆ ಹೋಗಿರಬಹುದೆಂದು ಊಹಿಸಿದ್ದಾರೆ.  ಆದರೆ ಕಾರಣ ತಿಳಿಸಿಲ್ಲ.  ಜಯತೀರ್ಥರು ಮಲಖೇಡದಲ್ಲಿದ್ದುದು ಸ್ಪಷ್ಟವಾಗಿದ್ದರೂ ಕೆಲವರು ಅವರು ನಂತರದ ದಿನಗಳಲ್ಲಿ ಆನೆಗೊಂದಿಗೆ ಹೋಗಿರಬಹುದೆಂದು ತರ್ಕಿಸಲು ಅವರಿಗೆ ಇರುವ ಸಾಧ್ಯಾಸಾಧ್ಯತೆಯೇನು? ಅಥವಾ ಮಳಖೇಡದಲ್ಲಿ ದೇಹತ್ಯಾಗ ಮಾಡಿದ ಮೇಲೆ ಆನೆಗೊಂದಿಗೆ ಹೋಗಿ ಅಲ್ಲಿ ವೃಂದಾವನ ಮಾಡಿದ್ದಾರಾ ?
  10. ಜಯತೀರ್ಥರು ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರೋ ಅಥವಾ ಗುಹಾ ಪ್ರವೇಶ ಮಾಡಿದರೋ? ಜಯತೀರ್ಥರ ಕಾಲದಲ್ಲಿ ಆಂಗ್ಲರ ಅಥವಾ ಮುಸ್ಲಿಮರು ಮಲಖೇಡದಲ್ಲಿ ತಮ್ಮ ಪ್ರಾಬಲ್ಯವನ್ನು ಹೊಂದಿದ್ದರೋ? ಅದಕ್ಕೆ ಅವರ ವೃಂದಾವನ ಆನೆಗೊಂದಿಯಲ್ಲಿ ಮಾಡಿರಬಹುದಾ ?
  11. ಮಲಖೇಡದಲ್ಲಿರುವ ವೃಂದಾವನದ ಸುಪರ್ಧಿ ಉತ್ತರಾಧಿಮಠದಲ್ಲಿರುವುದರಿಂದ ಹೊಸ ಆಕ್ಷೇಪವಾಗಿದೆಯಾ? ಜಯತೀರ್ಥರ ಜನ್ಮಸ್ಥಳ ಮಂಗಳವೇಡೆಯೆಂಬುದು ಸರ್ವ ಸಮ್ಮತ.  ಹಾಗಾದರೆ  ಮಂಗಳವೇಡೆಗೆ ಮತ್ತು ಮಲಖೇಡಕ್ಕೆ ಏನಾದರೂ ಸಂಬಂಧವಿದೆಯೇ?
  12. ಒಬ್ಬ ಲೇಖಕರು ಸೋದೆ ಮಠದ ಯಾವ ಯತಿಗಳೂ ಮಳಖೇಡಕ್ಕೆ ಹೋದ ಬಗ್ಯೆ ದಾಖಲೆಯಿಲ್ಲವೆಂದೂ ಮತ್ತು ಕೆಲವರು ಆನೆಗೊಂದಿಗೆ ಹೋಗಿರುವುದಕ್ಕೆ ದಾಖಲೆಯಿದೆಯೆಂದೂ ಹೇಳಿದ್ದಾರೆ.  ಹಾಗಾದರೆ ಅವರು ಆನೆಗೊಂದಿಗೆ ಹೋಗಿದ್ದು ಪದ್ಮನಾಭಾದಿ, ವ್ಯಾಸರಾಜಾದಿ ಬೇರೆ ಯತಿಗಳ ದರ್ಶನಕ್ಕಿರಬಹುದೆ? 
  13. ಆನೆಗೊಂದಿಯಲ್ಲಿ ಜಯತೀರ್ಥರ ಆರಾಧನೆ ನಡೆಯುತ್ತಿದೆಯೆ? ಅಕಸ್ಮಾತ್ ನಡೆದಿದ್ದರೆ ಎಂದಿನಿಂದ ನಡೆಯುತ್ತಿದೆ?  ನಡೆಯದಿದ್ದರೆ ಯಾವ ಕಾರಣಕ್ಕೆ ನಡೆದಿಲ್ಲ?  ಅಲ್ಲಿನ ಭೀಕರ ಪ್ರವಾಹ ಭೀತಿಯೋ, ಮಳೆಯ ಭೀತಿಯಿಂದ ಅಲ್ಲಿ ಆರಾಧನೆಗಳು ನಡೆಯುತ್ತಿಲ್ಲವೇ?
  14. ಆನೆಗೊಂದಿಯಲ್ಲಿ ವೃಂದಾವನಗಳಿಗೆ ಮುಖವಾಗಿ ಮತ್ತೊಂದು ವೃಂದಾವನವಿರುವುದು ಏನಾದರು ಸುಳಿವು ನೀಡಬಲ್ಲದೇ?  ಹಾಗಾದರೆ ಗೋವಿಂದ ಒಡೆಯರ ವೃಂದಾವನ ವಾಗೀಶತೀರ್ಥರ ಹತ್ತಿರ ಏಕೆ ಬಂದಿತ್ತು? ಅದು ಬರಬೇಕಾಗಿದ್ದು ವ್ಯಾಸರಾಜರ ಹತ್ತಿರವಲ್ಲವೇ? ನವ ವೃಂದಾವನದ ವೃಂದಾವನಗಳ ಮೇಲಿರುವ ಬೊಂಬೆ/ಚಿತ್ರ/ಪ್ರತಿಮೆಗೆ ಏನಾದರೂ ವಿಶೇಷ ಸೂಚನೆಯಿದೆಯಾ?
  15. “ಪದ್ಮನಾಭಂ ಜಯಮುನಿಂ ಕವೀಂದ್ರಂ……” ಶ್ಲೋಕ ಸರಿಯೋ “ಪದ್ಮನಾಭಂ ಕವೀಂದ್ರಂ ಚ ವಾಗೀಶಂ…..” ಸರಿಯೋ?   ಜಗನ್ನಾಥದಾಸರ ಕೃತಿಯಾದ “ಪದ್ಮನಾಭಂ…..  ಕವೀಂದ್ರಂ…..” ಇದರಲ್ಲಿ ಹಲವಾರು  ರೀತಿಯ ಸಾಹಿತ್ಯವಿದೆ?  ಯಾವುದು ಸತ್ಯ?   ಹಾಗಾದರೆ ಈ ದೇವರನಾಮವನ್ನು ಮೂಲವೆಂದು ಗುರುತಿಸಬಹುದೇ
  16. ಕೆಲವರು ಉಲ್ಲೇಖಿಸಿರುವ “ಭಾಷ್ಯದೀಪಿಕಾಚಾರ್ಯರ ಕಿಟತಟಿನಿ” ಗ್ರಂಥ ಎಲ್ಲಿದೆ? ಯಾರಾದರೂ ನೋಡಿದ್ದಾರೋ ಅಥವಾ ತಿಲಕಾಷ್ಟ ಮಹಿಷ ಬಂಧನದಂತೆ ಆ ಹೆಸರನ್ನು ಉಪಯೋಗಿಸಿದ್ದಾರೋ? ಆ ಗಂಥ ಯಾವ ಪುಸ್ತಕಾಲಯದಲ್ಲೂ ಇಲ್ಲದಿದ್ದ ಮೇಲೆ ಹೇಗೆ ಪ್ರಸಿದ್ಧಿಗೆ ಬಂದಿತು? ಕನಿಷ್ಟ ಆ ಸ್ತೋತ್ರದ ಉಪಲಬ್ಧಿ ಎಲ್ಲಾದರೂ ಇದೆಯಾ?  ಅಥವಾ ಭಾಷ್ಯದೀಪಿಕಾಚಾರ್ಯರ ಮಠವಾದ ವ್ಯಾಸರಾಜ ಮಠದ ಯಾವುದಾದರೂ ಉಲ್ಲೇಖಗಳಲ್ಲಿ ಕಿಟತಟನಿಯ ಪ್ರಸ್ಥಾಪವಿದೆಯಾ?
  17. ಆಕ್ಷೇಪ – ವಿಜಯದಾಸರು ಮಲಖೇಡಾ ಜಯತೀರ್ಥರ ಬಗ್ಯೆ ವೃಂದಾವನ ಸೌಂದರ್ಯ, ಮೂಲ, ಮೃತ್ತಿಕೆ ಬಗ್ಯೆ ಹೇಳಿದ್ದಾರಾ? ಹಾಗಾದರೆ ಅವರು ಆನೆಗೊಂದಿಯ ಬಗ್ಯೆಯೂ ಹೇಳಿಲ್ಲವೇ? ಜಯತೀರ್ಥರನ್ನು ಆನೆಗೊಂದಿಯಲ್ಲಿ ಸ್ಮರಿಸುವ ಶ್ಲೋಕ/ದೇವರನಾಮಗಳಾವುವು? “ಮೇಘನಾಥಪುರ ಕಕುರವೇಣಿವಾಸ” ದೇವರನಾಮ ಆನೆಗೊಂದಿಯನ್ನು ಹೇಳುತ್ತದೋ ಮಲಖೇಡಾವನ್ನೋ? “ಟೀಕಾಚಾರ್ಯರ ಪಾದ ಸೋಕಿದೆ” ದೇವರನಾಮಕ್ಕೆ ಎಲ್ಲರೂ ಅಶುದ್ಧಪಾಠವನ್ನೇ ಅಭ್ಯಾಸ ಮಾಡಿದ್ದಾರಾ?
  18. ಒಬ್ಬ ಲೇಖಕರು ವಿಜಯದಾಸೋತ್ತರ ಕಾಲದಲ್ಲಿ ಜಯತೀರ್ಥರ ಮೃತ್ತಿಕಾ ವೃಂದಾವನವು ಮಲಖೇಡದಲ್ಲಾಗಿದೆ ಎಂದಿದ್ದಾರೆ  ಹಾಗಾದರೆ ವಿಜಯದಾಸರು ಮುಂಚೆ  ರಚಿಸಿದ್ದ  ಕೃತಿಗಳು ಸುಳ್ಳು ಹೇಳುತ್ತವೆಯಾ?
  19. ಒಬ್ಬ ಲೇಖಕರು ಮಲಖೇಡಾವನ್ನು ಅಲ್ಲಗಳೆಯುವ ಪ್ರಯತ್ನದಲ್ಲಿ ಒಂದು ಕತೆಯನ್ನು ಹೇಳುತ್ತಾ,  ರಾಯರು ಹೆಚ್. ಭೀಮರಾಯರಿಗೆ ಕನಸಿನಲ್ಲಿ ಮಲಖೇಡದಲ್ಲಿ ಸೇವೆ ಮಾಡಿ ಎಂದು ಸೂಚಿಸಿದ್ದಾರೆ. ಅದರ ಅರ್ಥ ಮೂಲವಲ್ಲ, ಮೃತ್ತಿಕೆಯಲ್ಲೇ ಅದರ ಸಾನ್ನಿಧ್ಯವಿದೆಯೆಂದು ಹೇಳುವ ಪ್ರಯತ್ನ ಮಾಡಿದ್ದಾರೆ.  ಇದು ಎಷ್ಟು ಪ್ರಾಮಾಣಿಕ ಉತ್ತರ???
  20. ಎಲ್ಲ ಕ್ಷೇತ್ರಗಳಲ್ಲೂ ಒಂದು ವೃಂದಾವನಕ್ಕೂ ಮತ್ತೊಂದು ವೃಂದಾವನಕ್ಕೂ ಅಂತರ ಹಿಂದಿನ ಕಾಲದಿಂದಲೂ ಇತ್ತಾ? ಎಲ್ಲಾ ಕಡೆಯೂ ಅಂತರ ನಿಗದಿಪಡಿಸಿದ್ದಾರಾ?  ಜಯತೀರ್ಥರನ್ನು ೧೯೮೬ಕ್ಕೆ ಮೊದಲೇ ಆನೆಗೊಂದಿಯಲ್ಲಿ ಯಾರಾದರೂ ವರ್ಣಿಸಿದ್ದಾರಾ ಅಥವಾ ಟಿ.ಕೆ.ವೇಣುಗೋಪಾಲದಾಸರ ಲೇಖನದ ನಂತರವೋ? ೧೯೮೬ಕ್ಕಿಂತ ಮೊದಲು ಯಾರಾದರು ಪ್ರಾಚೀನ ಚರಿತ್ರಕಾರರಾಗಲೀ, ಯತಿಗಳಾಗಲೀ, ಹರಿದಾಸರಾಗಲೀ, ಆನೆಗೊಂದಿಯಲ್ಲಿ ಜಯತೀರ್ಥರ ಮೂಲವೃಂದಾವನ್ನು ವರ್ಣಿಸಿದ್ದಾರಾ ಅಥವಾ ಮಲಖೇಡದಲ್ಲೋ?
  21. ಶೀಯುತ ಟಿ.ಕೆ.ವೇಣುಗೋಪಾಲದಾಸರ ಕೆಲವು ದಾಖಲೆಗಳು – ಅಂದರೆ “ಕಿಟತಟಿನಿ, ಕೃಷ್ಣದೇವರಾಯನ ರಜತ ಶಾಸನ, ಜಗನ್ನಾಥದಾಸರದ್ದೆಂದು ಹೇಳಲ್ಪಡುವ ನವವೃಂದಾವನ ದೇವರನಾಮ”, ಮುಂತಾದುವು ಕೃತ್ರಿಮವೋ ಅಥವಾ ನಿಜವೋ
  22. ಜಯತೀರ್ಥರ ವೃಂದಾವನದ ಬಗ್ಯೆ ವಿಜಯದಾಸರು ಮತ್ತು ಅವರ ಶಿಷ್ಯರು ಹೀಗೆ ಬೇರೆ ಬೇರೆ ದಾಸಶ್ರೇಷ್ಟರು ಹೇಳಿದ ವಾಕ್ಯ/ದಾಖಲೆಗಳೇನು? ಜಯತೀರ್ಥರ ಬಗ್ಯೆ ರಘುನಾಥತೀರ್ಥರು ರಚಿಸಿದ ಸ್ತೋತ್ರಗಳು ಎಷ್ಟು? ಹಾಗೇ ಅವರ ಸ್ತೋತ್ರಗಳಿಗೆ ಬಹುವಚನ ಪ್ರಯೋಗ “ಜಯತೀರ್ಥರ ಬಗ್ಯೆ ಸ್ತೋತ್ರಗಳು” ಏಕೆ? ರಾಘವೇಂದ್ರಪ್ಪ ಕವಿಗಳ  “ಮಲಖೇಡದೊಳು ಇರ್ಪರು” ಎಂಬುದಕ್ಕೆ ಬೇರೆ ಅರ್ಥ ವ್ಯತ್ಯಾಸವಿದೆಯಾ?
  23. ಬೇರೆ ಬೇರೆ ಪಂಚಾಂಗಗಳು (ಹಿಂದಿನ, ಇಂದಿನ) , ಗೆಜೆಟ್ಗಳು ಏನನ್ನು ಹೇಳುತ್ತವೆ? ಮೃತ್ತಿಕಾ ವೄಂದಾವನಕ್ಕೆ ಸ್ತೋತ್ರಗಳೂ, ದೇವರನಾಮಗಳೂ ಇವೆಯಾ?
  24.  ಕೃಷ್ಣದೇವರಾಯನ ರಜತ ಶಾಸನ ಏನನ್ನು ಹೇಳುತ್ತದೆ? ಅದು ಜಯತೀರ್ಥರ ಬಗ್ಯೆ ಹೇಳಿದೆಯಾ?
 ಅಧ್ಯಾಯ ೧ – ರಘುವರ್ಯರು ಮತ್ತು ಆನೆಗೊಂದಿ  
ಶಂಕೆ  –  )  ಆನೆಗೊಂದಿಯಲ್ಲಿರುವುದು ಜಯತೀರ್ಥರ ಮೂಲವೆಂದಾದರೆ, ಅಲ್ಲಿರುವ ಒಂಭತ್ತು ವೃಂದಾವನಗಳಲ್ಲಿ ಆ ಜಯತೀರ್ಥರ ವೃಂದಾವನವಾವುದು? ಆ)  ಶ್ರೀ ರಘುವರ್ಯರದ್ದೆಂದು ಹಲವಾರು ವರ್ಷಗಳಿಂದ ಪೂಜಿಸಲ್ಪಡುತ್ತಿದ್ದ ವೃಂದಾವನವನ್ನು ಏಕಾಏಕಿ ಜಯತೀರ್ಥರದ್ದೆಂದು ಹೇಳಿದರೆ, ರಘುವರ್ಯರ ವೃಂದಾವನ ಎಲ್ಲಿದೆ?  ಇ)  ರಘುವರ್ಯರು ಹಂಪಿಯಲ್ಲಿ ಹರಿಲೋಕ ಯಾತ್ರೆ ಮಾಡಿದರೆ? ರಘುವರ್ಯರು ಅಕ್ಷೋಭ್ಯತೀರ್ಥ ಮಠದವರೇ?   ಈ) ಕೆಲವರು ಶ್ರೀ ರಘುನಾಥತೀರ್ಥರು, ಶ್ರೀ ರಘುವರ್ಯರು ಅಕ್ಷೋಭ್ಯತೀರ್ಥ ಮಠಕ್ಕೆ ಸೇರಿದವರೆಂದು ಹೇಳಲು ಪ್ರಯತ್ನಿಸಿದ್ದಾರೆ.  ಹಾಗಾದರೆ ಇವರು ಯಾವ ಪರಂಪರೆಯವರು?  ಉ) ಹಲವಾರು ವರ್ಷಗಳಿಂದ  ಶ್ರೀ  ರಘುವರ್ಯರದ್ದೆಂದು ಪೂಜಿಸುತ್ತಿದ್ದ ವೃಂದಾವನ ಜಯತೀರ್ಥರದ್ದೆಂದು ಕೆಲವರ ಅಭಿಮತ. ಊ) ಒಬ್ಬ ಈಮೇಲ್ ಲೇಖಕ ಎಂತಹ ಕೀಳುಮಟ್ಟದ ಚಿಂತನೆ ವ್ಯಕ್ತಪಡಿಸಿದ್ದಾರೆಂದರೆ – ” ಶ್ರೀ ರಘೋತ್ತಮರು ಎಂದೂ ಶ್ರೀ ರಘುವರ್ಯರ ವೃಂದಾವನ ದರ್ಶನವನ್ನೇ ಮಾಡಿಲ್ಲ  ಮತ್ತು ರಘುವರ್ಯರು ಸುಧಾ ಪಂಡಿತರಲ್ಲ,  ರಘುವರ್ಯರ ದರ್ಶನಕ್ಕೆ ರಘೋತ್ತಮರು ಎಂದೂ ಹೋಗಲೇ ಇಲ್ಲವೇ”?  ಆದ್ದರಿಂದ ಅವರ ವೃಂದಾವನ ಮಲಖೇಡದಲ್ಲಿ ಬರಲು ಸಾಧ್ಯವಿಲ್ಲ ಎಂದು  ಕಾರಣ ನೀಡಿ ತಮ್ಮ ನಿಲುವನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ.   ಋ) ಶ್ರೀ ಜಯತೀರ್ಥರು ಪೂರ್ವಾಶ್ರಮದಲ್ಲಿ ಸೈನಿಕರಾಗಿದ್ದರೋ ಅಥವಾ ರಾಜನಾಗಿದ್ದರೋ?
ಸಮಾಧಾನ  –  ಕೆಲವರು ಶ್ರೀ ರಘುವರ್ಯತೀರ್ಥರ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳಲು ಪ್ರಯತ್ನಿಸುತ್ತಿದ್ದಾರೆ.  ಶ್ರೀ ರಘುವರ್ಯರು ಶ್ರೀ ರಘುನಾಥತೀರ್ಥರ ಶಿಷ್ಯರು. ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ಅಕ್ಷೋಭ್ಯತೀರ್ಥ ಮಠಕ್ಕೆ ಸೇರಿಸಿ, ಉತ್ತರಾದಿಮಠದಿಂದ ಬೇರ್ಪಡಿಸುವ ಪ್ರಯತ್ನ ಬಲು ಕ್ಷುಲ್ಲಕವಲ್ಲದೆ ಮತ್ತೇನು.  ಯಾವ ದಾಖಲೆ ಹೇಳುತ್ತದೆ ಅವರು ಆ ಮಠಕ್ಕೆ ಸೇರಿದವರೆಂದು.  ಸ್ವತ: ಅಕ್ಷೋಭ್ಯತೀರ್ಥರ ಮಠದವರೂ ಇದನ್ನು ಎಲ್ಲೂ ಹೇಳಿಲ್ಲ. “ರಘು’ ಎಂಬ ಪದ ಬಂದಿರುವುದರಿಂದ ಅಕ್ಷೋಭ್ಯತೀರ್ಥಮಠಕ್ಕೆ ಅವರನ್ನು ಸೇರಿಸಿದ್ದಾರೆ.  ಹಾಗಾದರೆ, ರಘುನಂದನತೀರ್ಥರನ್ನೂ ಅಲ್ಲಿಗೇ ಸೇರಿಸಬಹುದಿತ್ತಲ್ಲವೇ?
 
Raghuvarya-thirtharu                                                                     (Period 1502 – 1557AD)
                                                    ಶ್ರೀ ರಘುವರ್ಯತೀರ್ಥರ ವೃಂದಾವನ, ಆನೆಗೊಂದಿ
ರಘೋತ್ತಮರು ರಘುವರ್ಯರ ಸೇವೆಗೆ ಬಂದರೋ ಇಲ್ಲವೋ ಅದು ಅಪ್ರಸ್ತುತ.   ಹಿಂದಿನ ಕಾಲದಲ್ಲಿ ಪ್ರತಿ ಆರಾಧನೆಗೂ ಹೋಗುವ ಸಾಧ್ಯತೆ ಬಹಳ ಕಡಿಮೆ,  ಆಗ ಇಂದಿನಂತೆ ವಾಹನಗಳ ಸೌಲಭ್ಯವಿರಲಿಲ್ಲ.  ಆರಾಧನೆಯನ್ನು ಎಲ್ಲಿಂದ ಬೇಕಾದರೂ ಮಾಡಬಹುದು.  ಎಲ್ಲಿ ಹರಿಗುರುಗಳನ್ನು ನೆನೆವರೋ ಅಲ್ಲೇ ಪವಿತ್ರೆ ಸ್ಥಳವಾಗುವುದು.  ಹಾಗೆ ನೋಡಿದರೆ ಮಧುರೈಯಲ್ಲಿದೆಯೆಂದು ಹೇಳಲ್ಪಡುವ ರಾಯರ ಮಠದ ಎರಡು ವೃಂದಾವನಗಳು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ.  ಆದರೂ ಪಂಚಾಂಗದಲ್ಲಿ ಆ ಗುರುಗಳ ಹೆಸರನ್ನು ಮಧುರೈ ಎಂಬ ಹೆಸರಿನಿಂದಲೇ ಹೇಳಲ್ಪಡುತ್ತದೆ.  ಹಾಗಾದರಿ ನಮ್ಮ ಯತಿಗಳು ಅವರಿಗೆ ಆರಾಧನೆ ಮಾಡಿಲ್ಲವೆಂದು ಹೇಳಲಾಗುತ್ತದೆಯೇ?  ರಘುವರ್ಯರ ಸೇವೆಗಾಗಿ ಹೋಗಿರಬಹುದಾದ ರಘೋತ್ತಮರ ಫೋಟೋವನ್ನು ಕ್ಲಿಕ್ಕಿಸಲು ಅಂದಿನ ಕಾಲದಲ್ಲಿ ಇಂದಿನಂತೆ ಆಧುನಿಕ ತಂತ್ರಜ್ಞಾನವಿರಲಿಲ್ಲ.  ಎಲ್ಲವನ್ನೂ ದಾಖಲೆ ಮಾಡುತ್ತಿರಲೂ ಇಲ್ಲ.  ಈಗಿನ ಕಾಲದಲ್ಲಿ ಯತಿಗಳು ಹೋದಲ್ಲೆಲ್ಲ ದಿಗ್ವಿಜಯವೆಂಬ ಹೇಳಿಕೆ ಬರುತ್ತಿದೆ.  ಆಗಿನ ಕಾಲದಲ್ಲಿ ಹೋಗಿದ್ದರೂ ದಿಗ್ವಿಜಯವಾಗಿದ್ದರೂ ಅದು ದಾಖಲಾಗಿಲ್ಲದಿರಬಹುದು.  ಅಷ್ಟೇ ಅಲ್ಲ.  ಆದ್ದರಿಂದ ಈ ಪ್ರಶ್ನೆಯೇ ಅಸಂಬದ್ಧ ಮತ್ತು ಕುಹಕವಲ್ಲದೆ ಅತ್ಯಂತ ಕೀಳು ದರ್ಜೆಯ ಚಿಂತನೆ.
ರಘುವರ್ಯರ ವೃಂದಾವನ –  ಶ್ರೀ ಬಿ.ವೆಂಕೋಬರಾಯರ ಒಂದು ಆಂಗ್ಲ ಭಾಷೆಯ ಹೇಳಿಕೆಯನ್ನು ತಮಗೆ ಅನುಕೂಲವಾಗುವಂತೆ ಕೆಲವರು ಈರೀತಿ ತಿರುಚಿ ಹೇಳಿದ್ದಾರೆ. ಬಿ.ವೆಂಕೋಬರಾಯರು ಹೇಳಿರುವಂತೆ – “ವಿಜಯನಗರದಲ್ಲಿ ರಘುವರ್ಯರು ದೇಹಬಿಟ್ಟರು, ಶ್ರೀನಿವಾಸತೀರ್ಥರು ಮತ್ತು ರಾಮತೀರ್ಥರು ವಿಜಯನಗರದಲ್ಲಿ ದೇಹ ಬಿಟ್ಟರು.  ರಘುನಂದನತೀರ್ಥರು ವಿಜಯನಗರದಲ್ಲಿ ದೇಹ ಬಿಟ್ಟರು” ಆದ್ದರಿಂದ ರಘುನಂದನತೀರ್ಥರು ಮತ್ತು ರಘುವರ್ಯರು ಹಂಪೆಯಲ್ಲೂ ಮತ್ತು ಶ್ರೀನಿವಾಸತೀರ್ಥರು ಮತ್ತು ರಾಮತೀರ್ಥರು ನವವೃಂದಾವನದಲ್ಲ್ಲೂವೃಂದಾವನಸ್ಥರಾದರು ಎಂದು ತಮಗೆ ಅನುಕೂಲವಾಗುವಂತೆ ಅರ್ಥೈಸಿದ್ದಾರೆ.   ಅದು ಹೇಗೆ ಸಾಧ್ಯ?  ಹಂಪಿಯಲ್ಲಿ ಎಲ್ಲೋ ಒಂದು ಕಡೆ ರಘುವರ್ಯರ ವೃಂದಾವನ ಇರಬಹುದೆಂದು ಸಂದೇಹಿಸಿದ್ದಾರೆ.  ಎಲ್ಲೋ ಒಂದು ಕಡೆ ಎನ್ನುವುದು ಜಾರಿಕೆಯ ಉತ್ತರವಲ್ಲವೇ?
ಇಲ್ಲಿ ರಘುನಂದನತೀರ್ಥರ ಮತ್ತು ರಘುವರ್ಯರ ವೃಂದಾವನವೂ ಆನೆಗೊಂದಿಯಲ್ಲಿದೆಯೆಂದೇಕೆ ಅರ್ಥ ಮಾಡಬಾರದು?  ಒಟ್ಟಿನಲ್ಲಿ ಹರಸಾಹಸ ಮಾಡಿ ರಘುವರ್ಯರನ್ನು ಅಲ್ಲಿಂದ ತೆಗೆಯಲು ಪ್ರಯತ್ನಪಟ್ಟಿದ್ದಾರೆ.  ತಮಗೆ ಬೇಕಾದವರನ್ನು ಆನೆಗೊಂದಿಯಲ್ಲಿ ಹೇಳಿ, ಬೇಡದವರನ್ನು ಹಂಪೆಯಲ್ಲಿ ಹೇಳುವುದು ಎಷ್ಟು ಸಮರ್ಥನೀಯ ಹೇಳಿಕೆ.   ಇಷ್ಟಾಗಿ ರಘುವರ್ಯರ ವೃಂದಾವನವನ್ನು ಅವರ ವೃಂದಾವನ ಪ್ರವೇಶಕಾಲದಿಂದಲೂ ಆನೆಗೊಂದಿಯಲ್ಲೇ ಆ ಮಠದವರು ಪೂಜಿಸಿಕೊಂಡು ಬಂದಿರುವುದು ಮತ್ತು ಅವರ ಪರಂಪರೆಯಲ್ಲಿ ಅಲ್ಲೇ ಗುರುತಿಸಿಕೊಂಡಿದ್ದಾರೆ.  ಹೀಗಿದ್ದೂ ಅದನ್ನು ಅಲ್ಲಗಳೆಯುವಲ್ಲಿ ಎಷ್ಟು ಸುಳ್ಳು ದಾಖಲೆಗಳ ಪ್ರಯತ್ನ, ಅಸಮಂಜಸ ಹೋಲಿಕೆ,  ಆ ಯತಿಗಳನ್ನು ಮಠಾಂತರ ಮಾಡುವ ಪ್ರಯತ್ನವನ್ನು ಕಂಡರೆ ಹಾಸ್ಯಾಸ್ಪದವೆನ್ನಿಸದೆ ಇರದು.

raghuvaryara vrundavana scene

ಶ್ರೀ ರಘುವರ್ಯರ ವೃಂದಾವನದ ಮೇಲಿರುವ ಚಿತ್ರದ ಬಗ್ಯೆ –

ರಘುವರ್ಯರ ವೃಂದಾವನದ ಮೇಲಿರುವ ಗೊಂಬೆ/ ಪ್ರತಿಮೆ/ವಿಗ್ರಹ, ಕೆತ್ತನೆಗಳನ್ನು ಜಯತೀರ್ಥರದ್ದೆಂದು ಹೇಳಲು ಆ ಕೆತ್ತನೆಗಳಿಗೆ ಜಯತೀರ್ಥರ ಸಂಬಂಧವನ್ನು ಹೇಳಲು ಹೆಣಗಿದ್ದಾರೆ.  ರಘುವರ್ಯರ ವೃಂದಾವನದಲ್ಲರುವ ಕೆತ್ತನೆಯಂತೆಯೇ ಸುಧೀಂದ್ರತೀರ್ಥರ ವೃಂದಾವನದಲ್ಲೂ ಕೆತ್ತನೆಯಿದೆ.  ರಘುವರ್ಯರ ವೃಂದಾವನದಲ್ಲಿ ಒಬ್ಬ ಯತಿಯ ಮತ್ತು ಒಬ್ಬ ಸೈನಿಕನ ಚಿತ್ರವಿದೆ.  ಶ್ರೀ ರಘುವರ್ಯರ ವೃಂದಾವನದಲ್ಲಿ ಒಬ್ಬ ಯತಿ ಮತ್ತು ಒಬ್ಬ ಸೈನಿಕನ ಚಿತ್ರವಿರುವುದರಿಂದ, ಅದು ಜಯತೀರ್ಥರದ್ದೆಂದು ಕೆಲವರ ಮಂಡನೆ.  ಅವರ ಪ್ರಕಾರ – ಜಯತೀರ್ಥರು ತಮ್ಮ ಪೂರ್ವಾಶ್ರಮಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು.  ಆದರೆ ಅವರು ಸೈನಿಕನಾಗಿರಲಿಲ್ಲ, ಬದಲಿಗೆ ಆಡಳಿತಗಾರರಾಗಿದ್ದರು.  ಅಕಸ್ಮಾತ್ ಅವರು ಸೈನಿಕನ ಚಿನ್ಹೆಯನ್ನು ಹೇಳಲು ಬಯಸಿದ್ದರೆ, ಆ ಚಿತ್ರಗಾರ ಜಯತೀರ್ಥರು ಕುದುರೆ ಮೇಲೆ ಕುಳಿತು ನೀರು ಕುಡಿಯುವುದನ್ನು ಚಿತ್ರಿಸಬೇಕಿತ್ತು, ಏಕೆಂದರೆ ಜಯತೀರ್ಥರಿಗೆ ವೈರಾಗ್ಯ ಬಂದಿದ್ದೇ “ಕಿಂ ಪಶು: ಪೂರ್ವಧೇ:” ಪದದಿಂದ.  ಆದ್ದರಿಂದ ಈ ಸೈನಿಕನ ಚಿನ್ಹೆ ಆ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳಲು ಸಹಾಯವಾಗದು.    ಹಾಗ ನೋಡಿದರೆ ಶ್ರೀ ವ್ಯಾಸರಾಜರು ವಿಜಯನಗರವನ್ನು ಉಳಿಸಿದ್ದರು. ಅವರ ವೃಂದಾವನದಲ್ಲಿ ಸಾಮ್ರಾಟನ ಚಿತ್ರವಿರಬೇಕಿತ್ತು.  ಆದರೆ ವ್ಯಾಸರಾಜವೃಂದಾವನದಲ್ಲಿರುವುದು ರಾಮ, ವಿಠ್ಟಲ, ನೃಸಿಂಹ, ಕೃಷ್ಣ ಮತ್ತು ಯತಿಚಿತ್ರಣ.  ಅದೇರೀತಿ ೧೨ ವರ್ಷ ರಾಜ್ಯವಾಳಿದ ನರಹರಿತೀರ್ಥರ ವೃಂದಾವನದ ಮೇಲೆ ರಾಜನ ಚಿತ್ರವಿರಬೇಕಿತ್ತು.  ಆದರೆ ಇಲ್ಲ.   ಆದ್ದರಿಂದ ಆ ಸೈನಿಕನ ಚಿತ್ರಣ ಜಯತೀರ್ಥರದ್ದೆಂದು ಹೇಳಲು ಆಧಾರವಿಲ್ಲ.  ಅಷ್ಟೇ ಅಲ್ಲ.    ಶ್ರೀ ಜಯತೀರ್ಥರು ತಮ್ಮ ಯೌವನದಲ್ಲೇ ಸರ್ವಸ್ವವನ್ನೂ ತ್ಯಾಗಮಾಡಿ ಸನ್ಯಾಸ ಸ್ವೀಕರಿಸಿದವರು ಖಡ್ಗ ಹಿಡಿದು ನಿಂತ ಭಂಗಿಯ ಕಲ್ಪನೆ ಜಯತೀರ್ಥರಿಗೇ ಒಪ್ಪತಕ್ಕದ್ದಲ್ಲ.    ಅಷ್ಟೇ ಅಲ್ಲ.  ರಾಯರಾಗಲೀ, ಜಯತೀರ್ಥರಾಗಲೀ, ವಾದಿರಾಜರಾಗಲೀ ತಮಗೆ ಪೂರ್ವಾಶ್ರಮದ ವಾಸನೆಯನ್ನೇ ಧಿಕ್ಕರಿಸಿದವರು ಇಂತಹ ವೃಂದಾವನವನ್ನು ಕಟ್ಟಿಸಲು ಹೇಗೆ ತಾನೆ ಸಮರ್ಥಿಸುವರು?   ಆಧಾರಗಳಿಲ್ಲದ ಮೇಲೆ ಕತೆ ಕಟ್ಟಬಾರದಲ್ಲವೇ?   ವಾದಿರಾಜರು ಎಲ್ಲೂ ಜಯತೀರ್ಥರ ವೃಂದಾವನದ ಬಗ್ಯೆ ಚಕಾರವೆತ್ತಿಲ್ಲ.  ಅದು ಎಲ್ಲಿದೆಯೆಂದು ಹೇಳಿಲ್ಲ.  ಹೀಗಿರುವಾಗ, ಸುಮ್ಮನೆ ನಮ್ಮ ಮನಸ್ಸಿಗೆ ಬಂದಂತೆ ಕಲ್ಪಿಸಿ ಯಾವುದೋ ವೃಂದಾವನವನ್ನು ಜಯತೀರ್ಥರದ್ದೆಂದು ಹೇಳುವುದು ತರವಲ್ಲ
ಇಲ್ಲಿ ಮಳಖೇಡವಾದಿಗಳೂ ಕಡಿಮೆಯಿಲ್ಲ.  ಆನೆಗೊಂದಿವಾದಿಗಳ ಹೇಳಿಕೆಗೆ ಪ್ರತಿಯಾಗಿ – ಅಂದರೆ ರಘುವರ್ಯರ ವೃಂದಾವನದಲ್ಲಿ ಸೈನಿಕನ ಚಿತ್ರಣವಿರುವುದು ಜಯತೀರ್ಥರ ಪೂರ್ವಾಶ್ರಮದ ಚಿನ್ಹೆಯೆಂಬ ವಾದಕ್ಕೆ ಮಳಖೇಡವಾದಿಗಳೂ ಅದನ್ನು ರಘುವರ್ಯರದ್ದೆಂದು ಸಮರ್ಥಿಸಲು ಆ ಸೈನಿಕ ರಘುವರ್ಯರಿಗೂ ಸಂಬಂಧಿಸಿದ್ದೆಂದು ಹೇಳಲು ಪ್ರಯತ್ನಿಸಿದ್ದಾರೆ. 
ಕೆಲವರು ಆ ಯೋಧನ ಚಿತ್ರವನ್ನು ನೋಡಿ ಜಯತೀರ್ಥರದ್ದೇ ಚಿತ್ರವೆಂದು ಹೇಳಲು ಪ್ರಯತ್ನಿಸಿದ್ದಾರೆ.  ಆದರೆ ಜಯತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ರಾಜನಾಗಿದ್ದರೇ ಹೊರತು ಸೈನಿಕನಲ್ಲ.  ದೋಂಡೋಪಂತನ ಕೆಳಗೇ ನೂರಾರು ಸೈನಿಕರಿದ್ದರು.  ಆದ್ದರಿಂದ ಜಯತೀರ್ಥರನ್ನು ಸೈನಿಕನಾಗಿ ನೋಡುವ ಬದಲು ಆಡಳಿತಗಾರನಾಗೋ ರಾಜನಾಗೋ ಚಿತ್ರಣ ನೀಡಬೇಕಿತ್ತು.  ಆದರೆ ನೀಡಿರುವುದು ಸೈನಿಕನ ಚಿತ್ರಣವನ್ನು.    ಆದ್ದರಿಂದ ಅವರ ಚಿಂತನೆ ಸರಿಯಲ್ಲ.
ಅಥವಾ –  ಊಹಾತ್ಮಕವಾಗಿ ಈ ಚಿತ್ರವನ್ನು ನೋಡಿದರೆ –  ಹೀಗಿರಬಹುದು – ಶ್ರೀ ರಘುವರ್ಯರು ತಮ್ಮ ಚಿಕ್ಕ ವಯಸ್ಸಿನ ಉತ್ತರಾಧಿಕಾರಿಯಾದ ಶ್ರೀ ರಘೋತ್ತಮತೀರ್ಥರಿಗೆ ಆಶ್ರಮ ನೀಡಿ ವೃಂದಾವನ ಪ್ರವೇಶ ಮಾಡಿದಾಗ, ಆ ಬಾಲಯತಿಗೆ ಅನುಗ್ರಹ ಮಾಡಿರೆಂದು,  ತಿರುಕೋಯಿಲೂರಿನ ರಾಜ ತನ್ನ ಸೈನಿಕರನ್ನು ಕರೆಸಿ ರಘುವರ್ಯರನ್ನು ವಿಜ್ಞಾಪಿಸಿದಂತಿದೆ
ಅಥವಾ –  ವಿಜಯನಗರದ ರಾಜ ರಘುವರ್ಯರನ್ನು ತನ್ನ ದೇಶಕ್ಕೆ ಬರಬೇಕೆಂದು ತನ್ನ ಸೈನಿಕನನ್ನು ಕಳಿಸಿ ಕೋರಿರುವಂತೆ ತೋರುತ್ತದೆ.
ಆ ಸೈನಿಕನು ಕರೆದಾಗ ರಘುವರ್ಯರು ತನ್ನ ಕಮಂಡಲವನ್ನು ಒಂದು ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ಸರ್ವಮೂಲವನ್ನು ಹಿಡಿದು, ಆ ಸೈನಿಕನನ್ನು ಅನುಸರಿಸಿ ಹೊರಟಂತಿದೆ.
ಶ್ರೀ ಸುಧೀಂದ್ರರ ವೃಂದಾವನದಲ್ಲಿ ಒಬ್ಬ ಯತಿಯ ಚಿತ್ರವಿದೆ.  ಆದರೆ ಅದೇ ರೀತಿ ಶ್ರೀ ಪದ್ಮನಾಭತೀರ್ಥರ ವೃಂದಾವನದಲ್ಲಿ, ಶ್ರೀ ಕವೀಂದ್ರರ ವೃಂದಾವನದಲ್ಲಿ, ಮತ್ತು ಶ್ರೀನಿವಾಸತೀರ್ಥ ವೃಂದಾವನದಲ್ಲಿ  ಯಾವುದೇ ಕೆತ್ತನೆಯಿಲ್ಲ.  ಅಲ್ಲಿ ಯತಿಗಳ ಚಿತ್ರವಿಲ್ಲದಿರುವುದರಿಂದ ಅವನ್ನು ಮೂಲವೆಂದು ಅಲ್ಲಗಳೆಯಲಾಗುತ್ತದೆಯೇ?  ರಘುವರ್ಯರ ವೃಂದಾವನದಲ್ಲಿ  ವೀರರೂಪದ ಪ್ರತಿಮೆ, ಸನ್ಯಾಸಿ ರೂಪದ ಪ್ರತಿಮೆ, ಗ್ರಂಥವನ್ನು ಹಿಡಿದಿರುವ ವಿಗ್ರಹಗಳಿವೆ.  ಕೆಲವರ ಹೇಳಿಕೆಯೇನೆಂದರೆ ರಘುವರ್ಯತೀರ್ಥರ ವೃಂದಾವನದಲ್ಲಿ ಹಲವಾರು ರೀತಿಯ ವಿಗ್ರಹ ಕೆತ್ತನೆಗಳಿರುವುದರಿಂದ ಅದು ಜಯತೀರ್ಥರದ್ದು. ಹಾಗಾದರೆ ಜಯತೀರ್ಥರಿಗಿಂತ ಹಿರಿಯರಾದ ಶ್ರೀ ಪದ್ಮನಾಭತೀರ್ಥರ ವೃಂದಾವನದಲ್ಲೇಕಿಲ್ಲ?  ಅವರು ಹೇಳಬಹುದು – “ಪದ್ಮನಾಭತೀರ್ಥರು ಬಹಳ ಪ್ರಾಚೀನರು, ಮೊದಲ ವೃಂದಾವನ, ಆಗ ಆ ಕೆತ್ತನೆ ಕಲೆಯನ್ನು ಅಲ್ಲಿ ಅಳವಡಿಸಿಲ್ಲ”.    ಮಳಖೇಡಾದ ಜಯತೀರ್ಥರ ವೃಂದಾವನದಲ್ಲಿ ಸರ್ಪಚಿನ್ಹೆ ಇದೆ.  ಅದು ಅವರು ಶೇಷಾಂಶಸಂಭೂತರೆಂದು ಹೇಳಬಹುದು.  ಏಕೆಂದರೆ ಶ್ರೀ ಜಯತೀರ್ಥರನ್ನು ಅವರ ತಂದೆ ಜಯತೀರ್ಥರ ಪತ್ನಿಯರ ಬಳಿಗೆ ಕರೆದೊಯ್ದಾಗ ಅವರಿಗೆ ಜಯತೀರ್ಥರು ಕಂಡದ್ದು ಸರ್ಪರೂಪದಲ್ಲಿ.
ಹಾಗಾದರೆ ಶ್ರೀ ಕವೀಂದ್ರರಲ್ಲೇಕೆ ಮತ್ತು ಶ್ರೀನಿವಾಸತೀರ್ಥರಲ್ಲೇಕೆ ಕೆತ್ತಿಲ್ಲ? ಅವರು ನಂತರದವರಲ್ಲವೇ?   ಇದೆಲ್ಲ ಜನರನ್ನು ತಪ್ಪು ತಿಳುವಳಿಕೆಗೆ ಒಳಪಡಿಸುವ ತಂತ್ರವಲ್ಲವೇ?  ಒಂದೊಂದು ವೃಂದಾವನ ಕೆತ್ತನೆಯ ಕಾಲದಲ್ಲಿ ಬೇರೆ ಬೇರೆ ಶಿಲ್ಪಿಗಳು ಕೆತ್ತಿರುತ್ತಾರೆ.  ಅಥವಾ ಶಿಲ್ಪಿಗಳು ಆಗಿನ ಕಾಲದ ಹತ್ತಿರದಲ್ಲಿದ್ದ ಪಂಡಿತರು ನೀಡಿದ ಮಾರ್ಗದರ್ಶನದಂತೆ ಚಿತ್ರಿಸಿರಬಹುದು.  ಅವರವರು ಹೇಗೆ ಚಿಂತಿಸುತ್ತಾರೋ ಹಾಗೆ ಕೆತ್ತಿರುತಾರೆಯೇ ಹೊರತು, ಅದನ್ನು ನಮ್ಮ ಅನುಕೂಲಕ್ಕೆ ಅಳವಡಿಸುವುದು ತರವಲ್ಲ.  ಜಯತೀರ್ಥರ ವೃಂದಾವನ ಕೆತ್ತನೆಗೂ ಪದ್ಮನಾಭತೀರ್ಥರ ವೃಂದಾವನ ಕೆತ್ತನೆಗೂ ಜಾಸ್ತಿ ಕಾಲ ವ್ಯತ್ಯಾಸವಿಲ್ಲ.  ಅದಕ್ಕೇ ಜಯತೀರ್ಥರ ಮಲಖೇಡಾದ ಮೂಲವೃಂದಾವನದಲ್ಲೂ ವಿಶೇಷ ಕೆತ್ತನೆಗಳಿಲ್ಲ ಮತ್ತು ಆನೆಗೊಂದಿಯ ಪದ್ಮನಾಭತೀರ್ಥರ ವೃಂದಾವನದಲ್ಲೂ ವಿಶೇಷ ಕತ್ತನೆಗಳಿಲ್ಲ.
ಪ್ರವಾಹದ ಹಾನಿಯಿಂದ ಧ್ವಂಸವಾಗಿದ್ದ ರಘುವರ್ಯರ ವೃಂದಾವನವನ್ನು ಉತ್ತರಾಧಿಮಠದವರು ಪುನ: ಸರಿಪಡಿಸಿದಾಗ ಹಲವಾರು ಕೆತ್ತನೆಗಳನ್ನು ಕೆತ್ತಿಸಿರಬಹುದು.  ಅದೇರೀತಿ ನರಹರಿತೀರ್ಥರ ವೃಂದಾವನವೂ ಕೂಡ ಪುನ: ಕಟ್ಟಲ್ಪಟ್ಟಿಲ್ಲವೇ?  ಮಂತ್ರಾಲಯ ನವನಿರ್ಮಾಣವಾದಾಗ ಎಲ್ಲವೂ ಹಿಂದಿನಂತೆಯೇ ೧೦೦% ಹಾಗೆಯೇ ಇದೆಯೇ ಅಥವಾ ಇನ್ನಷ್ಟು ಉತ್ತಮ ಗುಣಮಟ್ಟವನ್ನು ನೀಡಿದ್ದಾರೋ? ಅಲ್ಲದೇ, ನವವೃಂದಾವನದ ಗೋಡೆಯ ಮೇಲೆ ಎಷ್ಟೋ ವರ್ಷಗಳಿಂದ ಇರುವ ಶ್ಲೋಕದ ಕೆತ್ತನೆ ರಘುವರ್ಯರನ್ನೇ ಹೇಳುತ್ತದೆ.    ಜಗನ್ನಾಥದಾಸರ  ನವವೃಂದಾವನ ಕೃತಿಯಲ್ಲೂ ರಘುವರ್ಯರ ಹೆಸರಿದೆ. ಜಯತೀರ್ಥರ ಹೆಸರಿಲ್ಲ.
ಇರಲಿ.  ಕೆಲವರು ಆ ವೃಂದಾವನವನ್ನು ರಘುವರ್ಯರಲ್ಲವೆಂದು ಪ್ರತಿಪಾದಿಸುವವರು – ರಘುವರ್ಯರು ಹಂಪೆಯಲ್ಲಿ ದೇಹಬಿಟ್ಟರು ಎನ್ನುವ ಜನ ಅವರ ವೃಂದಾವನ ಎಲ್ಲಿದೆಯೆಂದು ಹೇಳಲು ವಿಫಲರಾಗಿದ್ದಾರೆ.  ಅಷ್ಟೇ ಅಲ್ಲ ಜನಕ್ಕೆ ಪರಮಪೂಜ್ಯ ಶ್ರೀ ಜಯತೀರ್ಥರ ವೃಂದಾವನವನ್ನು ನಿರ್ಲಕ್ಷ್ಯ ಮಾಡಿ ಅದರಲ್ಲಿ ರಘುವರ್ಯರನ್ನು ಪ್ರತಿಷ್ಟಾಪಿಸಿ ಅವರನ್ನು ಆರಾಧಿಸಿದರೆ ಎಂತಹ ಜಯತೀರ್ಥರ ದ್ರೋಹವಾಗುವುದು.  ಅಲ್ಲದೇ ಈಗಲೂ ರಘುವರ್ಯರ ವೃಂದಾವನವೆಂದೇ  ಪೂಜಿಸಲ್ಪಡುತ್ತಿದೆಯೇ ಹೊರತು ಜಯತೀರ್ಥರದ್ದೆಂದಲ್ಲ.  ಜಯತೀರ್ಥರ ಆರಾಧನೆಯೂ ಅಲ್ಲಿ ನಡೆಯುತ್ತಿಲ್ಲ.  ರಘುವರ್ಯರ ಆರಾಧನ ನಡೆಯತ್ತಿದೆ.  ಶತ ಶತಮಾನಗಳಿಂದ ಕಂಡಿರದ ಜಯತೀರ್ಥರು ಹೀಗೆ ದಿಡೀರನೆ ಹೇಗೆ ರಘುವರ್ಯರಲ್ಲಿ ಪ್ರತ್ಯಕ್ಷರಾದರು ?  ಅಥವಾ ಮಲಖೇಡದಲ್ಲಿ ವಿದ್ಯಾನಿಧಿ ಪರಂಪರೆಯವರು ಪೂಜಿಸುತ್ತಿರುವುದರಿಂದ ಆ ವೃಂದಾವನವೇ ನಮಗೆ ಬೇಡ, ನಮಗೆ ಬೇರಾವುದೋ ವೃಂದಾವನದಲ್ಲಿ ಜಯತೀರ್ಥರನ್ನು ಚಿಂತಿಸೋಣವೆಂದು ಕುತರ್ಕವೋ?
ಏಕೆಂದರೆ ಒಬ್ಬ ಯತಿನಿಂದಕ  (ಆ ವ್ಯಕ್ತಿ ಇತ್ತೀಚಿನ ಪುಸ್ತಕದಲ್ಲಿ ಪ್ರಮುಖ ಪಾತ್ರದಾರಿ) ತಮ್ಮ ಸುಮಾರು ಈಮೇಲಿನಲ್ಲಿ  ಹೀಗೆ ಹೇಳಿದ್ದಾರೆ :-   – ವಿದ್ಯಾನಿಧಿಗಳು ತುಳುವ ಸಂಪ್ರದಾಯದಿಂದ ಬಂದವರು, ಅವರು ನಮ್ಮ ಸಂಪ್ರದಾಯಕ್ಕೆ ಒಗ್ಗುವರಲ್ಲ. ನಾವು ಅವರನ್ನು ಆಚಾರ್ಯ ಮಧ್ವರೂ ಕೂಡ ತುಳವರೆಂದು ನೆನಪಿಸಿದಾಗ ಅವರು ಹೇಳಿದ್ದು “ಮಧ್ವಾಚಾರ್ಯರು ತುಳವರೇ ಅಲ್ಲ”, ಹೀಗೆಂದು ಹೇಳಿ ಆಚಾರ್ಯರ ಮೂಲತ್ವವನ್ನೇ ಪ್ರಶ್ನಿಸಿದವರು ಜಯತೀರ್ಥರ ಮೂಲತ್ವವನ್ನು ಪ್ರಶ್ನಿಸುವುದರಲ್ಲಿ ವಿಶೇಷವಿಲ್ಲ. 
ಈ ಎಲ್ಲ ಅಂಶಗಳಿಂದ ರಘುರ್ಯರ ವೃಂದಾವನಕ್ಕೆ ಜಯತೀರ್ಥರದ್ದೆಂದು ಹೇಳುವ ಪ್ರಯತ್ನ ಕುಹಕವಷ್ಟೆ. ಅಲ್ಲದೆ ಅಸಮರ್ಥನೀಯ.

             ಅಧ್ಯಾಯ ೨ – ವಿಜಯದಾಸರು ಮಳಖೇಡದಲ್ಲಿ ಜಯತೀರ್ಥರನ್ನು ಕಂಡ ವಿಚಾರ

ಶಂಕೆ –ಅ) ಶ್ರೀ ವಿಜಯದಾಸರು “ರಾವುತ ರೂಪದಲ್ಲಿರುವ ಜಯತೀರ್ಥರನ್ನು ಕಂಡರು” ಇದರ ಅರ್ಥಾನುಸಂಧಾನವೇನು?  ಆ) ವಿಜಯದಾಸರು ಮಳಖೇಡಕ್ಕೆ ಹೋಗಿದ್ದರೆ? ಇ) ವಿಜಯದಾಸರು ಮಳಖೇಡದಲ್ಲಿ ಜಯಮುನಿಗಳನ್ನು ಕಂಡದ್ದು ಯಾವ ಭಂಗಿಯಲ್ಲಿ?   ಈ) ಜಯತೀರ್ಥರಿಗೆ ಪೂರ್ವಾಶ್ರಮದ ವಾಸನೆ ಇತ್ತೆ?
ಸಮಾಧಾನ – ಆನೆಗೊಂದಿ ಬಣದವರು, ತಾವೇ ನಿರ್ಣಯಿಸಿದ್ದ ಸಿದ್ಧಾಂತಕ್ಕೆ ವಿರುದ್ಧವಾಗಿ ಬರೆದಿದ್ದಾರೆ.  ಈಗಾಗಲೇ ಸುಮಾರು ಪುಟಗಳಲ್ಲಿ ವಿಜಯದಾಸಾದಿ ದಾಸಶ್ರೇಷ್ಟರು ಯಾವ ಕಾರಣಕ್ಕೂ ಮಳಖೇಡಾಕ್ಕೆ ಹೋಗುವ ಸಂಭವವೇ ಇಲ್ಲ ಮತ್ತು ಯಾವತ್ತೂ ಅವರು ಹೋಗುವವರಲ್ಲ, ಎಂದು ಹಲವಾರು ಬಾರಿ ಉಚ್ಚರಿಸಿದ ಆನೆಗೊಂದಿವಾದಿಗಳು, ಇಲ್ಲಿ ತಮ್ಮ ನಿರ್ಣಯಕ್ಕೇ ವಿರುದ್ಧವಾಗಿ ಮಾತನಾಡಿದ್ದಾರೆ.  ಅವರೇ ಒಪ್ಪಿದ್ದಾರೆ ವಿಜಯದಾಸರು ಮಳಖೇಡದಲ್ಲಿ ರಾವುತನಾಗಿದ್ದ ಜಯತೀರ್ಥರನ್ನು ಕಂಡ ವಿಜಯದಾಸರೆಂದು.  ಆದ್ದರಿಂದ ಅವರ “ಯಾವುದೇ ದಾಸರಾಗಲೀ, ಯತಿಗಳಾಗಲೀ ಮಳಖೇಡಾಕ್ಕೆ ಹೋಗಿಲ್ಲ” ಎಂಬ ವಾದ ಹುಸಿಯೆಂದು ಸಾಭೀತಾಗಿದೆ.  ನಾವು ಮುಂದಿನ ಅಧ್ಯಾಯಗಳಲ್ಲಿ ಮಳಖೇಡಕ್ಕೆ ಯಾರಾರು ಹೋಗಿ ದರ್ಶನ ಮಾಡಿದ್ದಾರೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸೋಣ.
ಪ್ರಕೃತ ಜಯತೀರ್ಥರನ್ನು ಮಳಖೇಡದಲ್ಲಿ ‘ರಾವುತ ರೂಪದಲ್ಲಿ ಕಾಣು’ವುದು ಏನು ವಿಶೇಷ.   ಶ್ರೀ ತ್ರಿವಿಕ್ರಮ ಪಂಡಿತರು ಆಚಾರ್ಯ ಮಧ್ವರನ್ನು ನೈವೇದ್ಯ ಸಮಯದಲ್ಲಿ ಮೂರೂ ರೂಪಗಳಲ್ಲಿ ಕಾಣಲಿಲ್ಲವೇ? ಅದು ಸುಳ್ಳೇ?  ರಾಯರು ಒಬ್ಬ ಬೇಡುವವಾಗಿ ಬಂದ ಕನಕನನ್ನು ಕನಕದಾಸನೆಂದು ಗುರುತಿಸಲಿಲ್ಲವೇ?. ಅದು ಸುಳ್ಳೇ?   ಅದೇ ರೀತಿ ಬಹುಷ: ಶ್ರೀ ವಿಜಯದಾಸರು ಮಳಖೇಡದಲ್ಲಿ ವಿರಾಜಮಾನರಾದ ಜಯತೀರ್ಥರನ್ನ ದರ್ಶಿಸಿ ಅವರ ಪೂರ್ವಾಶ್ರಮವನ್ನು ನೆನಪಿಸಿಕೊಂಡಿರಬಹುದು, ಆಗ ಜಯತೀರ್ಥರು ಅವರಿಗೆ ರಾವುತ ರೂಪದಲ್ಲಿ ದರ್ಶನ ನೀಡಿದ್ದರೆ ಏನು ತಪ್ಪು?  ಶ್ರೀ ಸುಶ್ಮೀಂದ್ರತೀರ್ಥರನ್ನು ನಡೆದಾಡುವ ರಾಯರೆಂದು ಹೇಳುವ ಜನ ಅವರಲ್ಲಿ ರಾಯರನ್ನು ಕಂಡರೋ ಅಥವಾ ಅವರೇ ರಾಯರೆಂಬುದಾಗಿ ಕಲ್ಪಿಸಿದರೋ?
ಆ ಆಕ್ಷೇಪದಾರರು ಇನ್ನೂ ಮುಂದೆ ಹೋಗಿ “ಹಿಂದೆ ಪೂರ್ವಾಶ್ರಮದಲ್ಲಿ ರಾವುತರಾಗಿದ್ದ ಜಯತೀರ್ಥರನ್ನು ಇಂದು ಕಂಡೆ ಎಂದು ವಿಜಯದಾಸರು ಹೇಳಿಲ್ಲ” ಎಂದಿದ್ದಾರೆ.   ಅದರ ಅವಶ್ಯಕತೆ ಏನಿದೆ?  ಹಿಂದೆ ಪೂರ್ವಾಶ್ರಮದ ಪದವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ.  ಈ ಶೈಲಿಯನ್ನೂ ಬೇರೆಲ್ಲೂ ಕಾಣುವುದಿಲ್ಲ.  ಯಾವುದೇ ಪಂಡಿತ ಬೇಡವೇ ಬೇಡ ಒಬ್ಬ ಸಾಮಾನ್ಯ ಜ್ಞಾನವಿರುವ ಯಾರನ್ನೇ ಕೇಳಿದರೂ ಒಪ್ಪತಕ್ಕಂತ ವಾಕ್ಯವಲ್ಲ.  ಎಲ್ಲೂ ಪೂರ್ವಾಶ್ರಮದಲ್ಲಿ ರಾವುತನಾಗಿದ್ದ ಎಂಬುದನ್ನು ಹೇಳುವ ಪದ ಬೇಕಿಲ್ಲ.  ಅವರು ಪೂರ್ವಾಶ್ರಮದಲ್ಲಿ ಏನಾಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.,  ಬಹುಶ:  ಆ ಸಂದರ್ಭದಲ್ಲಿ ವಿಜಯದಾಸರಿಗೆ ಜಯತೀರ್ಥರು ರಾವುತನ ವೇಷದಲ್ಲಿ ಕಂಡಿರಬಹುದು. 
ಜಯತೀರ್ಥರ ಕಥೆಯಲ್ಲೇ ಬರುವುದಿಲ್ಲವೇ – ಜಯತೀರ್ಥರನ್ನು ಅವರ ತಂದೆ ಕರೆದುಕೊಂಡು ಹೋಗಿ ಅವರ ಹೆಂಡತಿಯರ ಬಳಿ ಕರೆದೊಯ್ದಾಗ ಅವರು ಸರ್ಪ ರೂಪದಲ್ಲಿ ಕಂಡಿದ್ದು. ಆಗ ಅವರು ಬೆಚ್ಚಿ ಬಿದ್ದು ಹೆದರಿ ಅವರನ್ನು ವಾಪಸ್ಸು ಕಳಿಸಿದ್ದು  ಈ ವಿಷಯವನ್ನು ಉಪನ್ಯಾಸದಲ್ಲಿ ಹೇಳುವ ಮಂದಿ ಹೀಗೇಕೆ ರಾವುತನ ವಿಷಯದಲ್ಲಿ ಎಡವಿದ್ದು?  
ಅಷ್ಟೇ ಅಲ್ಲ . ಅವರು ಹೇಳಿದ್ದಾರೆ,  ಅಕಸ್ಮಾತ್ ಜಯತೀರ್ಥರ ಸ್ಮರಣೆ ಮಾಡುವಾಗ, ಜಯತೀರ್ಥರನ್ನು ಕಂಡಾಗ ಮೂಲ ವೃಂದಾವನವೆಂದು ಸ್ಮರಿಸಿಲ್ಲವೆಂದು.  ಅದೇರೀತಿ ಅವರು ಮೃತ್ತಿಕಾ ವೃಂದಾವನವೆಂತಲೂ ಎಲ್ಲೂ ಸ್ಮರಿಸಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.  ಅಷ್ಟೇ ಅಲ್ಲ.  ಯಾರೂ ಮೃತ್ತಿಕಾ ವೃಂದಾವನ ಹುಡುಕಿಕೊಂಡು ಅಷ್ಟು ದೂರ ಹೋಗುವ ಅವಶ್ಯಕತೆ ಇಲ್ಲ.  ಇಂದಿನ ಕಾಲವಾದರೆ ನಮಗೆ ಪ್ರಯಾಣಕ್ಕೆ ಹಲವಾರು ಅನುಕೂಲವಿದೆ, ನಮಗೆ ಬೇಕಾದ ಮೃತ್ತಿಕಾ ವೃಂದಾವನ ದರ್ಶಿಸಬಹುದು.  ಹಿಂದಿನಕಾಲದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ.  ಆದ್ದರಿಂದ ವಿಜಯದಾಸರು ಮಳಖೇಡಕ್ಕೆ ಹೋಗಿದ್ದೂ ನಿಜ ಮತ್ತು ಮೂಲ ವೃಂದಾವನ ದರ್ಶಿಸಿದ್ದೂ ನಿಜ ಎಂಬುದು ಇದರಿಂದ ಧೃಡವಾಗುತ್ತದೆ.

             ಅಧ್ಯಾಯ ೩ – ವಾದಿರಾಜರ ‘ತೀರ್ಥಪ್ರಬಂಧ’ ಸ್ತೋತ್ರ ಮತ್ತು ಜಯತೀರ್ಥರು 

ಶಂಕೆ –  ಅ) ಶ್ರೀ ವಾದಿರಾಜರು ತೀರ್ಥಪ್ರಬಂಧದ ಎಲ್ಲ 106 ವಿಷಯಗಳನ್ನೂ ಪ್ರತ್ಯಕ್ಷ ಕಂಡೇ ವರ್ಣಿಸಿರುವಾಗ ಶ್ರೀ ಜಯತೀರ್ಥರನ್ನು ಮಾತ್ರ ಸ್ಮರಿಸುತ್ತಾರೆಯೇ?  ಆ) ಅಥವಾ ಇದ್ದ ಸ್ಥಳದಲ್ಲಿಯೇ ಸ್ಮರಿಸಿ ಹೇಳಿದ್ದಾರೆಯೇ.  ಇ) ವಾದಿರಾಜರು ತಾವೇ ಖುದ್ದಾಗಿ ಜಯತೀರ್ಥರು ಮಳಖೇಡದಲ್ಲಿ ಅಥವಾ ಆನೆಗೊಂದಿಯಲ್ಲಿದ್ದಾರೆಂದು ಹೇಳಿದ್ದಾರಾ ಅಥವಾ ವ್ಯಾಖ್ಯಾನಕಾರರ? ಈ) ವಾದಿರಾಜರು ಆನೆಗೊಂದಿಯಲ್ಲಿ ತಮ್ಮ ಗುರುಗಳಾದ ಅಕ್ಷೋಭ್ಯತೀರ್ಥರನ್ನೇಕೆ ಸ್ಮರಿಸಿಲ್ಲ? ಉ) “ಮಾಧ್ವಗ್ರಂಥಾನ್ ಸ್ವಬಂಧೂನಿವ ” ಎಂಬ ತೀರ್ಥಪ್ರಬಂಧದ ಶ್ಲೋಕ ಎಲ್ಲಿ ರಚನೆಯಾಯಿತು? ಬೇರೆಲ್ಲೋ ರಚಿಸಿರಬಹುದಾ? ಅದನ್ನು ಅಲ್ಲಿ ವಾದಿರಾಜರು ಹೇಳುವ ಅವಶ್ಯಕತೆಯೇನಿತ್ತು?  ಊ)  “ಮಾಧ್ವಗ್ರಂಥಾನ್” ಶ್ಲೋಕದ ಅನುಸಂಧಾನ ಶ್ಲೋಕದ ವ್ಯಾಖ್ಯಾನವನ್ನು ಹೇಗೆ ಹೇಗೆ ಅರ್ಥೈಸಬಹುದು?  ಋ) ವಾದಿರಾಜರು ಆನೆಗೊಂದಿಯೆಂದು ಹೇಳಿರುವುದು ನಮಗೆ 20ನೇ ಶತಮಾನದ ಅಂತ್ಯಭಾಗದಲ್ಲಿ ಮಾತ್ರ ಪ್ರಚಾರವಾಗಿದೆ.  ಮುಂಚೇಕೆ ಆಗಿಲ್ಲ?  ವಾದಿರಾಜರು ಜಯತೀರ್ಥರ ಬಗ್ಯೆ ಏನನ್ನು ಯಾವ ಗ್ರಂಥದಲ್ಲಿ ಹೇಳಿದ್ದಾರೆ?  ೠ) ತೀರ್ಥಪ್ರಬಂಧದಲ್ಲಿ ಆನೆಗೊಂದಿಯ ಹೆಸರಿದೆ ಮತ್ತು ಮಳಖೇಡದ ಹೆಸರಿಲ್ಲದಿರುವುದು ಆನೆಗೊಂದಿ ಬಣಕ್ಕೆ ಮಾತ್ರ ಸೂಚಕವೇ?  ಅದಕ್ಕೆ ವ್ಯಾಖ್ಯಾನ ಏನನ್ನು ಹೇಳುತ್ತದೆ? ಆ ವ್ಯಾಖ್ಯಾನವೆಲ್ಲವೂ ಉಪಲಬ್ಧವಿದೆಯಾ? ಇದ್ದರೆ ಎಲ್ಲಿದೆ?  ಎ)  ವಾದಿರಾಜರು ತಾವು ಪ್ರತ್ಯಕ್ಷ ಕಂಡದ್ದನ್ನು ಮಾತ್ರ ತೀರ್ಥಪ್ರಬಂಧದಲ್ಲಿ ವರ್ಣಿಸಿದ್ದಾರೆಯೇ ಹೊರತು ಒಂದು ಸ್ಥಳದಲ್ಲಿ ನಿಂತು ಮತ್ತೊಂದು ಸ್ಥಳದಲ್ಲಿರುವ ವ್ಯಕ್ತಿ ವಿಷಯಗಳನ್ನು ನೆನಪಿಸಿಕೊಂಡು ವರ್ಣಿಸಿಲ್ಲ.
ಸಮಾಧಾನ –  ಇಲ್ಲಿ ಯಾರೂ ವಾದಿರಾಜರನ್ನು ಮತ್ತು ತೀರ್ಥಪ್ರಬಂಧವನ್ನೂ, ವಾದಿರಾಜ ವರ್ಣಾನಾಶಕ್ತಿಯನ್ನೂ ಪ್ರಶ್ನಿಸುತ್ತಿಲ್ಲ.  ವಾದಿರಾಜರು ಎಲ್ಲ ಕ್ಷೇತ್ರಗಳಿಗೂ ಹೋಗಿ ದರ್ಶಿಸಿ ತಮ್ಮ ಗ್ರಂಥವನ್ನು ರಚಿಸಿದ್ದಾರೆಂಬುದು ಎಲ್ಲರಿಗೂ ತಿಳಿದ ಮತ್ತು ಸರ್ವಾನುಮತದ ವಿಷಯ.    ಶ್ರೀ ವಾದಿರಾಜರ ಜಯತೀರ್ಥ ಗ್ರಂಥಗಳ ಕುರಿತ ಶ್ಲೋಕ ಈರೀತಿ ಇದೆ :-
ಜಯತೀರ್ಥರು –  जयतीर्थरु –
ಮಾಧ್ವಗ್ರಂಥಾನ್ ಸ್ವಬಂಧೂನಿವ ಸರಸಹೃದಾssಲಿಂಗ್ಯ ವಿಜ್ಞಾತಭಾವ:
ಸಂಯೋಜ್ಯಾಲಂಕೃತಾಭಿ: ಸ್ವಸಹಜಮತಿಸಂಭೂತವಾಗ್ಭಿರ್ವಧೂಭಿ: |
ಕೃತ್ವಾsನೋಕ್ತೀಶ್ಚದಾಸೀರ್ಬುಧಹೃದಯಗೃಹಂ ಪ್ರೌಢವೃತ್ತೀಶ್ಚ ವೃತ್ತೀ:
ದತ್ವಾsನ್ಯೋನ್ಯಾಭಿಯೋಗಂ ಜಯಮುನಿರಸಕೃದ್ವೀಕ್ಷ್ಯ ರೇಮೇ ಕೃತಾರ್ಥ: || ೧೮ ||
माध्वग्रंथान् स्वबंधूनिव सरसहृदाssलिंग्य विज्ञातभाव:
संयोज्यालंकृताभि: स्वसहजमतिसंभूतवाग्भिर्वधूभि: ।
कृत्वाsनोक्तीश्चदासीर्बुधहृदयगृहं प्रौढवृत्तीश्च वृत्ती:
दत्वाsन्योन्याभियोगं जयमुनिरसकृद्वीक्ष्य रेमे कृतार्थ: ॥ १८ ॥
ಜಯತೀರ್ಥರು ಆಚಾರ್ಯ ಮಧ್ವರಿಂದ ರಚಿಸಲ್ಪಟ್ಟ ಬ್ರಹ್ಮಸೂತ್ರಾದಿ ಭಾಷ್ಯಾದಿ ಗ್ರಂಥಗಳನ್ನು ತನ್ನ ಬಂಧುಗಳಂತೆ (“ವರ“ನಂತೆ)  ಸ್ನೇಹಮಯಿ ಹೃದಯದಿಂದ ಚೆನ್ನಾಗಿ ವಿಚಾರಿಸಿ, ಜಯತೀರ್ಥರ ಟೀಕೆಗಳೆಂಬ “ಕನ್ಯೆ“ಯರೆಂಬ ಅಪ್ಪಿಕೊಂಡು, ಗ್ರಂಥಗಳ ಮತ್ತು ಬಂಧುಗಳ ಅಭಿಪ್ರಾಯವನ್ನು ತಿಳಿದವರಾಗಿ, ಅರ್ಥಾತ್ ಮೂಲ ಗ್ರಂಥಗಳ ವಿಚಾರಧಾರೆಯೇ “ಆಲಿಂಗನ” ಮತ್ತು  ಮಾಧುರ್ಯಾದಿ ಗುಣಗಳು, ಶಬ್ದಗಳು, ಅಲಂಕಾರಗಳಿಂದ “ಅಲಂಕರಿಸ“ಲ್ಪಟ್ಟ,  ತಮ್ಮ ಸ್ವಾಭಾವಿಕವಾದ ಬುದ್ಧಿಯಿಂದ ಉತ್ಪನ್ನವಾದ ಟೀಕಾರೂಪವಾದ ವಚನ ವಿಶೇಷಗಳೆಂಬ ಕನ್ಯೆಯರಿಂದ “ವಿವಾಹ“ವನ್ನು ಬೆಳೆಸಿ, ಇತರೆ ವಾದಿಗಳ ಟೀಕೆಗಳನ್ನು “ದಾಸಿಯರ“ನ್ನಾಗಿ ಮಾಡಿ, ಪಂಡಿತರ ಹೃದಯವೆಂಬ “ಮನೆ“ಯನ್ನು ನೀಡಿ, ಪ್ರೌಡ ಪಂಡಿತರ ವ್ಯಾಖ್ಯಾನವೆಂಬ “ಜೀವನೋಪಾಯ” ಗಳನ್ನು ಕೊಟ್ಟು, ಹಲವು ಬಾರಿ, ಪ್ರತಿ ಬಾರಿಯೂ, ಟೀಕಾ ಮತ್ತು ಮೂಲ ಗ್ರಂಥಗಳ ಪರಸ್ಪರ ಸಂಬಂಧವನ್ನು ಅರ್ಥಾತ್ ಆಚಾರ್ಯ ಮಧ್ವರ ಗ್ರಂಥ ಮತ್ತು ಅವುಗಳ ಟೀಕಾ/ಟಿಪ್ಪಣಿಗಳೆಂಬ ಸಾಮರಸ್ಯದ “ಮಧುರ ಬಾಂಧವ್ಯ”  ಇಂತಹ ಅಮೋಘ ಕಾರ್ಯವನ್ನು ಮಾಡಿದ ಜಯಮುನಿಗಳೇ ಕೃತಕೃತ್ಯರಾಗಿ ಸಂತುಷ್ಟರಾದರು.
 ಈ ಮೇಲ್ಕಂಡ ಶ್ಲೋಕದಲ್ಲಾಗಲಿ, ಅದಕ್ಕಾಗಿ ಬಂದ ವ್ಯಾಖ್ಯಾನವಾಗಲಿ, ಜಯತೀರ್ಥರು ವೃಂದಾವನಸ್ಥರಾದ ವಿಚಾರವಾಗಲೀ,  ಮೃತ್ತಿಕಾ ವೃಂದಾವನದ ವಿಚಾರವಾಗಲೀ ಎಲ್ಲೂ ಬಂದಿಲ್ಲ.  ಆಚಾರ್ಯ ಸಾಣೂರು ಭೀಮಭಟ್ಟರು ತಮ್ಮ “ತೀರ್ಥಪ್ರಬಂಧ” ವ್ಯಾಖ್ಯಾನದ ಮುನ್ನುಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.   ಅವರದೇ ವಾಖ್ಯದ ನೇರ ನುಡಿ ಇಲ್ಲಿದೆ –  ತೀರ್ಥಪ್ರಬಂಧ ಪೂರ್ವಪ್ರಬಂಧದ 17ನೇ ಶ್ಲೋಕದಲ್ಲಿ, ರಾಜಧಾನೀ ಜಯತಿ ಸಾ ಗಜಗಹ್ವರಸಂಜ್ಞಿತಾ ಎಂಬುದಾಗಿ ಗಜಗಹ್ವರದ (ಆನೆಗೊಂದಿಯ) ವರ್ಣನೆ ಇದೆ.  ಆದರ ಮುಂದಿನ ಶ್ಲೋಕವು “ಮಾಧ್ವಗ್ರಂಥಾನ್ ಸ್ವಬಂಧೂನಿವ” ಎಂದಿದೆ.  ಇಲ್ಲಿ ಜಯತೀರ್ಥರ ಮಾಧ್ವ ವಾಜ್ಞಯ ಸೇವಾ ವರ್ಣನೆಯಿದೆ.  ವ್ಯಾಖ್ಯಾನಕಾರರರು ’ಗಜಗಹ್ವರೇ ಜಯತೀರ್ಥಂ ವರ್ಣಯತಿ’ ಎಂದು ಅವತಾರಿಕೆಯನ್ನು ಕೊಡುತ್ತಾರೆ.  ಮೈಸೂರು ಪ್ರಾಚ್ಯಗ್ರಂಥಾಗಾರದಲ್ಲಿರುವ ಹಳೆಯ ದೇವನಾಗರೀ ಲಿಪಿಯ ಹಸ್ತಪ್ರತಿಯಲ್ಲಿಯೂ ಹೀಗೆಯೇ ಇದೆ (ಹಸ್ತಪ್ರತಿ ಸಂಖ್ಯೆ C 1670 ಪುಟ 54).  ಆವರ ತೀರ್ಥ ಸಂಚಾರಕ್ರಮಕ್ಕೂ ಇದು ಅನುಗುಣ ವಾಗಿದೆ.  ಏಕೆಂದರೆ ಹಿಂದಿನ ಶ್ಲೋಕಗಳಲ್ಲಿ ತುಂಗಭದ್ರಾ ನದಿ ಮತ್ತು ಅದರ ಪರಿಸರ ಪ್ರದೇಶಗಳ ವರ್ಣನೆಯಿದೆ. 
ಯತ್ರ ಗಜಗಹ್ವರೇ ಜಯಮುನಿ: ಜಯತೀರ್ಥಾಖ್ಯೋ ಮುನಿ:” ಎಂಬ ಅವತಾರಿಕೆಯು ಸೋದಾ ಮಠದಲ್ಲಿರುವ ತಾಳವಾಲೆಯ ಪ್ರಾಚೀನ ತುಳುಲಿಪಿಯ ಹಸ್ತಪ್ರತಿಯಲ್ಲಿದೆ.  ಆ ಆಧಾರಗಳ ಮೇಲಿನಿಂದ ಪರಿಶೀಲಿಸಿದಾಗ ಆಪಾದಮೌಲಿಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್ ಎಂಬಂತೆ ಗುರುಗಳ ವಾಜ್ಞಯ ಆಕೃತಿಯಂತಿರುವ ಗ್ರಂಥಗಳ ಸೇವೆಯ ಪ್ರಶಂಸೆಯೇ ಇಲ್ಲಿದೆ ಎಂದು ಹೇಳುವುದು ಅತ್ಯಂತ ಉಚಿತ ವಾಗಿದೆ. .
ಜಯತೀರ್ಥರ ಮೂಲವೃಂದಾವನ ಅಥವಾ ಮೃತ್ತಿಕಾ ವೃಂದಾವನ ವಿಷಯ ಇಲ್ಲಿ ಪ್ರಸಕ್ತವೇ ಆಗಿಲ್ಲ.  ವಾಸ್ತವಾಗಿ ವಿಚಾರ ಮಾಡಿದರೆ ಗುರುಗಳ ವೃಂದಾವನ ವಿಚಾರವನ್ನು ವಾದಿರಾಜರು ಆಡಿಯೇ ಇಲ್ಲ.  ಅವರು ನುಡಿದಿರುವುದು ಜಯತೀರ್ಥರ ಗ್ರಂಥಗಳ ಸೇವಾಕ್ಕೇ ಮೀಸಲಾದ ಸ್ತೋತ್ರವೇ ಹೊರತು ಬೇರೊಂದಲ್ಲವೆಂಬುದು ಸಾಬೀತಾಗುತ್ತದೆ.  ಜಯತೀರ್ಥರ ಬಗ್ಯೆ ಏನನ್ನೂ ಹೇಳದಿರುವಾಗ ಹೀಗೇಕೆ ವಿಶೇಷ ಚಿತ್ರಣದ ವ್ಯವಸ್ಥೆ?
ಆದರೆ ಕೆಲವರು “ಗಜಗಹ್ವರೇ ಜಯತೀರ್ಥಂ ವರ್ಣಯತಿ” ಎಂಬ ವ್ಯಾಖ್ಯಾನಕ್ಕೆ ಬೇರೆ ಬಣ್ಣ ಕಟ್ಟಿ ಜಯತೀರ್ಥರ ವೃಂದಾವನವನ್ನು ಹೇಳಿದ್ದಾರೆಂಬುದು ಅತ್ಯಂತ ಸೋಜಿಗದ ಸಂಗತಿಯಾಗಿದೆ.    ಆದರೆ ವಾದಿರಾಜರು ತಾವು ವರ್ಣಿಸದೇ ಇದ್ದ ವೃಂದಾವನವನ್ನು ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೇಳಲು ಹೊರಟಿರುವುದು ಕಲ್ಪನೆಯಲ್ಲದೆ ಮತ್ತೇನು?   ನಾರಾಯಣಾಚಾರ್ಯರು ಎಲ್ಲೂ ಅದು ಜಯತೀರ್ಥರ ವೃಂದಾವನದ ಬಗ್ಯೆ ಚಕಾರವೆತ್ತಿಲ್ಲ. ಆದ್ದರಿಂದ ವಾದಿರಾಜರು ಜಯತೀರ್ಥರನ್ನು ಆನೆಗೊಂದಿಯಲ್ಲಿ ವೃಂದಾವನವಿಲ್ಲದಿದ್ದರೂ ಸ್ಮರಿಸುವುದರಲ್ಲಿ ತಪ್ಪಿಲ್ಲ, ಅದನ್ನು ಬೇರೆ ರೀತಿ ಅರ್ಥ ಮಾಡುವ ಅವಶ್ಯಕತೆಯಿಲ್ಲವೆಂಬುದು ತಿಳಿಯುತ್ತದೆ.
ಆಕ್ಷೇಪ – ಛಲಾರಿ ಸಂಕರ್ಷಣಾಚಾರ್ಯರ “ಜಯತೀರ್ಥ ವಿಜಯ”ದ ೫ನೇ ಸರ್ಗದ ೨೨ರಿಂದ ೨೭ನೇ ಶ್ಲೋಕಗಳಲ್ಲಿ “ಜಯತೀರ್ಥ ಮಹಾಚಾರ್ಯಂ ಚಿತ್ರಚರ್ಯಂ ಸಮಾರ್ಚಯನ್ | ವಾದಿರಾಜ: ಪುರಾ ಚಾರು ವಚನಪ್ರಸವೈರಿತಿ |” ಅಂದರೆ ಹಿಂದೆ ವಾದಿರಾಜರು ಅದ್ಭುತ ಮಹಿಮರಾದ ಜಯತೀರ್ಥರನ್ನು ರಮಣೀಯವಾದ ಸುಂದರ ವಾಕ್ ಕುಸುಮಗಳಿಂದೆ “ಮಾಧ್ವಗ್ರಂಥಾನ್” ಎಂಬ ಶ್ಲೋಕದಿಂದ ಪೂಜಿಸಿದರು ಎಂದು ಹೇಳಿದಾಗ ಯಾವ ಸ್ಥಳವೆಂದು ಹೇಳಿಲ್ಲ.  ಅಕಸ್ಮಾತ್ ವಾದಿರಾಜರು ಮಳಖೇಡಾಕ್ಕೆ ಹೋಗಿ ಜಯಮುನಿಗಳನ್ನು ಸ್ತುತಿಸಿದ್ದರೆ, ಛಲಾರಿ ಆಚಾರ್ಯರು ಆ ಸ್ಥಳವನ್ನು ಮಳಖೇಡವೆಂದು ದಾಖಲಿಸುತ್ತಿದ್ದರು.  ಅವರು ಹೇಳಿಲ್ಲದಿರುವುದರಿಂದ ಮಳಖೇಡದಲ್ಲಿ ಜಯತೀರ್ಥರ ವೃಂದಾವನವಿಲ್ಲ”
ಸಮಾಧಾನ – ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೇ ಅರ್ಥ ಮಾಡಿಕೊಳ್ಳಬಯಸಿದರೆ ಹೀಗೇ ಅರ್ಥವಾಗುವುದು.  ಇಲ್ಲಿ ಆನೆಗೊಂದಿವಾದಿಗಳೇ ಹೇಳುವಂತೆ ಛಲಾರಿ ಆಚಾರ್ಯರು ವಾದಿರಾಜಕೃತ  ತೀರ್ಥಪ್ರಬಂಧ ಸ್ತೋತ್ರವನ್ನು ಸ್ಮರಿಸಿದ್ದಾರೆ. ಅವರು ಮಳಖೇಡದಲ್ಲಿ ಇರುವುದನ್ನು ದಾಖಲಿಸಿಲ್ಲ.  ಅದೇ ರೀತಿ ಅವರು ಆನೆಗೊಂದಿಯಲ್ಲಿರುವುದನ್ನೂ ದಾಖಲಿಸಿಲ್ಲವಷ್ಟೇ.  “ದೃಷ್ಟ್ವಾ ಶ್ರೀ ಜಯತೀರ್ಥಾರ್ಯಂ ಸರಸೇನ ಹೃದಾಮಹಾನ್ | ಪೌರ್ಣಬೋಧ ಪ್ರಬಂಧಾರ್ಗ್ಯಾನ್ ಸ್ವಬಂಧೂನಿವ ಸಸ್ವಜೇ |  ಎಂಬ  ಛಲಾರಿ ಆಚಾರ್ಯರ ಸ್ತೋತ್ರದಲ್ಲಿ “ದೃಷ್ಟ್ವಾ ಶ್ರೀಜಯತೀರ್ಥಾರ್ಯಂ” ಎಂಬುದನ್ನು  “ಕಂಡು” ಎಂದು ಅರ್ಥೈಸುವ ಬದಲು “ದೃಷ್ಟ್ವಾ” ಎಂಬುದಕ್ಕೆ ಮನಸಾ ದೃಷ್ಟ್ವಾ ಅಥವಾ ಮನಸಾ ಚಿಂತಿಸಿ ಎಂದೇಕೆ ಅರ್ಥೈಸಬಾರದು.  ಅಲ್ಲದೆ ಒಂದು ಪಕ್ಷ ದೃಷ್ಟ್ವಾ ಎಂಬುದಕ್ಕೆ “ನೋಡಿ” ಎಂದೇ ಅರ್ಥೈಸಿದರೂ ತಪ್ಪಿಲ್ಲ.  ವಿಜಯದಾಸರಿಗೆ ಮಳಖೇಡಕ್ಕೆ ಹೋದಾಗ ರಾವುತನಾಗಿದ್ದ ಜಯತೀರ್ಥರನ್ನು ಕಂಡದ್ದು  ಆನೆಗೊಂದಿ ಪಕ್ಷದವರೇ ಒಪ್ಪಿರುವಾಗ, ಇಲ್ಲಿ ಜಯತೀರ್ಥರ ಮೂಲರೂಪದಲ್ಲೇಕೆ  ಅಪರೋಕ್ಷ ಜ್ಞಾನಿಗಳಾದ  ವಾದಿರಾಜರಿಗೆ ಕಂಡಿರಬಾರದು.  ಛಲಾರಿಯವರಾಗಲೀ, ವಾದಿರಾಜರಾಗಲೀ ಮೂಲ ಅಥವಾ ಮೃತ್ತಿಕಾ ಪ್ರಸ್ಥಾಪವೇ ಮಾಡದಿರುವಾಗ ಇದು ಶುದ್ಧ ಕಲ್ಪನೆಯಲ್ಲದೆ ಮತ್ತೇನು?
ಅಂಗೀಕಾರವಾದ –  ಹಿಂದಿನ ಪ್ರಶ್ನೆಗಳಿಗೆ ಉತ್ತರಿಸಿದ ತರುವಾಯ, ನಾವೊಂದು ಅಂಗೀಕಾರವಾದವನ್ನು ಒಪ್ಪಿಕೊಂಡು ಮುಂದುವರೆಯೋಣ.  ಆನೆಗೊಂದಿ ಗುಂಪಿನವರ ಸಮಾಧಾನಕ್ಕೆ ಅವರು ಹೇರಿರುವ ಆಕ್ಷೇಪವಾದ ವಾದಿರಾಜರ ಮಾತೆಂಬ ಕಲ್ಪನೆಯನ್ನು ಒಪ್ಪಿದರೂ ಕೂಡ ಅವರ ನಿಲುವಿಗೆ ಬಲ ಬರುವುದಿಲ್ಲ.  ಆನೆಗೊಂದಿಯಲ್ಲಿ ವಾದಿರಾಜರು ಹೇಳಿದ್ದಾರೆಂದುಕೊಂಡರೂ, ಅವರು ಅಲ್ಲಿರುವ ಯಾವ ವೃಂದಾವನವನ್ನು ಜಯತೀರ್ಥರೆಂದು ಗುರುತಿಸಿದ್ದಾರೆ? ನಾರಾಯಣಾಚಾರ್ಯರಾಗಲಿ, ವಾದಿರಾಜರಾಗಲೀ ಯಾರೂ ಜಯತೀರ್ಥರದ್ದೆಂದು ಯಾವ ವೃಂದಾವನವನ್ನು ಹೇಳಿದ್ದಾರೆ.?   ಅದು ಪದ್ಮನಾಭತೀರ್ಥರದ್ದೋ, ರಘುವರ್ಯರದ್ದೋ, ವ್ಯಾಸರಾಜರದ್ದೋ, ಇತ್ಯಾದಿ…   ಆದರೆ ಕೆಲವೊಂದು ದಾಖಲೆಗಳು ಮಾಧವತೀರ್ಥರ ವೃಂದಾವನ ಆನೆಗೊಂದಿಯಲ್ಲಿದೆಯೆಂದಿದ್ದಾರೆ.   ಜಗನ್ನಾಥದಾಸರ ಶಿಷ್ಯರಾದ ಪ್ರಾಣೇಶದಾಸರೂ ಸಹ ತಮ್ಮ “ನೋಡಿದೆ ನಾ ಧನ್ಯನಿಂದಿಗೆ” ಕೀರ್ತನೆಯಲ್ಲಿ ಮಾಧವತೀರ್ಥರ ವೃಂದಾವನವು ತುಂಗ ಭದ್ರಾ ತೀರ್ದಲ್ಲಿರುವುದನ್ನು ಹೇಳಿದ್ದಾರೆ.    ಆದರೆ ಈಗ ಮಾಧವತೀರ್ಥರ ವೃಂದಾವನ ಮಣೂರಿನಲ್ಲಿದೆಯೆಂದು ಹೇಳಲಾಗುತ್ತಿದೆ.  ಅಷ್ಟೇ ಅಲ್ಲ ಶ್ರೀ ಸುಧೀಂದ್ರರ ಗುರುಗಳಾದ ಶ್ರೀ ಸುರೇಂದ್ರ ತೀರ್ಥರ ವೃಂದಾವನವನ್ನೂ ಹಂಪೆಯಲ್ಲಿದೆಯೆಂದು ಇತ್ತೀಚೆಗೆ ಹೇಳಲಾಗುತ್ತಿದೆ (ಪಂಚಾಂಗದಲ್ಲಿ ಮಧುರೈ ಎಂದು ಅಚ್ಚಾಗಿದೆ).  ಹೀಗಿರುವಾಗ ವಾದಿರಾಜರು ಯಾವ ವೃಂದಾವನವನ್ನು ಜಯತೀರ್ಥರದ್ದೆಂದು ಗುರುತಿಸಿದರು? ಅಥವಾ ಇಂದಿನ ೨೦ನೇ ಶತಮಾನದವರು ಗುರುತಿಸಿದ್ದಾರೆ.
 ವಾದಿರಾಜರ ತೀರ್ಥಪ್ರಬಂಧ ಸ್ತೋತ್ರ –
ರಾಜಧಾನೀ ಜಯತಿ ಸಾ ಗಜಗಹ್ವರ ಸಂಜ್ಞಿತಾ: |
ಯತ್ರ ಭಾಂತಿ ಗಜಾ: ಮಾಧ್ವರಾದ್ಧಾಂತಧರಣೀಧರಾ: |
ಗಜಗಹ್ವರ ಅಥವಾ ಆನೆಗೊಂದಿ ಎಂಬ ಹೆಸರಿನ ಆ ಹಂಪೆಯ ಅಥವಾ ವಿಜಯನಗರದ ರಾಜಧಾನಿಯು ಉತ್ಕೃಷ್ಟ ವಾಗಿದೆ.  ಯಾವ ಆನೆಗೊಂದಿಯಲ್ಲಿ ಶ್ರೀ ಮಧ್ವಾಚಾರ್ಯರ ಸಿದ್ಧಾಂತವೆಂಬ ಭೂಮಿಯನ್ನು ಧರಿಸಿರುವ ಗಜಗಳು ಅಂದರೆ ವಿಶಿಷ್ಟವಾದ ಆನೆಗಳಂತಹ ದಿಗ್ಗಂತಿ ಪಂಡಿತರ “ಗುಹೆ” ಎಂಬ ಅನ್ವರ್ಥ ನಾಮವನ್ನು ಹೊಂದಿರುವ ರಾಜಧಾನಿಯು ಶೋಭಿಸುತ್ತಿವೆ.
ಶಂಕೆ – ವ್ಯಾಖ್ಯಾನಕಾರರು ಮಧ್ವಸಿದ್ಧಾಂತ ಧರಣೀಧರಾ: ಪದ್ಮನಾಭತೀರ್ಥ ಶ್ರೀಮಚ್ಚರಣ ಪ್ರಭೃತಯ: ಶ್ರೀಮನ್ಮಧ್ವಾಚಾರ್ಯ ಶಿಷ್ಯ ಪ್ರಶಿಷ್ಯ ಭೂತಾ: ಸಂನ್ಯಾಸಿನ: ಏವ ಗಜಾ: ಎಂದಿದ್ದಾರೆ.  ಆ ಗಜಗಳು ಯಾರು ಎಂದರೆ ಪದ್ಮನಾಭತೀರ್ಥರು, ಮತ್ತು ಮಧ್ವರ ಪ್ರಶಿಷ್ಯರು ಬೇರೆ ಯಾರೂ ಅಲ್ಲಿಲ್ಲದಿರುವುದರಿಂದ ಜಯತೀರ್ಥರೇ ಇರಬೇಕು.
ಸಮಾಧಾನ –  ಶ್ರೀ ನರಹರಿತೀರ್ಥರು ಪದ್ಮನಾಭತೀರ್ಥರ ನಂತರ ಪೀಠವನ್ನೇರಿದ್ದರಿಂದ ಅವರು ಆಚಾರ್ಯರ ಪ್ರಶಿಷ್ಯರಾಗುತ್ತಾರೆ, ಜಯತೀರ್ಥರಲ್ಲ.  ಆದ್ದರಿಂದ ಪ್ರಶಿಷ್ಯರೆಂದರೆ ಬಹುಶ: ಹಂಪೆಯಲ್ಲಿರುವ ನರಹರಿತೀರ್ಥರಿರ ಬಹುದು, ಜಯತೀರ್ಥರಲ್ಲ.  ಜಯತೀರ್ಥರು ಮಾತ್ರ ಪ್ರಶಿಷ್ಯರೆಂದು ಹೇಳಿಕೊಂಡಿರುವ ಆನೆಗೊಂದಿವಾದಿಗಳು ಅಲ್ಲಿರುವ ಬಹುವಚನವನ್ನು ಮರೆತಿದ್ದಾರೆ.  ಹಾಗೆ ನೋಡಿದರೆ ಅಲ್ಲಿರುವ ಎಲ್ಲ ವೃಂದಾವನಗಳೂ ಸಹ ಪ್ರಶಿಷ್ಯರೇ.  ಅಲ್ಲಿ ಒಟ್ಟು ಒಂಭತ್ತು ವೃಂದಾವನವಿರುವಾಗ ಕೇವಲ ಒಬ್ಬರನ್ನೇ ಪ್ರಶಿಷ್ಯರೆನ್ನುವುದು ಎಷ್ಟು ಸರಿ.  ಆದ್ದರಿಂದ ಇದೂ ಕೂಡ ತಮ್ಮ ಇಷ್ಟಸಾಧನೆಗೇ ಹೆಣೆದ ಕಥೆಯಲ್ಲದೇ ಮತ್ತೇನು?  ಸರಿಯಾದ ಅರ್ಥವನ್ನು ತಿರುಚಿ ಅರ್ಥೈಸಲು ಪ್ರಯತ್ನಿಸಿದರೆ ಯಾರು ಹೊಣೆ?
ಶಂಕೆ –  ನಾರಾಯಣಾಚಾರ್ಯರು ಜಯತೀರ್ಥರ ಮೂಲವೃಂದಾವನದ ಬಗ್ಯೆ ಬರೆದರೆ ಅವರಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ,  ಆದ್ದರಿಂದ ಅವರು ಪೂರ್ವಾಗ್ರಹಪೀಡಿತರಾಗುವ ಕಾರಣವಿಲ್ಲ.  ಅವರ ವಿವರಣೆ ಯಥಾರ್ಥರೂಪವೇ ಆಗಿದೆ.
ಸಮಾಧಾನ –  ಖಂಡಿತ,  ನಾರಾಯಣಾಚಾರ್ಯರನ್ನು ಯಾರು ಅನುಮಾನಿಸುತ್ತಿಲ್ಲ.  ಅವರು ನೀಡಿದ ವಾಕ್ಯಕ್ಕೆ ನಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುವವರಿಗೆ ಲಾಭ ನಷ್ಟವೇ ಹೊರತು ಅವರಿಗಲ್ಲ ಎನ್ನುವುದು ಗಮನಿಸಬೇಕಾದ ವಿಷಯ.   ನಾರಾಯಣಾಚಾರ್ಯರು ನುಡಿಯದ ‘ವೃಂದಾವನ’ ಶಬ್ಧ ಪ್ರಯೋಗ ತಕ್ಕದಲ್ಲ.  ಆದ್ದರಿಂದ ಮಲಖೇಡದಲ್ಲೇ ಜಯತೀರ್ಥರ ವೃಂದಾವನವಿರುವುದೇ ಹೊರತು ಆನೆಗೊಂದಿಯಲ್ಲ ಎಂಬುದು ಸುಸ್ಪಷ್ಟ.
“ಮಾಧ್ವಗ್ರಂಥಾನ್ ಸ್ವಬಂಧೂನಿವ” ಶ್ಲೋಕಕ್ಕೆ  ನಾರಾಯಣಾಚಾರ್ಯರ ವ್ಯಾಖ್ಯಾನ :  
ಯಥಾ ಗೃಹಸ್ಥ: ಸ್ವಗೃಹಾಗತ ಜ್ಞಾತಿ ಪುರುಷಾಣಾಮುದ್ವಾಹಾಪೇಕ್ಷಾರೂಪ ಮನೋಭಾವಂ ಜ್ಞಾತ್ವಾ ಸಂಬಂಧಯೋಗ್ಯ ಸ್ವಸಹೋದರ ಪುತ್ರೀರೇವ ವಿವಾಹ್ಯ ತಾಸಾಂ  ದಾಸೀಗೃಹ ಕ್ಷೇತ್ರಾದಿಕಂ ದತ್ವಾ ವಧೂ ವರಾಣಾಂ  ಅನ್ಯೋನ್ಯ ಪ್ರೇಮ ಪೂರ್ವಕ ಸಂಸಾರಂ ದೃಷ್ವಾವ ಸುಖೀಭವತಿ ತದ್ವದಿತಿ ಭಾವ: |
ಸ್ವಗೃಹಾಗತಾನ್ ಸ್ವಜ್ಞಾತೀನಿವ ಗ್ರಂಥಾನಾಂ ಆಚಾರ್ಯ ಮುಖ ಕಮಲೋದ್ಭೂತತ್ವಾತ್ ಸ್ವಪರಮಗುರೂಣಾಂ                              ಆಚಾರ್ಯ ಕರ ಕಮಲೋದ್ಭೂತತ್ವಾಚ್ಚ ಉಭಯೇಷಾಂ ಏಕಮೇಕ ಕುಲೋದ್ಭೂತತ್ವೇನ ಸ್ವಬಂಧುಮಿತಿ ಭಾವ: |
ಜಯಮುನಿಕೃತಟೀಕಾಂ ಸದಾ ಪರಿಶೀಲಯಂತೀತಿ ಭಾವ: |

ದಶಪ್ರಕರಣ ಭಾಷ್ಯಾದಿ ಮೂಲಗ್ರಂಥಾನಾಮಪಿ ಬಹುತ್ವಾತ್ ತಟ್ಟಿಕಾನಾಮಪಿ ಬಹುತ್ವಾದುಭಯತ್ರಾಪಿ ಬಹುವಚನಂ |                                ಬಹೂನಾಂ ವರಾಣಾಂ ಅನೇಕ ಕನ್ಯಾ ಪ್ರದಾತೃ ಪುರುಷವತ್ ಬಹುಗ್ರಂಥ ಟೀಕಾ ಕರಣೇನ ಟೀಕಾಕಾರಾಣಾಂ ಮಹಾಸಾಹಸಿಕತ್ವ                ಪ್ರದರ್ಶನಾರ್ಥಂ ವಧೂವರತ್ವ ಘಟನಾರ್ಥಮೇವ ಸ್ವಗ್ರಂಥಾನಾಮೇವಂ ಸ್ತ್ರೀಲಿಂಗ ಪದೇನೋಕ್ತಿ: |                                                               ಆಚಾರ್ಯ ಕೃತ ಗ್ರಂಥಾನಾಂ ಪುಲ್ಲಿಂಗಪದೇನೋಕ್ತಿರಿತ್ಯಪಿ ದ್ರಷ್ಟವ್ಯಂ |

ಕೆಲವರು ನಾರಾಯಣಾಚಾರ್ಯರು ಯಥಾ ’ಸ್ವಗೃಹಸ್ಥ:’ – ಪದ ಪ್ರಯೋಗ ಮಾಡಿರುವುದರಿಂದ ಆನೆಗೊಂದಿಯನ್ನು ಜಯತೀರ್ಥರ ಮನೆಯೆಂದು ಪ್ರಯೋಗಿಸಲು ಪ್ರಯತ್ನಿಸಿ ಜಯತೀರ್ಥರ ವೃಂದಾವನ ಆನೆಗೊಂದಿಯಲ್ಲಿದೆಯೆಂದು ಹೇಳಲು ಪ್ರಯತ್ನಿಸಿದ್ದಾರೆ.  ಆದರೆ ’ಸ್ವಗೃಹಸ್ಥ:’  ಪದಕ್ಕೆ ಸ್ವಂತ ಮನೆಯೆಂದು ಹೇಗೆ ಅರ್ಥವಾಗುತ್ತದೆ?   ಅದರ ಹಿಂದಿನ ಮಂದಿನ ಪದ ಮತ್ತು ವಾಕ್ಯಗಳನ್ನ  ನೋಡಿದಾಗ ಅದು ಪಂಡಿತರ ಹೃದಯವೆಂಬ ಮನೆ ಎಂಬ ಅರ್ಥ ಬರುತ್ತದೆ.    ಮೂಲ ಶ್ಲೋಕದಲ್ಲಿರುವ ಪದ “ಬುಧಹೃದಯಗೃಹಂ” – ಅಂದರೆ ವಿದ್ವಾಂಸರ ಹೃದಯವೆಂಬ ಮನೆಯನ್ನು ದತ್ವಾ – ನೀಡಿ, ಎಂದಿರುವಾಗ ನಾರಾಯಣಾಚಾರ್ಯರೇಕೆ ತಪ್ಪು ಅರ್ಥ ಮಾಡುತ್ತಾರೆ.   ತಪ್ಪು ನಮ್ಮ ಕಲ್ಪನೆಯಲ್ಲಿರುವಾಗ ನಾರಾಯಣಾಚಾರ್ಯರ ಪದಲಾಲಿತ್ಯದಲ್ಲೇಕೆ ಅನುಮಾನ?   ಅಷ್ಟೇ ಅಲ್ಲ – ವ್ಯಾಖ್ಯಾನವಿರುವುದು  –  ಯಥಾ ಗೃಹಸ್ಥ: ಸ್ವಗೃಹಾಗತ –  ಇಲ್ಲಿ ಹೇಗೆ ಗೃಹಸ್ಥನು ಸ್ವಗೃಹಕ್ಕೆ ಬಂದ  ಜ್ಞಾನಿಗಳನ್ನು ಎಂದು ಅರ್ಥ ಮಾಡಿದನೋ ಹಾಗೆ, ಎಂಬ ಅರ್ಥವೇ ಬರುತ್ತದೆಯೇ ಹೊರತು, ಸ್ವಗೃಹ – ಎಂದರೆ ಇಲ್ಲಿ ಅರ್ಥ ಮಾಡಬೇಕಿರುವುದು ಯಾರಲ್ಲಿ, ಜ್ಞಾನಿಗಳ ಸ್ವಗೃಹದಲ್ಲಿಯೇ ಹೊರತು ಜಯತೀರ್ಥರದ್ದೆಂದು ತಪ್ಪು ಅರ್ಥಮಾಡಿರುವುದು ತಿಳಿದುಬರುತ್ತದೆ.
ಪದೇ ಪದೇ ಶ್ರೀ ವಿಶ್ವೋತ್ತಮತೀರ್ಥರ ಹೆಸರನ್ನು ಹೇಳಿ ವಾದಿರಾಜರು ಆನೆಗೊಂದಿಯಲ್ಲಿದ್ದಾರೆಂದು ಹೇಳಿರುವುದು ಎಷ್ಟು ಸಮಂಜಸ? ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಸಲ ಹೇಳಿದರೆ, ಅವರಲ್ಲಿಯೇ ಅನುಮಾನ ವ್ಯಕ್ತವಾಗುತ್ತದೆಯಲ್ಲವೇ? ವಿಶ್ವೋತ್ತಮ ತೀರ್ಥರು ಹೇಳಿದ್ದಾರೆ – ನಾರಾಯಣಾಚಾರ್ಯರು ವಚನದಂತೆ “ಜಯತೀರ್ಥಂ ವರ್ಣಯತಿ ಗಜಗಹ್ವರೇ”. ಇದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಗಜಗಹ್ವರದಲ್ಲಿ ಜಯತೀರ್ಥರನ್ನುಆನೆಗೊಂದಿಯಲ್ಲಿ ಹಲವಾರು ದಿಗ್ಗಜಗಳನ್ನು ಸ್ಮರಿಸುವಾಗ ಸ್ಮರಿಸಿದರೆ ತಪ್ಪೇನು?  ನಾವು ಪ್ರತಿನಿತ್ಯ ಜಯತೀರ್ಥರಿಗೆ ಮನೆಯಲ್ಲೂ,  ಶ್ರೀ ಮಂತ್ರಾಲಯ ಯತಿಗಳು ಮಂತ್ರಾಲಯದಲ್ಲೂ, ಅದೇ ರೀತಿ ಎಲ್ಲ ಯತಿಗಳೂ ಅವರವರ ಸ್ಥಳದಲ್ಲಿ ಜಯತೀರ್ಥರಿಗೆ ಹಸ್ತೋದಕವನ್ನು ನೀಡುವುದಿಲ್ಲವೇ.  ನಾವು ಮನೆಯಲ್ಲಿ ಶ್ರೀ ಜಯತೀರ್ಥರಿಗೆ ಹಸ್ತೋದಕ ನೀಡುವಾಗ ನಮ್ಮ ಮನಸ್ಸಿನಲ್ಲಿ ಚಿತ್ರಣ ಬರುವುದು ಅವರ ಮೂಲ ವೃಂದಾವನ. ಅದನ್ನು ನೆನೆಸಿಕೊಂಡೇ ಚಿತ್ರೈ: ಪದೈಶ್ಚ ಶ್ಲೋಕ ಹೇಳಿ ಹಸ್ತೋದಕ ನೀಡುತ್ತೇವೆ.  ಹಾಗೆಂದು ಜಯತೀರ್ಥರ ಮೂಲವೃಂದಾವನ ಸನ್ನಿಧಾನವನ್ನು ನಮ್ಮ ಮನೆಯಲ್ಲಿ ಹೇಳಲಾಗುತ್ತದೆಯೇ? ಹಾಗಾದರೆ ಜಯತೀರ್ಥರ ವೃಂದಾವನ ಬೇರೆಡೆಯಿರುವುದೆಂದು ನಿರ್ಣಯಿಸುವುದು ಎಷ್ಟು ಸಮರ್ಥನೀಯ?
ಆನೆಗೊಂದಿಯಲ್ಲಿ ಅಷ್ಟೊಂದು ಯತಿ ಸಮೂಹವನ್ನು ಕಂಡ ವಾದಿರಾಜರು ಮಧ್ವ ಮತ ಸ್ವರೂಪೋದ್ಧಾರಕರಾದ ಜಯತೀರ್ಥರನ್ನು ಸ್ಮರಿಸುವುದು ತಪ್ಪೇ?  ಮೊದಲೇ ಉತ್ಪ್ರೇಕ್ಷಾ ಚತುರರಾದ ವಾದಿರಾಜ ಶ್ರೀಪಾದಂಗಳವರು ಅಲ್ಲಿ ಜಯತೀರ್ಥರನ್ನು ಸ್ಮರಿಸಿರ ಬಹುದಲ್ಲವೇ?  ಇಷ್ಟಾಗಿ ಅವರು ಎಲ್ಲೂ ವೃಂದಾವನ ಪದವನ್ನೇ ಪ್ರಯೋಗಿಸಿಲ್ಲ ಆದ್ದರಿಂದ ಮೂಲ ಅಥವಾ ಮೃತ್ತಿಕಾ ಅಥವಾ ಸನ್ನಿಧಾನವೆಂಬ ಕಪೋಲ ಕಲ್ಪನೆ ನಮ್ಮದಲ್ಲದೆ ವಾದಿರಾಜರದ್ದೆಂದು ತಪ್ಪು ಭಾವನೆ ನಮ್ಮಲ್ಲಿ ಮೂಡಿಸಿದವರು ಇಂದಿನ ಪೀಳಿಗೆ ಯವರೇಹೊರತು ವಾದಿರಾಜರಲ್ಲ.  ಶ್ರೀ ವಾದಿರಾಜರು ನವವೃಂದಾವನ ದಲ್ಲಿದ್ದ ಎಲ್ಲ ಯತಿಗಳ ಸಮೂಹವನ್ನು ನೋಡಿ ಸಂತಸಗೊಂಡು, ಪದ್ಮನಾಭಾದಿ ಯತಿಗಳ ಸ್ಮರಿಸುತ್ತ, ಇನ್ನಿತರ ಯತಿಗಳಿಗೆಲ್ಲ ಪ್ರೇರಕರಾದ ಜಯತೀರ್ಥರನ್ನು ಸ್ಮರಿಸಿ ಅವರ ವೃಂದಾವನವನ್ನು ಉತ್ಪ್ರೇಕ್ಷಾ ಮಾಡಿ, (ಈ ಶ್ಲೋಕದಲ್ಲಿ ವಾದಿರಾಜರು ಮಾಡಿರುವುದೂ ಉತ್ಪ್ರೇಕ್ಷೆಯೇ) ಉತ್ರೇಕ್ಷಾಲಂಕಾರದಲ್ಲಿ ಜಯತೀರ್ಥರನ್ನು ಸ್ಮರಿಸಿರಬಹುದು. ನಮ್ಮ ತಪ್ಪು ಗ್ರಹಿಕೆಗೆ ವಾದಿರಾಜರನ್ನು ಎಳೆದು ತಂದಿದ್ದು ಹಾಸ್ಯಾಸ್ಪದವಾಗಿದೆ.
ಅಷ್ಟೇ ಅಲ್ಲ. ವಾದಿರಾಜರು ಹಲವಾರು ದೇವರನಾಮಗಳನ್ನೂ, ಸ್ತೋತ್ರಗಳನ್ನೂ ಮಾಡಿದ್ದಾರೆ.  ಆದರೆ ಜಯತೀರ್ಥರನ್ನು ಮೂಲವೆಂದಾಗಲಿ, ಮೃತ್ತಿಕೆ ಎಂದಾಗಲೀ, ಅಥವಾ ಸ್ಥಳದ ಹೆಸರಿನಿಂದಾಗಲೀ ಹೇಳಿದ ಸ್ತೋತ್ರವಿದ್ದರೆ, ದೇವರನಾಮಗಳು ಲಭ್ಯವಿದೆಯೇ?
ಶಂಕೆ – ಜಯತೀರ್ಥರು ಪದ್ಮನಾಭತೀರ್ಥರಿಗೆ ಅಭಿಮುಖವಾಗಿ ಇದೆ.  ಇಲ್ಲಿ ತಾರತಮ್ಯವನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ.  ಅಕಸ್ಮಾತ್ ಅದು ರಘುವರ್ಯರದ್ದಾಗಿದ್ದರೆ ಆ ವೃಂದಾವನ ಕವೀಂದ್ರತೀರ್ಥರ, ವಾಗೀಶತೀರ್ಥರ ಸಾಲಿನಲ್ಲಿರುತ್ತಿತ್ತು.
ಸಮಾಧಾನ – ಜಯತೀರ್ಥರ ವೃಂದಾವನ ಅವರ ಗುರುಗಳಾದ ಅಕ್ಷೋಭ್ಯತೀರ್ಥರ ವೃಂದಾವನಕ್ಕೆ ಅಭಿಮುಖವಾಗಿ ಅಥವಾ ಹತ್ತಿರವಿದೆ.  ಆನೆಗೊಂದಿವಾದಿಗಳ ವಿವರಣೆಯನ್ನೇ ಅನುಸರಿಸಿದರೆ, ವ್ಯಾಸರಾಜರ ವೃಂದಾವನದ ಎದುರು ಶ್ರೀನಿವಾಸತೀರ್ಥರದ್ದು ಇರಬೇಕಿತ್ತು.  ಆದರೆ ವ್ಯಾಸರಾಜರ ಎದುರಿಗೆ ಇರುವುದು ಸುಧೀಂದ್ರರ ವೃಂದಾವನ.  ಶ್ರೀನಿವಾಸ ತೀರ್ಥರ ವೃಂದಾವನವಿರುವುದು ಕವೀಂದ್ರ ತೀರ್ಥರ ವೃಂದಾವನದ ಅಭಿಮುಖವಾಗಿ (ಇದು ಅವರೇ ಕೊಟ್ಟಿರುವ ಫೋಟೋದಲ್ಲಿರುವಂತೆ). ಗೋವಿಂದ ವಡೆಯರ ವೃಂದಾವನ ವಾಗೀಶತೀರ್ಥರ ಅಭಿಮುಖವಾಗಿಯೂ, ಪದ್ಮನಾಭತೀರ್ಥರ ಹಿಂದೆಯೂ ಇದೆ.  ಆದ್ದರಿಂದ ಇಲ್ಲಿ ವೃಂದಾವನಗಳಾಗಿರುವುದು, ಅವರ ತಾರತಮ್ಯದಿಂದಲ್ಲ, ಅವರ ಶಿಷ್ಯತ್ವದಿಂದಲ್ಲ, ಅವರವರ ಕಾಲದಲ್ಲಿ ಎಲ್ಲೆಲ್ಲಿ ಅನುಕೂಲವಿತ್ತೋ ಅಲ್ಲೇ ವೃಂದಾವನ ಮಾಡಿದ್ದಾರೆಯೇ ಹೊರತು ಆನೊಗೊಂದಿವಾದಿಗಳ ವಿಚಿತ್ರ ಸಂಶೋಧನೆಯಂತಲ್ಲ.   ಅಷ್ಟೇ ಅಲ್ಲ.  ನವವೃಂದಾವನದಲ್ಲಿರುವ ಯಾವುದೇ ವೃಂದಾವನವೂ ಒಂದೇ ಗಾತ್ರವೂ, ಒಂದೇ ಆಕಾರವೂ, ಒಂದೆ ರೀತಿಯ ಚಿತ್ರಿತವೂ  ಆಗಿಲ್ಲ.  ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷಣವಿದೆ.  ಅಷ್ಟೇ ಅಲ್ಲ.  ಶ್ರೀಯುತ NAPS ರಾವ್ ಅವರು (ಅದೇ ಪುಸ್ತಕದಲ್ಲಿ) ಸಂದೇಹಿಸಿರುವಂತೆ ಆಗಿನ ಕಾಲದಲ್ಲಿ ನವವೃಂದಾವನವಿರುವ ಸ್ಥಳದಲ್ಲಿ ಹಲವಾರು ದೊಡ್ಡ ಬಂಡೆಗಳಿದ್ದವು, ಅದನ್ನು ಶ್ರೀ ವ್ಯಾಸರಾಜರು ತಮ್ಮ ಕಾಲದಲ್ಲಿ ತೆರವು ಮಾಡಿ ಅಣಿಗೊಳಿಸಿದ್ದಾರೆಂದಿದ್ದಾರೆ.  ಆದ್ದರಿಂದ ಬಹುಶ: ಪದ್ಮನಾಭತೀರ್ಥರ ವೃಂದಾವನದ ಎದುರಿಗೆ ಇದ್ದ ಬಂಡೆಯನ್ನು ನಂತರದ ದಿನಗಳಲ್ಲಿ ತೆಗೆದಾಗ ಜಾಗ ಖಾಲಿ ಇದ್ದದ್ದರಿಂದ ರಘುವರ್ಯರನ್ನು ಅಲ್ಲಿ ಪ್ರತಿಷ್ಟಾಪಿಸಿರಬಹುದಲ್ಲವೇ? ಆ ಆ ಕಾಲದಲ್ಲಿ ಯಾರ್ಯಾರು ಶಿಲ್ಪಿಗಳು ಆ ವೃಂದಾವನವನ್ನು ಕಟ್ಟಿದರೋ, ಅವರು ಅದಕ್ಕೆ ತಕ್ಕಂತೆ ಎಲ್ಲೆಲ್ಲಿ ಜಾಗವಿತ್ತೋ ಅಲ್ಲೇ ವೃಂದಾವನ ಮಾಡಿದ್ದಾರೆಯೇ ಹೊರತು ಅಭಿಮುಖ, ಹಿಮ್ಮುಖ, ಪಕ್ಕ, ಗಿಕ್ಕ ಎಂಬ ಚಿತ್ರಣ ಬರೀ ಕಪೋಲ ಕಲ್ಪನೆಯಷ್ಟೆ.

 

ಅಧ್ಯಾಯ ೪  ಕಿಟತಟಿನಿ – ಎಲ್ಲಿದೆ?  ಕಂಡವರಾರು?

ಆನೆಗೊಂದಿವಾದಿ – ಪದ್ಮನಾಭಂ ಜಯಮುನಿಂ ಕವೀಂದ್ರಂ ವಾಕ್ಪತಿಂ ತಥಾ |
ಗೋವಿಂದಭಿಕ್ಷುಕಂ ಚೈವ ವ್ಯಾಸರಾಜಂ ತಥೈವ ಚ |
ಶ್ರೀನಿವಾಸಂ ರಾಮತೀರ್ಥಂ ಸುಧೀಂದ್ರಂ ಭಾಸ್ಕರದ್ಯುತಿಂ |
ನವವೃಂದಾವನೇ ಧ್ಯಾಯೇನ್ನವಭಕ್ತಿ ಪ್ರಚೋದಕಾನ್ |
ಈ ಶ್ಲೋಕದಲ್ಲಿ ಜಯಮುನಿಗಳು ಪದ್ಮನಾಭತೀರ್ಥಾದಿಗಳೊಂದಿಗೆ ನವವೃಂದಾವನದಲ್ಲಿದ್ದಾರೆಂದು ಸ್ಪಷ್ಟವಾಗಿದೆ.

ಮಲಖೇಡವಾದಿ – ಈ ಶ್ಲೋಕ ಎಲ್ಲಿದೆ? ಯಾರು ಬರೆದದ್ದು? ಯಾವ ಗ್ರಂಥದಲ್ಲಿ?
ಆನೆಗೊಂದಿವಾದಿ – ಈ ಶ್ಲೋಕ ಶ್ರೀ ಭಾಷ್ಯದೀಪಿಕಾಚಾರ್ಯರೆಂದು ಪ್ರಸಿದ್ಧರಾದ ಜಗನ್ನಾಥತೀರ್ಥರು ತಮ್ಮ “ಕಿಟತಟಿನಿ” ಎಂಬ ಗ್ರಂಥದಲ್ಲಿ ಬರೆದಿದ್ದಾರೆ.
ಮಲಖೇಡವಾದಿ – ಸಂತೋಷ. ಈ ಗ್ರಂಥವನ್ನೇ ನಾವು ಕೇಳಿಲ್ಲ. ಇದು ಅಶ್ರುತ ಪೂರ್ವ. ಈ ಗ್ರಂಥದಲ್ಲಿ ಎಷ್ಟು ಶ್ಲೋಕಗಳಿವೆ? ಈ ಗ್ರಂಥದ ವಿಷಯವೇನು? ನೀವು ಪ್ರಕಟಿಸಿದ ಶ್ಲೋಕ ಆ ಗ್ರಂಥದಲ್ಲಿ ಎಲ್ಲಿದೆ?
ಆನೆಗೊಂದಿವಾದಿ – ಸ್ವಾಮಿ, ನೀವು ಕೇಳಿಲ್ಲವೆಂದರೆ ನಾವೇನು ಮಾಡಕ್ಕಾಗತ್ತೆ. ಆ ಗ್ರಂಥದಲ್ಲಿರುವ ವಿಷಯವೆಲ್ಲ ಕಾಲಗರ್ಭದಲ್ಲಿ ಕೈತಪ್ಪಿ ಹೋಗಿರಬಹುದು. ಮುಂದೆ ಎಂದಾದರೂ ಅದು ನಮಗೆ ದೊರೆತರೆ ಖಂಡಿತ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ಆ ಶ್ಲೋಕ ಮಾತ್ರ ನಿಜ.
ಮಳಖೇಡವಾದಿ – ಇದು ಜಾರಿಕೆಯ ಉತ್ತರವಿರಬಹುದೇ? ಅಶೃತಪೂರ್ವವಾದ ಈ ಗ್ರಂಥದ ಹೆಸರನ್ನು ಹೇಳಿ ತಪ್ಪಿಸಿಕೊಳ್ಳುವಂತಿದೆ ನಿಮ್ಮ ವರ್ತನೆ.
ಆನೆಗೊಂದಿವಾದಿ – ಸ್ವಾಮಿ, ಇದನ್ನು ಟಿ.ಕೆ.ವಿ ಮತ್ತು ಬಿ.ಎನ್.ಕೆ ಅವರೂ ಹೇಳಿದ್ದಾರೆ?
– ತಮ್ಮ ಶ್ರೀಮಜ್ಜಯತೀರ್ಥರ ಮೂಲವೃಂದಾವನ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.
ಮಳಖೇಡವಾದಿ – ಶ್ರೀ ಬಿ.ಎನ್.ಕೆ ಅವರು ತಮ್ಮ “ದ್ವೈತವೇದಾಂತ ವಾಜ್ಮ್ಞಯ ಹಾಗೂ ಇತಿಹಾಸ” (B.N.K. Sharma’s book The History of the Dvaita School of Vedanta )  ಎಂಬ ಪುಸ್ತಕದಲ್ಲಿ ಭಾಷ್ಯದೀಪಿಕಾಚಾರ್ಯರು ರಚಿಸಿದ ಗ್ರಂಥಗಳನ್ನು ಹೆಸರಿಸಿದ್ದಾರೆ. ಅದರಲ್ಲೇಕೆ ಈ “ಕಿಟತಟಿನಿ” ಕಾಣುವುದಿಲ್ಲ? ಹಾಗಾದರೆ ಆನೆಗೊಂದಿವಾದಿಗಳು ತಾವು ಸೇರಿಸಿರುವ ಕಥೆ ಬಹುಶ: ತೆನ್ನಾಲಿ ರಾಮಕೃಷ್ಣನ “ತಿಲಕಾಷ್ಟ ಮಹಿಷಬಂಧನ” ದಂತೆ ಸಮಯಕ್ಕೆ ಸರಿಯಾಗಿ ಜೋಡಿಸಿದ ಕಥೆಯಿರಬಹುದು. ಹಾಗಾದರೆ ಬಿ.ಎನ್.ಕೆ ಅವರೂ ಈ ಕಥೆ ಜೋಡನೆಯಲ್ಲಿ ಶಾಮೀಲಾಗಿರಬಹುದೇ? ಆದ್ದರಿಂದ ಈ ಕಥೆ ಕೂಡ ಅಪ್ರಮಾಣಿಕವೆಂಬುದು ಸರ್ವವಿದಿತ.
ಈ ಗ್ರಂಥವು ಭಾಷ್ಯದೀಪಿಕಾಚಾರ್ಯರ ಮಠವಾದ ವ್ಯಾಸರಾಜಮಠದಲ್ಲಾಗಲಿ ಅಥವಾ ಇನ್ನಾವುದೇ ಲೈಬ್ರರಿಯಲ್ಲಾಗಲಿ ಯಾರೂ ನೋಡಿಲ್ಲ. ಕನಿಷ್ಟ ಆ ಗ್ರಂಥದಲ್ಲಿರುವ ಕಾರ್ಬನ್ ಕಾಪಿ ಕೂಡ ಲಭ್ಯವಿಲ್ಲ. ಅದನ್ನು ಯಾರು ನೋಡಿದ್ದಾರೆಂಬ ಉಲ್ಲೇಖವಿಲ್ಲ. ಬರೀ ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರು ಹೇಳಿದರೆಂದ ಮಾತ್ರಕ್ಕೆ ಅದನ್ನು ನಂಬಲು ಸಾಧ್ಯವಿಲ್ಲ. ಬೇರೇ ಎಲ್ಲೂ ಇಲ್ಲದ ಅಶ್ರುತವಾದ ಈ “ಕಿಟತಟಿನಿ” ಉದಾಹರಣೆ ಮಾಡಿ ಜನರನ್ನು ತಪ್ಪು ದಾರಿಗೊಳಪಡಿಸಿರುವ ಸಂಭವವಿದೆ. ಆದ್ದರಿಂದ ಜಯತೀರ್ಥರ ಮೂಲ ವೃಂದಾವನಕ್ಕೂ ಈ ಕಿಟತಟಿನಿ ಗ್ರಂಥಕ್ಕೂ ಏನೇನೂ ಸಂಬಂಧವಿಲ್ಲವೆನ್ನಬಹುದು.    ಸಂಪಾದಕದ್ವಯರು ಹೇಳುತ್ತಾರೆ “ಕಿಟತಟಿನಿ ಗ್ರಂಥ ಕಾಲಗರ್ಭದಲ್ಲಿ ಕೈತಪ್ಪಿ ಹೋಗಿರಬಹುದು.  ಇಂದಲ್ಲ ನಾಳೆ ಆ ಮಾಹಿತಿ ನಮಗೆ ದೊರೆತರೆ ಖಂಡಿತಾ ಹಂಚಿಕೊಳ್ಳುತ್ತೇವೆ”.  ಈ ಆಶ್ವಾಸನೆಯನ್ನು ಹೇಗೆ ಒಪ್ಪಲಾಗುವುದು.  ಬಹುಶ: ಮೊಲದ ಕೊಂಬು ಸಿಕ್ಕಾಗ ಅದನ್ನು ನಿಮಗೆ ತೋರಿಸುತ್ತೇನೆ ಎಂತಲೋ ಅಥವಾ ಗಗನಕುಸುಮವು ದೊರೆತಾಗೆ ನಿಮಗೆ ತೋರಿಸುತ್ತೇನೆಂತಲೂ ಆಶ್ವಾಸನೆ ನೀಡಿದಂತಾಯಿತಲ್ಲವೇ?
ಈ ಆನೆಗೊಂದಿವಾದಿಗಳ ಶ್ಲೋಕಕ್ಕೇ ಮಳಖೇಡವಾದಿಗಳು ಉತ್ತರಿಸುವ ಶ್ಲೋಕ ಹೀಗಿದೆ –
ಪದ್ಮನಾಭಂ ಕವೀಂದ್ರಂ ಚ ವಾಗೀಶಂ ವ್ಯಾಸರಾಜಕಂ |
ರಘುವರ್ಯಂ ಶ್ರೀನಿವಾಸಂ ರಾಮತೀರ್ಥಂ ತಥೈವ ಚ |
ಶ್ರೀ ಸುಧೀಂದ್ರಂ ಚ ಗೋವಿಂದಂ ನವವೃಂದಾವನಂ ಭಜೇ
ಈ ಶ್ಲೋಕವೂ ಚಾಲ್ತಿಯಲ್ಲಿದ್ದರೂ ಕೂಡ ಯಾರು ರಚಿಸಿದರು, ಎಲ್ಲಿದೆ? ಎಂಬುದು ಎಲ್ಲೂ ಪ್ರಸಿದ್ಧಿಯಾಗಿಲ್ಲ. ಆದರೆ ಆ ಶ್ಲೋಕ ಮಾತ್ರ ನವವೃಂದಾವನದ ಗೋಡೆಯ ಮೇಲೆ ರಾರಾಜಿಸುತ್ತಿದೆ. ಈ ಶ್ಲೋಕ ಯಾರೇ ರಚಿಸಿರಲಿ ಅಥವಾ ಇದನ್ನು ಶ್ಲೋಕವೆಂದು ಪರಿಗಣಿಸದಿದ್ದರೂ, ಅದು ಅಲ್ಲಿರುವ ವೃಂದಾವನಗಳ ಹೆಸರಷ್ಟಕ್ಕೇ ಸೀಮಿತವಾಗಿದೆಯೇ ಹೊರತು ಒಬ್ಬ ಕವಿ ಬರೆದ ಶ್ಲೋಕವಲ್ಲ. ಆದರೆ ಪದ್ಮನಾಭಂ ಜಯಮುನಿಂ ಎಂಬ ಭಾಷ್ಯದೀಪಿಕಾಚಾರ್ಯರ ರಚನೆಯ ಖ್ಯಾತಿಯನ್ನು ಮಾತ್ರ ಕೆಲವರಿಂದ ಹೇಳಲ್ಪಟ್ಟರೂ ವಿದ್ವತ್ ಮಂಡಲಿಯಲ್ಲಿ ಎಲ್ಲೂ ಅಶ್ರುತಪೂರ್ಣ.
ವಸ್ತುಸ್ತಿತಿ ಹೀಗಿರುವಾಗ ಇಂದಿನ ಮಾಧ್ವ ಸಮುದಾಯದಲ್ಲಿ ಕೆಲವರು ತಮ್ಮ ಭಾವನೆಗಳನ್ನು ಬೇರೆಯವರ ಮೇಲೆ ಬಲವಂತವಾಗಿ ಪ್ರಯೋಗಿಸಿರುವುದು ತೀರ ವಿಚಿತ್ರ ಪರಿಸ್ಥಿತಿ. ಈ ಎರಡೂ ಶ್ಲೋಕಗಳನ್ನೂ ಶ್ಲೋಕಗಳೆಂದು ಮನ್ನಣೆ ಮಾಡದಿದ್ದರೂ, “ಪದ್ಮನಾಭಂ ಕವೀಂದ್ರಂ” ಎಂಬ ಆ ಫಲಕ ಆ ವೃಂದಾವನಗಳ ಹೆಸರನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಈ ನಿಟ್ಟಿನಲ್ಲಿ ಇಲ್ಲಸಲ್ಲದ ಅಂತೆಕಂತೆಗಳನ್ನು ಜೋಡಿಸಿ ಹೇಳುವುದು ತರವಲ್ಲ. ಆದ್ದರಿಂದ “ಕಿಟತಟಿನಿ” ಎಂಬ ಪ್ರಕ್ಷಿಪ್ತ ಉಲ್ಲೇಖ ಜಯತೀರ್ಥರ ವೃಂದಾವನಕ್ಕೆ ಏನನ್ನೂ ಸಹಾಯ ಮಾಡುವುದಿಲ್ಲ.

ಅಧ್ಯಾಯ ೫ – ಸಂಶೋಧನೆಯೋ ಪ್ರಚೋದನೆಯೋ?

ಸಂಶೋಧನೆ ಎಂದರೇನು ? ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿರುವಂತೆ “ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ಆಧಾರಗಳನ್ನು ಹೊಂದಿಸುವುದೋ ಅರ್ಥೈಸುವುದೋ ವಿಮರ್ಶೆಯಲ್ಲ, ಅದು ಸಂಶೋಧನೆಯೂ ಅಲ್ಲ. ಸತ್ಯವನ್ನು ತಿಳಿಯಲು ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರ ಅವಶ್ಯ” ಸಂಶೋಧನೆ ಮಾಡುವಾಗ ನಮ್ಮಲ್ಲಿ ಪೂರ್ವ ನಿರ್ಧಾರಿತ ಮನಸ್ಸಿರಬಾರದು. ಹಾಗಾದರೆ ಇತ್ತೀಚಿನ ಗ್ರಂಥ ಸಂಶೋಧನೆಯೇ ಎಂಬುದನ್ನು ಪರಿಶೀಲಿಸೋಣ.
೧. ಘೋಷಣೆಯಲ್ಲೇ ಎಡವಟ್ಟು – ಅಲ್ಲಿರುವ ವಾಕ್ಯ ಇಂತಿದೆ” ಎಲ್ಲ ಅಪರೋಕ್ಷ ಜ್ಞಾನಿಗಳೂ, ಪೀಠಾಧಿಪತಿಗಳು, ವಿದ್ವಾಂಸರು, ದಾಸಾಗ್ರಣಿಗಳು, ಮಳಖೇಡದಲ್ಲೇ ಶ್ರೀ ಜಯತೀರ್ಥರನ್ನು ವರ್ಣಿಸಿದ್ದಾರೆ” ಎಂಬ ಶತಮಾನಗಳಿಂದ ಬಂದ ಸತ್ಯದ ಸಾಧಾರ ನಿರಾಕರಣೆ.
೨. ಎಲ್ಲೆಲ್ಲಿ ಆನೆಗೊಂದಿವಾದಿಗಳಿಗೆ ವಿರುದ್ಧವಾಗಿದೆಯೋ ಅದನ್ನು “ಪ್ರಕ್ಷಿಪ್ತ” ಎಂದು ಘೋಷಣೆ.
೩. ಮಳಖೇಡವಾದಿಗಳ ವಾಕ್ಯವನ್ನು ಕಾಗಕ್ಕ ಗುಬ್ಬಕ್ಕ ಮಾದರಿಯ ಕಥೆಗಳೆಂದು ಹೇಳಿಕೆ ಮತ್ತು ತಾವೇನು ಆ ರೀತಿ ಕತೆ ಹೇಳುವುದರಲ್ಲಿ ಕಡಿಮೆಯಿಲ್ಲ.  ಆದರೆ ಅದನ್ನು ಖಂಡಿಸುವ ಪ್ರಯತ್ನದಲ್ಲಿ ಆನೆಗೊಂದಿವಾದಿಳು ಎಷ್ಟು ಕಾಗಕ್ಕ ಗುಬ್ಬಕ್ಕ ಕಥೆಯನ್ನು ಹೆಣೆದಿದ್ದಾರೆಂದರೆ, ಪ್ರತಿ ೧೦ ಪೇಜಿಗೊಂದು ಕಾಗಕ್ಕನ ಕಥೆಯನ್ನು ಹೆಣೆದಿದ್ದಾರೆ.
೪. ಒಬ್ಬ ಸಂಶೋಧಕನೆಂದು ಹೇಳಿಕೊಂಡವ ಬೇರೆ ಪಂಡಿತರನ್ನು ಕೀಳು ದರ್ಜೆಯ ಪದಗಳಿಂದ ನಿಂದಿಸುವುದು ಸಂಶೋಧನೆಯೇ?
೫. ಅನುಗ್ರಹ ಸಂದೇಶ ಪಡೆದಾಗ ತಮ್ಮ ಪಡೆಗೆ ಅನುಕೂಲವಾದವರಿಂದ ಮಾತ್ರ ಪಡೆದದ್ದು ಸಂಶೋಧನೆಯೇ? ಹೌದು, ಮಳಖೇಡವಾದಿಗಳೂ ಇದೇ ರೀತಿ ಮಾಡಿದ್ದಾರೆ. ಅದೂ ಸರಿಯಲ್ಲ.
೬. ಬಿದರಹಳ್ಳಿ ಶ್ರೀನಿವಾಸಾಚಾರ್ಯರ ಶ್ರೀ ಜಯತೀರ್ಥರ ಯಾವ ಸ್ತೋತ್ರದಲ್ಲೂ, ಜಯತೀರ್ಥರ ಬೃಂದಾವನವು ಮಳಖೇಡಾದಲ್ಲಿರುವ ಸಂಗತಿ ಬಂದಿಲ್ಲ ಎಂದಿದ್ದಾರೆ. ಇದು ಸಂಶೋಧನೆಯೇ? ಅದೇ ರೀತಿ ಶ್ರೀನಿವಾಸಾಚಾರ್ಯರು ಆನೆಗೊಂದಿಯಲ್ಲಿದೆಯೆಂದೂ ಹೇಳಿಲ್ಲವಲ್ಲ.
೭. ಶ್ರೀ ವ್ಯಾಸನಕೆರೆ ಪ್ರಭಂಜನರ ಶ್ರೀ ಜಯತೀರ್ಥ ಸ್ತೋತ್ರಮಂಜರಿ ಎಂಬ ಚಿಕ್ಕ ಗ್ರಂಥದಲ್ಲಿರುವ ಹಲವಾರು ಸ್ತೋತ್ರಗಳಲ್ಲಿ ಎಲ್ಲೂ ಮಳಖೇಡದಲ್ಲಿ ಇರುವ ವಿಷಯವಿಲ್ಲ ಎಂದಿದ್ದಾರೆ. ಅದೇ ರೀತಿ ಆನೆಗೊಂದಿಯಲ್ಲಿ ಇದೆ ಎಂಬುದೂ ಎಲ್ಲೂ ಹೇಳಿಲ್ಲ.
೮. ನಮ್ಮ ವಿಚಾರಧಾರೆಯಲ್ಲಿ ಯಾರನ್ನೂ ನಿಂದಿಸುವುದಿಲ್ಲ ಎಂದು ಆರಂಭದಲ್ಲೇ ಘೋಷಿಸಿ, ಶ್ರೀ ಬಾಳೇಗಾರು ಶ್ರೀನಿವಾಸಾಚಾರ್ಯರು, ಶ್ರೀಕಾಂತಾಚಾರ್ಯರು, ಚಿಕ್ಕೇರೂರು ಆಚಾರ್ಯರನ್ನು ಕೀಳು ದರ್ಜೆಯ ಪದಗಳನ್ನು ಬಳಸಿರುವುದು ಸಂಶೋಧನೆಯೇ?
೯. ತಮ್ಮ ಇಚ್ಚೆ ಸಾಧನೆಗೆ ಹಲವಾರು ಶ್ರೀಗಳನ್ನು ಹೆಸರಿಸಿ ಹೊಗಳಿರುವ ಆನೆಗೊಂದಿಗಳು, ಅದೇ ಸ್ವಾಮಿಗಳನ್ನು ತಪ್ಪು ನಿರ್ಧಾರ ಮಾಡಿದಾಗ ಸಾವಿರಾರು ಜನರು ನಿಂದನೆಗಳನ್ನು ಮಾಡಿರುವುದು ಸರ್ವ ವಿಧಿತ. ಆದ್ದರಿಂದ ಅವರ ಕೆಲವು ಸ್ವಾಮಿಗಳನ್ನು ಹೊಗಳಿರುವ ವಿಷಯ ಕೇವಲ ನಾಟಕವಲ್ಲದೆ ಮತ್ತೇನು?
೧೦. ಶ್ರೀ ವಿಶ್ವನಂದನತೀರ್ಥರು ಆನೆಗೊಂದಿಯನ್ನು ಸಮರ್ಥಿಸಿದ್ದಾರೆಂದು ಹೇಳಿಕೆ ಕೇವಲ ಸುಳ್ಳಲ್ಲದೆ ಮತ್ತೇನು? ಅವರೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ ಜಯತೀರ್ಥರ ವೃಂದಾವನ ಮಲಖೇಡಾದಲ್ಲಿದೆಯೆಂದು, ಇದಕ್ಕೆ ಅವರ ಗುರುಗಳಾದ ಶ್ರೀ ದೇವೇಂದ್ರತೀರ್ಥರೇ ಸಾಕ್ಷಿ ಎಂದು.  ತಮ್ಮ “ಶ್ರೀ ದೇವೇಂದ್ರತೀರ್ಥರು” ಎಂಬ ಪುಸ್ತಕದಲ್ಲಿ ದೇವೇಂದ್ರತೀರ್ಥರು ಮಲಖೇಡಾಕ್ಕೆ ಹೋಗಿ ೧೪ ದಿನ ಸೇವೆ ಮಾಡಿದ್ದಾರೆಂದು ದಾಖಲಿಸಿದ್ದಾರೆ ವಿಶ್ವನಂದನತೀರ್ಥರು.   ಇದನ್ನು ನಾನೇ ನನ್ನ ಬಾಲ್ಯದಲ್ಲಿ ಶ್ರೀ ದೇವೇಂದ್ರತೀರ್ಥರ ಮುಖದಿಂದಲೇ ಕೇಳದ್ದೇನೆ ಮತ್ತು ನನ್ನ ತಂದೆ ೯೪ ವರ್ಷ ವಯಸ್ಸಿನ ಎಸ್.ಎನ್. ರಾಮಚಂದ್ರಾಚಾರ್ಯರೂ ಹೇಳಿದ್ದಾರೆ.  ಆದ್ದರಿಂದ ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಿ ವಿಶ್ವನಂದನರು ಒಪ್ಪಿದ್ದಾರೆಂದು ಹೇಳಿರುವುದು ಖಂಡನೀಯ, ಇದನ್ನು ನಾನು ಅವರನ್ನೇ ಕೇಳಿ ಮಾತನಾಡಿ ಇಲ್ಲಿ ಉತ್ತರಿಸಿದ್ದೇನೆ.
೧೧. ಮತ್ತೊಂದು ಸುಳ್ಳು – ಶ್ರೀ ವಿಶ್ವೇಶತೀರ್ಥರು, ಸತ್ಯಪ್ರಮೋದರು, ಆನೆಗೊಂದಿಯಲ್ಲಿ ಜಯತೀರ್ಥರ ವೃಂದಾವನಕ್ಕೆ ದ್ವಿತೀಯ ಗೌರವವನ್ನು ಸಮರ್ಪಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರಶ್ನಿಸಲಿಲ್ಲವೆಂದಿದ್ದಾರೆ. ಖಂಡಿತ. ಅವರು ಆ ವೃಂದಾವನವನ್ನು ರಘುವರ್ಯರೆಂದು ಭಾವಿಸಿರುವುದರಿಂದ ಸುಮ್ಮನಿದ್ದರೇ ಹೊರತು ಬೇರೇನೂ ಅಲ್ಲ.
೧೨. ಸತ್ಯ ಸಾಧೆನೆಗೆ ಎಷ್ಟು ಆಧಾರಗಳು ಬೇಕೆಂದು ಪ್ರಶ್ನಿಸಿರುವ ಆನೆಗೊಂದಿವಾದಿಗಳು, ಎಲ್ಲೂ ಆಧಾರಗಳನ್ನು ನೀಡಿಯೇ ಇಲ್ಲ, ಬರೀ ಊಹಾಪೋಹಗಳನ್ನು ನೀಡಿದ್ದರೆಂಬುದರಲ್ಲಿ ಎರಡು ಮಾತಿಲ್ಲ.
೧೩. ಸಂಶೋಧಕರೆಂದು ಹೇಳಿಕೊಂಡವರು ತಮಗೆ ಇಷ್ಟಬಂದಂತೆ ಅಭಿಪ್ರಾಯಗಳನ್ನು ಬದಲಿಸಿರುವುದು ಕಂಡಿಬಂದಿದೆ. ಉದಾಹರಣೆಗೆ ಬಿ.ಎನ್.ಕೆ, ಟಿ.ಕೆ.ವಿ, ಇವರಿಬ್ಬರೂ ಒಟ್ಟಿಗೆ ಸೇರಿ ಹೊಸ ಕಥೆಯನ್ನು ಜೋಡಿಸಿದಂತಿದೆ. ಟಿ.ಕೆ.ವಿ ಅವರಂತು ಬೇರೆಯವರ ಬಲವಂತಕ್ಕೆ ಹಾಗೆ ಬರೆದರೆಂದು ಅವರ ಪುತ್ರಿ (ಈಗಲೂ ಜೀವಂತ ಇದ್ದಾರೆ) ಹೇಳಿದ್ದಾರೆ.
೧೪. ಸಂಶೋಧಕ ಪ್ರಾಮಾಣಿಕನಾಗಿದ್ದರೆ ಪೂರ್ವಾಗ್ರಹದಿಂದ ಲೇಖನವನ್ನು ಬರೆಯುತ್ತಿರಲಿಲ್ಲ. ಆದರೆ ಈ ಪುಸ್ತಕವನ್ನು ಗಮನಿಸಿದಾಗ ಸಂಶೋಧನೆಗಿಂತ ಪೂರ್ವಾಗ್ರಹವೇ ಹೆಚ್ಚಾಗಿ ಕಾಣುತ್ತದೆ
೧೫. ಡಾ: ಕೆ.ಎಸ್ ನಾರಾಯಣಾಚಾರ್ಯರಿಂದ “ಸತ್ಯ ಸ್ಥಾಪನೆ ಮಾಡಿದ್ದೀರಿ ಸ್ವಾಮಿ” ಎಂದು ಬರೆಸಿಕೊಂಡಿದ್ದಾರೆ. ಆದರೆ ಅವರು ಎರಡೂ ಕಡೆಯ ದಾಖಲೆಗಳನ್ನು ಅಧ್ಯಯನವನ್ನು ಮಾಡಿ ಹೇಳಿದ್ದರೆ ಒಪ್ಪಬಹುದಿತ್ತು.
೧೬. ಶ್ರೀಮತಿ ಸೀತಾ ಶಾಸ್ತ್ರಿ ಸೂರಿ ಅನ್ನುವರಿಂದ ಇವರೇ ಯಾರೋ ಬರೆದುಕೊಟ್ಟು ಪ್ರಕಟಿಸಿದಂತಿದೆ. ಏಕೆಂದರೆ ಅವರು ಹಿಂದು ಮುಂದು ವಿಚಾರಿಸಿದರೆ ಜಯತೀರ್ಥರನ್ನು ಆನೆಗೊಂದಿಯಲ್ಲಿ ಪ್ರತಿಷ್ಟಾಪಿಸಿದ್ದಾರೆ.
೧೭. ಅದೇ ರೀತಿ ಬಸವರಾಜ ಕಲ್ಗುಡಿ ಎಂಬುವರೂ ಸಹ ಒಂದು ಪಂಗಡದ ವಾಕ್ಯಗಳನ್ನೇ ನಂಬಿ ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ.
೧೮. ಗಂಡುಗಲಿ ಬಿ.ಎನ್.ಕೆ ಶರ್ಮ ಎಂದು ಕರೆದು ಅವರು ನಿರ್ಧಾರಿಸಿದ್ದಾರೆಂದು ಬರೆದಿದುವಂತೆ “ನವವೃಂದಾವನದಲ್ಲಿ ಉತ್ತರಾದಿಮಠದ ಯಾವುದೇ ಬೃಂದಾವನಗಳಿಲ್ಲ” ಎಂದು ಚಿತ್ರಿಸಿರುವುದು ಸಂಶೋಧನೆಯೇ? ಹಾಗಾದರಿ ರಘುವರ್ಯರು ಎಲ್ಲಿ ಹೋದರು ಎಂದು ಬಿ.ಎನ್.ಕೆ. ಏಕೆ ಹೇಳಿಲ್ಲ?  ಒಬ್ಬರನ್ನು ಗಂಡುಗಲಿ ಎಂದು ಹೇಳಿದ ಮಾತ್ರಕ್ಕೆ ಅವರು ಹೇಳಿದ ಮಾತುಗಳೆಲ್ಲ ದೇವ ವಾಕ್ಯವೇ?
೧೯. ಪದೇ ಪದೇ ಶ್ರೀ ವಿಶ್ವೋತ್ತಮತೀರ್ಥರ ಹೆಸರನ್ನು ಹೇಳಿ ವಾದಿರಾಜರು ಆನೆಗೊಂದಿಯಲ್ಲಿದ್ದಾರೆಂದು ಹೇಳಿರುವುದು ಎಷ್ಟು ಸತ್ಯ? ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಸಲ ಹೇಳಿದರೆ, ಅವರಲ್ಲಿಯೇ ಅನುಮಾನ ವ್ಯಕ್ತವಾಗುತ್ತದೆಯಲ್ಲವೇ? ವಿಶ್ವೋತ್ತಮ ತೀರ್ಥರು ಹೇಳಿದ್ದಾರೆ – “ನಾರಾಯಣಾಚಾರ್ಯರು ಜಯತೀರ್ಥಂ ವರ್ಯತಿ ಗಜಗಹ್ವರೇ” .  ಇದನ್ನು ಯಾರೂ ಅಲ್ಲಗಳೆಯುತ್ತಿಲ್ಲ.  ಗಜಗಹ್ವರದಲ್ಲಿ ಜಯತೀರ್ಥರನ್ನುಆನೆಗೊಂದಿಯಲ್ಲಿ ಹಲವಾರು ದಿಗ್ಗಜಗಳನ್ನು ಸ್ಮರಿಸುವಾಗ ಸ್ಮರಿಸಿದರೆ ತಪ್ಪೇನು?  ನಾವು ಪ್ರತಿನಿತ್ಯ ಜಯತೀರ್ಥರಿಗೆ ಮನೆಯಲ್ಲೂ,  ಶ್ರೀ ಮಂತ್ರಾಲಯ ಯತಿಗಳು ಮಂತ್ರಾಲಯದಲ್ಲೂ, ಅದೇ ರೀತಿ ಎಲ್ಲ ಯತಿಗಳೂ ಅವರವರ ಸ್ಥಳದಲ್ಲಿ ಜಯತೀರ್ಥರಿಗೆ ಹಸ್ತೋದಕವನ್ನು ನೀಡುವುದಿಲ್ಲವೇ.  ಹಾಗಾದರೆ ಜಯತೀರ್ಥರ ವೃಂದಾವನ ಬೇರೆಡೆಯಿರುವುದೆಂದು ನಿರ್ಣಯಿಸುವುದು ಎಷ್ಟು ಸಮರ್ಥನೀಯ?
ಆದ್ದರಿಂದ ಈ ಪುಸ್ತಕ ಸಂಶೋಧನೆಯೆಂಬ ಹೆಚ್ಚುವರಿ ಪುಕ್ಕವನ್ನು ಹೊಂದಿದೆಯೇ ಹೊರತು ಸಂಶೋಧನೆಯ ಯಾವುದೇ ಜಾಡು ಇದರಲ್ಲಿಲ್ಲ ಎಂದೆನಿಸುತ್ತದೆ.

ಅಧ್ಯಾಯ ೬ – ಕೃಷ್ಣದೇವರಾಯನ ರಜತ ಶಾಸನ

ಶಂಕೆ :  ಜಯತೀರ್ಥರ ಬಗ್ಯೆ ಎಲ್ಲಾದರೂ ರಾಜ ಮಹಾರಾಜರುಗಳು ಬರೆದ ಶಿಲಾ/ರಜತ/ಬೆಳ್ಳಿ ಶಾಸನಗಳಿವೆಯೇ? ಕೃಷ್ಣದೇವರಾಯನೇನಾದರೂ ಬರೆಸಿದ್ದರೋ? ಬರೆಸಿದ್ದರೆ ಅದು ಲಭ್ಯವಿದೆಯೇ? ಇದ್ದರೆ ಎಲ್ಲಿ? ಬರೀ ವೇಣುಗೋಪಾಲದಾಸರ ಅಥವಾ ಅವರ ಮಗನ ಹೇಳಿಕೆಯೇ ಪ್ರಮಾಣವೇ? ಅಕಸ್ಮಾತ್ ಶಾಸನವಿದ್ದರೆ ಅದರಲ್ಲಿ ಹೇಳಿರುವ ಜಯತೀರ್ಥರ ಸ್ಮರಣೆ ಆನೆಗೊಂದಿಯನ್ನು ಕುರಿತೋ, ಜಯತೀರ್ಥರನ್ನು ಕುರಿತೋ, ಗುಹೆಗಳು ಬರೀ ಆನೆಗೊಂದಿಯಲ್ಲಿ ಮಾತ್ರ ಇವೆಯೋ?
ಆನೆಗೊಂದಿವಾದಿಗಳು ಪ್ರಸ್ತುತಪಡಿಸಿರುವ ವಿಜಯನಗರದ ಅರಸ ಕೃಷ್ಣದೇವರಾಯನು ಬರೆಸಿದನೆಂಬ ರಜತ ಶಾಸನ ಇಂತಿದೆ :
ಪುಲಿಪೋಲ್ ಗುಹೆಯಲಿರ್ದು ಗೆಲಿದೆ ವಿದ್ಯಾರಣ್ಯರಂ
ಎಂತುಟೋ ವೈಯ್ಯಾಕರಣ ಪ್ರತಿಭಾ ನಿನ್ನಲ್ಲಿ
ಭುಜಗನಾಲಯದಲಿ ಗಜಗೊಂದಲದಿ ನಿಂದೆ
ಜಯರಾಯ ಎಂತುಟೋ ನಿನ್ನಲಿ ನಂದತೀರ್ಥರ ಮೋಹ |
ಇದನ್ನು ಜಯತೀರ್ಥಸ್ತುತಿ ಎಂದು ತಿಳಿಯುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ಸ್ತುತಿಗೆ ವ್ಯಾಖ್ಯಾನ ಮಾಡಿರುವ ಆನೆಗೊಂದಿವಾದಿಗಳು ಇನ್ನೊಬ್ಬ ಪಂಡಿತರ ಮೇಲಿನ ವೈಯಕ್ತಿಕ ದ್ವೇಷದಿಂದ “ಪಂಡಿತ ಪ್ರಕಾಂಡರಾದ” ಎಂಬ ಪದ ಪ್ರಯೋಗ ಮಾಡಿ ಅವಹೇಳನಕಾರಿ ಮಾತನಾಡಿರುವುದು ಖಂಡಿತ ಪಂಡಿತ ವರ್ಗಕ್ಕೆ ಹೊಂದುವ ಮಾತಲ್ಲ, ಒಬ್ಬ ಸಂಶೋಧಕನೆಂದು ಹೇಳಿಕೊಂಡಿರುವ, ಪಂಡಿತರಿಂದ ಬರುವ ವಾಕ್ಯವಂತೂ ಅಲ್ಲ. ಅವರೇ ಜಯತೀರ್ಥರನ್ನು ಹೊಗಳುತ್ತ ಜಯಮುನಿಗಳ ವಿನಯಾನ್ವಿತ ವಾಕ್ಯಗಳ ಬರೆಯುತ್ತಾ, ” ನ ಶಬ್ದಾಬ್ದೌಗಾಡಾ:” ಎಂದಿದ್ದಾರೆ.  ಮಂತ್ರಾಲಯ ರಾಯರಾಗಲೀ,  ಜಯತೀರ್ಥರಾಗಲೀ, ಆಚಾರ್ಯ ಮಧ್ವರಾಗಲೀ, ಎಲ್ಲೂ ತಮ್ಮ ವಿರುದ್ಧ ಮಾತನಾಡಿದವರನ್ನು ಈ ರೀತಿಯ ಅಸೈರಣೀಯ ಪದಪ್ರಯೋಗ ಮಾಡಿದ್ದು ಕಂಡು ಬಂದಿಲ್ಲ. ಆದರೆ ಈ ನಿಂದಾತ್ಮಕವಾದ ಪದವಾದ “ಪಂಡಿತ ಪ್ರಕಾಂಡ” ಪದ ಅನುಚಿತ.
“ಭುಜಗನಾಲಯದಿ ಗಜಗೊಂದಲದಿ” ಎಂದರೆ ಸಂದರ್ಭೋಚಿತವಾಗಿ ನಿರ್ಣಯಿಸಲ್ಪಟ್ಟರೂ, ಈ ರೀತಿ ಅರ್ಥ ಬರುತ್ತದೆ.
ಆನೆಗೊಂದಿವಾದಿಗಳು “ಭುಜಗ” ಪದಕ್ಕೆ ಹಲವಾರು ಅರ್ಥಗಳನ್ನು ಕನ್ನಡ ನಿಘಂಟಿನಿಂದ ಪಡೆದಿದ್ದಾರೆ, ಅವುಗಳೆಂದರೆ  ಹಾವು, ಸರ್ಪ, ವಿಟ, ಜಾರ, ಪತಿ, ಒಡೆಯ, ಪಂಡಿತ, ವಿದ್ವಾಂಸ, ತಪಸ್ಸು ಮಾಡುವವ, ಯತಿ, ಮುನಿ, ಇತ್ಯಾದಿ ಅರ್ಥಗಳು. ಅವರೇ ಬಿಡಿಸಿದಂತೆ ಒಂದೊಂದೇ ಬಿಡಿಸಿ ನೋಡೋಣ :
ಅ) “ಒಡೆಯ”ನೆಂದು ಅರ್ಥೈಸಿ, ಭುಜಗನಾಲಯವೆಂದಾಗ ಒಡೆಯ ಎಂದರೆ ಪೂರ್ವಾಚಾರ್ಯರಾದ ಶ್ರೀ ಪದ್ಮನಾಭತೀರ್ಥರ ನಿವಾಸಸ್ಥಾನವಾದ ಗಜಗಹ್ವರವೆಂದಿದ್ದಾರೆ.  ಆದರೆ ಅವರದೇ ಪದಕ್ಕೆ ಅವರದೇ ಅರ್ಥವಾದ “ಒಡೆಯ” ವನ್ನು ತೆಗೆದುಕೊಂಡಾಗ, ತಮ್ಮ ಪೂರ್ವಾಚಾರ್ಯರಾದ ತಮ್ಮ ಆಶ್ರಮ ಗುರುಗಳಾದ ತಮ್ಮ ಸ್ವರೂಪ ಗುರುಗಳಾದ ಅಕ್ಷೋಭ್ಯತೀರ್ಥರ ನಿವಾಸಸ್ಥಾನವಾದ ಮಳಖೇಡಾವೆಂದೇಕೆ ಅರ್ಥೈಸಬಾರದು.
ಆ) ಭುಜಗ ಪದಕ್ಕೆ ಪಂಡಿತರ, ವಿದ್ವಾಂಸರ ಆಲಯ ಪದವನ್ನು ಅರ್ಥೈಸಿ ಮಾಧ್ವರಾದ್ಧಾಂತ ಧರಣೀಧರಾ: ಎಂಬ ವಾದಿರಾಜರು ಪ್ರತಿಪಾದಿಸಿದ ಅರ್ಥವೇ ಬರುತ್ತದೆಂದಿದ್ದಾರೆ.  ಖಂಡಿತ.  ಶ್ರೀ ವಾದಿರಾಜರು ತಿಳಿಸಿದ ಮಾಧ್ವರಾದ್ಧಾಂತ ಧರಣೀಧರಾ: ಪಂಡಿತ ಶ್ರೇಷ್ಠರು ಹೇಗೆ ಎಂಬುದನ್ನು ಆಗಲೇ ತಿಳಿಸಿದ್ದೇವೆ.  ಅಲ್ಲಿ ಗಜಗಹ್ವರದಲ್ಲಿ ನೆಲಿಸಿದ ಪಂಡಿತರೆಂದು,
ಇ) ಭುಜಗ ಪದಕ್ಕೆ ಯತಿಗಳ, ತಪೋನಿಧಿಗಳ ಆಲಯವಾಗಿರುವ ಭುಜಗನಾಲಯದಲಿ ಎಂದರೆ ತಪೋನಿಧಿಗಳು ವಾಸಿಸುವ ಗುಹೆಯೆಂದೇಕೆ ಅರ್ಥೈಸಬಾರದು.?
ಇಲ್ಲಿ ಕನ್ನಡ ನಿಘಂಟನ್ನು ಹಿಡಿದು ತಮಗೆ ಅನುಕೂಲವಾಗಿರುವ ಅರ್ಥವನ್ನು ಮಾತ್ರ ಗ್ರಾಹ್ಯಮಾಡಿದಂತೆ ಕಂಡುಬರುತ್ತದೆ

Yeragola Cave Jayatheertharu in the form of snake @ Yeragola

 ಶ್ರೀ ಜಯತೀರ್ಥರು ತಪಸ್ಸು ಮಾಡುತ್ತಿದ್ದ, ಗ್ರಂಥ ರಚಿಸುತ್ತಿದ್ದ, ವಿದ್ಯಾರಣ್ಯರೊಂದಿಗೆ ವಾಗ್ವಾದ ಮಾಡಿದ್ದೆಂದು ಹೇಳಲಾಗುತ್ತಿರುವ ಯರಗೋಳ ಗುಹೆ

 

“ಪುಲಿಪೋಲ್ ಗುಹೆಯಲಿರ್ದು” ಎಂದರೆ ಹುಲಿಯಂತೆ ಗುಹೆಯಲಿದ್ದು ವಿದ್ಯಾರಣ್ಯರನ್ನು ಗೆದ್ದದ್ದನ್ನು ನೆನಪಿಸುತ್ತದಲ್ಲವೇ? ಅಷ್ಟೇ ಅಲ್ಲದೆ ಶ್ರೀ ಜಯತೀರ್ಥರು ವಿದ್ಯಾರಣ್ಯರೊಂದಿಗೆ ವಾಗ್ವಾದ ನಡೆಸಿದ್ದು ಯರಗೋಳ ಗುಹೆಯೆಂದು ಪ್ರಸಿದ್ಧಿಯಿರುವಾಗ, ಆ ಸ್ತೋತ್ರದಲ್ಲೂ ವಿದ್ಯಾರಣ್ಯರನ್ನು ಗೆಲಿದು ಎಂಬ ಪದಪ್ರಯೋಗವಿರುವಾಗ, ಮೇಲೆ ಹೇಳಿದ ಎಲ್ಲ ಪದಕ್ಕೂ “ಯರಗೋಳ ಗುಹೆ“ಯೆಂದೇಕೆ ಚಿಂತಿಸಬಾರದು? ಗಜಗಹ್ವರವೆಂದೇಕೆ ಅಸಂಬದ್ದ ಅರ್ಥಚಿತ್ರಣ ಮಾಡಿದ್ದಾರೆ?
 ಶ್ರೀ ಟಿ.ಕೆ.ವಿ ಅವರ ಪುತ್ರ ಗುರುರಾಜದಾಸರು ಸಂಪಾದಿಸಿದ್ದೆಂದು ಹೇಳಲ್ಪಡುವ ಹಳೆಗನ್ನಡದ ಶ್ರೀಕೃಷ್ಣದೇವರಾಯನ ರಜತ ಶಾಸನವು ಮೈಸೂರು ಅರಮನೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ..  ಆದರೆ ಅದರ ಕಾರ್ಬನ್ ಕಾಪಿಯಾಗಲಿ ಅಥವಾ ಇನ್ನಾವುದೇ ನಕಲಾಗಲೀ ಎಲ್ಲೂ ಯಾರೂ ಕಂಡಿಲ್ಲ, ಎಲ್ಲೂ ಲಭ್ಯವಿಲ್ಲ.  ಹಾಗಾದರೆ ಒಂದು ಪ್ರಶ್ನೆ : ಶ್ರೀ ಕೃಷ್ಣದೇವರಾಯನು ಜಯತೀರ್ಥರ ಬಗ್ಯೆ ರಜತ ಶಾಸನವನ್ನು ಬರೆದಿದ್ದನೋ/ ಬರೆಸಿದ್ದನೋ, ಅದೇ ರೀತಿ ಕೃಷ್ಣದೇವರಾಯನ ಗುರುಗಳಾದ ಸಮಕಾಲೀನರಾದ ಶ್ರೀ ವ್ಯಾಸರಾಜರ ಬಗ್ಯೆಯೇನಾದರೂ ಬರೆಯಲ್ಪಟ್ಟ ರಜತಶಾಸನವೋ/ತಾಮ್ರಶಾಸನವೋ ಅಥವಾ ಕನಿಷ್ಟ ಶಿಲಾ ಶಾಸನವೆಲ್ಲಾದರೂ ದೊರಕಿದೆಯೇ? ಈ ಶಾಸನವಿದೆಯೆಂದು ಹೇಳಿರುವುದು ಗುರುರಾಜದಾಸರು ತನ್ನ ತಂದೆಗೆ. ಕೇವಲ ಅಪ್ಪ ಮಗನ ಪತ್ರ ವ್ಯವಹಾರದಿಂದಲೇ ನಾವು “ಇದಂ ಇತ್ಥಂ” ಎಂದು ನಿರ್ಣಯಿಸಲಾಗುವುದಿಲ್ಲ
ಟಿಕೆವಿಯವರನ್ನು ನಂಬುವುದು ಹೇಗೆ?  ಅವರು ಈಗಾಗಲೇ ಕೃಷ್ಣದೇವರಾಯನ ಹೆಸರಿನಲ್ಲಿ ರಜತಶಾಸನವಿದೆಯೆಂದು ಹೇಳಿದ್ದಾರೆ. ಎಲ್ಲಿ ನೋಡಿದೆಯೆಂದರೆ ತನ್ನ ಮಗನಿಂದ ಪತ್ರವೇ ಸಾಕ್ಷಿ ಎಂದರು..  ತಂದೆಯೇ ಮಗನಿಗೆ ಹೇಳಿ ಒಂದು ಪತ್ರವನ್ನು ಬರೆಸಿ ಈ ರೀತಿ ಮಾಡಿರುವ ಸಾಧ್ಯತೆಯೇ ಜಾಸ್ತಿ .
ಆದ್ದರಿಂದ ಕೃಷ್ಣದೇವರಾಯನ ಈ ಶಾಸನವಿರುವುದಕ್ಕೇ ಪ್ರಮಾಣವಿಲ್ಲ. ಅಕಸ್ಮಾತ್ ಇದ್ದರೂ ಅದು ಕೃಷ್ಣದೇವರಾಯ ಬರೆದಿದ್ದಕ್ಕೂ ಪ್ರಮಾಣವಿಲ್ಲ.  ಅಕಸ್ಮಾತ್ ಅವನೇ ಬರೆದಿದ್ದನೆಂದು ಒಪ್ಪಿದರೂ, ಕೃಷ್ಣದೇವರಾಯ ತನ್ನನ್ನು ಉದ್ಧಾರ ಮಾಡಿದ, ತನ್ನ ರಾಜ್ಯವನ್ನು ಉಳಿಸಿದ, ತನ್ನ ಮುಖ್ಯಗುರುಗಳೆಂದು ಪರಿಗಣಿಸಿದ್ದ ವ್ಯಾಸರಾಜರ ಬಗ್ಯೆ ರಜತಶಾಸನ ಮಾಡದವನು ಜಯತೀರ್ಥರ ಬಗ್ಯೆ ಹೇಗೆ ಬರೆದನೆಂಬುದು ಪ್ರಶ್ನೆ.  ಅಷ್ಟೇ ಅಲ್ಲದೆ ಈ ಶಾಸನ ಯಾರೇ ಬರೆದಿರಲಿ, ಅದು ಇದೆ ಎಂದು ಒಪ್ಪಿಕೊಂಡರೂ, ಅದು ಸಾಧಿಸಿರುವುದು ಮಳಖೇಡವನ್ನೇ ಹೊರತು, ಆನೆಗೊಂದಿಯನ್ನಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

ಅಧ್ಯಾಯ ೭

ಮಳಖೇಡದ ಜಯತೀರ್ಥರ ಗುಡಿಯು ಯಾರ ವಶದಲ್ಲಿತ್ತು?

ಶಂಕೆ – ಅ) ಮಳಖೇಡದ ಜಯತೀರ್ಥರ ವೃಂದಾವನ ಸನ್ನಿಧಾನ ಉತ್ತರಾಧಿಮಠದ ಸುಪರ್ಧಿಯಲ್ಲಿರುವುದೇ ಈ ಹೊಸ ನವ ವೃಂದಾವನದ ಕಥೆಗೆ ಕಾರಣವೇ? ಆ) ಅಕಸ್ಮಾತ್ ಅದು ಉತ್ತರಾಧಿಮಠದ ಅಧಿಕಾರದಲ್ಲಿರದೆ ಬೇರಾವುದೇ ಮಠಕ್ಕೆ ಇದ್ದಿದ್ದರೆ ಮಳಖೇಡಾವೇ ಮೂಲ ವೃಂದಾವನವಾಗುತ್ತಿತ್ತೆ? ಇ) ಉತ್ತರಾಧಿಮಠಕ್ಕಿಂತ ಮುಂಚೆ ಅದು ಬೇರೆ ಮಠದ ಸುಪರ್ಧಿಯಲ್ಲಿತ್ತೇ?
ಸಮಾಧಾನ – ನವವೃಂದಾವನ ಸೃಷ್ಟಿಗೆ ಮೂಲ ಕಾರಣವೇ ಅದು ಉತ್ತರಾಧಿಮಠದ ಸುಪರ್ದಿಯಲ್ಲಿರುವುದು ಎಂಬುದು ಇತ್ತೀಚೆಗೆ ಪ್ರಕಟವಾದ ೪೫೦ಕ್ಕೂ ಹೆಚ್ಚು ಪುಟದ ಬೃಹತ್ ಗ್ರಂಥದ ಮೂಲಕ ತಿಳಿಯುತ್ತೆ. ಅದರಲ್ಲಿ ಅವರೇ ವಿಶ್ಲೇಷಣೆ ಮಾಡಿದ್ದಾರೆ, ಏಕೆ ಅದು ಉತ್ತರಾದಿಮಠದ ವಶದಲ್ಲಿರಬಾರದೆಂದು. ಆನೆಗೊಂದಿಯಲ್ಲಿ ಜಯತೀರ್ಥರನ್ನು ಆವಾಹನೆ ಮಾಡಿದವರಿಗೆ ಮಳಖೇಡದಲ್ಲಿ ಯಾರಾದರೂ ಪೂಜೆ ಮಾಡಲಿ ಅವರಿಗೇಕೆ ಅದರ ಉಸಾಬರಿ? ಅದು ಅವರದಾಗಿತ್ತು, ಇವರದಾಗಿತ್ತು ಎಂಬ ಕುಹಕ ಹೇಳಿಕೆಯ ಅವಶ್ಯಕತೆಯೇನಿತ್ತು?
ಆನೆಗೊಂದಿಯ ಒಂದು ಪಂಗಡದವರು ಮಳಖೇಡದಲ್ಲಿ ಕೇವಲ ೧೦೦ ವರ್ಷಗಳಿಂದ ಮೃತ್ತಿಕಾ ವೃಂದಾವನವಿದೆಯೆಂದು ಹೇಳಿಕೊಂಡರೆ ಅವರದೇ ೪೫೦ ಪುಟದ ಈ ಪುಸ್ತಕದಲ್ಲಿ ೧೮೮೦ರಲ್ಲೇ ಜಯತೀರ್ಥರ ವೃಂದಾವನದ ದೀಪಾರಾಧನೆ ಮೊದಲಾದ ಕೈಂಕರ್ಯಕ್ಕಾಗಿ ಒಬ್ಬರಿಗೆ ಹಕ್ಕು ಕೊಡಲಾಯಿತೆಂದಿದ್ದಾರೆ. ಇದರಿಂದ ಅವರೇ ಒಪ್ಪಿಕೊಂಡಂತೆ ಅದು ೫೦-೬೦ ವರ್ಷಗಳಿಂದಲ್ಲ ಶತಶತಮಾನಗಳಿಂದ ಬಂದಿದ್ದು.
ಆ ಪುಸ್ತಕದಲ್ಲಿ ಉಲ್ಲೇಖಿಸಿರುವ ವಾಕ್ಯಗಳು ಇಂತಿವೆ :
ಅ) ಶ್ರೀ ಟೀಕಾರಾಯರ ವೃಂದಾವನವನ್ನು (ಅವರ ಘೋಷಣೆ ಪ್ರಕಾರ ಮೃತ್ತಿಕಾ) ೧೮೦೦ನೇ ಇಸವಿಯವರೆಗೂ ಷಾಷ್ಟಿಕ ವಂಶದವರು ಪೂಜಿಸುತ್ತಿದ್ದರು. ಆ) ಷಾಷ್ಟಿಕ ವಂಶದವರು ಉತ್ತರಾಧಿ ಮಠದವರಾಗುವುದಕ್ಕೆ ಸಾಧ್ಯವಿಲ್ಲ. ಇ) ಆ ವೃಂದಾವನವಿರುವ ಸ್ಥಳವನ್ನು ನಿಜಾಂ ಸರ್ಕಾರ ಉತ್ತರಾಧಿಮಠಕ್ಕೆ ಮಂಜೂರು ಮಾಡಲಿಲ್ಲವೆಂದಿದ್ದಾರೆ. ಈ) ಉತ್ತರಾಧಿಮಠದವರು ಅರ್ಜಿ ಹಾಕಿ ಅದನ್ನು ಪಡೆಯಲು ಪ್ರಯತ್ನಿಸಿ ವಿಫಲರಾದರೆಂದಿದ್ದಾರೆ. ಉ) ನಿಜಾಂ ಸರ್ಕಾರವು ಜಯತೀರ್ಥರ ಗುಡಿಯ ತಸ್ತೀಕನ್ನು ಯಾವುದೇ ಮಠದ ಪೀಠಾಧಿಪತಿಗಳಿಗೆ ಕೊಡದೆ, ಸ್ಥಾನಿಕ ಅರ್ಚಕರುಗಳಿಗೆ ಭೂಮಿ ಮತ್ತು ಹಣವನ್ನು ತಸ್ತೀಕ್ ಆಗಿ ಕೊಟ್ಟು ಅದನ್ನು ಅನುವಂಶೀಯವಾಗಿ ನಡೆಯುವಂತೆ ಇನಾಂ ಜಿಲ್ಲಾಧಿಕಾರಿಗಳು ವ್ಯವಸ್ಥೆ ಮಾಡಿದ್ದು ಸಮಂಜಸವಾಗಿಯೇ ಇದೆ ಊ) ಮಳಖೇಡ ಕ್ಷೇತ್ರವು ಈಗಿನಂತೆ ಇರಲಿಲ್ಲ, ಜನರು ಊರಿನಲ್ಲಿ ವಾಸವಾಗಿದ್ದು, ವೃಂದಾವನ ಸನ್ನಿಧಾನಕ್ಕೆ ಅನುಷ್ಠಾನ ಮತ್ತು ಪೂಜೆಗೆ ಮಾತ್ರ ಬಂದು ಹೋಗಬೇಕಿತ್ತು. ರಘುಕಾಂತ ಶ್ರೀಗಳು ತಮ್ಮ ಮತ್ತು ಭಕ್ತರ ಅನುಕೂಲಕ್ಕಾಗಲೆಂದು ಛತ್ರವನ್ನು, ಪಾಠಶಾಲೆಯನ್ನು ಕಟ್ಟಿಸಿದರು. ಭಕ್ತರಿಗಾಗಿ ತೀರ್ಥ ಪ್ರಸಾದ ವ್ಯವಸ್ಥೆ ಇರಲಿಲ್ಲ, ಕಾಲಕ್ರಮದಲ್ಲಿ ಸತ್ಯಪ್ರಮೋದರ ಸಲಹೆಯ ಮೇರೆಗೆ ಅಕ್ಷೋಭ್ಯತೀರ್ಥ ಮಠಾಧೀಶ ಶ್ರೀ ರಘುವೀರತೀರ್ಥರು ಉತ್ತರಾದಿಮಠಕ್ಕೆ ಸಲ್ಲಿಸಿದರು. ಕಾಲಕ್ರಮದಲ್ಲಿ ಅನೇಕ ಮಹಿಮೆಗಳು ಹುದುಗಿವೆ.”      …………ಹೀಗೆಲ್ಲಾ ಬರೆದಿದ್ದಾರೆ.
ಈ ಎಲ್ಲ ಮೇಲಿನ ವಾಕ್ಯ ಜೋಡಣೆಯನ್ನು ನೋಡಿದರೆ ಆನೆಗೊಂದಿವಾದಿಗಳಿಗೆ ಜಯತೀರ್ಥರ ವೃಂದಾವನ ದರ್ಶನ ಅಥವಾ ಪೂಜೆಗಿಂತ ಅದನ್ನು ಪೂಜಿಸುತ್ತಿರುವ ಉತ್ತರಾಧಿಮಠದ ದ್ವೇಷದಿಂದಲೇ ಈ ಎಲ್ಲ ಅಂತೆ ಕಂತೆಗಳನ್ನು ಕಟ್ಟಿ, ಹಲವಾರು ಕತೆಗಳನ್ನು ಕಟ್ಟಿ ಆನೆಗೊಂದಿಗೆ ಬದಲಾಯಿಸಲು ಪ್ರಯತ್ನಿರುವುದು ಗೊತ್ತಾಗುತ್ತದೆ.  ಒಬ್ಬ ಈಮೇಲ್ ಲೇಖಕನಂತೂ ಉತ್ತರಾಧಿಮಠದವರು ಮಾಧ್ವರೇ ಅಲ್ಲವೆಂದು ಘೋಷಿಸಿದ್ದಾರೆ.
ಅಲ್ಲಿ ರಘುಕಾಂತತೀರ್ಥರು ಛತ್ರ ಕಟ್ಟಿಸಿದರೋ ಅಥವಾ ಉತ್ತರಾಧಿ ಮಠದವರು ಕಟ್ಟಿಸಿದರೋ, ಅಥವಾ ಬೇರಾರೋ ಕಟ್ಟಿಸಿದರೋ ಅದು ಅಸಂಬದ್ದ. ಖಂಡಿತ ಮಲಖೇಡದಲ್ಲಿ ಈಗಲೂ ಜಾಸ್ತಿ ಮನೆಗಳಿಲ್ಲ. ಜಯತೀರ್ಥರೂ ಜಾಸ್ತಿ ಜನಜಂಗುಳಿಯಿರಬಾರದೆಂದೇ ಆ ಗುಹೆಯಲ್ಲಿ ವಾಸಿಸುತ್ತಿದ್ದಾರೆ. ಮಂತ್ರಾಲಯದಲ್ಲೂ ರಾಯರ ವೄಂದಾವನ ಪ್ರತಿಷ್ಟೆಗಿಂತ ಮುಂಚೆ ಜಾಸ್ತಿ ಜನಜಂಗುಳಿಯಿರಲಿಲ್ಲ. ಸೋಂದಾದಲ್ಲೂ ವಾದಿರಾಜರಿಗಿಂತ ಮುಂಚೆ ಅದು ಅಷ್ಟು ಪ್ರಸಿದ್ಧವಾಗಿರಲಿಲ್ಲ. ಸೋಂದಾಕ್ಕೆ ಈಗ ಹೋಗುತ್ತಿರುವ ಜನಪ್ರವಾಹದ ೧/೧೦೦ ಭಾಗ ಕೂಡಾ ೨೦ ವರ್ಷದ ಹಿಂದೆ ಹೋಗುತ್ತಿರಲಿಲ್ಲ. ಯಾವುದೇ ಕ್ಷೇತ್ರದಲ್ಲೂ ಅಲ್ಲಿನ ಬೆಳವಣಿಗೆ, ಅನುಕೂಲ ಮುಂತಾದುವನ್ನು ಅನುಸರಿಸಿ ಜನ ಬರುತ್ತಾರೇ ಹೊರತು, ಹಿಂದಿನ ಕಾಲದಲ್ಲಿ ಈಗಿನ ರೀತಿ ವಾಹನ ಸೌಲಭ್ಯವಿರಲಿಲ್ಲವೆನ್ನುವುದನ್ನು ನಾವು ಮರೆಯಬಾರದು.
ಈ ಎಲ್ಲ ದೃಷ್ಟಿಗಳಿಂದ ಗಮನಿಸಿದಾಗ ಬರೀ ಉತ್ತರಾಧಿಮಠದ ದ್ವೇಷದಿಂದಲೇ ಆನೆಗೊಂದಿಗೆ ಹೆಚ್ಚು ಮಹತ್ವ ಕೊಟ್ಟು ಮೂಲ ವೃಂದಾವನಕ್ಕೆ ಧಿಕ್ಕರಿಸಿರುವಂತೆ ಕಂಡುಬಂದಿದೆ.

 

ಅಧ್ಯಾಯ ೮  – ಆನೆಗೊಂದಿ ದೇವರನಾಮ

ಶ್ರೀ ಜನಾರ್ಧನ ವಿಠಲರ ಶ್ರೀ ನವವೃಂದಾವನದ ಸ್ತೋತ್ರ

ರತ್ನಗಳ ನೋಡಿ ಕೃತಾರ್ಥನಾದೆ |
ಉತ್ತಮೋತ್ತಮಾನಂದ ತೀರ್ಥರಾಬ್ಧಿ ಜನಿತ ನವ | ಪ |
ಧರೆಯೊಳಗೆ ಗಜಕೋಣಪುರ ಸಮೀಪದಿ |
ಮೆರೆವ ಸರಿತ ಶ್ರೇಷ್ಟಳೋ ತುಂಗ ಮಧ್ಯಸ್ಥಿತಾ |
ಶಿರಿ ಮೂಲರಾಮಸೀತಾ ವೇಣುಧರರಿಪ್ಪಾ |
ವರ ವಿಟ್ಟಲ ಸ್ವಚಿತ್ತ ಯತಿವರರೆಂಬಾ ಸುನವಾ |೧ |
ಎರಡೇಳು ವೃಂದಾವನದಿ ಪದ್ಮನಾಭ |
ತೀರ್ಥರೂ ಕವೀಂದ್ರರೂ ಸುವಾಗೀಶ ಯತಿಯೂ |
ಗುರುವ್ಯಾಸಮುನಿ ಶ್ರೀನಿವಾಸ ಸುಧೀಂದ್ರ |
ರಘುವರ್ಯರಾ ಶ್ರೀರಾಮತೀರ್ಥಾಖ್ಯ ನವ | ೨ |
ಮರಳೆ ವ್ಯಾಸೋತ್ತುಮಾಕರ್ನಾಟಕವೆಂಬ |
ಎರಡೊಂದು ಮತದಲ್ಲಿ ಚತುರಾಚತುರರೂ |
ಮೆರೆದರು ಜನಾರ್ಧನವಿಠಲನ ಪದ ಸರ |
ಸಿರೋರುಹ ಭ್ರಮರಾರೆಂದೆನಿಸಿಕೊಂಬ ಸುನವ || ೩ ||
 ಶಂಕೆ – ಈ ದೇವರನಾಮವನ್ನು ರಚಿಸಿದವರು ಯಾರು? ಬೇರೆ ಯಾರೋ ರಚಿಸಿ ಜನಾರ್ಧನ ವಿಠಲರ ಹೆಸರಿನಲ್ಲಿ ಹಾಕಿದ್ದಾರಾ? ಮೊದಲ ಚರಣದ ಸಾಹಿತ್ಯವನ್ನು ಕಷ್ಟಪಟ್ಟು ಕೂಡಿಸಲಾಗಿದೆಯಾ? ೨ ಮತ್ತು ೩ನೇ ಸಾಲಿನಲ್ಲಿ ಪ್ರಾಸವೇ ಇಲ್ಲವೇ? ಜಯತೀರ್ಥರ ಹೆಸರನ್ನು ಬಿಟ್ಟು ರಘುವರ್ಯರನ್ನು ಸೇರಿಸಲಾಗಿದೆಯಾ? ಇದೊಂದು ದೋಷಯುಕ್ತ ರಚನೆಯಾ? ಇಷ್ಟೆಲ್ಲಾ ಅನುಮಾನಗಳನ್ನು ೪೫೦ಪುಟದ ಗ್ರಂಥ ಕರ್ತರು ಪ್ರಶ್ನಿಸಿದ್ದಾರೆ.
ಪಲ್ಲವಿಯನ್ನು ನೋಡಿದಾಗ ನವರತ್ನಗಳಂತಿರುವ ಯತಿಗಳನ್ನು ನೋಡಿ ಕೃತಾರ್ಥನಾದ ಭಾವವನ್ನು,  ಎಲ್ಲರಿಗೂ ಉತ್ತಮರಾದ ಆಚಾರ್ಯ ಮಧ್ವರ ಸಮುದ್ರವೆಂಬ ಮತದಲ್ಲಿ ಜನಿತ ನವರತ್ನಗಳನ್ನು ನೆನಪಿಸಿದ್ದಾರೆ.
ಗಜಗಹ್ವರದ ಸಮೀಪದಲ್ಲಿ ಹರಿವ ಶ್ರೇಷ್ಟಳಾದ ತುಂಗೆಯ ಮಧ್ಯದಲ್ಲಿರುವಂತ ಶ್ರೀ ಮೂಲ ರಾಮ ಸೀತಾ ವೇಣುಧಾರಿಗಳಿರುವ ಅರ್ಥಾತ್ ಮೂಲ ಸೀತಾ ರಾಮದೇವರನ್ನು ಪೂಜಿಸಿದ ಯತಿಗಳಿರುವ, ಸ್ವಚಿತ್ತರಾದ – ಅರ್ಥಾತ್ ಪರಮಾತ್ಮನಲ್ಲಿ ಸದಾ ಚಿತ್ತರಾದ ಯತಿವರರಿರುವ ಶ್ರೇಷ್ಟವಾದ ನವವೃಂದಾವನ.   ರಾಮಸೀತಾದೇವರನ್ನು ಪೂಜಿಸಿದ ಯತಿಗಳು ರಘುವರ್ಯರಿರಬಹುದು, ಸುಧೀಂದ್ರತೀರ್ಥರಿರಬಹುದು, ಯಾರೇ ಆಗಲಿ ಅದು ಅನ್ವಯವಾಗುತ್ತದೆ. ವೇಣುಧರ ಎಂದರೆ ಕೃಷ್ಣನನ್ನು ಪೂಜಿಸಿದ ವ್ಯಾಸರಾಜರು, ರಾಮತೀರ್ಥರು, ಶ್ರೀನಿವಾಸತೀರ್ಥರು.  ಗುರುವ್ಯಾಸಮುನಿ ಪದದಲ್ಲಿ ಬಹುಶ: ಜನಾರ್ಧನ ವಿಠಲರು ಗೋವಿಂದ ವಡೆಯರನ್ನು ನೆನಪಿಸಿಕೊಂಡಿರಬಹುದು. ಏಕೆಂದರೆ ಬೇರೆ ಯಾರಿಗೂ ಗುರು ಪದವನ್ನು ಪ್ರಯೋಗಿಸದೆ ವ್ಯಾಸರಾಜರಿಗೆ ಪ್ರಯೋಗಿಸಿರುವಾಗ, ಗುರುಗಳಾದ ವ್ಯಾಸರಾಜರನ್ನು ಹೊಂದಿರುವ ಅಂದರೆ ಗೋವಿಂದ ವಡೆಯರು  ನೆನಪಿಸಿರಬಹುದು.  ಅಥವಾ ಗುರು ವ್ಯಾಸರಾಜ ಎಂದು ಹೇಳಿ ಗೋವಿಂದ ವಡೆಯರು ಪೀಠಾಧಿಪತಿಗಳಾಗಿಲ್ಲದಿದ್ದರಿಂದ  ಬಿಟ್ಟಿರಬಹುದು.  (ಅವರಿಗಿಂತ ಮುಂಚೆ ಅಂದರೆ ಗುರುಗಳಿಗಿಂತ ಮುಂಚೆ ವೃಂದಾವನಸ್ಥರಾದುದರಿಂದ)  ಆದರೆ ಜಯತೀರ್ಥರ ಹೆಸರೇನೂ ಬಂದಿಲ್ಲವಲ್ಲ.
ಎರಡೇಳು ವೃಂದಾವನದಿ ( ೨+೭ = ೯) ವೃಂದಾವನದಲ್ಲಿ ಪದ್ಮನಾಭತೀರ್ಥರು, ಕವೀಂದ್ರರೂ, ವಾಗೀಶತೀರ್ಥರೂ, ವ್ಯಾಸರಾಜರೂ, ಶ್ರೀನಿವಾಸತೀರ್ಥರೂ, ಸುಧೀಂದ್ರತೀರ್ಥರು, ರಘುವರ್ಯರೂ, ಶ್ರೀ ರಾಮತೀರ್ಥಾರು ಇರುವಂತ ನವವೃಂದಾವನ.   ಇಲ್ಲಿ ಪ್ರಾಸವೇ ಇಲ್ಲವೆಂದು ಆನೆಗೊಂದಿವಾದಿಗಳ ವಾದ.   ಪ್ರಾಸ ಇದೆ.  ಪ್ರತಿ ಸಾಲಿನಲ್ಲೂ ಎರಡನೇ ಪದ ’ರ’ ಕಾರದಿಂದ ಕೂಡಿದೆ.  ಅದು ಪ್ರಾಸವಲ್ಲವೇ.  ಪ್ರಾಸವೆಂದರೆ ಸಾಲಿನ ಕಡೆಯಲ್ಲಿ ಮಾತ್ರ ಇರಬೇಕೆಂದೇನೂ ನಿಯಮವಿಲ್ಲ.    ಇದೇ ಪುಸ್ತಕಕರ್ತರು ತಮ್ಮ ೨೪೪ನೇ ಪೇಜಿನಲ್ಲಿ ಕೊಟ್ಟಿರುವ ಗೋಪಾಲದಾಸರದ್ದೆಂಬ ಸುಳಾದಿಯಲ್ಲೂ ಪ್ರಾಸವಿಲ್ಲ.  ಕೃಷ್ಣದೇವರಾಯ ರಚಿಸಿದ್ದನೆಂದು ಹೇಳಲಾದ ಪದ್ಯ ಪುಟ ಸಂಖ್ಯೆ ೩೬೦ರಲ್ಲಿಯೂ ಪ್ರಾಸವಿಲ್ಲ.  ಪುಟ ೩೨೨ರಲ್ಲಿರುವ ಹೊನ್ನಾಳಿಯ ರಾಯರ ಮೃತ್ತಿಕಾ ದೇವರನಾಮವೆಂದು ಕರೆಯಲ್ಪಟ್ಟ ದೇವರನಾಮದಲ್ಲೂ ಪ್ರಾಸ ಕಾಣುತ್ತಿಲ್ಲ.   ವಿಜಯದಾಸರ ಜಯತೀರ್ಥರ ಅವತಾರ ಸಮಾಪ್ತಿಯ ವರ್ಣನಾ ದೇವರನಾಮ (ಪುಟ ೩೯೬) ಅಲ್ಲೂ ಪ್ರಾಸವಿಲ್ಲ.  ಮೂಲವೃಂದಾವನ ಕಲಹಕ್ಕೆ ಮುಖ್ಯ ಕಾರಣಕರ್ತರಾದ ಶ್ರೀ ಟಿ.ಕೆ.ವಿ. ಅವರ ಶುದ್ಧ ಪಾಠವೆಂದು ಹೇಳಲ್ಪಟ್ಟ ದೇವರನಾಮ “ವೃಂದಾವನಗಳಿಗೆ ಆನಮಿಪೆ ನಿತ್ಯ….” ಪುಟ ಸಂ ೨೦೬,  ಅದರಲ್ಲೂ ಯಾವ ಪ್ಯಾರಾದಲ್ಲೂ ಪ್ರಾಸವಿಲ್ಲ.  ಆದ್ದರಿಂದ ೪೫೦ಪುಟಗಳ ಗ್ರಂಥಕರ್ತರೇ ಪುಟ ೨೦೬ರಲ್ಲಿ ಹೇಳಿಕೊಂಡಿರುವಂತೆ  ಅದು ಟಿ.ಕೆ.ವಿ. ಅವರ ಪಾಠವೇ ಹೊರತು ಜಗನ್ನಾಥದಾಸರ ಪಾಠವಲ್ಲ.
ಎರಡನೇ ಪ್ಯಾರಾದಲ್ಲಿರುವ ಎರಡನೇ ಸಾಲಿನಲ್ಲಿಯೂ ಪ್ರಾಸವಿದೆ.  ಹೇಗೆಂದರೆ  ’ತೀರ್ಥರೂ’ ಇಂದ ಆರಂಭಿಸುವ ಪದದಲ್ಲಿ ಮೊದಲನೇ ಅಕ್ಷರ “ತೀ” , ಎರಡನೇ ಅಕ್ಷರ “ರ+ರ್ಥ”, ಅಲ್ಲೂ “ರ” ಇದೆ.  ಈ ರೀತಿಯ ಪ್ರಾಸ ಪದ ಪ್ರಯೋಗ ಸಾಕಷ್ಟು ದಾಸರ ಪದಗಳಲ್ಲಿ ಉದಾಹರಿಸಬಹುದು.
ಆದ್ದರಿಂದ ಸುಮ್ಮನೆ ಪ್ರಾಸ, ತಾರತಮ್ಯ, ಮುಂತಾದ ಪದವನ್ನು ಉಪಯೋಗಿಸಿ ದಾಸರ ಹೆಸರಿನಲ್ಲಿ ಜನರಿಗೆ ಅಪನಂಬಿಕೆ ಮೂಡುವಂತ ಪ್ರಯತ್ನಪಟ್ಟಿರುವಂತೆ ಕಾಣುತ್ತದೆ.
ಇನ್ನು ಕಡೆಯ ಸಾಲಿನಲ್ಲಿ ಬರುವ ಚರಣ ದೇವರಿಗೇ ಪ್ರೀತಿ ಎಂದು ಹಾಸ್ಯ ಮಾಡಲು ಪ್ರಯತ್ನಿಸಿದ್ದಾರೆ ೪೫೦ ಪುಟಗಳ ಲೇಖಕರು.  ವೇದವ್ಯಾಸದೇವರ ಮತವನ್ನು ದ್ವೈತಮತದಲ್ಲಿ, ಅತ್ಯಂತ ಚತುರ ಕೋವಿದರು ಈ ಕರ್ನಾಟಕ ದೇಶದಲಿ ಮೆರೆದರು.  ಇತ್ಯಾದಿ.  ನಮಗೆ ಸಾಹಿತ್ಯ ಅರ್ಥವಾಗಲಿಲ್ಲವೆಂದ ಮಾತ್ರಕ್ಕೆ ಅದು ಅನರ್ಥಪೂರ್ಣ ಸಾಹಿತ್ಯವೆಂದು ಜರೆಯುವುದು ಸರಿಯೇ?

ಅಧ್ಯಾಯ ೯
ವಿಮರ್ಶಕರ ವಿಮರ್ಶೆಯ ವಿಮರ್ಶೆ 

ಇಂದು ಬೆಳಿಗ್ಯೆ “ಶ್ರೀ ಜಯತೀರ್ಥರ ಮೂಲವೃಂದಾವನ ಸ್ಥಳ” ಎಂಬ ಪುಸ್ತಕದ ಅದರ ಸಂಪಾದಕದ್ವಯರುಲ್ಲಿ ಇರುವುದು ಸಂಶೋಧನಾತ್ಮಕವೆಂದು ೩೦ಕ್ಕೂ ಹೆಚ್ಚು ವಿದ್ವಜ್ಜನರು ಪ್ರಶಂಸಿದ್ದಾರೆಂಬ ಹೇಳಿಕೆಯನ್ನು ಈಮೇಲಿನಲ್ಲಿ ಪ್ರಭಂಜನಾಚಾರ್ಯರ ಶ್ರೀವ್ಯಾಸಮಧ್ವ ಪತ್ರಿಕೆಯಲ್ಲಿ ಬಂದ ಲೇಖನಕ್ಕೆ ಉತ್ತರಿಸಿದ್ದಾರೆ.  ಆದರೆ ಅಲ್ಲಿರುವ ವಿದ್ವಜ್ಜನರ ಪ್ರಶಂಸೆಗಳನ್ನು ನೋಡಿದರೆ, ಅವರಲ್ಲಿ ಹಲವಾರು ಪ್ರಭಾವಕ್ಕೆ ಒಳಗಾಗಿ ಅಥವಾ ಪೂರ್ವಯೋಜಿತದಂತೆ ಅಥವಾ ತಾವು ಅಧ್ಯಯನ ಮಾಡದಿದ್ದರೂ ಸುಮ್ಮನೆ ಹೊಗಳಿ ಹೇಳಿಕೆಗಳನ್ನು ಕೊಟ್ಟಿರುವಂತೆ ತಿಳಿದುಬರುತ್ತದೆ.  ಕೆಲವರು ಈ ಪುಸ್ತಕವನ್ನು ಒಪ್ಪಿಲ್ಲವೆಂದೂ ತಿಳಿದುಬರುತ್ತದೆ.   ಅದರ ಒಂದು ಸಂಕ್ಷಿಪ್ತ ನೋಟವೇ ಈ ಅಧ್ಯಾಯ.
ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ತಮ್ಮ ಅನುಗ್ರಹ ಸಂದೇಶದಲ್ಲಿ ಹೀಗೆಂದಿದ್ದಾರೆ.
“ಟೀಕಾರ್ಚಾರ್ಯರಂತಹ ಮಹಾಪುರುಷರ ಬಗ್ಯೆ ಶತಮಾನಗಳಿಂದ ಬಂದ ಪ್ರಸಿದ್ಧಿಯನ್ನನುಸರಿಸಿ, ಮಳಖೇಡದಲ್ಲಿಯೇ ಇದೆಯೆಂದು ನಾನು ಅನೇಕ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಿದ್ದೆ.   “ಜಯತೀರ್ಥರ ಮೂಲ ವೃಂದಾವನ ಸ್ಥಳ ಗಜಗಹ್ವರ” ಎಂಬ ಕೃತಿಯಲ್ಲಿ ಅದು ನವವೃಂದಾವನದಲ್ಲಿದೆ  ಯೆಂದು ಪ್ರತಿಪಾದಿಸಲಾಗಿದೆ.  ಈ ಕೃತಿಯ ಲೇಖಕರ ಬಗ್ಯೆ ನನಗೆ ವಿಶೇಷ ಅಭಿಮಾನವಿದೆ.  ಈ ವಿಷಯದ ಬಗ್ಯೆ ಲೇಖಕರು ಈ ಕೃತಿಯಲ್ಲಿ ತುಂಬಾ ವಿಮರ್ಶೆಯನ್ನು ಮಾಡಿದ್ದಾರೆ.  ನಾನು ನನ್ನ ಹಿಂದಿನ ವಿಚಾರಕ್ಕೆ ಈಗಲೂ ಅಂಟಿಕೊಂಡಿದ್ದರೂ “ವಾದೇ ವಾದೇ ಜಾಯತೇ ತತ್ವಭೋದ:” ಎಂಬ ಉಕ್ತಿಯಂತೆ ವಿಮರ್ಶೆ ನಡೆದಂತೆ ಸ್ಪಷ್ಟ ತಿಳುವಳೆಕೆಯು ಮೂಡಲು ಅನುಕೂಲವಾಗುತ್ತದೆಂದು, ಚರ್ಚೆಗಳು ನಡೆದು ಭಿನ್ನಾಭಿಪ್ರಾಯಗಳು ನಿವಾರಣೆಯಾಗಲೆಂದು ಆಶಿಸುತ್ತೇವೆ”.
ಪರಮಪೂಜ್ಯ ಶ್ರೀಪಾದಂಗಳವರು ೨೦೦೭ ರಲ್ಲಿ ಪ್ರಕಟವಾದ “ಶ್ರೀ ಟೀಕಾಕೃತ್ಪಾದರ ಮೂಲ ವೃಂದಾವನ” ಪುಸ್ತಕದಲ್ಲಿ ಹೇಳಿದ್ದ ವಾಕ್ಯಗಳು ಇಂತಿವೆ.  “ಶ್ರೀಕಾಂತಾಚಾರ್ಯರು ಹೆಚ್ಚಿನ ಸಂಶೋಧನೆಯನ್ನು ನಡೆಸಿ ಮಳಖೇಡದಲ್ಲಿಯೇ ಶ್ರೀ ಜಯತೀರ್ಥರ ವೃಂದಾವನವಿದೆ ಎಂದು ಅನೇಕ ಆಧಾರಗಳಿಂದ ಸಮರ್ಥಿಸುವ ಈ ಕೃತಿಯನ್ನು ಬರೆದಿದ್ದಾರೆ.  ಟೀಕಾರಾಯರ ವೃಂದಾವನವು ಮಳಖೇಡದಲ್ಲಿಯೇ ಇದೆ ಎಂಬುದು ಶತಮಾನಗಳಿಂದಲೂ ಎಲ್ಲರೂ ತಿಳಿದುಕೊಂಡು, ಅದರಂತೆ ನಡೆದುಕೊಂಡು ಬಂದಿದ್ದಾರೆ. ಇಂತಹ ಶ್ರದ್ಧಾಕ್ಷೇತ್ರಗಳ ಬಗ್ಯೆ ಅನವಶ್ಯವಾಗಿ ವಿವಾದ ಮಾಡುವುದು ಸೂಕ್ತವಲ್ಲ. ತಿರುಪತಿ ಶ್ರೀನಿವಾಸ, ಉಡುಪಿ ಕೃಷ್ಣನ, ರಾಮಜನ್ಮಭೂಮಿಗಳ ಬಗ್ಗೆಯೂ ಇಂತಹ ವಿವಾದಗಳನ್ನು ಹಲವರು ಎಬ್ಬಿಸಿದ್ದಾರೆ.  ಡಾ: ಬಿ.ಎನ್.ಕೆ.ಶರ್ಮ, ಮತ್ತು ಟಿ.ಕೆ. ವೇಣುಗೋಪಾಲದಾಸರ ಬಗ್ಯೆ ನನಗೆ ವಿಶೇಷ ಗೌರವ ಅಭಿಮಾನಗಳಿವೆ.  ಆದರೆ ಪರಂಪರೆಯಿಂದ ಪ್ರಚಲಿತವಾದ ಇಂತಹ ವಿಷಯಗಳ ಬಗ್ಯೆ ನಿರವಕಾಶ ಪುರಾವೆಗಳಿಲ್ಲದೆ ವಿವಾದಗಳನ್ನು ನಿರ್ಮಿಸುವುದರಿಂದ ಸಮಾಜದಲ್ಲಿ ಅನವಶ್ಯಕ ಗೊಂದಲಗಳಿಗೆ ಅವಕಾಶ ವಾಗುವುದರಿಂದ ಇಂತಹ ವಿವಾದಗಳನ್ನು  ನಾವು ಬೆಂಬಲಿಸುವುದಿಲ್ಲ. ಪ್ರಚಲಿತ ಪರಂಪರೆಗೆ ಅನುಗುಣವಾಗಿ ಮಳಖೇಡದಲ್ಲಿಯೇ ಶ್ರೀ ಜಯತೀರ್ಥರ ವೃಂದಾವನ ಇದೆಯೆಂದು ಶ್ರೀಕಾಂತಾಚಾರ್ಯರ ಸಂಶೋಧನಾತ್ಮಕ ಕೃತಿಯನ್ನು ನಾವು ಸ್ವಾಗತಿಸುತ್ತೇವೆ”.
ಈ ಎರಡೂ ಅನುಗ್ರಹ ಸಂದೇಶಗಳೇ.  ಒಬ್ಬರೇ ಯತಿಗಳೇ ನೀಡಿದ್ದು.  ಎರಡರಲ್ಲೂ ಅವರ ನಿಲುವು ಒಂದಾಗಿದೆ.  ಎಲ್ಲಿಯೂ ತಮ್ಮ ನಿಲುವನ್ನು ಪರಮಪೂಜ್ಯ ಶ್ರೀಪಾದಂಗಳವರು ಬದಲಿಸಿಲ್ಲ ಮತ್ತು ಮಳಖೇಡವನ್ನೇ ಒತ್ತಿ ಹೇಳಿದ್ದಾರೆಂದು ತಿಳಿಯುತ್ತದೆ.  ಆದ್ದರಿಂದ ಪರಮಪೂಜ್ಯ ಪೇಜಾವರ ಶ್ರೀಪಾದಂಗಳವರು ಹೊಸ ಪುಸ್ತಕಕ್ಕೆ ತಮ್ಮ ಅನುಗ್ರಹ ಸಂದೇಶವನ್ನು ನೀಡಿ ಅನುಗ್ರಹಿಸಿದ್ದಾರೆಯೇ ಹೊರತು, ಅವರ ವಾದವನ್ನು ಒಪ್ಪಿಲ್ಲ.  ಅವರು ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರನ್ನು ಗೌರವಿಸುತ್ತೇನೆಂದು ಹಿಂದಿನ ಗ್ರಂಥದಲ್ಲಿ ಹೇಳಿದ್ದರೆ, ಹೊಸ ಗ್ರಂಥದಲ್ಲಿ ಪುಷ್ಕರಾಚಾರ್ಯರ ಬಗ್ಯೆ ಅಭಿಮಾನವಿದೆ ಯೆಂದಿದ್ದಾರೆ.  ಅಭಿಮಾನವನ್ನು ವ್ಯಕ್ತಪಡಿಸಿರುವುದು ಅವರ ಸಮ್ಮತಿಯ ಸೂಚಕವಲ್ಲ.
ಈ ಸಂದೇಶದಲ್ಲಿ ತಾವು ಈ ಗ್ರಂಥವನ್ನು ಓದಿದರೂ ತಮ್ಮ ಹಿಂದಿನ ವಿಚಾರಕ್ಕೆ ಈಗಲೂ ಅಂಟಿಕೊಂಡಿದ್ದೇವೆ ಎಂದಿದ್ದಾರೆ.  ಆದ್ದರಿಂದ ಈ ಪುಸ್ತಕದಲ್ಲಿರುವ ವಿಮರ್ಶೆಗಳು ಅವರಿಗೆ ಒಪ್ಪಿಗೆಯಾಗಿದೆ ಯೆಂದು ಚಿತ್ರಿಸಿರುವುದು ಸಮ್ಮತವಲ್ಲ. ವಿಮರ್ಶೆ ಮಾಡುವುದು ತಪ್ಪಲ್ಲ ಎಂಬುದು ಅವರ ವಾದವೇ ಹೊರತು, ಪೇಜಾವರರು ಆನೆಗೊಂದಿಯನ್ನು ಒಪ್ಪಿಲ್ಲ.
 ೨.  ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರತಿಕ್ರಿಯೆ ಹೀಗಿದೆ –  ಶ್ರೀ ಜಯತೀರ್ಥರು ಎಲ್ಲಿ ನೆಲೆಸಿದ್ದಾರೆ? ಅವರ ಕೃತಿಗಳಲ್ಲಿ, ಅವನ್ನು ಅಧ್ಯಯನ ಮಾಡಿದ ಪಂಡಿತರ ಹೃದಯಪೀಠದಲ್ಲಿ, ಅಹಂಕಾರವಿರದ, ಮತಾಂಧತೆಯಿರದ ನಿಜವಾದ ವಿದ್ವಾಂಸರ ಹೃದಯಗಹ್ವರದಲ್ಲಿ, ಮಠಾಂಧೆತೆಯಿರದ ಸಜ್ಜನಿಕೆಯ ಮನೋ ಮಂದಿರದಲ್ಲಿ.    ಇಂತಹ ಆಧ್ಯಾತ್ಮ ಚಿಂತಕರಿಗೆ ಶ್ರೀ ಜಯತೀರ್ಥರ ಭೌತಿಕವಾದ ಸ್ಮಾರಕ ಎಲ್ಲಿದೆ ಎನ್ನುವ ಸಂಗತಿ ಅಷ್ಟೊಂದು ಮುಖ್ಯವಲ್ಲ. ಕೆಲವೊಮ್ಮೆ ಇದು ಕೇವಲ ಮಠೀಯ ಒಣಪ್ರತಿಷ್ಟೆಯ, ಜಗಳದ ಸಂಕೇತವೇ ಆಗುವ ಅಪಾಯವೂ ಉಂಟು.   ಮಾಯಾವಾದ – ತತ್ವವಾದ ಗಳಂತೆ, ತಮ್ಮ ತಮ್ಮ ಮೂಗಿನ ನೇರಕ್ಕೇ ಜಯತೀರ್ಥರನ್ನು ಎಳೆದು ತರಲು ಈ ಎಲ್ಲ ಹಗ್ಗ ಜಗ್ಗಾಟ.
.
ಇತಿಹಾಸವೆಂದರೆ ಮೊಂಡುವಾದವಲ್ಲ, ಸತ್ಯದ ಹುಡುಕಾಟ.  ಮೊದಲೇ ನಿರ್ಧಾರವನ್ನು ತಲೆಯಲ್ಲಿ ತುಂಬಿ ಅದಕ್ಕೆ ತಕ್ಕಂತೆ ಆಧಾರಗಳನ್ನು ಹೊಂದಿಸುವುದೋ, ಅರ್ಥೈಸುವುದೋ ವಿಮರ್ಶೆಯಲ್ಲ, ಮೊದಲು ತಲೆಯನ್ನು ತೊಳೆದು ಖಾಲಿ ಮಾಡಿಕೊಂಡು ಸ್ಪಷ್ಟವಾದ ಆಧಾರದ  ನೆಲೆಯಲ್ಲಿ ಸತ್ಯವನ್ನರಸುವುದು.   ಇತಿಹಾಸ ಸಂಶೋಧನೆ ನಿಂತಿ ಪಾಚಿಗಟ್ಟಿದ ನೀರಾಗಬಾರದು.  ನಿತ್ಯ ನಿರ್ಮಲವಾಹಿನಿಯಾಗಬೇಕು.  ಇಂತ ಚಿಂತನೆಗೆ ಯಾವ ಪೂರ್ವಾಗ್ರಹದ ಸೋಕೂ ಇಲ್ಲದ ಮುಕ್ತ ಮನಸ್ಸು ಬೇಕು.  ’ದುರಾಗ್ರಹ ಗೃಹೀತತ್ವಾದ್ ವರ್ತಂತೇ ಸಮಯಾ: ಸದಾ’.  ಸತ್ಯವನ್ನು ತಿಳಿಯುವ ಮೊದಲು ಮಠೀಯ ಆವೇಶಗಳಿಂದ ಹೊರಬಂದು ಚಿಂತಿಸುವುದು ತೀರಾ ಅಗತ್ಯ.  ಅಂತಹ ಆರೋಗ್ಯವಂತ ಚಿಂತನೆಯ ಜಾಡು ಈ ಪ್ರಬಂಧದಲ್ಲಿ ಗೋಚರವಾಗುತ್ತದೆ.  ಸತ್ಯಚಿಂತಕರ ವಿಮರ್ಶೆಯ ದೋಣಿ ಸಾಗಲಿ. ಸತ್ಯದರ್ಶನದ ದಡ ಸೇರಲಿ ಎಂದು ಹಾರೈಸುತ್ತೇನೆ”.  –   ಇವಿಷ್ಟೂ ಬನ್ನಂಜೆ ಗೋವಿಂದಾಚಾರ್ಯರು ಇತ್ತೀಚಿನ ಪುಸ್ತಕದಲ್ಲಿ ನೀಡಿದ ಪ್ರತಿಕಿಯೆ.
ಇದೇ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀ ಮುಕ್ಕುಂದಿ ಶ್ರೀಕಾಂತಾಚಾರ್ಯರ “ಶ್ರೀಮಟ್ಟಿಕಾ ಕೃತ್ಪಾದರ ಮೂಲ ವೃಂದಾವನ” (೨೦೦೭) ರ ಗ್ರಂಥಕ್ಕೆ ಮುನ್ನುಡಿಯನ್ನು ಬರೆದಾಗ ಹೀಗೆ ಹೇಳಿದ್ದಾರೆ –
ಸತ್ಯಾನ್ವೇಷಣೆ ಒಂದು ನಿರಂತರ ಕಿಯೆ.  ಆದರೆ ಸತ್ಯ ಸುಲಭದಲ್ಲಿ ದಕ್ಕುವಂತದಲ್ಲ.  ಕೆಲವರು ತಮಗೆ ಸತ್ಯ ಸಿಕ್ಕಿತು ಎಂದು ಭ್ರಮಿಸುತ್ತಾರೆ.  ತಮಗೆ ಸಿಕ್ಕಿದ್ದೇ ಸತ್ಯವೆಂದು ಭ್ರಮಿಸಿ, ಸಂಭ್ರಮಿಸುತ್ತಾರೆ.  ಕೆಲವೊಂದು ಸತ್ಯದ ಮುಖವಾಡ ಮಾತ್ರ ಸಿಗುತ್ತದೆ.  ಕೆಲವೊಮ್ಮೆ ಸತ್ಯದ ಯಾವುದೋ ಒಂದು ಮುಖ ಮಾತ್ರ ಸಿಗುತ್ತದೆ, ಸತ್ಯ ದೂರದಲ್ಲಿ ನಿಂತು ನಗುತ್ತಿರುತ್ತದೆ.    ಕೆಲವೊಂದು ನಮ್ಮ ಪೂರ್ವ ನಿರ್ಧಾರ ತಪ್ಪು ಎಂದು ಮತ್ತೆ ತಿಳಿಯುತ್ತದೆ.  ಆಗ ನಾವೇ ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಾಗುತ್ತದೆ.  ಇಂತ ಸಂದರ್ಭದಲ್ಲಿ ಪೂರ್ವೋಕ್ತ ವಿರೋಧ ಮತ್ತು ಸ್ವವ್ಯಾಹೃತಿ ಗುಣವಾಗಿಬಿಡುತ್ತ್ದೆ. ಇವೆಲ್ಲ ಒಬ್ಬ ಸಂಶೋಧಕನಲ್ಲಿರಬೇಕಾದ ಎಚ್ಚರಗಳು ಶ್ರೀ ಚಿಕ್ಕೇರೂರು ಶ್ರೀಕಾಂತಾಚಾರ್ಯರಲ್ಲಿ ಈ ಎಚ್ಚರ ಇದೆ ಎಂದೇ ಅವರ “ಶ್ರೀಮಟ್ಟಿಕಾಕೃತ್ಪಾದರ ಮೂಲ ವೃಂದಾವನ” ಎಂಬ ಕೃತಿಯಲ್ಲಿ ಗಮನಾರ್ಹವಾಗುತ್ತದೆ.
ಇಂತ ಎಚ್ಚರ ಇರದವರುಂಟು.  ಅಂತವರು ತಾವೂ ದಾರಿ ತಪ್ಪುತ್ತಾರೆ. ಜನರನ್ನೂ ತಪ್ಪಿಸುತ್ತಾರೆ.  ಇಂತವರ ಬಗೆಗೆ ನಾವು ಎಚ್ಚರವಾಗಿರಬೇಕು.  ಸಂತೋಷದ ಸಂಗತಿ ಎಂದರೆ ಶ್ರೀಕಾಂತಾಚಾರ್ಯರು ಈ ವರ್ಗಕ್ಕೆ ಸೇರಿದವರಲ್ಲ.  ಅವರು ಪ್ರಾಚೀನ ಮತ್ತು ಅರ್ವಾಚೀನ ವಿದ್ಯೆಗಳನ್ನು ಓದಿದವರು.  ಪೂರ್ವದ ಆಧ್ಯಾತ್ಮದ ಜತೆಗೆ ಪಶ್ಚಿಮದ ಲೌಕಿಕವನ್ನೂ ಪರಿಚಯಿಸಿಕೊಂಡವರು.  ಸಂಸ್ಕೃತ ವಾಜ್ಞಯಕ್ಕೆ ಇಂತವರು ಬೇಕು. ಶ್ರೀಕಾಂತಾಚಾರ್ಯರು ಇನ್ನಷ್ಟು ಮಾಗುವುದನ್ನು ಮಾಗಿದ ಅವರಿಂದ ಇನ್ನಷ್ಟು ಪಕ್ವ ಫಲಗಳನ್ನು ನಾನು ನಿರೀಕ್ಷಿಸುತ್ತೇನೆ”.
ಈ ಎರಡೂ ಸಂದೇಶಗಳನ್ನು ನೀಡಿದವರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು.  ಈಗ ಎರಡನ್ನೂ ತಾಳೆ ಮಾಡಿ ನೋಡೋಣ. –
ಇತ್ತೀಚಿನ ಕೃತಿಯ ಬಗ್ಯೆ ಬರೆದ ಬನ್ನಂಜೆಯವರು  ಸಂಶೋಧನೆ ಯೆಂದರೇನು? ಸಂಶೋಧಕ ಹೇಗಿರಬೇಕು, ಪೂರ್ವನಿರ್ಧಾರಿತ ಭಾವನೆಗಳನ್ನು ಹೇರಿರಬಾರದೆಂದಿದ್ದಾರೆ.  ಇಲ್ಲಿ ಆನೆಗೊಂದಿ ಯನ್ನು ತಾವು ಒಪ್ಪಿರುವುದಾಗಿ ಅವರು ಎಲ್ಲೂ ಹೇಳಿಲ್ಲ.  ಸತ್ಯದರ್ಶನದ ದಡ ಸೇರಲಿ ಎಂದಿದ್ದಾರೆ.
ಅವರೇ ಬರೆದ ಮಲಖೇಡದ ಬಗ್ಯೆಯ ಪುಸ್ತಕದಲ್ಲಿ  – ಈ ಎಲ್ಲ ಸಂಶೋಧಕನಿಗಿರ-ಬೇಕಾದ ಅಂಶಗಳೆಲ್ಲವೂ ಅವರಲ್ಲಿದೆ ಎಂದಿದ್ದಾರೆ.
ಆದ್ದರಿಂದ ತಿಳಿಯುತ್ತದೆ, ಬಹುಶ: ಇತ್ತೀಚಿನ ಪುಸ್ತಕದಲ್ಲಿ ಸಂಶೋಧಕದ ಅಭಾವವು ಅವರಿಗೆ ಮನವರಿಕೆಯಾಗಿರಬೇಕು. ಏಕೆಂದರೆ ಪುಸ್ತಕದ ಆರಂಭದಲ್ಲಿ ಸಂಶೋಧನಾತ್ಮಕವೆಂದು ಹಣೆಪಟ್ಟಿ ಹಾಕಿಕೊಂಡಿದ್ದರೂ ಸಂಶೋಧನೆಯ ಯಾವುದೇ ಜಾಡು ಇದರಲ್ಲಿಲ್ಲ.  ಪ್ರತಿಯೊಂದು ಪುಟದಲ್ಲು ತಮ್ಮ ಪೂರ್ವ ನಿರ್ಧಾರಿತ/ ಪೂರ್ವಯೋಚಿತ ಆನೆಗೊಂದಿಗೇ ಪಟ್ಟು ಹಿಡಿದು ಸಾಧಿಸಲು ಪ್ರಯತ್ನಿಸಿರುವುದು ದಾಖಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ಪುಸ್ತಕ ಸಂಶೋಧನಾತ್ಮಕವಾಗಿರದೆ, ಕೆಲವು ಮಠೀಯ ಭಾವನೆಗಳನ್ನು ಬಿತ್ತಲು ವ್ಯವಸ್ಥಿತ ಸಂಚಾಗಿದೆ.

3.  Dr ಕೆ.ಎಸ್. ನಾರಾಯಣಾಚಾರ್ಯ, ಧಾರವಾಡ ಇವರ  “ಶಅಬ್ಬಾಸ್”  (ಪುಟ ೪೦೯) –

ಶ್ರೀಯುತರು ರಾಮಾನುಜಮತೀಯರು.  ಅವರ ವಾಕ್ಯ ಕೌಶಲ್ಯವನ್ನು ಮತ್ತು ಪೂರ್ವಾಗ್ರಹವನ್ನೂ ನೋಡಿರಿ ಅವರದೇ ವಾಕ್ಯಗಳಲ್ಲಿ –   ಶ್ರೀ ಜಯತೀರ್ಥರ ಮೂಲ ವೃಂದಾವನ ಸ್ಥಳ ಗಜಗಹ್ವರ” ಎಂಬ ಗ್ರಂಥದಲ್ಲಿ, ತಮ್ಮ ನಿರ್ಣಯವು ಸಾಧು, ಸತ್ತರ್ಕಯುಕ್ತ ನಿಶ್ಚಿತವಾಗ್ವೈಖರಿಯಿಂದ ಪ್ರತಿವಾದಿಗಳ ಬಾಯನ್ನು ಕಟ್ಟಿ ಹಾಕಿದೆ.  ವಿದ್ವಾಂಸರಿಗೆ ವಿದ್ಯೆಯ ಜೊತೆಗೇ ಪ್ರಾಮಾಣಿಕತೆಯೂ ಬೇಕು.  ಇದಿಲ್ಲದಾಗ ಶುಷ್ಕವಿವಾದಗಳು ಏಳುವುದು ಸಹಜ.  ತಾವು ಹೆಸರಿಸಿದ ಪ್ರತಿಪಕ್ಷಿಗಳ ಪೈಕಿ ನಾಲ್ವರೊಡನೆ ಈ ಪೂರ್ವದಲ್ಲಿ ನನಗೂ ನಿಮ್ಮದೇ ರೀತಿಯ ಸಂಘರ್ಷ (ಬೇರೆ ವಿಷಯಕ್ಕೆ) ಏರ್ಪಟ್ಟು, ನಾನು ಅವರ ಸಮಯ ಸಾಧಕ, ಹಠಪ್ರವೃತ್ತಿಯನ್ನು ನೋಡಿದ್ದೇನಾಗಿ, ನಿಮ್ಮ ವಾದದ ಸತ್ಯವು ನನ್ನ ಹೃದಯಕ್ಕೆ ನೇರವಾಗಿ ಪ್ರವೇಶಿಸಲು ಅನುಕೂಲವಾಗಿದೆ.  ಇಂತ ಸಣ್ಣ ವಿಷಯದಲ್ಲಿ ಅದೆಷ್ಟು ಕೋಣಗಳಿಂದ ಅದೆಷ್ಟು ಪ್ರಮಾಣಗಳನ್ನಿಟ್ಟು ತಾವು ಸತ್ಯಸ್ಥಾಪಸಿದ್ದೀರಿ.  ಮೆಚ್ಚುವಂತದ್ದು. 
ಎಂತಹ ವಿಮರ್ಶೆ? – ನಿಜವಾಗಲೂ ಅವರನ್ನು ವಿಮರ್ಶೆಗೆ ಒಳಪಡಿಸಿದ್ದೇ ಸಾಧನೆಯೆಂದೆನಿಸುತ್ತದೆ.  ಅವರ ಪೂರ್ವ ಯೋಚಿತ ಸಂಚಿಗನುಗುನವಾಗಿ ಬರೆದಿರುವುದು ಮೇಲ್ನೋಟದಲ್ಲೇ ಕಾಣುತ್ತದೆ.  ಅವರೇ ಹೇಳಿಕೊಂಡಿದ್ದಾರೆ “ತಾವು ಹೆಸರಿಸಿದ (“ಶ್ರೀ ಜಯತೀರ್ಥರ ಮೂಲವೃಂದಾವನಸ್ಥಳ ”  ಪುಸ್ತಕದಲ್ಲಿ ಹೆಸರಿಸಿದ)  ಪೈಕಿ ನಾಲ್ವರೊಡನೆ ಪೂರ್ವದಲ್ಲಿ ನನಗೂ ಸಂಘರ್ಷವಿತ್ತು, ಅವರ ಸಮಯಸಾಧಕ, ಹಠಪ್ರವೃತ್ತಿ”, ನೋಡಿದ್ದೇನೆ.  ಆದರೆ ಶ್ರೀಯುತರು ಆ ನಾಲ್ಕು ಮಂದಿಯ ಹೆಸರನ್ನು ಹೇಳಿಲ್ಲ.  ಬಹುಶ: ಬಾಳಗಾರು ಶ್ರೀನಿವಾಸಾಚಾರ್ಯ, ಶ್ರೀಕಾಂತಾಚಾರ್ಯ,  ಪ್ರಭಂಜನಾಚಾರ್ಯರು, etc…   ಏಕೆಂದರೆ ಅವರು ಹೇಳಿರುವಂತೆ “ಪೂರ್ವದಲ್ಲಿ ನಿಮ್ಮಂತೆ ನನಗೂ ಇವರೊಂದಿಗೆ ಸಂಘರ್ಷವಿತ್ತು” .  ಈ ಪುಸ್ತಕದಲ್ಲೂ ಆ ಪಂಡಿತರ ಹೆಸರನ್ನು ಜಾಸ್ತಿ ಬಳಸಲಾಗಿದೆ.  ಆದ್ದರಿಂದ ಆ ಪಂಡಿತರನ್ನು ಉದ್ದೇಶಿಸಿಯೇ ಇವರು ಹೇಳಿರುವುದು – “ಸಮಯಾಸಾಧಕತನ, ಹಠಮಾರಿತನ”.ಎಂದು.  ಬಹುಶ: ಈ ಪಂಡಿತರೊಡನೆ ದ್ವೈತ-ವಿಶಿಷ್ಟಾದ್ವೈತ ವಿಷಯದಲ್ಲಿ ವಾಗ್ವಾದ ನಡೆದಿರಬಹುದು.  , ಇವರ ವಾದವನ್ನು ಅವರು ಒಪ್ಪದ ಒಂದೇ ಕಾರಣಕ್ಕೆ “ಹಠಪ್ರವೃತ್ತಿ, ಸಮಯಸಾಧಕತನ”ವೆಂಬ ಪದ ಪ್ರಯೋಗ ಒಬ್ಬ ವಿಮರ್ಶಾತ್ಮಕನಲ್ಲಿರಬಾರದು.
ತಮ್ಮ ವಿರುದ್ಧವಿರುವವರನ್ನು ದ್ವೇಷಿಸುವವರನ್ನು ತಾವು ಸೇರಿ ಅವರನ್ನು ನಿಂದಿಸುವ ಪರಿ ಸರಿಯೇ?  ಇಲ್ಲಿ ಶಾಭಾಷ್ ಪದದ ಔಚಿತ್ಯವೇನು?  ತಮ್ಮ ವಿರುದ್ಧ ಗೆದ್ದವರನ್ನು ಈ ಪುಸ್ತಕದವರು ನಿಂದಿಸಿದ್ದಕ್ಕೇ?ಆ ಪ್ರಸಿದ್ಧ ವ್ಯಕ್ತಿಯಾದರೂ ಸ್ವಲ್ಪ ಯೋಚನೆ ಮಾಡಬಾರದೇ?  ತಾವು ನೀಡುತ್ತಿರುವ ಸಂದೇಶದಲ್ಲೇ ತಮ್ಮ ಪೂರ್ವಾಗ್ರಹವನ್ನು ತೋರಿಸಿಕೊಂಡಿರುವ ಆ ಲೇಖಕ ನಿಜಕ್ಕೂ ವಿಮರ್ಶೆ ನೀಡಲು ಯೋಗ್ಯರೇ?  ಶ್ರೀ ಬನ್ನಂಜೆ ಗೋವಿಂದಾಚಾರ್ಯರನ್ನು ನೋಡಿ ಕಲಿಯುವುದು ಬಹಳಷ್ಟಿದೆ.
ಈ ಗ್ರಂಥದ ಕರ್ತರೂ ಅದೇರೀತಿ ತಮ್ಮ ಹಠಮಾರಿತನದಿಂದಲೇ ಸಮಯಸಾಧಕತನದಿಂದಲೇ ಇಂತಹ ಲೇಖಕರಿಂದಲೇ “ಶ ಅಬ್ಬಾಸ್” ಗಿರಿಯನ್ನು ಪಡೆದಿರುವುದು ಶೋಚನೀಯ.  ಬಹುಶ:  ಡಾ:.ಕೆ.ಎಸ್. ನಾರಾಯಣಾಚಾರ್ಯರಿಗಿದ್ದ ಹಠಮಾರಿತನ ಮತ್ತು ಸಮಯಸಾಧಕತನದಿಂದಲೇ ಈ ಅವಕಾಶವನ್ನು ಉಪಯೋಗಿಸಿ ಆ ಮಾಧ್ವ ಪಂಡಿತರನ್ನು ಹೀಯ್ಯಾಳಿಸಿದ್ದಾರೆನ್ನಿಸುತ್ತದೆ.

೪.   ಡಾ: ಬಸವರಾಜ ಕಲ್ಗುಡಿ ಸಂದೇಶ. (ಪುಟ 433)

ಶ್ರೀಯುತರು ಹೇಳಿದ್ದಾರೆ – ಈ ಸಂಶೋಧನಾತ್ಮಕ ಅಧ್ಯಯನದಿಂದ ಕೂಟದಾಖಲೆಗಳ ಸ್ವರೂಪಗಳನ್ನು ತಮ್ಮ ಪಾಂಡಿತ್ಯಮಯ ವ್ಯುತ್ಪತ್ತಿಯಿಂದ ನಿರ್ವಚಿಸಿದ್ದಾರೆ.  ಅಲ್ಲದೆ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳ ಹಿನ್ನೆಲೆಯಲ್ಲಿ ಚರಿತ್ರೆಯ ಘಟನೆಗೆ ಒಂದು ಇಂಬನ್ನು ಒದಗಿಸಿದ್ದಾರೆ.  ಮೃತ್ತಿಕಾ ವೃಂದಾವನಗಳೂ ಪೂಜನೀಯವೇ.   ಆ ಸ್ಥಳದಲ್ಲಿ ಸಂಚಾರ ಮಾಡಿದ ಯತಿಗಳ ಗಾಳಿ ಗುರುತುಗಳನ್ನು ಬಿಟ್ಟ ಹಾಗೆ ಈ ಸನ್ನಿಧಾನಗಳು. ಅವುಗಳು ನಮ್ಮ ತಲೆಬಾಗುವಂತೆ ಮಾಡುವುದರಿಂದ ಅವನ್ನೂ ಗೌರವಿಸೋಣ”
ಇಲ್ಲಿ ಶ್ರೀ ಕಲ್ಗುಡಿಯವರು ಒಂದು ಕಡೆಯ ವಾದವನ್ನು ಆಲಿಸಿ ನಿರ್ಧಾರಿತವಾದಂತಿದೆ.  ಬಹುಶ: ಅವರಿಗೆ ತೀರ್ಥಪ್ರಬಂಧವಾಗಲೀ, ಅದರ ವ್ಯಾಖ್ಯಾನಗಳಾಗಲಿ, ಅಥವಾ ಮಳಖೇಡಕ್ಕಿರಿವ ಪ್ರಾಮುಖ್ಯತೆಯಾಗಲೀ, ಮಲಖೇಡಕ್ಕಿರುವ ದಾಖಲೆಗಳನ್ನಾಗಲೀ ಪರಾಮರ್ಶಿಸಿದೆ, ತಾವು ನೀಡಿದ ಪುಸ್ತಕಕ್ಕೆ ಸಂದೇಶ ನೀಡಿರೆಂದು ಕೋರಿದಾಗ, ಕೂಲಂಕಶವಾಗಿ ಪರಿಶೀಲಿಸದೆ ನೀಡಿದ ಸಂದೇಶದಂತಿದೆ ಈ ಸಂದೇಶ.
ಅಥವಾ – ತಮ್ಮ ಕಡೆ ವಾಕ್ಯದಲ್ಲಿ ಅವರು ಹೇಳಿರುವಂತೆ ಆ ಸ್ಥಳಗಳಲ್ಲಿ (ಮಲಖೇಡಾದಿಗಳಲ್ಲಿ) ಯತಿಗಳ ಗಾಳಿಗುರುಗುಗಳನ್ನು ಬಿಟ್ಟ ಹಾಗೆ ಈ ಸನ್ನಿಧಾನಗಳು.  ಆದ್ದರಿಂದ ವಾದಿರಾಜರಿಗೆ ಆ ಗಾಳಿಗುರುತುಗಳನ್ನು ಕಂಡು ತಲೆಬಾಗಿ ಜಯತೀರ್ಥರ ಸ್ತೋತ್ರಗಳನ್ನು ಗೌರವಿಸಿದ್ದಾರೆಂದು ಅವರ ಅಭಿಮತವೇ?

೫.   ಡಾ ” ಸೀತಾಶಾಸ್ತ್ರಿ ಸೂರಿ, ವೇದಾಂತ ಶಾಸ್ತ್ರ ವಿದುಷಿ

ಇವರು ಹೇಳಿದ್ದಾರೆ –  “ವಿಶ್ವಾಸಾರ್ಹವಾದ ಮಾಹಿತಿಯಿಂದ ತುಂಗಭದ್ರಾ ನದಿಯ ದ್ವೀಪದ ನವವೃಂದಾವನದಲ್ಲಿದೆ ಜಯತೀರ್ಥರ ವೃಂದಾವನ.  ವಾದಿರಾಜರು ತೀರ್ಥಪ್ರಬಂಧದಲ್ಲಿ ಗಜಗಹ್ವರದಲ್ಲೇ ವರ್ಣಿಸಿದ್ದಾರೆ.  ಅಂದರೇ ಅದೇ ಕ್ಷೇತ್ರಸ್ಥರೆನ್ನುವುದು ಸ್ಪಷ್ಟ.  ಒಂದೊಮ್ಮೆ ಮಳಖೇಡದಲ್ಲಿ ಜಯತೀರ್ಥರ ವೃಂದಾವನವಿದ್ದಿದ್ದರೆ, ಕಾಗಿಣೀ ನದಿಯ ವರ್ಣನೆ ಮಾಡಿ ಜಯತೀರ್ಥರನ್ನು ವರ್ಣಿಸಬೇಕಿತ್ತು.  ಕಾಗಿಣಿಯ ಹೆಸರಿಲ್ಲ, ಮಳಖೇಡ ಇಲ್ಲವೇ ಇಲ್ಲ.  ಆನೆಗೊಂದಿ ಕ್ಷೇತ್ರದಲ್ಲಿ ಜಯತೀರ್ಥಸ್ತುತಿ ಮಾಡಿದ್ದಾರೆ.  ಹಾಗಾಗಿ ಸಂಶೋಧನಾತ್ಮಕ ಅಧ್ಯಯನದ ಬರಹಗಳನ್ನು ನೋಡಿದಾಗ ನಿಷ್ಪಕ್ಷಪಾತ ವಿಚಾರಧಾರೆ ಕಾಣುತ್ತಿದೆ.”
ಈ ಲೇಖಕರಲ್ಲಿ ಕೆಲವು ಪ್ರಶ್ನೆಗಳು –  ತಾವು ತೀರ್ಥಪ್ರಬಂಧವನ್ನು ಓದಿದ್ದೀರೋ ಅಥವಾ ಬೇರೊಬ್ಬರು ಹೇಳಿದ್ದನ್ನು ಕೇಳಿದ್ದೀರೋ.  ಅಲ್ಲಿ ಜಯತೀರ್ಥರ ವೃಂದಾವನ ವಿರುವುದಾಗಿ ಹೇಳಿದ್ದೀರಿ.  ಎಲ್ಲಿ ಹೇಳಿದ್ದಾರೆ? ತಾವೊಬ್ಬ ವೇದಾಂತಶಾಸ್ತ್ರ ವಿದುಷಿ ಯಾಗಿದ್ದೀರಿ.  ಎಲ್ಲಿ ಹೆಸರಿಸಿದ್ದಾರೆ.  ಇತ್ತೀಚಿನ ಕೆಲವರು ಅದೂ ೨೦ನೇ ಶತಮಾನದ ಅಂತ್ಯದ ಜನ ತೀರ್ಮಾನಿಸಿರುವ ದಾಖಲೆ ನಿಮಗೆ ವಿಶ್ವಾಸಾರ್ಹವಾದದ್ದಾರೂ ಹೇಗೇ?  ನಿಮಗೆ ಅದನ್ನು ನಿರ್ಣಯಿಸಲು ಹೇಗೆ ಶಕ್ಯವಾಯಿತು?  ತಾವು ಹೇಳಿದ್ದೀರಿ ಮಳಖೇಡಾ, ಕಾಗಿಣಿಯ ಹೆಸರಿಲ್ಲವೆಂದು.  ಹಾಗಾದರೆ ವಾದಿರಾಜರು ಎಲ್ಲೂ ಜಯತೀರ್ಥರ ವೃಂದಾವನವೆಂದೂ ಹೇಳಿಲ್ಲ.  ಹೀಗಿರುವಾಗ ತಮ್ಮ ನಿರ್ಧಾರ ಪೂರ್ವ ಪ್ರಚೋದಿತ ಲೇಖನವಲ್ಲದೇ ಮತ್ತೇನು?

 

6.  Sri NAPS Rao’s  – Enormous collection of relevant data –

NAPS ರಾವ್ ಅವರು ಹೇಳುತ್ತಾರೆ. – ಮಳಖೇಡದ ಉಪಲಬ್ಧ ದಾಖಲೆಗಳು ೧೭೦೦ರ ನಂತರವೇ ದೊರಕುತ್ತವೆ. ಶ್ರೀ ಜಯತೀರ್ಥರು ಆನೆಗೊಂದಿಗೆ ಹೋಗಿದ್ದನ್ನು ಎಲ್ಲರೂ ಒಪ್ಪುತ್ತಾರೆ. ಜಯತೀರ್ಥರು ಅಲ್ಲೇ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಮತ್ತು ಶಿಷ್ಯರಿಗೆ ಪಾಠ ಹೇಳಿದ್ದಾರೆ. ಆದರೆ ಅವರು ಮಳಖೇಡಕ್ಕೆ ಹೋಗಿದ್ದಕ್ಕೆ ನಂಬಲರ್ಹ ದಾಖಲೆಯಿಲ್ಲ, ಇರುವುದೆಲ್ಲ ಕಲ್ಪಿತ. ಅಕ್ಷೋಭ್ಯತೀರ್ಥರ ವೃಂದಾವನವು ಮಾನ್ಯಖೇಟದ ಪುರಾತನ ನಗರದಲ್ಲಿತ್ತು, ಅವರ ಪ್ರಯಾಣದ ದಶಕಗಳ ನಂತರ ಅದನ್ನು ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರಿಸಲಾಯಿತು. ಜಯತೀರ್ಥರ ಮೂಲ ವೃಂದಾವನ ಅಲ್ಲೇ ಇದ್ದಿದ್ದರೆ, ಅದನ್ನು ಬೇರೆಯಾಗಿ ಆ ನದಿಯ ದಡದಲ್ಲಿ, ಅವರ ಗುರುಗಳ ವೃಂದಾವನ ಮಾನ್ಯಖೇಟದಲ್ಲೇ ಬೇರೆಯಾಗಿದ್ದಾಗ ಹೇಗೆ ಪ್ರತಿಷ್ಥಾಪಿಸಿದರು?. ನವವೃಂದಾವನದಲ್ಲಿ ಶ್ರೀ ಪದ್ಮನಾಭತೀರ್ಥರ ವೃಂದಾವನದ ಪಕ್ಕದಲ್ಲಿ ಎರಡು ಶತಮಾನಗಳ ಕಾಲ ಯಾವುದೇ ವೃಂದಾವನ ಪ್ರತಿಷ್ಟೆ ಏಕೆ ಮಾಡಿರಲಿಲ್ಲ, ರಘುವರ್ಯರನ್ನು ಪ್ರತಿಷ್ಟಾಪಿಸುವವರೆಗೂ. ಆದ್ದರಿಂದ ಜಯತೀರ್ಥರ ವೃಂದಾವನ ಇವರಿಗಿಂತ ಮುಂಚೆಯೇ ಅಲ್ಲಿತ್ತು.” (Summary)
ಸಮಾಧಾನ –
ಅ) ಹಾಗಾದರೆ ಆನೆಗೊಂದಿಯಲ್ಲಿರುವ ದಾಖಲೆಗಳು ೧೫೦೦ರಿಂದ ಉಪಲಬ್ಧ ವಿದೆಯಾ? ಅಲ್ಲಿರುವ ದಾಖಲೆಗಳ ತಯಾರಿಯಾಗಿದ್ದು 1986ರ ನಂತರ ಟಿ.ಕೆ.ವಿ. ಅವರ ಪ್ರಯತ್ನದಿಂದ. ಅಲ್ಲಿಯವರೆಗೂ ಏಕೆ ಇರಲಿಲ್ಲ.?
ಆ) ಶ್ರೀ ಜಯತೀರ್ಥರು ಆನೆಗೊಂದಿಗೆ ಹೋಗಿದ್ದನ್ನು ಒಪ್ಪುತ್ತಾರೆ ಮಲಖೇಡಕ್ಕೆ ಹೋಗಿದ್ದನ್ನು ಒಪ್ಪುವುದಿಲ್ಲವೆಂದು ಒಣತರ್ಕವಲ್ಲವೆ? ಅವರ ಗುರುಗಳು ಅಕ್ಷೋಭ್ಯತೀರ್ಥರು ಇದ್ದದ್ದು ಮಲಖೇಡದಲ್ಲೇ, ಅವರ ವೃಂದಾವನ ವಿದ್ದಿದ್ದು ಮಲಖೇಡದಲ್ಲೇ, ಹಾಗಾದರೆ NAPS ರಾವ್ ಅವರ ತರ್ಕದಂತೆ ಜಯತೀರ್ಥರು ಅವರ ಗುರುಗಳ ಆರಾಧನೆಗೆ ಹೋಗಲೇ ಇಲ್ಲವೇ? ಶ್ರೀ ಜಯತೀರ್ಥರು ಮಲಖೇಡದ ಬಳಿಯಿರುವ ಯರಗೋಳ ಗುಹೆಯಲ್ಲಿ ಗ್ರಂಥ ರಚನೆ, ಅಧ್ಯಯನ, ಪಾಠ ಮಾಡಿದ್ದು ಹಲವಾರು ಗ್ರಂಥಗಳಲ್ಲಿ ದಾಖಲಾಗಿದೆ. ಅದು ಸುಳ್ಳೇ? ಇಂದಿನ ಯತಿಗಳು ತಮ್ಮ ಚಾತುರ್ಮಾಸ್ಯ ಕಾಲದಲ್ಲಿ ಹಲವಾರು ಪ್ರದೇಶಗಳಿಗೆ ಹೋದಾಗ ಅಲ್ಲೇ ಪಾಠ ಪ್ರವಚನಗಳನ್ನು ವಾಡಿಕೆ ಇದೆ. ಸತ್ಯಾತ್ಮತೀರ್ಥರಾಗಲೀ, ವಿದ್ಯಾಧೀಶರಾಗಲೀ, ಯಾರೇ ವಿದ್ಯಾವಂತ ಯತಿಗಳಾಗಲೀ ತಾವು ಹೋದ ಸ್ಥಳದಲ್ಲೇ ತಮ್ಮ ವಿದ್ಯಾರ್ಥಿಗಳನ್ನೂ ಕರೆದುಕೊಂಡು ಹೋಗಿ ಪಾಠ ಇಂದಿಗೂ ನಡೆಸುತ್ತಿದ್ದಾರೆ. ಅದು ಸುಳ್ಳೇ ಅಥವಾ ತಪ್ಪೇ? ಅದೇ ರೀತಿ ಶ್ರೀ ಜಯತೀರ್ಥರೂ ಕೂಡ ಆನೆಗೊಂದಿಗೆ ಹೋಗಿದ್ದಾಗ ಪಾಠ ಪ್ರವಚನಗಳನ್ನು ಮಾಡಿದ್ದಾರೆ. ಇದರಲ್ಲೇನು ಅನುಮಾನಕ್ಕೆ ಆಸ್ಪದವಿದೆ?
ಇ) ಅಕ್ಷೋಭ್ಯತೀರ್ಥರ ವೃಂದಾವನವನ್ನು ಮಾನ್ಯಖೇಟದ ಪುರಾತನ ನಗರದಲ್ಲಿದ್ದ ಸ್ಥಳದಿಂದ ಸ್ಥಳಾಂತರಿಸಿದ್ದು ಜಯತೀರ್ಥರ ವೃಂದಾವನ ಪ್ರವೇಶಾನಂತರ. ಅದನ್ನು ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರಿಸುವುದರಲ್ಲೇನು ತಪ್ಪಿದೆ? ವೃಂದಾವನಗಳೂ ಕೂಡ ಮನುಷ್ಯ ನಿರ್ಮಿತವಲ್ಲವೇ? ಅದೇ ರೀತಿ ಶ್ರೀಯುತರೇ ಹೇಳಿಕೊಂಡಿದ್ದಾರೆ, ಆನೆಗೊಂದಿಯಲ್ಲಿ ಪದ್ಮನಾಭತೀರ್ಥರ ವೃಂದಾವನದ ಬಳಿ ಹಲವಾರು ದೊಡ್ಡ ಗಾತ್ರದ ಬಂಡೆಗಳು ಇದ್ದವು, ಅದನ್ನು ವ್ಯಾಸರಾಜರ ಕಾಲದಲ್ಲಿ ಸರಿಸಿ ವೃಂದಾವನಕ್ಕೆ ಅಣಿ ಮಾಡಲಾಯಿತೆಂದು ಹೇಳಿದ್ದಾರೆ. ಹಾಗಾದರೆ ಈ ಬೃಹತ್ ಬಂಡೆಗಳನ್ನು ಸರಿಸಿದವರು ಮನುಷ್ಯರೋ ಅಥವಾ ಪ್ರಕೃತಿಯೋ? ಅವರೂ ಮನುಷ್ಯರಲ್ಲವೇ? ಆದ್ದರಿಂದ ಮನುಷ್ಯ ನಿರ್ಮಿತ ಗುಹೆಗೆ ಸ್ಥಳಾಂತರದಲ್ಲಿ ಏನೂ ವಿಶೇಷವಿಲ್ಲ.
ಈ) ಜಯತೀರ್ಥರ ವೃಂದಾವನದ ಬಳಿಯೇ ತಮ್ಮ ಗುರುಗಳ ವೃಂದಾವನವನ್ನು ಪ್ರತಿಷ್ಟಾಪಿಸಲು ಹಲವಾರು ಕಾರಣಗಳಿರಬಹುದು. ಗುರು ಶಿಷ್ಯರನ್ನು ಒಂದೇ ಸ್ಥಳದಲ್ಲಿ ನೋಡಬೇಕೆಂಬ ಆಸಕ್ತಿಯಿರಬಹುದು. ಪೂಜೆಗೆ ಅನುಕೂಲ ವಾಗಲೆಂದಿರಬಹುದು. ಅಥವಾ ಅಕ್ಷೋಭ್ಯ ತೀರ್ಥರ ವೃಂದಾವನವಿದ್ದ ಸ್ಥಳದಲ್ಲಿ ಬೇರೆ ತೊಂದರೆಗಳಿದ್ದಿರಬಹುದು. ಅದನ್ನೆಲ್ಲ ನಿವಾರಿಸಲು ಅವರನ್ನೂ ಈ ಗುಹೆಗೆ ಸ್ಥಳಾಂತರಿಸಲಾಗಿರಬಹುದು.
ಉ) ಇನ್ನು ನವವೃಂದಾವನದಲ್ಲಿ ಏಕೆ ಪದ್ಮನಾಭತೀರ್ಥರ ಪಕ್ಕ ಸ್ಥಳ ರಘುವರ್ಯರ ವೃಂದಾವನವಾದ ಸ್ಥಳ ಖಾಲಿಯಿತ್ತು ಎಂಬುದು ತರ್ಕದ ವಿಷಯವೇ ಅಲ್ಲ. ತಾವೇ ಹೇಳಿಕೊಂಡಿರುವಂತೆ ಶ್ರೀ ವ್ಯಾಸರಾಜರ ವೃಂದಾವನವಾಗುವುದಕ್ಕಿಂತ ಮುಂಚೆ ಅಲ್ಲಿದ್ದ ಬಂಡೆಗಳನ್ನು ಸರಿಸಿ ಶುದ್ಧ ಮಾಡಲಾಯಿತೆಂದು. ನೀವೇ ಉತ್ತರ ಕೊಟ್ಟು ನಮ್ಮನ್ನು ಉತ್ತರಿಸಬೇಕೆಂದಿರುವಿರಲ್ಲ. ಇರಲಿ. ಶ್ರೀ ಪದ್ಮನಾಭತೀರ್ಥರು ವೃಂದಾವನಸ್ಥರಾಗಿದ್ದು ೧೩೨೪ರಲ್ಲಿ. ಶ್ರೀ ಜಯತೀರ್ಥರದ್ದು ೧೩೮೮ರಲ್ಲಿ. ನಂತರದ ವೃಂದಾವನ ಶ್ರೀ ಕವೀಂದ್ರರದ್ದು ೧೩೯೮ರಲ್ಲಿ. ವಾಗೀಶತೀರ್ಥರದ್ದು ೧೪೦೬ರಲ್ಲಿ. ನೀವೇ ಗಮನಿಸಿ ಪದ್ಮನಾಭತೀರ್ಥರ ವೃಂದಾವನ ಪ್ರವೇಶಾನಂತರ ಜಯತೀರ್ಥರದ್ದು ನಿಮ್ಮ ಪ್ರಕಾರ ಪಕ್ಕದಲ್ಲಿ ಮಾಡಿದ್ದಾರೆ. ಹಾಗಾದರೆ ಜಯತೀರ್ಥರ ನಂತರ ವೃಂದಾವನಸ್ಥರಾದ ಕವೀಂದ್ರ ತೀರ್ಥರನ್ನೇಕೆ ದೂರ ವೃಂದಾವನ ಮಾಡಿದರು. ಎಷ್ಟೋ ವರ್ಷಗಳ ವೃಂದಾವನಸ್ಥರಾದ ಶ್ರೀ ಗೋವಿಂದ ವಡೆಯರ ವೃಂದಾವನ ಪದ್ಮನಾಭತೀರ್ಥರಿಗೆ ಬಹಳ ಹತ್ತಿರವಿದೆ. ಆದ್ದರಿಂದ ನಿಮ್ಮ ಊಹೆ ಊಹೆಯೇ ಹೊರತು ಯಾವುದೇ ದಾಖಲೆಯನ್ನು ನೀಡುವುದಿಲ್ಲ, ನೀವೇ ನೀಡಿಲ್ಲ,  ಊಹಿಸಿದ್ದೀರಷ್ಟೇ. ಆನೆಗೊಂದಿಯಲ್ಲಿ ಎಲ್ಲೆಲ್ಲಿ ಯಾವ ಯಾವ ಕಾಲಕ್ಕೆ ಜಾಗವಿತ್ತೋ ಅಲ್ಲಲ್ಲೇ ವೃಂದಾವನವನ್ನು ಮಾಡಿದ್ದು ತಿಳಿದು ಬರುತ್ತದೆ. ಯಾವುದೇ ವೃಂದಾವನವನ್ನೂ ಇಂತದೇ ಸ್ಥಳದಲ್ಲೇ ಮಾಡಬೇಕೆಂದು ಪೂರ್ವಯೋಜಿತವಾಗಿರಲಿಲ್ಲ. ಹಾಗೆ ನೋಡಿದರೆ ಶ್ರೀ ಗೋವಿಂದ ವಡೆಯರ ವೃಂದಾವನಕ್ಕೆ ಪದ್ಮನಾಭತೀರ್ಥರ ವೃಂದಾವನ ಅಭಿಮುಖವಾಗಿದೆ. ಅದನ್ನೇಕೆ ಜಯತೀರ್ಥರದ್ದೆಂದು ಹೇಳಬಾರದು? ರಘುವರ್ಯರಿಗೆ (ನಿಮ್ಮ ಪ್ರಕಾರ ಜಯತೀರ್ಥರಿಗೆ) ಸುಧೀಂದ್ರರು ಅಭಿಮುಖ ವಾಗಿದ್ದಾರೆ. ರಘುವರ್ಯರು ೧೫೫೬ರಲ್ಲಿ ವೃಂದಾವನಸ್ಥರಾದರೆ ಸುಧೀಂದ್ರರು ವೃಂದಾವನಸ್ಥರಾಗಿದ್ದು ೧೬೨೩ರಲ್ಲಿ. ಜಯತೀರ್ಥರು ವೃಂದಾವನಸ್ಥರಾಗಿದ್ದು 1388ರಲ್ಲಿ, ಅಲ್ಲಿಂದ ಸುಧೀಂದ್ರರು ವೃಂದಾವನಸ್ಥರಾಗುವವರೆಗೂ ಎರಡೂವರೆ ಶತಮಾನಗಳ ಪರ್ಯಂತ ಯಾವುದೇ ವೃಂದಾವನವನ್ನು ಏಕೆ ಸುಧೀಂದ್ರರ ಜಾಗದಲ್ಲಿ ಮಾಡಲಿಲ್ಲ.  ನೀವೇ ಉತ್ತರಿಸಿ.
ಆದ್ದರಿಂದ ಜಯತೀರ್ಥರ ವೃಂದಾವನ ರಘುವರ್ಯರಿಗಿಂತ ಮುಂಚೆಯೇ ಇತ್ತೆಂಬ ನಿಮ್ಮ ವಾಕ್ಯವನ್ನು ಒಪ್ಪಲಾಗುವುದಿಲ್ಲ.

7.   ಶ್ರೀ ರಾಜಾ ರಾಜಗೋಪಾಲಾಚಾರ್ಯರ ವಿಮರ್ಶೆ –  “ಅಂತೂ ಸಿಕ್ಕಿಬಿದ್ದಿದ್ದಾರೆ”

ಯಾರು ಸಿಕ್ಕಿಬಿದ್ದಿದ್ದಾರೆ?    ಈ ಎಲ್ಲಾ ಸಂದೇಶಗಳನ್ನೂ ನೋಡಿದಾಗ ಅತ್ಯಂತ ಮಠನಿಂದನೀಯ ಹೇಳಿಕೆ, ಮತ್ತು ಉತ್ತರಾಧಿಮಠದ ಮೇಲಿನ ದ್ವೇಷ ಶ್ರೀಮನ್ ರಾಜಾ ರಾಜಗೋಪಾಲಾಚಾರ್ಯರದ್ದು.
ಯಾರು ಸಿಕ್ಕಿಬಿದ್ದಿದ್ದಾರೆ? ಅವರ ಹೇಳಿಕೆ  –  ರಘುವರ್ಯರು ರಾಯರ ಮಠ ಅಥವಾ ವ್ಯಾಸರಾಜ ಮಠಕ್ಕೆ ಸೇರಿದವರಲ್ಲ ವಾದ್ದರಿಂದ ಎಂಬ ಹೇಳಿಕೆ ಮಠಾತೀತ ಭಾವನೆಯನ್ನಂತೂ ನೀಡುವುದಿಲ್ಲ.
ಈಗಿನ ಕಾಲದಲ್ಲಿ ಮಠ – ಮಠವೆಂದು ಜಗಳವಾಡುವಂತೆ ಹಿಂದಿನ ಕಾಲದಲ್ಲಿ ಇರಲಿಲ್ಲ. ಹಾಗಾದರೆ ಪದ್ಮನಾಭತೀರ್ಥರು, ಕವೀಂದ್ರರೂ, ವಾಗೀಶತೀರ್ಥರು, ಜಯತೀರ್ಥರೂ ಯಾವ ಮಠಕ್ಕೂ ಸೇರಿದವರಾಗಿಲ್ಲದಿರುವುದರಿಂದ ಅವರ ವೃಂದಾವನ ಆ ಜಾಗದಲ್ಲಿ ಹೇಗೆ ಬಂದಿದೆ. ಆ ರೀತಿ ಯೋಚಿಸುವುದೂ ಜಯತೀರ್ಥರ ಅಪಚಾರವಲ್ಲವೇ? ಅವರು ಅಕ್ಷೋಭ್ಯತೀರ್ಥರ ವೃಂದಾವನವಲ್ಲ ವೆಂದಿದ್ದಾರೆ. ಶ್ರೀಯುತ NAPS ರಾವ್ ಅವರೇ ಅದೇ ಪುಸ್ತಕದಲ್ಲಿ ಅಕ್ಷೋಭ್ಯತೀರ್ಥರ ವೃಂದಾವನವನ್ನು ಪೂರ್ತಿಯಾಗಿ ಬೇರೆ ಕಡೆಯಿಂದ ತೆಗೆದು ನದೀ ತೀರದಲ್ಲಿ ಪ್ರತಿಷ್ಟಾಪಿಸಿದ್ದಾರೆಂದಿದ್ದಾರೆ. ಆದ್ದರಿಂದ ಪೂರ್ತಿ ಅದು ಸ್ಥಳಾಂತರ ವಾಗಿದ್ದರೂ ಕೂಡ ಅದು ಮೂಲವೇ. ಅವರು ಕೆಲವು ವೃಂದಾವನಗಳ ಲಬ್ದತ್ವ, ಅನುಲಬ್ದತ್ವವನ್ನು ವರ್ಣಿಸಿದ್ದಾರೆ. ಆದರೆ ವಿಜಯೀಂದ್ರ ತೀರ್ಥರ ಗುರುಗಳಾದ ಸುರೇಂದ್ರ ತೀರ್ಥರ ವೃಂದಾವನದ ಬಗ್ಯೆ ಮತ್ತು ಅದೇ ಮಠದ ಶ್ರೀ ಸೂರೀಂದ್ರತೀರ್ಥರ ವೃಂದಾವನದ ಅನುಪಲಬ್ದತ್ವದ ಬಗ್ಯೆ ಚಕಾರವೆತ್ತಿಲ್ಲ. ಪದ್ಮನಾಭತೀರ್ಥರ ಎದುರು ಇರುವ ವೃಂದಾವನ ಜಯತೀರ್ಥರದ್ದು ಚಿತ್ತಾಕರ್ಷಕ, ಭವ್ಯ, ಪುಳಕ, ರೋಮಾಂಚನ ಎಂದು ಹೇಳುವ ಇವರು ಪದ್ಮನಾಭತೀರ್ಥರ ವೃಂದಾವನ ತೀರಾ ಕಳೆಗುಂದಿದಂತೆ ಕಂಡಿದೆಯೇ ಇವರಿಗೆ?
ಅಲ್ಲದೆ ಅವರು ಕೆಲವು ವಿಶ್ವಾಸಾರ್ಹರಾರೆಂದು ಉಲ್ಲೇಖಿಸಿದ್ದಾರೆ. ಅದರಲ್ಲಿ ಬಿ.ಎನ್.ಕೆ ಮತ್ತು ಟಿ.ಕೆ.ವಿ ಅವರನ್ನು ಸೇರಿಸಿದ್ದಾರೆ. ಆದರೆ ಅವರಿಬ್ಬರೂ ಉಲ್ಲೇಖಿಸಿರುವ ಲೇಖನಗಳು ಎಲ್ಲೂ ಸಾಧುವಾಗಿಲ್ಲ. ಇನ್ನು ಮಲಖೇಡವಾದಿ ಗಳನ್ನೆಲ್ಲ ಅವಿಶ್ವಾಸಾರ್ಹರು ಎಂದು ಬಿಂಬಿಸಿರುವುದು ಎಷ್ಟು ಸಮರ್ಥನೀಯ. ನಿಮ್ಮನ್ನು ಹೊಗಳಿದರೆ ಮಾತ್ರ ಅವರು ಒಳ್ಳೆಯವರೆಂಬ ನೀತಿಯನ್ನು ಅನುಸರಿಸಿದಂತಿದೆ. ಜಯತೀರ್ಥರ ಮೃತ್ತಿಕಾ ವೃಂದಾವನ ನೆಂದು ಹೇಳಿಕೊಂಡಿರುವ ಶ್ರೀಯುತರು, ಅದನ್ನು ಯಾರು, ಯಾವಾಗ ಹೇಗೆ ಮಾಡಿದರೆಂದು ದಾಖಲೆಗಳನ್ನು ಒದಗಿಸದೆ ಸುಮ್ಮನೆ ಹೇಳಿದಂತಿದೆ. ಕಾಗಕ್ಕ ಗುಬ್ಬಕ್ಕನ ಕಥೆಯೆಂದು ಜಯತೀರ್ಥರ ಬಗ್ಯೆ ಮಾತನಾಡಿರುವುದು ತಕ್ಕದ್ದಲ್ಲ. ಜಯತೀರ್ಥರು ಹೇಳುತ್ತಾರೆ ” ಎಲ್ಲರಿಗೂ ಸಮ್ಮತವಾದ ಧರ್ಮಾದಿ ಅತೀಂದ್ರಿಯ ಪದಾರ್ಥಗಳನ್ನು ಪ್ರಮಾಣವಿಲ್ಲದೆ ಕೇವಲ ವಾಕ್ಪಟುತ್ವದಿಂದ ನಿರಾಕರಿಸಲು ಪ್ರಯತ್ನ ಮಾಡಬಾರದು. ಮೈಸೂರು ಗೆಜೆಟಿಯರನ್ನೇ ಒಪ್ಪದ ಇವರು ಸರ್ಕಾರವನ್ನು ಒಪ್ಪುತ್ತಾರೆಯೇ. ಇಂತಹವರಿಗೆ ಯಾರೂ ಕಾಣದ ಕೃಷ್ಣದೇವರಾಯನ ರಜತಶಾಸನ ನಿಜವಂತೆ. ಅವರೇ ಹೇಳುತ್ತಾರೆ, ಹಯವದನರಾವ್ ಎಂಬುವರು ಉತ್ತರಾದಿಮಠದವರು. ಆದ್ದರಿಂದ ಉತ್ತರಾಧಿಮಠದ ಬಗ್ಯೆ ಗೆಜೆಟಿಯರ್ ಅನ್ನು ತಯಾರಿಸಿದ್ದಾರೆ. ಹಾಗಾದರೆ ಸರ್ಕಾರದಲ್ಲಿ ಇವರೊಬ್ಬರೇ ಸರ್ವಾಧಿಕಾರಿಯೇ? ಬೇರೆ ಯಾರೂ ಇರಲಿಲ್ಲವೇ?
ಶ್ರೀ ರಾಜಾ ರಾಜಗೋಪಾಲಾಚಾರ್ಯರ ಅವರು ತಮ್ಮ ಲೇಖನಕ್ಕೆ ಕೊಟ್ಟ ಶೀರ್ಷಿಕೆ “ಅಂತೂ ಸಿಕ್ಕಿಬಿದ್ದಿದ್ದಾರೆ”. ಆದರೆ ತಮ್ಮ ಆರು ಪುಟಗಳ ಸುಧೀರ್ಘ ಸಂದೇಶದಲ್ಲಿ ಯಾರು ಸಿಕ್ಕಿಬಿದ್ದಿದ್ದಾರೆ, ಎಲ್ಲಿ,  ಏನನ್ನು ಕಳೆದುಕೊಂಡಿದ್ದರು, ಯಾರು ಕಳೆದುಕೊಂಡಿದ್ದರು ಏಂಬುದು ಹೇಳಲೇ ಇಲ್ಲ. ಧೀರ್ಘ ಸಂದೇಶದ ಒಂದೊಂದು ವಾಕ್ಯದಲ್ಲೂ ಮಠದ್ವೇಶ ಎದ್ದು ಕಾಣುತ್ತದೆ.

———————-

ಅಧ್ಯಾಯ  10 – ಜಗನ್ನಾಥದಾಸರ ನವವೃಂದಾವನ ಪದ್ಯ

ಟಿ.ಕೆ.ವೇಣುಗೋಪಾಲದಾಸರ ಪಾಠ
ವೃಂದಾವನಗಳಿಗೆ ಆನಮಿಪೆ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪರ ನವ |
ವರ ಮಧ್ವಮುನಿ ವಿಮಲ ಕರಪದ್ಮ ಸಂಜಾತ
ಗುರು ಪದ್ಮನಾಭ ಜಯಮುನಿ ಕವೀಂದ್ರ, ತತ್
ಕರಸರೋರುಹಜಾತ ವಾಗೀಶತೀರ್ಥ, ಮುನಿ
ವರಿಯೆ ಗೋವಿಂದಾಖ್ಯರೊಡೆಯರ ಪವಿತ್ರತಮ |
ವ್ಯಾಸರಾಯರ ಶ್ರೀನಿವಾಸಮುನಿ ರಾಮಮುನಿ
ಶ್ರೀ ಸುರೇಂದ್ರರ ಪೌತ್ರ ಸುಧೀಂದ್ರರ
ಭೂಸುರರು ಇವರು ಸಂತೋಷದಲಿ ಸ್ಮರಿಸೆ, ನಿ
ರ್ದೋಷರನು ಮಾಡಿ ಅಭಿಲಾಷೆ ಪೂರೈಸುವರ |
ದೇವತೆಗಳಿವರು ಸಂದೇಹ ಬಡೆ ಸಲ್ಲ, ಮಿ
ಥ್ಯಾವಾದಿಗಳ ಪರಾಭವವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |

 

ಡಾ: ಕೆ.ಎಂ.ಕೃಷ್ಣರಾವ್ ಅವರ ಪಾಠ

ವೃಂದಾವನಗಳಿಗೆ ಆನಮಿಸಿ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪ ನವ
ವರ ಮಧ್ವಮುನಿ ಕಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರ ತತ್
ಕರ ಸರೋರುಹ ಜಾತ ವಾಗೀಶಮುನಿ-
ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |
ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ
ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-
ರ್ದೋಷರನು ಮಾಡಿ ಅಭಿಲಾಷೆ ಪೂರೈಸುತಿಹ |
ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ
ಥ್ಯಾವಾದಿಗಳ ಪರಾಭವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ ||

೧೯೯೨ರ ಮೈಸೂರು ವಿಶ್ವವಿದ್ಯಾಲಯದ ಪಾಠ

ವೃಂದಾವನಗಳಿಗೆ ಆನಮಿಪೆ ನಿತ್ಯ
ನಂದತೀರ್ಥರ ಮತೋದ್ಧಾರಕರೆನಿಪ ನವ |

ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ರಾಮರ ಕವೀಂದ್ರ ತತ್
ಕರ ಸರೋರುಹ ಜಾತ ವಾಗೀಶಮುನಿ ರಘು-
ವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ |

ಶ್ರೀ ಸುಧೀಂದ್ರಾರ್ಯರ ಪ್ರಪುತ್ರರೆನಿಪ ಸುಧೀಂದ್ರ
ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ-
ರ್ದೋಷರನೆ ಮಾಡಿ ಅಭಿಲಾಷೆ ಪೂರೈಸುತಿಹ |

ದೇವತೆಗು ಇವರು  ಸಂದೇಹ ಬಡೆ ಸಲ್ಲ, ಮಿ-
ಥ್ಯಾವಾದಿಗಳ ಪರಾಭವ ಮಾಡಿ
ಈ ವಸುಂಧರೆಯೊಳಗೆ ಕೀರ್ತಿಯುತರಾಗಿ, ಲ-
ಕ್ಷ್ಮೀವರ ಜಗನ್ನಾಥವಿಠಲನ ಐದಿಹರ |

ಶ್ರೀ ಜಯತೀರ್ಥರ ಮೂಲ ವೃಂದಾವನಸ್ಥಳ ಎಂಬ ಪುಸ್ತಕದಲ್ಲಿ ಈ ರೀತಿಯ ಹಲವಾರು ರೀತಿಯ ಸಾಹಿತ್ಯಗಳನ್ನು ಕಾಣಬಹುದು.  ಅದರಲ್ಲಿ ಒಂದು ಶ್ರೀ ವಿದ್ಯಾವಾಚಸ್ಪತಿಗಳು ಕಂಡದ್ದು ೧೯೯೨ರ ಮೈ.ವಿ.ವಿ ಪಾಠ –  ಅದನ್ನು ನೋಡಿದಾಗ ಜಯತೀರ್ಥಾಚಾರ್ಯರು (ವಿದ್ಯಾವಾಚಸ್ಪತಿಗಳು ಪೂರ್ವಾಶ್ರಮದಲ್ಲಿ) ಹೀಗೆ ಹೇಳಿದರಂತೆ – ತೀರ್ಥಪ್ರಬಂಧಾನು ಸಾರಿಯಾಗಿರಬೇಕಿತ್ತು. ಶ್ರೀ ತೀರ್ಥಪ್ರಬಂಧಕ್ಕೆ ಏನು ಗತಿ?  ಅಲ್ಲಿ ನವವೃಂದಾವನದಲ್ಲಿ ಶ್ರೀ ಜಯತೀರ್ಥರನ್ನು ವರ್ಣಿಸಿದ್ದಾರಷ್ಟೆ.  ಸಾಂಶ ದೇವತೆಗಳು ಎಲ್ಲ ಕಡೆಯೂ ದರ್ಶನ ಕೊಟ್ಟು ಸನ್ನಿಹಿತರಾಗಿದ್ದರಿಂದಲೇ ಶ್ರೀ ವಾದಿರಾಜ ಶ್ರೀಮಚ್ಚರಣರು ವರ್ಣಿಸಿರುತ್ತಾರೆ.    ಅವರ ವಾಕ್ಯಗಳಿಗೆ ಸಂಪಾದಕದ್ವಯರು ಹೆಚ್ಚುವರಿ ಟಿಪ್ಪಣಿ ನೀಡಿದ್ದಾರೆ.  ಒಂದನೇ ನುಡಿಯಲ್ಲಿ ಗುರುಪದ್ಮನಾಭ ಜಯರಾಯ ಕವೀಂದ್ರ ಎಂದಿರಬೇಕು. ಈ ಬಗ್ಯೆ ಮಹಾಂತ: ಪ್ರಷ್ಟವ್ಯಾ: ಎಂದರೆ ಮಹಾಜ್ಞಾನಿಗಳನ್ನು ಕೇಳಿ ತಿಳಿಯಬೇಕು.  ತಮಗೆ ಅನುಕೂಲವಾದ ಪಾಠಗಳನ್ನು ಮಾತ್ರ ಪುರಸ್ಕರಿಸದೆ, ಹರಿವಾಯುಗಳಿಗೆ ಸಮ್ಮತವಾದ, ತೀರ್ಥಪ್ರಬಂಧಾಭಿಪ್ರಾಯಕ್ಕೆ ಅನುಗುಣ ವಾಗಿ ಜಗನ್ನಾಥದಾಸರ ಪಾಠವೂ ಇರುತ್ತದೆ.
ಹಾಗಾದರೆ  ವಿದ್ಯಾವಾಚಸ್ಪತಿತೀರ್ಥರ ಸ್ವಹಸ್ತದಿಂದ ಬರೆಯಲ್ಪಟ್ಟ ಹೇಳಿಕೆಯಂತೆ ಸಾಂಶ ದೇವತೆಗಳು ಎಲ್ಲಾ ಕಡೆಯೂ ದರ್ಶನಕೊಟ್ಟು ಸನ್ನಿಹಿತರಾಗಿದ್ದರಿಂದಲೇ ಶ್ರೀ ವಾದಿರಾಜ ಶ್ರೀಮಚ್ಚರಣರು ವರ್ಣಿಸಿರುತ್ತಾರೆ.  ಇದು ನಮ್ಮ ವಾಕ್ಯವಲ್ಲ.  ನೀವೇ ಉಚ್ಚರಿಸಿರುವ ಶ್ರೀ ಜಯತೀರ್ಥಾಚಾರ್ಯ (ವಿದ್ಯಾವಾಚಸ್ಪತಿ ತೀರ್ಥರ ನೇರ ನುಡಿ).  ಅಂದ ಮೇಲೆ ಶ್ರೀ ಜಯತೀರ್ಥರು ಸಾಂಶರಾದ್ದರಿಂದ ಶ್ರೀ ವಾದಿರಾಜರಿಗೆ ಅವರಿಗೆ ಎಲ್ಲಾ ಕಡೆಯೂ ದರ್ಶನ ಕೊಡಬಲ್ಲರು.  ಆದ್ದರಿಂದ ವಾದಿರಾಜರು ಜಯತೀರ್ಥರನ್ನು ಕಂಡು ತಮ್ಮ ತೀರ್ಥಪ್ರಬಂಧ ಸ್ತೋತ್ರವನ್ನು ಮಾಡಿದ್ದಾರೆ.  ಅಂದರೆ ಶ್ರೀ ಜಯತೀರ್ಥರ ವೃಂದಾವನ ಅಲ್ಲಿ ಇರಬೇಕೆಂದೇನೂ ಇಲ್ಲ ಅವರು ಸಾಂಶರಾಗಿ ಎಲ್ಲಾ ಕಡೆಯೂ ಓಡಾಡುತ್ತಾ ಅನುಗ್ರಹ/ದರ್ಶನ ನೀಡುತ್ತಾರೆಂದು ಅವರೇ ಪ್ರಸ್ತುತ ಪಡಿಸಿದ್ದಾರೆ ಬಗ್ಗೆ.
ಇದೇ ದೇವರನಾಮವನ್ನು ಶ್ರೀ ಅರಳುಮಲ್ಲಿಗೆ ಪಾರ್ಥಸಾರಧಿಯವರು ತಮ್ಮ ೧೦೦೦೦ ಸಾವಿರ ದೇವರನಾಮಗಳು ಎಂಬ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ.  ಅದರಲ್ಲಿಯೂ ರಘುವರ್ಯವಿದೆಯೇ ಹೊರತು ಜಯತೀರ್ಥರಿಲ್ಲ.
ಆದರೆ ಸಂಪಾದಕದ್ವಯರು ಮಾತ್ರ ಟಿ.ಕೆ.ವಿ ಅವರ ಪಾಠವೇ ಸರಿಯಾಗಿದೆ ಎಂದು ತೀರ್ಮಾನಿಸಿದ್ದಾರೆ, ಏಕೆಂದರೆ ಅದರಲ್ಲಿ ಜಯತೀರ್ಥರನ್ನು ಸೇರಿಸಿದ್ದಾರೆ.  ರಘುವರ್ಯರ ಬಗ್ಯೆ ಕೇಳಿದರೆ ಅವರು ಹೇಳುವ ಉತ್ತರ ಉದಾಸೀನಭಾವದ್ದಾಗಿದೆ.  ಅವರದು ಎಲ್ಲೋ ಹಂಪೆಯಲ್ಲೋ ಭೀಮಾತೀರದಲ್ಲೋ ಇರಬೇಕು ಎಂಬುದು, ಎಷ್ಟು ಸರಿ?
ಟಿಕೆವಿಯವರನ್ನು ನಂಬುವುದು ಹೇಗೆ?  ಅವರು ಈಗಾಗಲೇ ಕೃಷ್ಣದೇವರಾಯನ ಹೆಸರಿನಲ್ಲಿ ರಜತಶಾಸನವಿದೆಯೆಂದು ಹೇಳಿದ್ದಾರೆ. ಎಲ್ಲಿ ನೋಡಿದೆಯೆಂದರೆ ತನ್ನ ಮಗನಿಂದ ಪತ್ರವೇ ಸಾಕ್ಷಿ ಎಂದರು..  ತಂದೆಯೇ ಮಗನಿಗೆ ಹೇಳಿ ಒಂದು ಪತ್ರವನ್ನು ಬರೆಸಿ ಈ ರೀತಿ ಮಾಡಿರುವ ಸಾಧ್ಯತೆಯೇ ಜಾಸ್ತಿ .  “ಕಿಟತಟಿನಿ” ಎಂಬ ಯಾರೂ ಎಲ್ಲೂ ಕೇಳದ, ಕಾಣದ ಗ್ರಂಥದ ಹೆಸರನ್ನು ಹೇಳಿದ್ದಾರೆ. ಅದೆಲ್ಲೆಯೆಂದರೆ ಕಾಲಗರ್ಭದಲ್ಲಿ ಕಳೆದುಹೋಗಿದೆಯೆಂದಿದ್ದಾರೆ. ಅವರ ಮಗ ನೋಡಿದ್ದಾರೆ ಎಂದಿದ್ದಾರೆ.  ಆದರೆ ಯಾವುದೇ ಕಾರ್ಬನ್ ಕಾಪಿಯಾಗಲೀ ಏನೂ ಇಲ್ಲದೆ ಅವರನ್ನು ಹೇಗೆ ನಂಬಬಹುದು. ಇದು ಕೃತ್ರಿಮವಿರಬಹುದು.

ಅದೇ ರೀತಿ ಶ್ರೀ ಜಗನ್ನಾಥದಾಸರ ದೇವರನಾಮಕ್ಕೆ ರಘುವರ್ಯರನ್ನು ಓಡಿಸಿ ಜಯತೀರ್ಥರನ್ನು ತರುವ ಪ್ರಯತ್ನ ಅವರದಾಗಿದೆ.

ಅಥವಾ ಈ ಸಂಪಾದಕದ್ವಯರು ಹೇಳಲು ಹೊರಟಿರುವುದು – ಶ್ರೀ ಜಯತೀರ್ಥಾಚಾರ್ಯರು (ನಂತರ ವಿದ್ಯಾವಾಚಸ್ಪತಿ ತೀರ್ಥರು) ಜಯತೀರ್ಥರ ವೃಂದಾವನವನ್ನು ಆನೆಗೊಂದಿಯಲ್ಲಿದೆಯೆಂದು ಹೇಳಿದ್ದಾರೆಂದು.  ಆದರೆ ಶ್ರೀಗಳು ತಾವು  ಭಾಗವತದ ಕಥೆಗಳಿರುವ “ತಿರುಪ್ಪಾವೈ” ಪ್ರವಚನವನ್ನು ಮಾಡಿದುದನ್ನು  ಖಂಡಿಸಿದವರು ಹಲವಾರು ಮಾಧ್ವ ಪಂಡಿತರು.  ಏಕೆಂದರೆ ವಿಶಿಷ್ಟಾದ್ವೈತದ ಗ್ರಂಥ “ತಿರುಪ್ಪಾವೈ”.  ವಿಶಿಷ್ಟಾದ್ವೈತಿಗಳು ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇ ಎನ್ನುವರು.  ಅದನ್ನು ಹೇಳುವುದು ಸಮರ್ಥನೀಯವಲ್ಲವೆಂದು ಹಲವಾರು ಪಂಡಿತರು ಹೇಳಿದ್ದರು.  ಮತ್ತು ಶ್ರೀಗಳು ತಮ್ಮ ವೃಂದಾವನ ಪ್ರವೇಶಪೂರ್ವದಲ್ಲಿ ತೆಗೆದುಕೊಂಡ ಒಂದು ಅಪೂರ್ವ ನಿರ್ಧಾರ ಮಠವನ್ನು ಎರಡು ಹೋಳಾಗುವಂತೆ ಮಾಡಿತು.  ವ್ಯಾಸರಾಜ ಮಠದಲ್ಲಿ ಬೇರೊಂದು ಸಮಿತಿಯೇ ಏರ್ಪಟ್ಟಿತು.  ಆ ಸಮಿತಿಯ ಮುಂದಾಳತ್ವವಹಿಸಿದವರೂ ಈ ಗ್ರಂಥಕ್ಕೆ ಮುನ್ನುಡಿ ಕೊಟ್ಟಿದ್ದಾರೆ.   ಈ ಸಂಪಾದಕ ದ್ವಯರು ಶ್ರೀಗಳು ತೆಗೆದುಕೊಂಡ ನಿರ್ಧಾರವನ್ನು ಆಗ ಸಮ್ಮತಿಸಿದ್ದರೆ, ಪ್ರತಿಭಟಿಸಿರಲಿಲ್ಲವೇ?

ಆದರೆ ಈಗ ಇದ್ದಕ್ಕಿದ್ದಂತೆ ಶ್ರೀಗಳ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತೆಗೆದುಕೊಂಡಿರುವುದು ವಿಪರ್ಯಾಸವೇ ಸರಿ.  ತಮ್ಮ ವೃಂದಾವನ ಪೂರ್ವದಲ್ಲಿ ತೆಗೆದುಕೊಳ್ಳಬೇಕಾದ ಅತ್ಯಂತ ಮುಖ್ಯ ವಿಷಯದಲ್ಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಬೇರೆಯವರ ಬಲವಂತಕ್ಕೆ ಒಪ್ಪಿಕೊಂಡಿರುವಾಗ,   ಈಗಲೂ ಶ್ರೀ ಟಿ.ಕೆ.ವೇಣುಗೋಪಾಲದಾಸರ ಬಲವಂತಕ್ಕೆ ಈ ರೀತಿ ಬರೆದಿಲ್ಲವೆನ್ನಲಾಗದು.
ಆದ್ದರಿಂದ ಶ್ರೀ ಜಯತೀರ್ಥರ ವೃಂದಾವನ ವಿಷಯದಲ್ಲಿ ಈ ದೇವರನಾಮ ಆನೆಗೊಂದಿಗೆ ಅನುಗುಣವಾಗಿಲ್ಲ ಮತ್ತು ಶ್ರೀ ಟಿ.ಕೆ.ವಿ ಅವರೇ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿದ್ದಿದ್ದಾರೆಂಬುದರಲ್ಲಿ ಅನುಮಾನವೇ ಇಲ್ಲ.
 ಅಧ್ಯಾಯ ೧೧ – ಆನೆಗೊಂದಿಯಲ್ಲಿ ಆರಾಧನೆ?
a. ಸಂಪಾದಕದ್ವಯರು ತಮ್ಮ ಪುಟ ೩೩೩ರಲ್ಲಿ ಒಂದು ಪ್ರಶ್ನೆಯನ್ನು ಇಟ್ಟಿದ್ದಾರೆ.  ಶ್ರೀ ಕವೀಂದ್ರರು- ವಾಗೀಶತೀರ್ಥರು ತಮ್ಮ ಅಂತ್ಯಕಾಲಗಳನ್ನೂ ಗಜಗಹ್ವರದಲ್ಲೇ ಕಳೆದಿರುವುದರಿಂದ ಅಲ್ಲಿಯವರೆಗೆ ಶ್ರೀ ಜಯತೀರ್ಥರ ಆರಾಧನೆಯು ಇಲ್ಲಿಯೇ ಸಕ್ರಮವಾಗಿ ನಡೆದುದನ್ನು ನಿರಾಕರಿಸುವ ಯಾವುದೇ ದಾಖಲೆಗಳಿಲ್ಲ.ತಮ್ಮ ಗುರುಗಳ ಆರಾಧನೆಯನ್ನು ಅವರ ವೃಂದಾವನವಿರುವ ಸ್ಥಳದಲ್ಲೇ ಅವರ ಶಿಷ್ಯರು ಮಾಡುತ್ತಿದ್ದರು.
ಸಮಾಧಾನ –  ನಿರಾಕರಿಸುವ ದಾಖಲೆಯಿಲ್ಲದಿರಬಹುದು.  ಆದರೆ ಮಾಡಿದ್ದಕ್ಕೆ ಏನಾದಾರೂ ದಾಖಲೆಯಿದೆಯಾ?   ಶ್ರೀ ಜಯತೀರ್ಥರ ಗುರುಗಳಾದ ಅಕ್ಷೋಭ್ಯತೀರ್ಥರು ವೃಂದಾವನಸ್ಥರಾದದ್ದು ೧೩೬೫ರಲ್ಲಿ, ಜಯತೀರ್ಥರು ವೃಂದಾವನಸ್ಥರಾದದ್ದು ೧೩೮೮ರಲ್ಲಿ.  ಅಂದರೆ ಸಂಪಾದಕದ್ವಯರೇ ನಿರ್ಣಯಿಸಿರುವ ಆರಾಧನ ನಿಯಮದ ಪ್ರಕಾರ ಶ್ರೀ ಜಯತೀರ್ಥರು ತಮ್ಮ ಗುರುಗಳ ಆರಾಧನೆಯನ್ನು ಮಳಖೇಡದಲ್ಲೇ ಮಾಡಬೇಕೇ ಹೊರತು ಬೇರೆಡೆಯಲ್ಲ.  ಅದರಂತೆ ಜಯತೀರ್ಥರ ಆರಾಧನೆಯನ್ನು ಅವರ ಶಿಷ್ಯರಾದ ಶ್ರೀ ವ್ಯಾಸತೀರ್ಥರು ಮಾಡಲೋಸುಗವೇ ಮಳಖೇಡದಲ್ಲೇ ಮಾಡಿರಬಹುದಲ್ಲವೇ?  
b. ಮಳಖೇಡವಾದಿಗಳು ಕೇಳಿದ ಪ್ರಶ್ನೇ ಆನೆಗೊಂದಿಯಲ್ಲಿ ನೇವೇಕೆ ಜಯತೀರ್ಥರ ಆರಾಧನೆಯನ್ನು ಮಾಡುತ್ತಿಲ್ಲ?
ಆನೆಗೊಂದಿವಾದಿಗಳು (ಸಂಪಾದಕದ್ವಯರ ಸಮಜಾಯಿಷಿ ಉತ್ತರ) –  ಪ್ರಾಯ: ಎಲ್ಲ ಪ್ರಸಿದ್ಧ ಕ್ಷೇತ್ರಗಳು ನದೀ ತೀರದಲ್ಲಿದ್ದು, ಅವರವರ ಆರಾಧನಾಚರಣೆಗೆ ವಿಘ್ನಗಳು ಬರುವ ಸಂದರ್ಭಗಳು ಬಹಳ ವಿರಳ.  ಆದರೆ ತುಂಗಭದ್ರೆಯಲ್ಲಿ ಜಯತೀರ್ಥರ ಆರಾಧನೆಯು ಮಾತ್ರ ಮಳೆಗಾಲದಲ್ಲಿ ಬರುತ್ತದೆ.  ತುಂಗಭದ್ರಾ ನದಿಯಲ್ಲಂತೂ ಮಹಾಪ್ರವಾಹ ನಿಶ್ಚಿತ.  ಅಣೆಕಟ್ಟುಗಳು ಇರದಿದ್ದ ಆ ಕಾಲದಲ್ಲಿ ಮಹಾ ಪ್ರವಾಹವನ್ನು ದಾಟಿ, ಪರಿಮಿತ ಸಂಖ್ಯೆಯ ಶಿಷ್ಯರು ಬಂದು ಜಯಮುನಿಗಳ ಆರಾಧನೆಯನ್ನು ಕೇವಲ ಕರ್ತವ್ಯ ಪೂರಣೆಯ ಸಾಂಕೇತಿಕ ಆಚರಣೆಗಾಗಿ ಉಳಿದು ಹೋದವೇ ಹೊರತು ಜನಸಾಮಾನ್ಯರ ಗಮನಕ್ಕೂ ಬರುವ ಅವಕಾಶವಾಗಲಿಲ್ಲ.  ಹೆಚ್ಚು ಹೆಚ್ಚು ಜನರು ಭಾಗವಹಿಸದಿದ್ದರೆ ಪ್ರಚಾರ ಸಿಗುವುದಿಲ್ಲವಷ್ಟೆ?  ಇದು ಆ ತಂಡದವರು ಅದೇ ಪುಸ್ತಕದಲ್ಲಿ ಪುಟ 334ರಲ್ಲಿ ನೀಡಿರುವ ಉತ್ತರ.
ಇದು ಹಾಸ್ಯಾಸ್ಪದವಲ್ಲವೆ?  ಮಳೆಯಾಗಲೀ ಬಿಸಿಲಾಗಲೀ ತಮ್ಮ ಗುರುಗಳ ಆರಾಧನೆಯನ್ನು ಮಾಡುವ ಕರ್ತವ್ಯ ನಮ್ಮದಲ್ಲವೇ.  ಯಾರೋ ಪರಿಮಿತ ಶಿಷ್ಯರು ಬಂದು ಮಾಡಿಕೊಂಡು ಹೋಗುತ್ತಾರಂತೆ.  ಇದೇ ಪದ್ಮನಾಭತೀರ್ಥರ ಆರಾಧನೆಯನ್ನು ಕಾರ್ತೀಕ ಮಾಸದಲ್ಲಿ ಸಾವಿರಾರು ಜನರು ಬಂದು ಸೇರಿ ಮಾಡುವುದಿಲ್ಲವೇ?  ಶ್ರೀ ವ್ಯಾಸರಾಜರ ಆರಾಧನೆಯು ಬರುವುದು ಫಾಲ್ಘುಣ ಮಾಸದಲ್ಲಿ ಅಂದರೆ ಬರೀ ಬಿಸಿಲಿನ ವಾತಾವರಣದಲ್ಲಿ, ಆನೆಗೊಂದಿಯಲ್ಲಿರುವ ಬಂಡೆ, ಕಲ್ಲು, ಮಣ್ಣು ಎಲ್ಲವೂ ಸುಡುವ ಸಂದರ್ಭದಲ್ಲೂ ಅದನ್ನು ಕಡೆಗಣಿಸದೆ ಅಲ್ಲಿ ವ್ಯಾಸರಾಜರ ಆರಾಧನೆಗೆ ಸಾವಿರಾರು ಜನರೂ ಬರುವುದಿಲ್ಲವೇ?  ಎಂದೋ ಬರುವ ಮಳೆಗೆ ಹೆದರಿ ಜಯಮುನಿಗಳ ಆರಾಧನೆಯನ್ನು ಆನೆಗೊಂದಿಯಲ್ಲಿ ಮಾಡುತ್ತಿಲ್ಲವಂತೆ?  ಹೇಗಿದೆ ಸುಳ್ಳಿನ ಕಥೆ.  ಎಷ್ಟೋ ಸಲ ಮಳಖೇಡದಲ್ಲೂ ಜೋರಾಗಿ ಮಳೆ ಬಂದು ಜಯತೀರ್ಥರ ವೃಂದಾವನ ದರ್ಶನವೇ ಸಾಧ್ಯವಿರುವುದಿಲ್ಲ.   ಆದರೂ ಅಲ್ಲಿ ಪೂಜೆಯನ್ನು ನಿಯತವಾಗಿ ಮಾಡುತ್ತಿಲ್ಲವೇ?   ಮಂತ್ರಾಲಯದಲ್ಲಿ ಮಳೆ ಬಂದರೆ ಆರಾಧನೆ ಮಾಡುವುದಿಲ್ಲವೇ? ಸೋಂದಾ ಕ್ಷೇತ್ರದಲ್ಲಿ ಮಳೆಗಾಲ ಪೂರ್ತಿ ಯಾವಾಗಲೂ ಮಳೆ ಬರುತ್ತಲೇ ಇರುತ್ತದೆ.  ಅಲ್ಲಿ ಬೇರೆಲ್ಲ ಕಾಲಗಳಿಗಿಂತ ಮಳೆಗಾಲವೇ ಜಾಸ್ತಿ.  ಅಲ್ಲಿ ವಾದಿರಾಜರ ವೃಂದಾವನ ಪೂಜೆ ನಿಂತಿದೆಯಾ?  ಮೈಸೂರು ದಸರಾ ಸಂದರ್ಭದಲ್ಲಿ ಖಂಡಿತವಾಗಿ ಮಳೆ ಬಂದೇ ಬರುತ್ತದೆ.  ಅಲ್ಲಿ ದಸರಾವನ್ನು ನಡುಸುವುದಿಲ್ಲವೇ?  ಮಳೆ ಬಂದಿದೆಯೆಂದು ಆನೆಗೊಂದಿಯಲ್ಲಿರುವ ವೃಂದಾವನಗಳಿಗೆಲ್ಲ ಪೂಜೆ ನಿಲ್ಲಿಸುವರೇ?  ಆದ್ದರಿಂದ ಈ ಸಂಪಾದಕದ್ವಯರ ಉತ್ತರ ಖಂಡಿತವಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ.
When we asked them why Jayatirtharu’s aradhane not being done at Anegondi , they replied -“earlier there was no boat, no dam. There is flood, so one can’t do aradhane at Anegondi.”

My reply – pravaaha or flood – Then
1. how come those bhaktavrunda could come there ?
2. When these people could come, seers also can come. Why not they coming?
3. Atleast those mutts which print as Moola Vrundavana can come. Why not they are coming ?
4. When u can celebrate Vyasaraja, Sudheendra, Padmanabha Tirtharu aradhane at the same place, why can’t they come. Inspire of extreme thousands of people come there . Why can’t they come now ?
5. For Kaveendra and Vageesha aradhana people opt for court decision for claiming three days pooja right. Jayatirtharu is still greater and has contributed huge compared to others. Why not even one day aradhane is done ?
5. For Kaveendra and Vageesha aradhane atleast one mutt claims their right for pooja. For Jayatirtharu aradhane no body claims No fight. Not necessary for court verdict. Atleast one mutt seer could have come. There is not flood problem this year and all the years flood will not be there.

6. They said  – “When there is no soukarya (facility) how to perform aradhana”    Reply –  Same facility was there for Padmanabha, Vageesha, Kaveendra, Vyadaraharu, Sudheendraru, etc… . If the mutt seers are so sure of the moola vrundavana concept they would have come whatever may be the problem. They know that they are forcefully doing worshipping Raghuvaryaru as Jayatirtharu, which their consciousness doesn’t permit.

That is why they are not doing aradhane at Anegondi.

c. ಜೊತೆಗೆ ಮತ್ತೊಂದು ಕುಹಕ ಪ್ರಶ್ನೆ ಸಂಪಾದಕರಿಂದ – ಶ್ರೀ ವಿದ್ಯಾಧಿರಾಜರ ಆರಾಧನೆಯನ್ನು ಅವರ ಮೂಲವೃಂದಾವನ ಸ್ಥಳದಲ್ಲಿ ಮಾಡುತ್ತಿದ್ದೇವೆಯೇ? ಅವರ ವೃಂದಾವನ ಎಲ್ಲಿದೆಯೆಂದೇ ತಿಳಿಯದಿದ್ದಾಗ ಆರಾಧನೆ ಹೇಗೆ ಮಾಡುವುದು? ವಿದ್ಯಾಧೀಶತೀರ್ಥರ ಆರಾಧನೆಯನ್ನು ಏಕಚಕ್ರನಗರಲ್ಲಿ ಮಾಡುತ್ತಾರೋ ರಾಣಿಬೆನ್ನೂರಿನಲ್ಲೋ?
Answer – ಅಹಾ..  ಏನೀ ಪ್ರಶ್ನೆ.  ಶ್ರೀ ಸುರೇಂದ್ರತೀರ್ಥರು ಶ್ರೀ ವಿಜಯೀಂದ್ರ ತೀರ್ಥರನ್ನು ರಾಯರ ಮಠಕ್ಕೆ ನೀಡಿದವರು.  ಅವರ ವೃಂದಾವನ ಮಧುರೆಯಲ್ಲಿದೆಯೆಂದು ಪಂಚಾಂಗದಲ್ಲಿ ಹೇಳುತ್ತಾರೆ.  ಆದರೆ ಎಲ್ಲಿ? ಎಲ್ಲಿಯೂ ದುರ್ಬಿನ್ ಹಾಕಿ ಹುಡುಕಿದರೂ ಸಿಗುತ್ತಿಲ್ಲ.  ಅವರ ಆರಾಧನೆಯನ್ನು ಮಧುರೆಯಲ್ಲಿ ಮಾಡುತ್ತಿಲ್ಲವಲ್ಲ?  ಮಧುರೆಯಲ್ಲಿ ಮಾಡಿದರೂ ಅವರ ವೃಂದಾವನದ ಬಳಿ ಮಾಡುತ್ತಿದ್ದಾರೆಯೆ? ಇಲ್ಲವಲ್ಲ.  ಅವರ ಪ್ರಶ್ನೆ ಅವರಿಗೇ ಮುಳುವಾಯಿತು.
d.  ಆ ಸಂಪಾದಕರಿಂದ ಮತ್ತೊಂದು ಕುಹಕ –    ಜಯಮುನಿಗಳ ಮೂಲವೃಂದಾವನವನ್ನೂ ರಘುವರ್ಯರ ಮೂಲವೃಂದಾವನವೆಂದು ತಪ್ಪಾಗಿ ಗುರುತಿಸುವ ಪ್ರವೃತ್ತಿ ಆರಂಭವಾದೊಡನೆ ಮಲಖೇಡಾದ ಕೋಟೆಯೊಳಗಿದ್ದ ಅಕ್ಷೋಭ್ಯತೀರ್ಥರ ಪ್ರಾಚೀನ ಮೂಲ ವೃಂದಾವನವು, ಕಾಗಿನೀ ನದೀ ತೀರದ ಇಂದು ಕಾಣುತ್ತಿರುವ ಸ್ಥಳಕ್ಕೆ ಸ್ಥಳಾಂತರವಾಗಿ, ಆ ಸಂದರ್ಭದಲ್ಲಿ ಜಯಮುನಿಗಳ ಮತ್ತೊಂದು ವೃಂದಾವನ ಮಳಖೇಡದಲ್ಲು ಸ್ಥಾಪಿತವಾಗಿ, ಎಲ್ಲೆಲ್ಲರೂ ಮಳಖೇಡದಲ್ಲಿರುವುದೇ ಮೂಲವೆಂದು ನಂಬತೊಡಗಿದರು, ಮತ್ತು ಅಲ್ಲೇ ಆರಾಧನೆ ಮಾಡಲು ಆರಂಭಿಸಿದ್ದರಿಂದ ನವವೃಂದಾವನದಲ್ಲಿ ನಡೆಯುತ್ತಿದ್ದ ಆರಾಧನೆ ಮತ್ತಷ್ಟು ಕಳೆಗುಂದಿದೆ.
ಸಮಾಧಾನ – ಶ್ರೀ ಅಕ್ಷೋಭ್ಯತೀರ್ಥರ ವೃಂದಾವನದ ಸ್ಥಳಾಂತರವಾಗಿರುವುದು ಮಳಖೇಡಾದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ (ಈಗಿನ ಸ್ಥಳ).  ಅಲ್ಲಿ ಜಯತೀರ್ಥರ ವೃಂದಾವನಾ ಪ್ರತಿಷ್ಟೆ ನಂತರವಷ್ಟೇ ಅಕ್ಷೋಭ್ಯತೀರ್ಥರ ವೃಂದಾವನವನ್ನು ಮರು ಪ್ರತಿಷ್ಟೆ ಮಾಡಿದ್ದು.  ತಾವು ಹೇಳುವ ಜಯಮುನಿಗಳ ಮತ್ತೊಂದು ವೃಂದಾವನ ಮಳಖೇಡಾದಲ್ಲಿ ಪ್ರತಿಷ್ಟೆಯಾಗಿದ್ದಾದರೆ, ಅದನ್ನು ಯಾರು ಮಾಡಿದ್ದು, ಎಲ್ಲಿ ಮಾಡಿದರು, ಯಾವಾಗ ಮಾಡಿದರು, ಅವರು ಆನೆಗೊಂದಿಯಿಂದ ಅಷ್ಟು ದೂರ (ಅಂದರೆ ವಾದಿರಾಜರು ಹೋಗಲಾರದಷ್ಟು ದೂರ – ಏಕೆಂದರೆ ತಾವೇ ಹೇಳಿದ್ದೀರಿ ವಾದಿರಾಜರು ಎಲ್ಲಾ ಕಡೆ ಹೋದರೂ ಮಳಖೇಡಾಕ್ಕೆ ಹೋಗಿಲ್ಲವೆಂದು) ತಂದು ಪ್ರತಿಷ್ಟೆ ಮಾಡಿದರು.  ಅವರೇನು ಅಲ್ಲಿನ ಅರ್ಚಕ ಮಂಡಲಿಗೆ ಸೇರಿದವರೇ? ಅವರಿಗೇಕೆ ಅಷ್ಟೊಂದು ಮುತವರ್ಜಿ?  ಅವರು ಆರೀತಿ ಮಾಡಿದ್ದಕ್ಕೆ ಏನಾದರೂ ದಾಖಲೆಯಿದೆಯಾ? ಸುಮ್ಮನೆ ಮೃತ್ತಿಕಾ ವೃಂದಾವನವಾಯಿತೆಂದು ಪ್ರಯತ್ನಿಸುವುದು ಸರಿಯಲ್ಲ.  ಮಂತ್ರಾಲಯ ರಾಯರ ಸಾವಿರಾರು ಮೃತ್ತಿಕಾ ವೃಂದಾವನಗಳಿದ್ದರೂ ಮೂಲ ವೃಂದಾವನದಲ್ಲಿ ಎಂದಿಗಿಂತ ಅತ್ಯಂತ ಹೆಚ್ಚು ಸಂಭ್ರಮದಿಂದ ಆರಾಧನೆಗಳು ನಡೆಯುತ್ತಿಲ್ಲವೇ?  ಅದೇರೀತಿ ಆನೆಗೊಂದಿಯಲ್ಲಾಗಿದ್ದರೆ ಅಲ್ಲೂ ಕೂಡ ನಡೆಯಲೇಬೇಕಿತ್ತು.  ನಡೆದೇ ಇಲ್ಲ.  
e. ಸಂಪಾದಕದ್ವಯರು ಹೇಳುತ್ತಾರೆ – ನವವೃಂದಾವನದಲ್ಲಿ ನಿತ್ಯ ಪೂಜಿಸುವ ಅರ್ಚಕರೇ ಸರಳವಾಗಿ, ಜಯತೀರ್ಥರಿಗೆ ಆರಾಧನಾಂಗ ಪೂಜೆಯನ್ನು ನೆರವೇರಿಸಿ,  ಮಂತ್ರಾಲಯದಲ್ಲೂ ಆರಾಧನೆ ನಡೆಯುತ್ತದೆ, ಕೇವಲ ವೈಭವವಷ್ಟೇ ಮೂಲವೃಂದಾವನ ನಿರ್ಧರಣೆಯ ಮಾನದಂಡವಲ್ಲ ಎಂದಿದ್ದಾರೆ ಸಂಪಾದಕರು.
ಸಮಾಧಾನ – ಜಯತೀರ್ಥರ ಆರಾಧನೆ ಮಳಖೇಡಾದಲ್ಲಷ್ಟೇ ಅಲ್ಲ, ಆನೆಗೊಂದಿಯಲ್ಲಷ್ಟೇ ಅಲ್ಲ, ಮಂತ್ರಾಲಯದಲ್ಲಷ್ಟೇ ಅಲ್ಲ, ನೂರಾರು ರಾಯರ ಮಠಗಳಲ್ಲೂ, ಉತ್ತರಾಧಿಮಠಗಳಲ್ಲೂ, ಶ್ರೀಪಾದರಾಜ ಮಠಗಳಲ್ಲು, ಅಷ್ಟೇ ಏಕೆ ಇಡೀ ಮಾಧ್ವ ಸಮಾಜದ ಮನೆ ಮನೆಗಳಲ್ಲೂ, ಮಾಧ್ವ ಸಂಘಗಳಲ್ಲೂ ನಡೆದೇ ಇರುತ್ತದೆ.  ನವವೃಂದಾವನದಲ್ಲಿ ಅರ್ಚಕರೇ ಸರಳವಾಗಿ ಮಾಡುತ್ತಾರೆಂಬ ನಿಮ್ಮ ಹೇಳಿಕೆ, ನೀವೇ ಒಪ್ಪಿಕೊಂಡಂತಾಯಿತು ಆನೆಗೊಂದಿಯಲ್ಲಿ ಯಾವುದೇ ಆರಾಧನೆ ನಡೆದಿಲ್ಲವೆಂದು. 
f.  ಪಂಚಾಂಗದಲ್ಲಿ ಆನೆಗೊಂದಿ –  ಕೆಲವರು ತಮ್ಮ ಮಠಗಳಲ್ಲದೆ ಬೇರೆ ಕೆಲವು ಅನುಯಾಯಿ ಮಠಗಳನ್ನೂ ಹೇಗೋ ಒಪ್ಪಿಸಿ ಪಂಚಾಂಗದಲ್ಲಿ ಆಷಾಡ ಕೃಷ್ಣ ಪಂಚಮಿಯಂದು ಜಯತೀರ್ಥರ ಆರಾಧನೆ ಗಜಗಹ್ವರದಲ್ಲಿ ಎಂದು ಬರೆಸಿದ್ದಾರೆ.  ಆದರೆ ನಿಜವಾಗಲೂ ಅಲ್ಲಿ ಯಾರಾದರೂ ಆರಾಧನೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಕ್ಕೆ ಅವರು ಹೇಳುವ ಉತ್ತರ – “ನವವೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಆರಾಧನೆಯನ್ನು ಎಲ್ಲೆಲ್ಲಿಗಿಂತಲೂ ಅಧಿಕ ವೈಭವವಾಗಿ ನಡೆಸಲು ತೊಂದರೆ ಮಾಡಿದ ಪಾಪದ ಹೊಣೆಯನ್ನು ಸಂಬಂಧಪಟ್ಟ ಸರ್ವ ಮಾಧ್ವರೂ ಹೊರಬೇಕಾಗಿದೆ”.   ಉತ್ತರವನ್ನು ಹಲವು ರೀತಿ ನೀಡಿದ್ದಾರೆ –
ಅ) ಇಲ್ಲಿ ತಾವೇ ಹೇಳಿಕೊಂಡಿದ್ದಾರೆ ವೈಭವದ ಆರಾಧನೆ ಮಾಡುತ್ತೇವೆಂದು.
ಆ)ನಂತರ ಇನ್ನೊಂದು ಪುಟದಲ್ಲಿ ಹೇಳುತ್ತಾರೆ – ಅಲ್ಲಿನ ಅರ್ಚಕರು ತಕ್ಕ ಮಟ್ಟಿಗೆ ಪೂಜೆ, ಅಲಂಕಾರ ಮುಂತಾದವನ್ನು ಮಾಡುತ್ತಆರೆ.
ಇ) ಇನ್ನೊಂದು ಪುಟದಲ್ಲಿ ಹೇಳುತ್ತಾರೆ ಕೆಲವರು ಆರಾಧನೆ ಮಾಡಲು ಅವಕಾಶ ಕೊಡುತ್ತಿಲ್ಲ \
ಈ) ವೈಭವದ ಆಚರಣೆಯಿಂದ ಮಳಖೇಡದಲ್ಲಿ ಆರಾಧನೆ ನಡೆದರೂ, ಆನೆಗೊಂದಿಯಲ್ಲಿ ಆರಾಧನೆ ವೈಭವವಾಗಿ ನಡೆಯದಿದ್ದರೂ, ಅದರಿಂದ ಜಯತೀರ್ಥರ ಮೂಲವೃಂದಾವನ ನಿರ್ಧಾರ ಮಾಡಲಾಗದು.
ಆದ್ದರಿಂದ ಶ್ರೀ ಜಯತೀರ್ಥರ ಮೂಲವೃಂದಾವನವಿರುವುದು ಮತ್ತು ಪ್ರಮುಖ ಆರಾಧನೆ ನಡೆಯುತ್ತಿರುವುದೂ ಮಳಖೇಡಾದಲ್ಲೇ ಎಂಬುದು ಸುಸ್ಪಷ್ಟ.
—————–

ಅಧ್ಯಾಯ ೧೨ – “ಉಭಯ ವೃಂದಾವನಗಳಿಗೆ ನಮ್ಮ ನಮನ” ಶೀರ್ಷಿಕೆ

ನಿಜವಾಗಲೂ ಶೀರ್ಷಿಕೆ ಬಹಳ ಸುಂದರವಾಗಿದೆ.  ಎರಡೂ ವೃಂದಾವನಗಳಿಗೆ ನಮನ ಮಾಡಬೇಕಾದ್ದು ಎಲ್ಲರ ಕರ್ತವ್ಯವೂ ಕೂಡ.   ಆದರೆ ಮತ್ತೆ ಜನರನ್ನು ತಪ್ಪು ದಾರಿಗೆ ತರುವ ಉದ್ದೇಶದಿಂದಲೇ ಈ ಲೇಖನ ಈ ಸಂಪಾದಕ ದ್ವಯರ ಪ್ರಯತ್ನ.    ಅವರು ಹೇಳುತ್ತಾರೆ – ನವ ವೃಂದಾವನ ಗಡ್ಡೆಯಲ್ಲಿ ಶ್ರೀ ಪದ್ಮನಾಭತೀರ್ಥರ ವೃಂದಾವನದ ಮುಂಬಾಗದಲ್ಲಿರುವುದೇ ಶ್ರೀ ಜಯತೀರ್ಥರ ಪರಮ ಪಾವನ ಪಾಂಚಭೌತಿಕ ಶರೀರ ಸಹಿತ ದಿವ್ಯ ಸನ್ನಿಧಾನದಿಂದ ವಿರಾಜಿಸುತ್ತಿರುವ ಮೂಲ ವೃಂದಾವನ.  ಮಳಖೇಡದಲ್ಲಿ ಕಾಗಿಣೀನದೀತೀರದಲ್ಲಿರುವ ಶ್ರೀ ಜಯತೀರ್ಥರ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಲಾಗಿದ್ದು, ಇತ್ತೀಚಿನ ಹರಿದಾಸರಿಂದ, ಎಲ್ಲಾ ಮಠದ ಲೇಖಕರಿಂದ ನಮಿಸಲ್ಪಟ್ಟ ಸ್ತುತಿಸಲ್ಪಟ್ಟ ದ್ವಿತೀಯ ವೃಂದಾವನಕ್ಕೂ ನಮ್ಮ ನಮನಗಳು ಸಲ್ಲಿಸುತ್ತವೆ” – ಇದು ಸಂಪಾದಕ ದ್ವಯರ ಘೋಷಣೆ.
ಆದರೆ ಈ ನಮನದಲ್ಲಿ ಜನರನ್ನು ತಪ್ಪು ದಾರಿಗೆ ತರುವ ಪ್ರಯತ್ನ ಬಹಳ ಮೇಲ್ಪಟ್ಟ ರೀತಿಯಲ್ಲಿ ನಡೆದಿರುವುದು ವಿಪರ್ಯಾಸ.  ಈ ಘೋಷಣೆಯನ್ನು ಆ ಪುಸ್ತಕದಲ್ಲಿ ಪ್ರಕಟಿಸಿರುವ ಹಲವಾರು ಲೇಖನಗಳಲ್ಲಿ ಕೆಲವರು ಹೊಗಳಿದ್ದಾರೆ.  ಪೂರ್ತಿ ಓದಿ ಹೊಗಳಿದರೋ ಅಥವಾ ಆ ಹಣೆಪಟ್ಟಿ ನೋಡಿ ಹೊಗಳಿದರೋ ತಿಳಿಯದಾಗಿದೆ.  ಇಲ್ಲಿ ಸಂಪಾದಕರ ವಾಕ್ಯಪ್ರಯೋಗದ ವಂಚನೆ ನೋಡಿ – “ಇತ್ತೀಚಿನ ಹರಿದಾಸರಿಂದ ಸ್ತುತಿಸಲ್ಪಟ್ಟ”.  ಖಂಡಿತವಾಗಿ ಈ ಪದಗಳು ಇತ್ತೀಚಿನ ಹರಿದಾಸರಿಂದ ಸ್ತುತಿಸಲ್ಪಟ್ಟ ಪದ ಪ್ರಯೋಗ ಈ ಸಂಪಾದಕಾದಿ ಹರಿದಾಸರುಗಳಿಗೇ ಸಲ್ಲುತ್ತದೆ.  ಅದರಲ್ಲೂ ಮುಖ್ಯವಾಗಿ ಟಿ.ಕೆ.ವೇಣುಗೋಪಾಲದಾಸರಂತವರು ಹಾಕಿಕೊಟ್ಟ ಹಾದಿಯಲ್ಲಿ ಕ್ರಮಿಸಿದ ಕೆಲವೇ ಬೆರಳೇಣಿಕೆಯಷ್ಟು ಮಂದಿ ಮಾತ್ರ ಆನೆಗೊಂದಿಯನ್ನು ಒಪ್ಪಿದ್ದಾರೆ.  ನಮ್ಮ ಮುಂದಿನ ಅಧ್ಯಾಯಗಳಲ್ಲಿ ಶ್ರೀ ಮಳಖೇಡ ನಿವಾಸ ಜಯತೀರ್ಥರನ್ನು ಹಾಡಿ ಹೊಗಳಿ ಸ್ತುತಿಸಿದ ಹರಿದಾಸರ (ಇತ್ತೀಚಿನವರಲ್ಲ) ದೇವರನಾಮಗಳನ್ನು  ಕೊಡಲು ಪ್ರಯತ್ನಿಸುತ್ತೇವೆ.  ಆನೆಗೊಂದಿಯಲ್ಲಿ ಸ್ತುತಿಸಿದವರು ತೀರಾ ಇತ್ತೀಚಿನವರು ಮಾತ್ರ.  ಆದರೆ ಮಳಖೇಡದಲ್ಲಿ ಸ್ತುತಿಸಿದವರು ಪ್ರಾಚೀನ ಹರಿದಾಸರು ಎಂಬುದು ವಿಶೇಷ.

 

ಶ್ರೀ ವಿಜಯದಾಸರಿಗೆ ಜಯತೀರ್ಥರ್ ಮೂಲವೃಂದಾವನ ದರ್ಶನ ಸಂದರ್ಭದಲ್ಲಿ ಜಯತೀರ್ಥರ ಮೂಲರೂಪವಾದ ರಾವುತರೂಪ ದರ್ಶನ, ಸರ್ಪರೂಪದಲ್ಲಿ ಸಂಚಾರ ದರ್ಶನ, ನಿತ್ಯ ಬೆಸಬೆಸನೆ ಬಂದು ತಮ್ಮ ಗುರುಗಳೊಂದಿಗೆ ಸೇವಿಸುವ ಜಯತೀರ್ಥರನ್ನು , ಪರಮಪಾವನ ವೃಂದಾವನ ಮಳಖೇಡಾ ಕಾಗಿನೀ ನದೀತೀರದ ತಪವಾಚರಿಸುತ ಗುರುಗಳ ಇರುವ ಯತಿಗಳ,   ಮಳಖೇಡಾದೊಳು ಬಂದು ತೊರವಿ ನರಹರಿಪಾದಗಳ ಸ್ಮರಿಸಿ ವೃಂದಾವನಕೊಂಡ ರಾಯರಿಗೆ, ಮಳಾಖೇಡಾ ಕಾಗಿನೀತೀರವಾಸ, ಯತಿಕುಲ ಮಕುಟ ಶ್ರೀ ಜಯತೀರ್ಥ, ಯೋಗಿಗಳಾರಸನೆ ಮಳಖೇಡನಿವಾಸ ಕಾಗಿನೀತಟವಾಸ ವಿಜಯವಿಠಲದಾಸ, ಶ್ರೀರಾಮಪದಾರ್ಚಕ ಶ್ರೀಮಳಖೇಡಸುಧಾಮ ಕಣಮ್ಮ,    ಇವೇ ಮುಂತಾದ ಹಲವಾರು ದೇವರನಾಮಗಳು ಜಯತೀರ್ಥರನ್ನು ಮಳಖೇಡದಲ್ಲೇ ವಿವರಿಸುತ್ತವೆ.
ಆದ್ದರಿಂದ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲೇ ಇರುವುದು ಮತ್ತು ಆನೆಗೊಂದಿಯಲ್ಲಿರುವ ಶ್ರೀ ರಘುವರ್ಯರ ವೃಂದಾವನದಲ್ಲಿ ಬೇರೆಲ್ಲ ವೃಂದಾವನಗಳಲ್ಲಿರುವಂತೆ ವಿಶೇಷ ಜಯತೀರ್ಥ ಸನ್ನಿಧಾನ ಖಂಡಿತ ಇರುತ್ತವೆಂಬುದು ಧೃಡವಾಗಿದೆ.
ಈ ಸಂಪಾದಕದ್ವಯರ ೪೫೦ಪುಟಗಳ ಪುಸ್ತಕದಲ್ಲಿರುವ ಲೋಪದೋಷಗಳನ್ನು ಕೆಲವು ೨-೩ ಅಧ್ಯಾಯಗಳಲ್ಲಿ ತೋರಿಸಿ, ಮಳಖೇಡವೇ ಜಯತೀರ್ಥರ ಮೂಲವೃಂದಾವನ ಸ್ಥಳವೆಂದು ಸಿದ್ಧವಾದ ವಿಷಯವನ್ನು ಪ್ರಕಟಿಸಲು ಆರಂಭವಾದ ಲೇಖನ – ಶ್ರೀ ಜಯತೀರ್ಥರ ಮೂಲವೃಂದಾವನ.  ಆದರೆ ಆ ೪೫೦ ಪುಟಗಳನ್ನೂ ನೋಡುತ್ತಾ, ನೋಡುತ್ತಾ, ನನಗೆ ಕಂಡಿದ್ದು ಬರೀ ತಪ್ಪೂ, ಲೋಪ, ದೋಷ, ಮಠಾಂಧತೆ, ಮಠವಿರೋಧಿ ಧೋರಣೆಯೇ ಹೊರತು ಎಲ್ಲೂ ಈ ಪುಸ್ತಕದಲ್ಲಿ ಆನೆಗೊಂದಿಯೆಂದು ಸಾಧಿಸಲು ಸಾಧ್ಯವಾಗಿಲ್ಲ.  ಆ ನಾಲೂರ ಐವತ್ತು ಪೇಜುಗಳಲ್ಲಿ ಕನಿಷ್ಟ ೨೦೦ ದೋಷ, ಪೂರ್ವಾಗ್ರಹಪೀಡಿತ ಲೇಖನಗಳು, ಮತ್ತು ಇಲ್ಲದಿರುವುದನ್ನು ಇದೆಯೆಂದು ಹೇಳುವ ಪ್ರಯತ್ನದಲ್ಲಿ ಸುಳ್ಳಿನ ಸರಪಳಿಯನ್ನೇ ಕಟ್ಟಲು ಹೊರಟಿದ್ದಾರೆ ಈ ಸಂಪಾದಕದ್ವಯರು.   ಇನ್ನು ತಪ್ಪುಗಳನ್ನು ಹುಡುಕುವುದನ್ನು ನಿಲ್ಲಿಸೋಣ.  ದೋಷಗಳು  ಹುಡುಕುತ್ತಾ ಹೋದಷ್ಟೂ ತಪ್ಪು ಪ್ರತಿ ಪೇಜಿನಲ್ಲೂ ಅನಾಯಾಸವಾಗಿ ಸಿಗುತ್ತಿದೆ ಈ ಪುಸ್ತಕದಲ್ಲಿ
ಇನ್ನು ಮುಂದಿನ ಅಧ್ಯಾಯಗಳಲ್ಲಿ ಶ್ರೀ ಜಯತೀರ್ಥರ ವೃಂದಾವನಕ್ಕೆ ಇರುವ ಸಾಕ್ಷಿ, ಆಧಾರಗಳೇನು ಎಂಬುದನ್ನು ನೋಡೋಣಾ.

ಶ್ರೀ ಕೃಷ್ಣಾರ್ಪಣಮಸ್ತು.

 

 

 

Moola Vrundavana of Jayatirtharu – Click

Doubts on Jayatirtha’s life history answered English – Click

Jayatirtharu – Doubts answered in Kannada – Click

 

4 Comments

Add a Comment
  1. bHEEMSEN kULKARNI

    I strongly and spiritually believe that Sri Jayateertha Vrindavana is at Malkhed. I have gone through BNK work
    also long notes written by Sri Vyasanakere supporting it as well as the above said write-up. As a resercher, I depend upon evidences and data base.before arriving at conclusion. People who question Moolarama at Uttaradimath are capable of questioning anythingto satiate their own unfounded and unconvincing egos. There could be some more dramatics in future, pl. watch !.

  2. ವೇಣುಗೋಪಾಲ

    ಶ್ರೀಯುತರೆ, ತಮ್ಮ ಸುದೀರ್ಘವಾದ ಲೇಖನವನ್ನು ಸಮಗ್ರವಾಗಿ ಓದಿದೆ. ಅತ್ಯಂತ ತಾರ್ಕಿಕವಾಗಿ ಶ್ರೀಜಯತೀರ್ಥರ ಬೃಂದಾವನವು ಮಳಖೇಡದಲ್ಲಿರುವುದು ಎಂಬುದಾಗಿ ತಿಳಿಸಿದ್ದೀರಿ. ಮಹಾಮಹೋಪಾಧ್ಯಾಯ ಡಾ.ಬಿ.ಎನ್.ಕೆ.ಶರ್ಮರವರೂ ಸಹ ತಮ್ಮ ದ್ವೈತವೇದಾಂತ ವಾಙ್ಮಯ ಹಾಗೂ ಇತಿಹಾಸ ಕೃತಿಯಲ್ಲಿ ಮಳಖೇಡದಲ್ಲಿಯೇ ಬೃಂದಾವನವಿರುವುದನ್ನು ತಿಳಿಸಿದ್ದಾರೆ. ಅವರ ಹೆಸರನ್ನು ಅನವಶ್ಯಕವಾಗಿ ಬಳಸಿಕೊಳ್ಳಲಾಗಿದೆ. ಮಠೀಯ ವೈಷಮ್ಯ – ಶ್ರೀ ಮಧ್ವ ಸಿದ್ಧಾಂತ ಅನುಯಾಯಿಗಳಲ್ಲಿ ಅನಗತ್ಯ ಗೊಂದಲವನ್ನು ಉಂಟುಮಾಡಬಾರದು. ತಮ್ಮ ಲೇಖನಕ್ಕೆ ಅಭಿನಂದನೆಗಳು

  3. With this article and the articles written by Dr. Prabhanjana charya it’s absolutely clear that those who have tried to “create” Sri Jayateerthara vrindavana at Anegonde have not only failed but also have shown their cheap character. It’s unfortunate that such people get adhikara in our society.

  4. Sir very good information, collected all authorised documents I really hats of your a hard work.. I personally appreciate your work I strongly belive moola vrindavana @ malkhed only.

Leave a Reply

Your email address will not be published.

Sumadhwa Seva © 2022